ETV Bharat / bharat

ಲಖಿಂಪುರ ಖೇರಿ: ಕೇಂದ್ರ ಸಚಿವರ ಪುತ್ರನಿಂದ ವಶಕ್ಕೆ ಪಡೆದ ಗನ್‌ನಿಂದ ಫೈರಿಂಗ್‌ ದೃಢ

author img

By

Published : Nov 10, 2021, 3:00 PM IST

Lakhimpur Kheri violence: Weapon seized from Union minister's son was fired, confirms FSL report
ಲಖೀಂಪುರ ಖೇರಿ ಪ್ರಕರಣ; ಕೇಂದ್ರ ಸಚಿವ ಅಜಯ್‌ ಮಿಶ್ರಾ ಪುತ್ರನಿಂದ ವಶಕ್ಕೆ ಪಡೆದಿದ್ದ ಗನ್‌ ಫೈರಿಂಗ್‌ ದೃಢ

ಲಖಿಂಪುರ ಖೇರಿ ಹಿಂಸಾಚಾರ ಪ್ರಕರಣದಲ್ಲಿ ಕೇಂದ್ರ ಸಚಿವ ಅಜಯ್ ಮಿಶ್ರಾ ಅವರ ಪುತ್ರ ಆಶಿಶ್ ಮಿಶ್ರಾರಿಂದ ವಶಕ್ಕೆ ಪಡೆದಿದ್ದ ಗನ್‌ನಲ್ಲಿ ಫೈರಿಂಗ್‌ ಆಗಿರುವುದು ಎಫ್‌ಎಸ್‌ಎಲ್‌ನಲ್ಲಿ ದೃಢಪಟ್ಟಿದೆ. ಆದರೆ ಯಾವಾಗ ಗನ್‌ನಿಂದ ಗುಂಡು ಹಾರಿಸಲಾಗಿದೆ ಎಂಬುದು ಖಾತ್ರಿಯಾಗಿಲ್ಲ.

ಲಖೀಂಪುರ (ಉತ್ತರ ಪ್ರದೇಶ): ಲಖಿಂಪುರ ಖೇರಿ ಹಿಂಸಾಚಾರ ಪ್ರಕರಣದಲ್ಲಿ ಕೇಂದ್ರ ಸಚಿವ ಅಜಯ್ ಮಿಶ್ರಾ ಅವರ ಪುತ್ರ ಆಶಿಶ್ ಮಿಶ್ರಾ ಹಾಗೂ ಇತರರಿಂದ ವಶಪಡಿಸಿಕೊಂಡಿರುವ ಗನ್‌ನಿಂದ ಫೈರಿಂಗ್‌ ಆಗಿದೆ ಎಂದು ಎಫ್‌ಎಸ್‌ಎಲ್ ವರದಿ ದೃಢಪಡಿಸಿದೆ.

ಆಶಿಶ್ ಮಿಶ್ರಾ ಗುಂಡು ಹಾರಿಸಿದ್ದಾರೆ ಎಂದು ಪ್ರತಿಭಟನಾನಿರತ ರೈತರು ಆರೋಪಿಸಿದ್ದರು. ವಿಧಿ ವಿಜ್ಞಾನ ಪ್ರಯೋಗಾಲಯ (ಎಫ್‌ಎಸ್‌ಎಲ್) ವರದಿಯು ಶಸ್ತ್ರಾಸ್ತ್ರಗಳಿಂದ ಫೈರಿಂಗ್‌ ಆಗಿದೆ ಎಂಬುದನ್ನು ದೃಢಪಡಿಸಿದ್ದು, ಹಿಂಸಾಚಾರದ ದಿನ ಅಥವಾ ಬೇರೆ ದಿನಗಳಲ್ಲಿ ಗುಂಡು ಹಾರಿಸಲಾಗಿದೆಯೇ ಎಂಬುದನ್ನು ಸ್ಪಷ್ಟಪಡಿಸಿಲ್ಲ.

ಲಖಿಂಪುರ ಹಿಂಸಾಚಾರದ ನಂತರ ಆಶಿಶ್ ಮಿಶ್ರಾ ಅಲಿಯಾಸ್ ಮೋನು ಮಿಶ್ರಾಗೆ ಸೇರಿದ ರೈಫಲ್ ಸೇರಿದಂತೆ ನಾಲ್ಕು ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಮಾಜಿ ಕೇಂದ್ರ ಸಚಿವ ಅಖಿಲೇಶ್ ದಾಸ್ ಅವರ ಸೋದರಳಿಯ ಅಂಕಿತ್ ದಾಸ್ ಒಡೆತನದ ಪಿಸ್ತೂಲ್ ಮತ್ತು ದಾಸ್ ಅವರ ಅಂಗರಕ್ಷಕ ಲತೀಫ್ ಕಾಳೆ ಬಳಿಯಿದ್ದ ರಿಪೀಟರ್ ಗನ್ ಕೂಡ ಇದರಲ್ಲಿ ಸೇರಿವೆ.

