ETV Bharat / bharat

Ludhiana robbery: ಬರೋಬ್ಬರಿ ₹ 8.5 ಕೋಟಿ ದರೋಡೆ ಪ್ರಕರಣ.. ಮೂವರು ಆರೋಪಿಗಳು ವಶಕ್ಕೆ

author img

By

Published : Jun 12, 2023, 12:55 PM IST

Representative image
ಪ್ರಾತಿನಿಧಿಕ ಚಿತ್ರ

ಪಂಜಾಬ್​ನ ಲೂಧಿಯಾನದಲ್ಲಿ ಬೃಹತ್ ದರೋಡೆ ಪ್ರಕರಣ ಬೆಳಕಿಗೆ ಬಂದಿದೆ. ಶಸ್ತ್ರಸಜ್ಜಿತ 8 ಮಂದಿ ದುಷ್ಕರ್ಮಿಗಳು ರಾಜಗುರು ನಗರದ ಎಟಿಎಂಗೆ ಹಣ ಹಾಕುವ ಸಿಎಂಎಸ್ ಸೆಕ್ಯುರಿಟಿ ಕಂಪನಿ ಕಚೇರಿಗೆ ನುಗ್ಗಿ ₹ 8.49 ಕೋಟಿ ರೂ ದೋಚಿದ್ದಾರೆ ಎಂದು ತಿಳಿದು ಬಂದಿದೆ.

ಲೂಧಿಯಾನ(ಪಂಜಾಬ್​): ಶನಿವಾರ ಮುಂಜಾನೆ ಲೂಧಿಯಾನದ ನ್ಯೂ ರಾಜಗುರು ನಗರದ ಅಮನ್ ಪಾರ್ಕ್‌ನಲ್ಲಿರುವ ಸಿಎಂಎಸ್ - ಕನೆಕ್ಟಿಂಗ್ ಕಾಮರ್ಸ್ ಎಂಬ ನಗದು ನಿರ್ವಹಣಾ ಸೇವಾ ಕಂಪನಿಯಲ್ಲಿ ಶಸ್ತ್ರಸಜ್ಜಿತ ದರೋಡೆ ನಡೆದಿದೆ. ಘಟನೆ ನಡೆದು ಒಂದು ದಿನದ ನಂತರ, ಆರೋಪಿಗಳು ₹ 8.49 ಕೋಟಿ ದೋಚಿರುವುದು ಪತ್ತೆಯಾಗಿದೆ. ಪ್ರಕರಣ ಸಂಬಂಧ ಮೂವರು ಆರೋಪಿಗಳನ್ನು ಕೊಟಕಪುರದಿಂದ ವಶಕ್ಕೆ ಪಡೆಯಲಾಗಿದೆ. ಆರೋಪಿಗಳು ಮೊಗದ ನಿವಾಸಿಗಳೆಂದು ತಿಳಿದು ಬಂದಿದೆ.

ಕಂಪನಿ ಅಧಿಕಾರಿಗಳು ದಾಖಲೆ ಪರಿಶೀಲಿಸಿದ ನಂತರ ಪೊಲೀಸರಿಗೆ ಮೊತ್ತವನ್ನು ಖಚಿತಪಡಿಸಿದ್ದಾರೆ. ಆರಂಭದಲ್ಲಿ ಕಳುವಾದ ಮೊತ್ತ ಸುಮಾರು 7 ಕೋಟಿ ರೂಪಾಯಿ ಆಗಬಹುದು ಎಂದು ಕಂಪನಿಯ ಅಧಿಕಾರಿಗಳು ಪೊಲೀಸರಿಗೆ ತಿಳಿಸಿದ್ದರು. ಆದಾಗ್ಯೂ ಉಳಿದಿರುವ ನಗದು ಹಣದ ಅಂತಿಮ ಎಣಿಕೆಯ ನಂತರ ಕಂಪನಿಯು ಕದ್ದ ಮೊತ್ತವನ್ನು 8.49 ಕೋಟಿ ರೂ ಎಂದು ಅಂದಾಜಿಸಿದೆ. ಇದು ಕಳೆದ ಹಲವಾರು ದಶಕಗಳಲ್ಲಿ ಲೂಧಿಯಾನದಲ್ಲಿ ನಡೆದ ಅತಿದೊಡ್ಡ ದರೋಡೆ ಪ್ರಕರಣವಾಗಿದೆ.

