ETV Bharat / bharat

ಮನೋಜ್ ಜಾರಂಗೆ, ಮಹಾರಾಷ್ಟ್ರ ಸಿಎಂ ಭಿನ್ನ ಹೇಳಿಕೆ: ಮರಾಠ ಮೀಸಲಾತಿ ಗಡುವಿನ ಬಗ್ಗೆ ಮೂಡಿದ ಗೊಂದಲ

author img

By ETV Bharat Karnataka Team

Published : Nov 3, 2023, 7:06 PM IST

Etv Bharatmaratha-reservation-deadline-differences-between-manoj-jarange-cm-eknath-shinde
ಮನೋಜ್ ಜಾರಂಗೆ, ಮಹಾರಾಷ್ಟ್ರ ಸಿಎಂ ಭಿನ್ನ ಹೇಳಿಕೆ: ಮರಾಠ ಮೀಸಲಾತಿ ಗಡುವಿನ ಬಗ್ಗೆ ಮೂಡಿದ ಗೊಂದಲ

ಮರಾಠ ಮೀಸಲಾತಿಗೆ ಮನೋಜ್ ಜಾರಂಗೆ ಪಾಟೀಲ್ ಅವರು ಜನವರಿ 2 ರವರೆಗೆ ಕಾಲಾವಕಾಶ ನೀಡಿದ್ದಾರೆ ಎಂಬ ಸಿಎಂ ಏಕನಾಥ್​ ಶಿಂಧೆ ಹೇಳಿಕೆಯಿಂದ ಮೀಸಲಾತಿ ಹೋರಾಟಗಾರರಲ್ಲಿ ಗೊಂದಲ ಮೂಡಿದೆ.

ಔರಂಗಾಬಾದ್​( ಮಹಾರಾಷ್ಟ್ರ): ಸರ್ಕಾರದ ನಿಯೋಗ ಮರಾಠಾ ಮೀಸಲಾತಿ ಬಗ್ಗೆ ಅದಷ್ಟು ಬೇಗ ಸರ್ಕಾರ ತೀರ್ಮಾನ ಕೈಗೊಳ್ಳುತ್ತದೆ ಎಂದು ಭರವಸೆ ನೀಡಿದ ಹಿನ್ನೆಲೆ ಮರಾಠ ಮೀಸಲಾತಿ ಹೋರಾಟಗಾರ ಮನೋಜ್ ಜಾರಂಗೆ ಪಾಟೀಲ್ ಅವರು ತಮ್ಮ ಉಪವಾಸ ಸತ್ಯಾಗ್ರಹವನ್ನು ಮೊಟಕುಗೊಳಿಸಿದ್ದಾರೆ. ಅವರು ಮಹಾರಾಷ್ಟ್ರ ಸರ್ಕಾರಕ್ಕೆ ಮೀಸಲಾತಿ ಕುರಿತು ನಿರ್ಧಾರ ಕೈಗೊಳ್ಳಲು ಡಿಸೆಂಬರ್ 24ರ ತನಕ ಗಡುವು ನೀಡಿದ್ದಾರೆ. ಸದ್ಯ ಅವರನ್ನು ಚಿಕಿತ್ಸೆಗಾಗಿ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮತ್ತೊಂದೆಡೆ, ಮರಾಠ ಮೀಸಲಾತಿಗೆ ಮನೋಜ್ ಜಾರಂಗೆ ಪಾಟೀಲ್ ಅವರು ಜನವರಿ 2 ರವರೆಗೆ ಕಾಲಾವಕಾಶ ನೀಡಿದ್ದಾರೆ ಎಂದು ಮುಖ್ಯಮಂತ್ರಿ ಏಕನಾಥ್​ ಶಿಂಧೆ ಹೇಳಿರುವುದು ಮೀಸಲಾತಿ ಹೋರಾಟಗಾರರಲ್ಲಿ ಗೊಂದಲ ಮೂಡಿಸಿದೆ.

