ETV Bharat / bharat

ನಾನು ಭಾರತದ ಜನತೆಗಾಗಿ ಕೆಲಸ ಮಾಡುತ್ತಿದ್ದೇನೆ, ಭಾರತೀಯ ಜನತಾ ಪಕ್ಷಕ್ಕಾಗಿ ಅಲ್ಲ: ಪಶ್ಚಿಮ ಬಂಗಾಳ ರಾಜ್ಯಪಾಲ

author img

By ETV Bharat Karnataka Team

Published : Nov 22, 2023, 9:08 PM IST

West Bengal Governor CV Ananda Bose
ಪಶ್ಚಿಮ ಬಂಗಾಳ ರಾಜ್ಯಪಾಲ ಸಿ.ವಿ.ಆನಂದ ಬೋಸ್​

West Bengal Governor CV Ananda: ಪಶ್ಚಿಮ ಬಂಗಾಳದ ರಾಜ್ಯಪಾಲರಾಗಿ ಅಧಿಕಾರ ಸ್ವೀಕರಿಸಿ ಒಂದು ವರ್ಷ ಪೂರೈಸುತ್ತಿರುವ ಹಿನ್ನೆಲೆಯಲ್ಲಿ ರಾಜ್ಯಪಾಲ ಸಿ.ವಿ.ಆನಂದ ಬೋಸ್​ ಅವರು 'ಈಟಿವಿ ಭಾರತ್‌'ಗೆ ವಿಶೇಷ ಸಂದರ್ಶನ ನೀಡಿದ್ದಾರೆ.

ಕೋಲ್ಕತ್ತಾ (ಪಶ್ಚಿಮ ಬಂಗಾಳ): ತೃಣಮೂಲ ಕಾಂಗ್ರೆಸ್​ ನಾಯಕಿ, ಸಿಎಂ ಮಮತಾ ಬ್ಯಾನರ್ಜಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರ ಹಾಗೂ ರಾಜಭವನದ ನಡುವಿನ ಸಂಘರ್ಷ ಹೆಚ್ಚು ಸದ್ದು ಮಾಡುತ್ತಿದೆ. ಈ ಹಿಂದೆ ರಾಜ್ಯಪಾಲರಾಗಿದ್ದ ಜಗದೀಪ್​ ಧನಕರ್ ಹಾಗೂ ಹಾಲಿ ರಾಜ್ಯಪಾಲ ಸಿ.ವಿ.ಆನಂದ ಬೋಸ್​ ಅವರು ಪ್ರಮುಖ ಮಸೂದೆಗಳನ್ನು ತಡೆ ಹಿಡಿಯುತ್ತಿದ್ದಾರೆ. ಒಂದು ರೀತಿಯಲ್ಲಿ ಬಿಜೆಪಿ ಪರವಾಗಿ ಇವರು ಕೆಲಸ ಮಾಡುತ್ತಿದ್ದಾರೆ ಎಂಬ ಆರೋಪ ಇದೆ. ಈ ಕುರಿತು 'ಈಟಿವಿ ಭಾರತ್‌' ಸಂದರ್ಶನದಲ್ಲಿ ಮಾತನಾಡಿದ ರಾಜ್ಯಪಾಲ ಬೋಸ್, ''ನಾನು ಭಾರತದ ಜನತೆಗಾಗಿ ಕೆಲಸ ಮಾಡುತ್ತಿದ್ದೇನೆ. ಭಾರತೀಯ ಜನತಾ ಪಕ್ಷಕ್ಕಾಗಿ ಅಲ್ಲ'' ಎಂದು ಹೇಳಿದ್ದಾರೆ.

ಪಶ್ಚಿಮ ಬಂಗಾಳದ ರಾಜ್ಯಪಾಲರಾಗಿ ಅಧಿಕಾರ ಸ್ವೀಕರಿಸಿ ಒಂದು ವರ್ಷ ಪೂರೈಸುವ ಹೊಸ್ತಿಲಲ್ಲಿರುವ ಮಾಜಿ ಐಎಎಸ್ ಅಧಿಕಾರಿಯಾದ​ ಆನಂದ ಬೋಸ್, ''ನಾನು ಜನರಿಗಾಗಿ ಕೆಲಸ ಮಾಡುತ್ತೇನೆಯೇ ಹೊರತು ಪಕ್ಷಕ್ಕಾಗಿ ಅಲ್ಲ ಎಂಬುದನ್ನು ನೀವು ಅರ್ಥಮಾಡಿಕೊಳ್ಳಬೇಕು. ಆಡಳಿತಾತ್ಮಕ ಪ್ರದೇಶದಲ್ಲಿ ನೀವು ಕೆಲಸ ಮಾಡುವಾಗ ವ್ಯತ್ಯಾಸಗಳಿರಬಹುದು. ಆದರೆ, ಎರಡು ಸಾಂವಿಧಾನಿಕ ಸಂಸ್ಥೆಗಳ ನಡುವಿನ ಸಂಬಂಧವು ಹದಗೆಟ್ಟಿದೆ ಎಂದು ಅರ್ಥವಲ್ಲ. ಚುನಾಯಿತ ಸರ್ಕಾರವು ರಾಜ್ಯಪಾಲರ ಸಿದ್ಧಾಂತವನ್ನು ಅನುಸರಿಸುವ ನಿರೀಕ್ಷೆಯಿಲ್ಲ. ನಾವು ಒಪ್ಪದಿರಲು, ಒಪ್ಪಿಕೊಳ್ಳುವುದು ಪ್ರಜಾಪ್ರಭುತ್ವದ ಸ್ವರೂಪವಾಗಿದೆ. ನಾವು ಅದನ್ನು ಎಲ್ಲ ನಮ್ರತೆಯಿಂದ ಮಾಡಬೇಕಾಗುತ್ತದೆ'' ಎಂದು ತಿಳಿಸಿದರು.