ಪ್ರಕರಣದ ವಿವರ: ಕಂಪನಿಯ ಇಬ್ಬರು ಸೆಕ್ಯುರಿಟಿ ಗಾರ್ಡ್‌ಗಳು ಸೇರಿದಂತೆ ಐವರು ಉದ್ಯೋಗಿಗಳನ್ನು ವಶದಲ್ಲಿಟ್ಟುಕೊಂಡು ದರೋಡೆ ನಡೆಸಿ ದುಷ್ಕರ್ಮಿಗಳು ಪರಾರಿಯಾಗಿದ್ದರು. ದರೋಡೆಕೋರರು ಮಾರುತಿ ಸುಜುಕಿ ಸ್ವಿಫ್ಟ್ ಡಿಸೈರ್​​ ಮತ್ತು ಮಾರುತಿ ಸುಜುಕಿ ಸ್ವಿಫ್ಟ್ ಎಂಬ ಎರಡು ಕಾರುಗಳಲ್ಲಿ ಫಿರೋಜ್‌ಪುರದ ಕಡೆಗೆ ಪರಾರಿಯಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

ಶನಿವಾರ ಮುಂಜಾನೆ 3.32ಕ್ಕೆ ಚೌಕಿಮಾನ್ ಬಳಿಯ ಲೂಧಿಯಾನ - ಫಿರೋಜ್‌ಪುರ ರಸ್ತೆಯ ಟೋಲ್ ಪ್ಲಾಜಾದಲ್ಲಿ ಎರಡು ಕಾರುಗಳು ತಡೆಗೋಡೆಗಳನ್ನು ಮುರಿದಿವೆ. ಟೋಲ್ ಪ್ಲಾಜಾದಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ದೃಶ್ಯ ಸೆರೆಯಾಗಿದೆ. ಕಾರುಗಳ ನೋಂದಣಿ ಸಂಖ್ಯೆಗಳನ್ನು ಪತ್ತೆಹಚ್ಚಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ. ದರೋಡೆಕೋರರು ಯಾವುದೇ ಗನ್ ಹೊಂದಿರಲಿಲ್ಲ. ಅವರು ಚೂಪಾದ ಆಯುಧಗಳನ್ನು ಬಳಸಿ ಲೂಟಿ ಮಾಡಿದ್ದಾರೆ ಎಂದು ಪೊಲೀಸ್ ತನಿಖೆಯಿಂದ ತಿಳಿದು ಬಂದಿದೆ.

ಕಂಪನಿಯ ಉದ್ಯೋಗಿಗಳು ತಮ್ಮ ಹೇಳಿಕೆಗಳನ್ನು ಆಗಾಗ ಬದಲಾಯಿಸುತ್ತಿರುವುದರಿಂದ ಅಪರಾಧದಲ್ಲಿ ಕೆಲವು ಒಳಗಿನವರು ಭಾಗಿಯಾಗಿರುವುದನ್ನು ಪೊಲೀಸರು ತಳ್ಳಿಹಾಕಿಲ್ಲ. ಎರಡು ಕಾರುಗಳು ಟೋಲ್ ತಡೆಗೋಡೆ ಮುರಿದು ಪರಾರಿಯಾಗುತ್ತಿರುವುದು ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿದೆ ಎಂದು ಲುಧಿಯಾನಾ ಪೊಲೀಸ್ ಕಮಿಷನರ್ ಮಂದೀಪ್ ಸಿಂಗ್ ಸಿಧು ತಿಳಿಸಿದ್ದಾರೆ.

