ETV Bharat / bharat

ಅಕ್ರಮ ಹಣ ವರ್ಗಾವಣೆ ಕೇಸ್: ಕೇರಳ ಸಿಎಂ ಮಾಜಿ ಮುಖ್ಯ ಕಾರ್ಯದರ್ಶಿ ಬಂಧನ

author img

By

Published : Feb 15, 2023, 1:19 PM IST

Setback for CM Vijayan as ED arrests Sivasankar
Setback for CM Vijayan as ED arrests Sivasankar

ಅಕ್ರಮ ಹಣ ವರ್ಗಾವಣೆ ತಡೆ ಪ್ರಕರಣದಲ್ಲಿ ಕೇರಳ ಸಿಎಂ ಪಿಣರಾಯಿ ವಿಜಯನ್ ಅವರ ಮಾಜಿ ಮುಖ್ಯ ಕಾರ್ಯದರ್ಶಿ ಎಂ ಶಿವಶಂಕರ್ ಅವರನ್ನು ಇಡಿ ಬಂಧಿಸಿದೆ. ಸಿಎಂ ವಿಜಯನ್​ಗೆ ಆಪ್ತರಾಗಿದ್ದ ಶಿವಶಂಕರ್ ಬಂಧನವು ಸಿಎಂಗೆ ಹಿನ್ನಡೆ ಎಂದು ವಿಶ್ಲೇಷಿಸಲಾಗುತ್ತಿದೆ.

ಕೊಚ್ಚಿ : ಕೇರಳ ಪ್ರವಾಹ ಪರಿಹಾರದಲ್ಲಿ ನಡೆದಿದೆ ಎನ್ನಲಾದ ಹಣಕಾಸು ಅಕ್ರಮಗಳಿಗೆ ಸಂಬಂಧಿಸಿದಂತೆ ಅಕ್ರಮ ಹಣ ವರ್ಗಾವಣೆ ತಡೆ ಪ್ರಕರಣದಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅವರ ಮಾಜಿ ಮುಖ್ಯ ಕಾರ್ಯದರ್ಶಿ ಎಂ. ಶಿವಶಂಕರ್ ಅವರನ್ನು ಜಾರಿ ನಿರ್ದೇಶನಾಲಯ (ಇಡಿ) ಬಂಧಿಸಿದೆ. ಈ ಬೆಳವಣಿಗೆ ಮುಖ್ಯಮಂತ್ರಿ ವಿಜಯನ್ ಅವರಿಗಾದ ಹಿನ್ನಡೆ ಎಂದು ಹೇಳಲಾಗುತ್ತಿದೆ. ಮಂಗಳವಾರ ರಾತ್ರಿ ಶಿವಶಂಕರ್ ಅವರನ್ನು ಬಂಧಿಸಲಾಗಿದ್ದು, ನಂತರ ಇಲ್ಲಿನ ನ್ಯಾಯಾಲಯಕ್ಕೆ ಹಾಜರುಪಡಿಸಿದ ಸಂದರ್ಭದಲ್ಲಿ ಇಡಿ ಅವರನ್ನು ತನ್ನ ಕಸ್ಟಡಿಗೆ ಕೋರುವ ನಿರೀಕ್ಷೆಯಿದೆ. ಶಿವಶಂಕರ್ ಜನವರಿ 31 ರಂದು ಸೇವೆಯಿಂದ ನಿವೃತ್ತರಾಗಿದ್ದರು.