ದಾಸ್ ಅವರ ಸಹಾಯಕ ಸತ್ಯ ಪ್ರಕಾಶ್ ಮಾಲೀಕತ್ವದ ರಿವಾಲ್ವರ್ ನಾಲ್ಕನೇ ಆಯುಧದ ಫೊರೆನ್ಸಿಕ್ ವರದಿಗಾಗಿ ಕಾಯಲಾಗುತ್ತಿದೆ. ಎಫ್‌ಎಸ್‌ಎಲ್‌ಗೆ ಬ್ಯಾಲಿಸ್ಟಿಕ್ ಪರೀಕ್ಷೆಗೆ ಕಳುಹಿಸಲಾದ ನಾಲ್ಕು ಶಸ್ತ್ರಾಸ್ತ್ರಗಳಲ್ಲಿ, ಆಶಿಶ್ ಮಿಶ್ರಾ ಅವರ ರೈಫಲ್ ಸೇರಿದಂತೆ ಮೂರರಿಂದ ಗುಂಡಿನ ದಾಳಿ ನಡೆದಿದೆ ಎಂದು ದೃಢಪಟ್ಟಿದೆ. ಆದರೆ, ಯಾವಾಗ ಗುಂಡಿನ ದಾಳಿ ನಡೆದಿದೆ ಎಂಬುದನ್ನು ವರದಿಯು ಖಚಿತಪಡಿಸಿಲ್ಲ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸಚಿವರು ಮತ್ತವರ ಪುತ್ರನಿಂದ ಸಂಚು:

ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ) ಇನ್ನಷ್ಟ ಎಫ್‌ಎಸ್‌ಎಲ್ ವರದಿ ಕುರಿತು ಅಧಿಕೃತ ಹೇಳಿಕೆ ನೀಡಬೇಕಿದೆ. ಆಶಿಶ್ ಮಿಶ್ರಾ, ದಾಸ್ ಮತ್ತು ಕಾಳೆ ಬಂಧನದ ನಂತರ, ಎಸ್‌ಐಟಿ ಪರವಾನಗಿ ಶಸ್ತ್ರಾಸ್ತ್ರಗಳಾದ ರೈಫಲ್, ಪಿಸ್ತೂಲ್, ರಿವಾಲ್ವರ್ ಮತ್ತು ರಿಪೀಟರ್‌ ಗನ್ ಅನ್ನು ವಶಪಡಿಸಿಕೊಂಡಿತ್ತು. ಅಕ್ಟೋಬರ್ 15 ರಂದು ವಿಧಿವಿಜ್ಞಾನ ಪರೀಕ್ಷೆಗೆ ಕಳುಹಿಸಿತ್ತು.

ಬಹ್ರೈಚ್ ಜಿಲ್ಲೆಯವರಾದ ಜಗಜಿತ್ ಸಿಂಗ್ ಎಂಬುವರ ದೂರಿನ ಮೇರೆಗೆ ಪೊಲೀಸರು ದಾಖಲಿಸಿದ ಎಫ್‌ಐಆರ್‌ ಪ್ರಕಾರ, ಇಡೀ ಘಟನೆಯೂ ಪೂರ್ವಯೋಜಿತವಾಗಿದ್ದು, ಇದಕ್ಕಾಗಿ ಸಚಿವರು ಮತ್ತು ಅವರ ಪುತ್ರನಿಂದ ಸಂಚು ರೂಪಿಸಲಾಗಿದೆ ಎಂದು ತಿಳಿದು ಬಂದಿದೆ.

ಭಾರತೀಯ ದಂಡ ಸಂಹಿತೆಯ ಸೆಕ್ಷನ್ 147, 148, 149 (ಈ ಮೂರೂ ಗಲಭೆಗೆ ಸಂಬಂಧಿಸಿದೆ), 279 (ಅತಿ ವೇಗದ ಚಾಲನೆ), 338 (ಮಾನವ ಜೀವಕ್ಕೆ ಅಪಾಯವಾಗುವಂತೆ ದುಡುಕಿನ ಅಥವಾ ನಿರ್ಲಕ್ಷ್ಯದಿಂದ ಕೃತ್ಯ ಮಾಡುವ ಮೂಲಕ ಯಾವುದೇ ವ್ಯಕ್ತಿಗೆ ತೀವ್ರ ನೋವ ಉಂಟುಮಾಡುವುದು), 304A (ನಿರ್ಲಕ್ಷ್ಯದಿಂದ ಸಾವಿಗೆ ಕಾರಣವಾಗುವುದು), 302 (ಕೊಲೆ) ಹಾಗೂ 120B (ಕ್ರಿಮಿನಲ್ ಪಿತೂರಿ) ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.