ದರೋಡೆಕೋರರು ಕಂಪನಿಯ ನಗದು ವ್ಯಾನ್ ಅನ್ನು ಪಂಡೋರಿ ಗ್ರಾಮದ ಬಳಿ ಹೆದ್ದಾರಿಯಲ್ಲಿ ಬಿಟ್ಟು ಮತ್ತೊಂದು ವಾಹನದಲ್ಲಿ ಪರಾರಿಯಾಗಿದ್ದಾರೆ. ಪೊಲೀಸರಿಂದ ತಪ್ಪಿಸಿಕೊಳ್ಳಲು ಫಿರೋಜ್‌ಪುರದ ಕಡೆಗೆ ಹೊರಟಿರಬಹುದು ಎಂಬ ಆಯಾಮದಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈ ಮಧ್ಯೆ, ದೋರಾಹಾ, ಖನ್ನಾ ಮತ್ತು ಫಿಲ್ಲೌರ್, ಫಗ್ವಾರಾ ಇತ್ಯಾದಿ ಪಟ್ಟಣಗಳು ​​ಮತ್ತು ನಗರಗಳ ಹೆದ್ದಾರಿಗಳನ್ನು ಸಹ ಪರಿಶೀಲಿಸಲಾಗುತ್ತಿದೆ.

10 ತಂಡ ರಚನೆ: ಆರೋಪಿಗಳ ಪತ್ತೆಗೆ 10 ತಂಡಗಳನ್ನು ರಚಿಸಲಾಗಿದೆ ಎಂದು ಕಮಿಷನರ್ ಸಿದ್ದು ತಿಳಿಸಿದ್ದಾರೆ. ಸಿಬ್ಬಂದಿ ಮತ್ತು ಮಾಜಿ ಉದ್ಯೋಗಿಗಳ ವಿವರಗಳನ್ನು ಒದಗಿಸುವಂತೆ ಮತ್ತು ಅವರ ಕರೆ ವಿವರಗಳು ಮತ್ತು ಸ್ಥಳವನ್ನು ಪರಿಶೀಲಿಸುವಂತೆ ಪೊಲೀಸರು ಕಂಪನಿಯನ್ನು ಕೇಳಿದ್ದಾರೆ. ಕಂಪನಿಯ ಉದ್ಯೋಗಿಗಳು ನಗದು ಇಡಲು ಕಚೇರಿ ಅಸುರಕ್ಷಿತ ಎಂದು ಹೇಳಿದ್ದರೂ ಕಚೇರಿಯ ಭದ್ರತಾ ವ್ಯವಸ್ಥೆ ಬಗ್ಗೆ ಕ್ರಮ ಕೈಗೊಂಡಿಲ್ಲ ಎನ್ನಲಾಗಿದೆ. ಕಚೇರಿಯಲ್ಲಿ 50 ಸಿಸಿಟಿವಿ ಕ್ಯಾಮೆರಾಗಳನ್ನು ಐದು ಡಿಜಿಟಲ್ ವಿಡಿಯೋ ರೆಕಾರ್ಡರ್‌ಗಳಿಗೆ ಸಂಪರ್ಕಿಸಲಾಗಿದೆ. ಆದರೆ ಕಂಪನಿಯು ಕ್ಲೌಡ್ ಸ್ಟೋರೇಜ್ ರೆಕಾರ್ಡಿಂಗ್‌ಗಳನ್ನು ಹೊಂದಿಲ್ಲ. ಸಂವೇದಕ ವ್ಯವಸ್ಥೆಯೂ ನವೀಕೃತವಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