ಸೋಮವಾರದಿಂದ ನಡೆದಿದ್ದ ಎರಡು ದಿನಗಳ ತೀವ್ರ ವಿಚಾರಣೆಯ ನಂತರ ಶಿವಶಂಕರ್ ಅವರನ್ನು ಬಂಧಿಸಲಾಗಿದೆ. ವಿಜಯನ್ ಅವರ ಮಹತ್ವಾಕಾಂಕ್ಷಿ ಪ್ರಾಜೆಕ್ಟ್ 'ಲೈಫ್ ಮಿಷನ್'ನಲ್ಲಿ ಗುತ್ತಿಗೆ ಪಡೆಯಲು ನಾಲ್ಕು ಕೋಟಿ ರೂಪಾಯಿಗೂ ಹೆಚ್ಚು ಮೊತ್ತವನ್ನು ಕಮಿಷನ್ ರೂಪದಲ್ಲಿ ಪಾವತಿಸಲಾಗಿದೆ ಎಂದು ಆರೋಪಿಸಲಾಗಿದೆ. ಇದರ ತನಿಖೆಯ ಭಾಗವಾಗಿ ಅವರನ್ನು ಬಂಧಿಸಲಾಗಿದೆ. ಕಮಿಷನ್ ಪಾವತಿ ವಿಚಾರವನ್ನು ಬಿಲ್ಡರ್ ಸಂತೋಷ್ ಈಪೆನ್ ಎಂಬುವರು ಸಿಬಿಐ ಮುಂದೆ ಒಪ್ಪಿಕೊಂಡಿದ್ದರಿಂದ ಶಿವಶಂಕರ್ ಬಂಧನವಾಗಿದೆ.

2016-21ರ ಅವಧಿಯ ಮೊದಲ ಬಾರಿಯ ವಿಜಯನ್ ಸರ್ಕಾರದ ಅವಧಿಯಲ್ಲಿ ಸಿಎಂ ನಿಕಟವಾಗಿ ತೊಡಗಿಸಿಕೊಂಡಿರುವ ಎಲ್ಲಾ ವಿಷಯಗಳಲ್ಲಿ ಶಿವಶಂಕರ್ ಅವರ ನಿರ್ಣಯವೇ ಅಂತಿಮವಾಗಿರುತ್ತಿತ್ತು. ಆದರೆ ಈ ಪ್ರಕರಣದಲ್ಲಿ ವಿದೇಶಿ ಕೊಡುಗೆ ನಿಯಮಗಳ ಉಲ್ಲಂಘನೆಯಾಗಿದೆ ಎಂದು ಆರೋಪಿಸಲಾಗಿದೆ. ಈ ಯೋಜನೆಯು 2018 ರ ಭೀಕರ ಪ್ರವಾಹದಲ್ಲಿ ಮನೆ ಕಳೆದುಕೊಂಡ ಬಡವರಿಗೆ ಸೂರು ಒದಗಿಸುವ ಉದ್ದೇಶ ಹೊಂದಿದೆ. ತ್ರಿಶೂರ್ ಜಿಲ್ಲೆಯ ವಡಕ್ಕಂಚೇರಿಯಲ್ಲಿ ನಡೆಯುತ್ತಿದ್ದ ಈ ಯೋಜನೆಯಲ್ಲಿ ಭಾರಿ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿ ಆಗಿನ ಕಾಂಗ್ರೆಸ್ ಶಾಸಕ ಅನಿಲ್ ಅಕ್ಕರಾ ಅವರು ಸಿಬಿಐಗೆ ದೂರು ನೀಡಿದ ನಂತರ ಯೋಜನೆ ಸ್ಥಗಿತವಾಗಿತ್ತು.

