ನವದೆಹಲಿ: ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರ ಸಮಯ ಯಾಕೋ ಸರಿ ಇರುವ ರೀತಿಯಲ್ಲಿ ಕಾಣಿಸ್ತಿಲ್ಲ. ಸ್ವತಃ ನಾಯಕನ ವಿರುದ್ಧವೇ ಏಕನಾಥ್ ಶಿಂದೆ ಬಳಗ ಬಂಡಾಯವೆದ್ದು, ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡು ನೂತನ ಸರ್ಕಾರ ರಚನೆ ಮಾಡಿದೆ. ಇದಾದ ಬಳಿಕ ಉದ್ಧವ್ ಠಾಕ್ರೆಗೆ ಒಂದಿಲ್ಲೊಂದು ಸಂಕಷ್ಟ ಎದುರಾಗ್ತಿದ್ದು, ಸದ್ಯ ಪಕ್ಷದ 19 ಸಂಸದರ ಪೈಕಿ, 12 ಮಂದಿ ಏಕನಾಥ್ ಶಿಂದೆಗೆ ಬೆಂಬಲ ಸೂಚಿಸಿದ್ದಾರೆ.
ಮಹಾರಾಷ್ಟ್ರದಲ್ಲಿ ಶಿವಸೇನೆ ಒಟ್ಟು 19 ಸಂಸದರನ್ನು ಹೊಂದಿದೆ. ಇದರಲ್ಲಿ 12 ಸಂಸದರು ದೆಹಲಿಯಲ್ಲಿ ಏಕನಾಥ್ ಶಿಂದೆ ಅವರನ್ನ ಭೇಟಿ ಮಾಡಿದ್ದು, ತಮ್ಮ ಬೆಂಬಲ ಘೋಷಣೆ ಮಾಡಿದ್ದಾರೆ. ಇದರ ಜೊತೆಗೆ ಸ್ಪೀಕರ್ ಓಂ ಬಿರ್ಲಾ ಅವರನ್ನ ಭೇಟಿಯಾಗಿದ್ದಾರೆಂದು ತಿಳಿದು ಬಂದಿದೆ. ಮುಂಬೈ ದಕ್ಷಿಣ ಕೇಂದ್ರ ಕ್ಷೇತ್ರದ ಸಂಸದ ರಾಹುಲ್ ಶೆವಾಲೆ ನೇತೃತ್ವದಲ್ಲಿ ಸಂಸದರ ಬಳಗ ದೆಹಲಿಯಲ್ಲಿ ಉಳಿದುಕೊಂಡಿದ್ದು, ತಮ್ಮನ್ನು ಪ್ರತ್ಯೇಕ ಗುಂಪು ಎಂದು ಪರಿಗಣಿಸುವಂತೆ ಸ್ಪೀಕರ್ಗೆ ಪತ್ರ ಬರೆದಿದ್ದಾರೆ.
ರಾಷ್ಟ್ರಪತಿ ಚುನಾವಣೆಯಲ್ಲಿ ಎನ್ಡಿಎ ಅಭ್ಯರ್ಥಿ ದ್ರೌಪದಿ ಮುರ್ಮುಗೆ ಬೆಂಬಲ ಸೂಚಿಸಲು ಶಿವಸೇನೆ ಸಂಸದರು ಉದ್ಧವ್ ಠಾಕ್ರೆ ಮೇಲೆ ಒತ್ತಡ ಹೇರಿದ್ದರು. ಹೀಗಾಗಿ, ಸುದ್ದಿಗೋಷ್ಠಿಯಲ್ಲಿ ತಾವು ಎನ್ಡಿಎ ಅಭ್ಯರ್ಥಿಗೆ ಬೆಂಬಲ ಘೋಷಣೆ ಮಾಡುತ್ತಿರುವುದಾಗಿ ಉದ್ಧವ್ ಠಾಕ್ರೆ ಬಹಿರಂಗವಾಗಿ ಘೋಷಣೆ ಮಾಡಿದ್ದರು.
ಇದನ್ನೂ ಓದಿರಿ: ಉದ್ಧವ್ ಠಾಕ್ರೆಗೆ ಮತ್ತೊಂದು ಹಿನ್ನಡೆ... ಶಿವಸೇನೆ ನಾಯಕ ರಾಮದಾಸ್ ಕದಂ ರಾಜೀನಾಮೆ
ಇದರ ಬೆನ್ನಲ್ಲೇ ಉದ್ಧವ್ ಠಾಕ್ರೆ ಬಳಗದಲ್ಲಿ ಗುರುತಿಸಿಕೊಂಡಿದ್ದ ರಾಮದಾಸ್ ಕದಂ ಸೇರಿದಂತೆ ಕೆಲವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಇದೀಗ 12 ಸಂಸದರು ದೆಹಲಿಯಲ್ಲಿ ಏಕನಾಥ್ ಶಿಂದೆ ಅವರನ್ನ ಭೇಟಿ ಮಾಡಿ, ತಮ್ಮ ಬೆಂಬಲ ಘೋಷಣೆ ಮಾಡಿದ್ದಾರೆ. ಇದು ಶಿವಸೇನೆಯ ಉದ್ಧವ್ ಠಾಕ್ರೆಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.