ETV Bharat / bharat

ಹಾಡಹಗಲೇ ಕೋಟ್ಯಂತರ ಮೌಲ್ಯದ ಚಿನ್ನಾಭರಣ ದೋಚಿದ ಖದೀಮರು

author img

By ETV Bharat Karnataka Team

Published : Nov 10, 2023, 8:05 PM IST

In broad daylight heist, jewellery worth crores looted from showroom in Uttarakhand's Dehradun
ಹಾಡಹಗಲೇ ಕೋಟ್ಯಾಂತರ ಮೌಲ್ಯದ ಚಿನ್ನಾಭರಣ ದೋಚಿದ ಖದೀಮರು

Jewellery worth crores looted: ಉತ್ತರಾಖಂಡದ ಡೆಹ್ರಾಡೂನ್​ನಲ್ಲಿರುವ ಚಿನ್ನಾಭರಣ ಮಳಿಗೆಗೆ ನುಗ್ಗಿದ ಖದೀಮರು ಕೋಟ್ಯಂತರ ಮೌಲ್ಯದ ಚಿನ್ನಾಭರಣಗಳನ್ನು ದೋಚಿರುವ ಘಟನೆ ಇಂದು ನಡೆದಿದೆ.

ಡೆಹ್ರಾಡೂನ್​ (ಉತ್ತರಾಖಂಡ): ಹಾಡಹಗಲೇ ಚಿನ್ನಾಭರಣ ಮಳಿಗೆಗೆ ನುಗ್ಗಿದ ಖದೀಮರು ಕೋಟ್ಯಂತರ ಮೌಲ್ಯದ ಚಿನ್ನಾಭರಣಗಳನ್ನು ದೋಚಿರುವ ಘಟನೆ ಉತ್ತರಾಖಂಡದ ಡೆಹ್ರಾಡೂನ್​ನಲ್ಲಿ ನಡೆದಿದೆ. ರಾಜ್ಯ ಸಂಸ್ಥಾಪನಾ ದಿನಾಚರಣೆ ಸಲುವಾಗಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಭೇಟಿ ಹಿನ್ನೆಲೆ ಪೊಲೀಸರು ಭದ್ರತೆಯಲ್ಲಿ ತೊಡಗಿದ್ದರು. ಇದನ್ನೇ ಬಂಡವಾಳವನ್ನಾಗಿಸಿಕೊಂಡ ಖದೀಮರು ಖ್ಯಾತ ಚಿನ್ನಾಭರಣ ಅಂಗಡಿಗೆ ನುಗ್ಗಿ ಚಿನ್ನಾಭರಣಗಳನ್ನು ಎಗರಿಸಿದ್ದಾರೆ.

ಮೂಲಗಳ ಪ್ರಕಾರ, ನಾಲ್ವರು ದುಷ್ಕರ್ಮಿಗಳು ಗ್ರಾಹಕರಂತೆ ನಟಿಸಿ ಆಭರಣ ಮಳಿಗೆಗೆ ಪ್ರವೇಶಿಸಿದ್ದಾರೆ. ನಂತರ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ನೌಕರರನ್ನು ಬೆದರಿಸಿ, ಬೆಲೆಬಾಳುವ ಆಭರಣಗಳನ್ನು ದೋಚಿ ಅಂಗಡಿಯಿಂದ ಪರಾರಿಯಾಗಿದ್ದಾರೆ. ಡೆಹ್ರಾಡೂನ್​ನ ರಾಯ್​ಪುರ ರಸ್ತೆಯಲ್ಲಿ ಗುರುವಾರ ಬೆಳಗ್ಗೆ 10 ಗಂಟೆ ಸುಮಾರು ಈ ಘಟನೆ ನಡೆದಿದೆ. ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಆಗಮಿಸಿ ತನಿಖೆ ನಡೆಸುತ್ತಿದ್ದಾರೆ. ಆಭರಣ ಮಳಿಗೆಯ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದಾರೆ.

ಪ್ರತ್ಯೇಕ ಪ್ರಕರಣ: ಇತ್ತೀಚೆಗೆ ನವದೆಹಲಿಯ ಅಂಗಡಿಯೊಂದರಲ್ಲಿ 25 ಕೋಟಿ ರೂಪಾಯಿಗೂ ಹೆಚ್ಚಿನ ಮೌಲ್ಯದ ಚಿನ್ನಾಭರಣಗಳನ್ನು ದರೋಡೆ ಮಾಡಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಛತ್ತೀಸ್‌ಗಢ ಪೊಲೀಸರು ಇಬ್ಬರನ್ನು ಬಂಧಿಸಿದ್ದರು. ಬಂಧಿತರಿಂದ ಸುಮಾರು 18.5 ಕೆಜಿ ಚಿನ್ನ ಮತ್ತು ವಜ್ರದ ಆಭರಣಗಳನ್ನು ವಶಪಡಿಸಿಕೊಂಡಿದ್ದರು. ಲೋಕೇಶ್ ಶ್ರೀವಾಸ್ ಮತ್ತು ಶಿವ ಚಂದ್ರವಂಶಿ ಬಂಧಿತ ಆರೋಪಿಗಳು.