"8.49 ಕೋಟಿ ರೂಪಾಯಿ ಲೂಟಿ ಮಾಡಲಾಗಿದೆ ಎಂದು ಕಂಪನಿಯ ಅಧಿಕಾರಿಗಳು ನಮಗೆ ತಿಳಿಸಿದ್ದಾರೆ. ನಾವು ಎಲ್ಲ ಆಯಾಮಗಳಲ್ಲಿ ತನಿಖೆ ಮಾಡುತ್ತಿದ್ದೇವೆ. ಒಳಗಿನವರು ಕೃತ್ಯದಲ್ಲಿ ಭಾಗಿಯಾಗಿರುವ ಶಂಕೆಯನ್ನು ಸಹ ತಳ್ಳಿಹಾಕಲಾಕುವಂತಿಲ್ಲ. ಸದ್ಯ ಅನುಮಾನದ ಮೇರೆಗೆ ಮೂವರನ್ನು ವಶಕ್ಕೆ ಪಡೆಯಲಾಗಿದೆ. ಕಂಪನಿಯ 200ಕ್ಕೂ ಹೆಚ್ಚು ಉದ್ಯೋಗಿಗಳನ್ನು ಪ್ರಶ್ನಿಸಲಾಗುತ್ತಿದೆ" ಎಂದು ಕಮಿಷನರ್ ಮಂದೀಪ್ ಸಿಂಗ್ ಸಿಧು ತಿಳಿಸಿದ್ದಾರೆ.

ಎಫ್‌ಐಆರ್ ದಾಖಲು: ಸಿಎಂಎಸ್ ಶಾಖಾ ವ್ಯವಸ್ಥಾಪಕಿ ಪರ್ವೀನ್ ಅವರ ದೂರಿನ ಮೇರೆಗೆ ಎಫ್‌ಐಆರ್ ದಾಖಲಿಸಲಾಗಿದೆ. ಅವರು ಸಹೋದ್ಯೋಗಿಯಿಂದ ಲೂಟಿ ಮಾಡಿದ ಬಗ್ಗೆ ಬೆಳಗ್ಗೆ 5.50 ರ ಸುಮಾರಿಗೆ ಕರೆ ಬಂದಿತ್ತು ಎಂದು ಅವರು ಪೊಲೀಸರಿಗೆ ತಿಳಿಸಿದ್ದಾರೆ. ಕಚೇರಿಯನ್ನು ತಲುಪಿದಾಗ, ದರೋಡೆಕೋರರು ಮುಂಜಾನೆ 2 ಗಂಟೆಯ ಸುಮಾರಿಗೆ ಆವರಣಕ್ಕೆ ಪ್ರವೇಶಿಸಿದ್ದಾರೆ ಎಂದು ಭದ್ರತಾ ಸಿಬ್ಬಂದಿ ಅಮರ್ ಸಿಂಗ್ ತಿಳಿಸಿದ್ದರು ಎಂದು ಅವರು ತಮ್ಮ ಹೇಳಿಕೆಯಲ್ಲಿ ಪೊಲೀಸರಿಗೆ ತಿಳಿಸಿದ್ದಾರೆ. ದುಷ್ಕರ್ಮಿಗಳು ಅಮರ್‌ ಅವರ ಬಾಯಿಗೆ ಬಟ್ಟೆ ತುರುಕಿ, ಆತನ ಕೈಗಳನ್ನು ಹಗ್ಗದಿಂದ ಬಿಗಿದು ಥಳಿಸಿ ಪಕ್ಕಕ್ಕೆ ತಳ್ಳಿದ್ದರು ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.