9 ದಿನಗಳಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ಮನೋಜ್​ ಜಾರಂಗೆ ಪಾಟೀಲ್ ಅವರ ಮನವೋಲಿಸಲು ನಿವೃತ್ತ ನ್ಯಾಯಮೂರ್ತಿಗಳು ಸೇರಿದಂತೆ ನಾಲ್ವರು ಸಚಿವರ ನಿಯೋಗ ಅವರನ್ನು ಭೇಟಿಯಾಗಿತ್ತು. ಈ ವೇಳೆ, ಕೃಷಿ ಸಚಿವ ಧನಂಜಯ್ ಮುಂಡೆ ಅವರು ಮೀಸಲಾತಿ ಕುರಿತು ತೀರ್ಮಾನ ಕೈಗೊಳ್ಳಲು ಜನವರಿ 2ರ ವರೆಗೆ ಕಾಲಾವಕಾಶ ನೀಡುವಂತೆ ಮನೋಜ್ ಅವರಿಗೆ ಮನವಿ ಮಾಡಿದ್ದರು. ಆದರೆ ಮನೋಜ್​ ಅವರು 3 ಗಂಟೆಗಳ ಸುದೀರ್ಘ ಚರ್ಚೆಯ ನಂತರ ಸರ್ಕಾರಕ್ಕೆ ಡಿಸೆಂಬರ್ 24 ರವರೆಗೆ ಮಾತ್ರ ಗಡುವು ನೀಡುತ್ತೇವೆ. ಅನಂತರ ಒಂದು ದಿನವೂ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಈಗಾಗಲೇ 40 ದಿನಗಳು ಕೊಟ್ಟಿರುವಾಗ ನಾವೇಕೆ ಹೆಚ್ಚು ಕಾಲಾವಕಾಶ ನೀಡಬೇಕು ಎಂದು ಅವರು ಪ್ರಶ್ನಿಸಿದ್ದಾರೆ.

ಆದರೆ, ಮರಾಠಾ ಮೀಸಲಾತಿಗೆ ಸಂಬಂಧಿಸಿದಂತೆ ಮನೋಜ್ ಜಾರಂಗೆ ಪಾಟೀಲ್ ಅವರು ಜನವರಿ 2ರವರೆಗೆ ಕಾಲಾವಕಾಶ ನೀಡಿದ್ದಾರೆ ಎಂದು ಮುಖ್ಯಮಂತ್ರಿ ಏಕನಾಥ ಶಿಂಧೆ ಸುದ್ದಿಗೋಷ್ಠಿಯಲ್ಲಿ ಹೇಳಿದಾಗ ಗೊಂದಲ ಸೃಷ್ಟಿಯಾಗಿದೆ. ಈ ಅವಧಿಯಲ್ಲಿ ಹೆಚ್ಚುವರಿ ಕೆಲಸ ಮಾಡಿದವರಿಗೆ ಕುಂಬಿ ಪ್ರಮಾಣ ಪತ್ರ ನೀಡುವುದಾಗಿಯೂ ಅವರು ಹೇಳಿದ್ದಾರೆ.

ಉದ್ಧವ್​ ಠಾಕ್ರೆ ಗುಂಪಿನ ಶಿವಸೇನೆ ನಾಯಕ ಮತ್ತು ಸಂಸದ ಸಂಜಯ್ ರಾವುತ್ ಪ್ರತಿಕ್ರಿಯಿಸಿ, ಡಿಸೆಂಬರ್ 31ರೊಳಗೆ ಶಿವಸೇನೆಯ 16 ಅನರ್ಹ ಶಾಸಕರ ಕುರಿತ ತೀರ್ಪು ಹೊರ ಬೀಳಲಿದೆ. ಡಿಸೆಂಬರ್ 31ಕ್ಕೂ ಮೊದಲೇ ಈ ಸರ್ಕಾರ ಪತನವಾಗಲಿದ್ದು, ಜನವರಿ 2 ರವರೆಗೆ ಜಾರಂಗೆ ಪಾಟೀಲ್ ಕಾಲಾವಕಾಶ ನೀಡಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.

ಈ ಕುರಿತು ಮಾತನಾಡಿದ ಸಚಿವ ಉದಯ್ ಸಾಮಂತ್, ನಾವು ಮೀಸಲಾತಿ ಸಂಬಂಧ ಗುರುವಾರ ವಿವರವಾದ ಚರ್ಚೆ ನಡೆಸಿದ್ದೇವೆ. ಜಾರಂಗೆ ಪಾಟೀಲ ಎಲ್ಲವನ್ನೂ ಒಪ್ಪಿಕೊಂಡಿದ್ದಾರೆ. ಇದಕ್ಕಾಗಿ ಸೋಮವಾರ ಅಥವಾ ಮಂಗಳವಾರ ಅವರನ್ನು ನಿಯೋಗ ಮತ್ತೊಮ್ಮೆ ಭೇಟಿ ಮಾಡಲಿದೆ. ಅವರು ಎರಡು ತಿಂಗಳ ಕಾಲಾವಕಾಶ ನೀಡಿದ್ದಾರೆ. ಮರಾಠ ಸಮುದಾಯದವರು ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದಾಗ ಅವರನ್ನು ಪ್ರಚೋದಿಸಿದವರು ಯಾರು?. ಈ ಬಗ್ಗೆಯೂ ಪರಿಶೀಲಿಸಲಾಗುವುದು ಎಂದು ಹೇಳಿದ್ದಾರೆ.

ಇದನ್ನೂ ಓದಿ: ತೆಲಂಗಾಣ ವಿಧಾನಸಭೆ ಚುನಾವಣೆ: ಇಂದಿನಿಂದ ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆ ಪರ್ವ ಆರಂಭ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.