ಶಿವಶಂಕರ ಬಂಧನವಾಗಿದ್ದಕ್ಕೆ ಅಕ್ಕರಾ ಬುಧವಾರ ಸಂತಸ ವ್ಯಕ್ತಪಡಿಸಿದ್ದು, ಈ ಅವ್ಯವಹಾರವು ಉನ್ನತ ಮಟ್ಟದಲ್ಲಿ ನಡೆದಿರುವುದರಿಂದ ಬಂಧನಗಳು ಇಲ್ಲಿಗೇ ನಿಲ್ಲಬಾರದು ಎಂದರು. ಜೂನ್ 2020ರಲ್ಲಿ ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ಶಿವಶಂಕರ್ ಜೈಲುಪಾಲಾಗಿದ್ದರು. ಅದಾದ ನಂತರವೇ ಈ ಪ್ರಕರಣವು ಬೆಳಕಿಗೆ ಬಂದಿತು ಎಂಬುದು ಗಮನಾರ್ಹ. ಚಿನ್ನ ಕಳ್ಳಸಾಗಣೆ ಪ್ರಕರಣದ ಪ್ರಮುಖ ಆರೋಪಿ ಸ್ವಪ್ನಾ ಸುರೇಶ್ ಹಾಗೂ ಇನ್ನಿಬ್ಬರು ಆರೋಪಿಗಳನ್ನು ಇಡಿ ಇತ್ತೀಚೆಗೆ ಹಲವು ಬಾರಿ ವಿಚಾರಣೆ ನಡೆಸಿದೆ. ಈ ವಿಚಾರಣೆಯ ನಂತರ ಶಿವಶಂಕರ್ ಅವರನ್ನು ವಿಚಾರಣೆಗೆ ಕರೆಯಲಾಗಿತ್ತು. ಯುಎಇ ರಾಯಭಾರ ಕಚೇರಿಯಲ್ಲಿ ಉದ್ಯೋಗಿಯಾಗಿದ್ದ ಸ್ವಪ್ನಾ ಸುರೇಶ್ ಮತ್ತು ಸರಿತ್ ಇಬ್ಬರೂ ನಂತರ ಲೈಫ್ ಮಿಷನ್ ನಿಧಿ ದುರುಪಯೋಗದಲ್ಲಿ ಭಾಗಿಯಾಗಿರುವುದು ಕಂಡುಬಂದಿದೆ.

ಲಾಕರ್‌ನ ತನಿಖೆಯ ವೇಳೆ ಸ್ವಪ್ನಾ ಮತ್ತು ಶಿವಶಂಕರ್‌ಗೆ ಆಪ್ತರಾಗಿದ್ದ ಚಾರ್ಟರ್ಡ್ ಅಕೌಂಟೆಂಟ್‌ ಒಬ್ಬರಿಗೆ ಸೇರಿದ ಲಾಕರ್‌ನಲ್ಲಿ ಒಂದು ಕೋಟಿ ರೂಪಾಯಿ ನಗದು ಪತ್ತೆಯಾದ ನಂತರ ಶಿವಶಂಕರ್‌ ಈ ಪ್ರಕರಣದಲ್ಲಿ ಇಕ್ಕಟ್ಟಿಗೆ ಸಿಲುಕುವಂತಾಯಿತು. ಇದು ತನಗೆ ಸಿಕ್ಕ ಕಮಿಷನ್ ಎಂದು ಆರಂಭದಲ್ಲಿ ಹೇಳಿಕೊಂಡ ಸ್ವಪ್ನಾ, ನಂತರ ತನ್ನ ನಿಲುವನ್ನು ಬದಲಿಸಿ ಈ ಹಣ ಶಿವಶಂಕರ್‌ಗೆ ಸೇರಿದ್ದೆಂದು ಹೇಳಿದ್ದಾಳೆ. ಮೂರು ದಿನಗಳ ವಿಚಾರಣೆಯಲ್ಲಿ ಇಡಿ ಈ ಬಗ್ಗೆ ಶಿವಶಂಕರ್ ಅವರಿಂದ ಪೂರಕ ಹೇಳಿಕೆ ಪಡೆಯಲು ವಿಫಲವಾಗಿದೆ. ಆದರೆ ತಾನು ಸಂಗ್ರಹಿಸಿದ ಸಾಕ್ಷ್ಯದ ಆಧಾರದ ಮೇಲೆ ಇಡಿ ಶಿವಶಂಕರ್​ ಅವರನ್ನು ಬಂಧಿಸಿದೆ.

ಇದನ್ನೂ ಓದಿ: ಅದಾನಿ ವಿಚಾರ: ತನಿಖೆ ನಡೆಸುವಂತೆ ಆರ್​ಬಿಐ, ಸೆಬಿಗೆ ಕಾಂಗ್ರೆಸ್ ಪತ್ರ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.