ದೂರಿನ ವಿವರ: ಅಮರ್ ಸಿಂಗ್ ಅವರನ್ನು ಕಟ್ಟಿಹಾಕಿದ ನಂತರ ಇಬ್ಬರು ಸಶಸ್ತ್ರ ಗಾರ್ಡ್ ಗಳಾದ ಬಲ್ವಂತ್ ಸಿಂಗ್ ಮತ್ತು ಪರಮದೀನ್ ಖಾನ್ ಅವರಿಂದ ರೈಫಲ್ ಗಳನ್ನು ಕಸಿದುಕೊಂಡರು. ನಂತರ ಇಬ್ಬರು ಶಸ್ತ್ರಸಜ್ಜಿತ ಸಿಬ್ಬಂದಿಯನ್ನು ಒತ್ತೆಯಾಳಾಗಿ ಹಿಡಿದಿದ್ದರು. ಅವರ ಕೈ ಮತ್ತು ಪಾದಗಳನ್ನು ಹಗ್ಗದಿಂದ ಕಟ್ಟಿ, ಅವರ ಬಾಯಿಯನ್ನು ಟೇಪ್‌ನಿಂದ ಮುಚ್ಚಿದ್ದರು ಮತ್ತು ಅವರ ಕಣ್ಣಿಗೆ ಕಾರದ ಪುಡಿ ಹಾಕಿದ್ದರು. ಬಳಿಕ ಸೇವಾ ಕೊಠಡಿಯಲ್ಲಿ ಅವರನ್ನು ಲಾಕ್ ಮಾಡಿದರು. ಈ ಮಧ್ಯೆ ಅವರು ಸೇವಾ ಕೊಠಡಿಯಿಂದ ಸಿಸಿಟಿವಿ ಕ್ಯಾಮೆರಾಗಳ ಡಿವಿಆರ್ ಮತ್ತು ಮ್ಯಾಗ್ನೆಟ್ ಲಾಕ್ ಅನ್ನು ಸಹ ಕಿತ್ತುಹಾಕಿದರು. ನಂತರ ಅವರು ನಗದು ಇರಿಸಿದ್ದ ಕೋಣೆಗೆ ನುಗ್ಗಿದರು" ಎಂದು ಎಫ್‌ಐಆರ್​ನಲ್ಲಿ ಉಲ್ಲೇಖಿಸಲಾಗಿದೆ.

"ದರೋಡೆಕೋರರು ಪ್ರವೇಶಿಸಿದಾಗ ಇನ್ನೂ ಇಬ್ಬರು ಉದ್ಯೋಗಿಗಳಾದ ಹಿಮ್ಮತ್ ಸಿಂಗ್ ಮತ್ತು ಹರ್ಮಿಂದರ್ ಸಿಂಗ್ ಕೋಣೆಯಲ್ಲಿ ಹಣವನ್ನು ಎಣಿಸುತ್ತಿದ್ದರು. ಅವರ ಫೋನ್‌ಗಳನ್ನು ನೆಲದ ಮೇಲೆ ಎಸೆದು ಒಡೆದು ಹಾಕಿದರು. ಬಳಿಕ ಅವರ ಬಾಯಿಗಳನ್ನು ಟೇಪ್‌ನಿಂದ ಮುಚ್ಚಿದರು. ನಂತರ ಇಬ್ಬರೂ ಉದ್ಯೋಗಿಗಳನ್ನು ಕೊಠಡಿಯಿಂದ ಹೊರಗೆ ತಳ್ಳಿ ಮೌನವಾಗಿರಲು ಹೇಳಿದರು. ಇಲ್ಲದಿದ್ದರೆ ಅವರನ್ನು ಗುಂಡಿಕ್ಕಿ ಕೊಲ್ಲಲಾಗುವುದು ಎಂದು ಎಚ್ಚರಿಕೆ ನೀಡಿದರು. ಅವರು ಕೊಠಡಿಯಿಂದ ಹಣವನ್ನು ತೆಗೆದುಕೊಂಡು ಹೊರಗೆ ನಿಲ್ಲಿಸಿದ್ದ ಕ್ಯಾಶ್ ವ್ಯಾನ್‌ಗಳಲ್ಲಿ ಒಂದರಲ್ಲಿ ಭದ್ರತಾ ಸಿಬ್ಬಂದಿಯಿಂದ ಕಸಿದುಕೊಂಡ ಎರಡೂ ಶಸ್ತ್ರಾಸ್ತ್ರಗಳೊಂದಿಗೆ ಪರಾರಿಯಾಗಿದ್ದಾರೆ" ಎಂದು ಎಫ್‌ಐಆರ್​ನಲ್ಲಿ ಹೇಳಲಾಗಿದೆ.

ಇದನ್ನೂ ಓದಿ: Robbery case: 1.4 ಕೋಟಿ ರೂ. ದರೋಡೆ ಆರೋಪ ಪ್ರಕರಣ: 7 ಪೊಲೀಸರು ವಜಾ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.