ದೆಹಲಿ ಪೊಲೀಸರು ಬಿಲಾಸ್‌ಪುರದಲ್ಲಿ ಶಂಕಿತನನ್ನು ವಿಚಾರಣೆಗೆ ಒಳಪಡಿಸಿದ್ದರು. ಆತನ ಮಾಹಿತಿ ಆಧರಿಸಿ, ಕವರ್ಧಾದಲ್ಲಿ ಅಡಗಿಕೊಂಡಿದ್ದ ಆರೋಪಿ ಶಿವ ಚಂದ್ರವಂಶಿ ಮೇಲೆ ದಾಳಿ ನಡೆಸಿದ್ದರು. ಶಿವ ಚಂದ್ರವಂಶಿಯಿಂದ ಪೊಲೀಸರು 23 ಲಕ್ಷ ರೂಪಾಯಿ ನಗದು ವಶಕ್ಕೆ ಪಡೆದುಕೊಂಡಿದ್ದರು. ವಿಷಯ ತಿಳಿದ ಪ್ರಮುಖ ಆರೋಪಿ ಲೋಕೇಶ್‌ ಪರಾರಿಯಾಗಿದ್ದ. ಆದರೆ, ಕಳ್ಳನ ಬೇಟೆ ಬಿಡದ ಪೊಲೀಸರು ಆತನನ್ನು ಸ್ಮೃತಿ ನಗರದಲ್ಲಿ ಬಂಧಿಸಿದ್ದರು.

ಇದನ್ನೂ ಓದಿ: ಮದುವೆಗೆ ತೆರಳಿದ್ದವರ ಮನೆಯಲ್ಲಿ ಕೈಚಳಕ.. ಸಂಬಂಧಿಕರ ಮನೆ ದೋಚಿದ್ದ ಆರೋಪಿಯ ಬಂಧನ

ಕೆಲವು ದಿನಗಳ ಹಿಂದೆ ಮನೆಯೊಂದರಲ್ಲಿ ಯಾರೂ ಇಲ್ಲದ್ದನ್ನು ಖಚಿತಪಡಿಸಿಕೊಂಡ ಖದೀಮರು ಹಾಡಹಗಲೇ ಬೀಗ ಒಡೆದು ಕಳ್ಳತನಕ್ಕೆ ಯತ್ನಿಸಿ ಸಿಕ್ಕಿಬಿದ್ದಿರುವ ಘಟನೆ ಜಿಲ್ಲೆಯ ಶಿರಾ ನಗರದ ವಿದ್ಯಾನಗರದಲ್ಲಿ ನಡೆದಿತ್ತು. ಪೊಲೀಸ್ ಸಿಬ್ಬಂದಿಯೊಬ್ಬರ ಮನೆಗೆ ನುಗ್ಗಿ ಚಿನ್ನಾಭರಣ ದೋಚುವಾಗಲೇ ಖತರ್ನಾಕ್ ಕಳ್ಳರು ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದರು.

ಬಡವನಹಳ್ಳಿ ಪೊಲೀಸ್‌ ಠಾಣೆಯ ಹೆಡ್ ಕಾನ್ಸ್‌ಟೇಬಲ್ ಮಹೇಶ್ ಅವರು ಕುಟುಂಬ ಸಮೇತ ಹೊರಗೆ ಹೋಗಿದ್ದರು. ಕಾರೊಂದರಲ್ಲಿ ಬಂದಿದ್ದ ನಾಲ್ವರು ಖದೀಮರು ಮನೆ ಬಾಗಿಲಿಗೆ ಬೀಗ ಹಾಕಿದ್ದನ್ನು ಗಮನಿಸಿ, ಮಾರಕಾಸ್ತ್ರಗಳನ್ನು ಹಿಡಿದು ಬಾಗಿಲ ಬೀಗ ಮುರಿದಿದ್ದಾರೆ. ಮನೆಯೊಳಗೆ ಇಬ್ಬರು ಹೋದರೆ, ಮತ್ತಿಬ್ಬರು ಕಾರಿನೊಳಗೆ ಕುಳಿತು ವಾಚ್ ಮಾಡುತ್ತಿದ್ದರು. ಈ ವೇಳೆ, ಚಾಲಾಕಿಗಳ ಚಲನವಲನ ಗಮನಿಸಿದ ಅಕ್ಕಪಕ್ಕದ ಮನೆಯವರು ಅನುಮಾನಗೊಂಡು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದರು. ಪೊಲೀಸರು ತಕ್ಷಣವೇ ಸ್ಥಳಕ್ಕಾಗಮಿಸಿದ್ದನ್ನು ಕಂಡು ಮನೆಯ ಹೊರಗೆ ಕಾರಿನಲ್ಲಿ ಕುಳಿತಿದ್ದ ಇಬ್ಬರು ಖದೀಮರು ಪರಾರಿಯಾಗಿದ್ದರು. ಆದರೆ, ಮನೆಯೊಳಗಿದ್ದ ಕಳ್ಳರಿಬ್ಬರನ್ನು ಪೊಲೀಸರು ಬಂಧಿಸಿದ್ದರು.

ಇದನ್ನೂ ಓದಿ: 12 ವರ್ಷಗಳಿಂದ ಕಳ್ಳತನವೇ ಫುಲ್‌ಟೈಮ್‌ ಕೆಲಸ: 75ಕ್ಕೂ ಹೆಚ್ಚು ಪ್ರಕರಣದಲ್ಲಿ ಬೇಕಿದ್ದ ಆರೋಪಿಗಳು ಸೆರೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.