ಪ್ರತಿ ವಿಷಯದಲ್ಲೂ ಒಂದೇ ದೃಷ್ಟಿಕೋನ ಇರಲ್ಲ: ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮಸೂದೆಗಳ ಬಾಕಿ ಉಳಿಸಿಕೊಳ್ಳುವುದು ಸೇರಿದಂತೆ ಹಲವು ವಿಷಯಗಳಲ್ಲಿ ರಾಜ್ಯಪಾಲರನ್ನು ತೀವ್ರವಾಗಿ ಟೀಕಿಸಿದ್ದಾರೆ. ರಾಜಭವನದೊಳಗೆ ಧರಣಿ ಕುಳಿತುಕೊಳ್ಳುವುದಾಗಿಯೂ ಅವರು ಎಚ್ಚರಿಸಿದ್ದು ಇದೆ. ಆದರೆ, ಮುಖ್ಯಮಂತ್ರಿಯೊಂದಿಗಿನ ತಮ್ಮ ಸಂಬಂಧದ ಬಗ್ಗೆ ಪ್ರತಿಕ್ರಿಯಿಸಿದ ಬೋಸ್​ ಅವರು, ''ರಾಜ್ಯಪಾಲರು ಮತ್ತು ಮುಖ್ಯಮಂತ್ರಿಗಳ ನಡುವಿನ ಕ್ರಿಯಾತ್ಮಕತೆಯನ್ನು ಎರಡು ವಿಭಿನ್ನ ಹಂತಗಳಲ್ಲಿ ನಾನು ಗ್ರಹಿಸುತ್ತೇನೆ. ವೈಯಕ್ತಿಕ ಮಟ್ಟದಲ್ಲಿ ನಮ್ಮ ಸಂಬಂಧವು ಸೌಹಾರ್ದತೆಯಿಂದ ನಿರೂಪಿಸಲ್ಪಟ್ಟಿದೆ. ಪರಸ್ಪರ ಗೌರವ ಮತ್ತು ತಿಳಿವಳಿಕೆಯ ಮೇಲೆ ಸ್ಥಾಪಿಸಲಾಗಿದೆ. ಆದಾಗ್ಯೂ, ರಾಜ್ಯಪಾಲರು ಮತ್ತು ಮುಖ್ಯಮಂತ್ರಿಗಳ ನಡುವಿನ ವಿಶಾಲ ಸಂಬಂಧವನ್ನು ಪರಿಶೀಲಿಸುವಾಗ, ಚುನಾಯಿತ ಮುಖ್ಯಮಂತ್ರಿ ಮತ್ತು ನೇಮಕಗೊಂಡ ರಾಜ್ಯಪಾಲರು ಯಾವಾಗಲೂ ಪ್ರತಿಯೊಂದು ವಿಷಯದಲ್ಲೂ ಒಂದೇ ದೃಷ್ಟಿಕೋನವನ್ನು ಹಂಚಿಕೊಳ್ಳುವುದಿಲ್ಲ ಎಂಬುದನ್ನು ಗುರುತಿಸುವುದು ಅತ್ಯಗತ್ಯ'' ಎಂದರು.

ಆದಾಗ್ಯೂ, ಮೊದಲ ವಾರ್ಷಿಕೋತ್ಸವದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ರಾಜಭವನದಲ್ಲಿ ಉಪಸ್ಥಿತರಿರುತ್ತಾರೆಯೇ ಎಂಬ ಪ್ರಶ್ನೆಯನ್ನು ರಾಜ್ಯಪಾಲರು ಎಚ್ಚರಿಕೆಯಿಂದ ತಪ್ಪಿಸಿದರು. ''ಯಾವುದೇ ವಿಶೇಷ ಕಾರ್ಯಕ್ರಮ ಅಥವಾ ಆಚರಣೆಯ ಅಗತ್ಯವಿಲ್ಲ. ಹೊಸ ಮುಖಗಳು, ಯುವಕರ ಉಪಸ್ಥಿತಿ ಬಗ್ಗೆ ಗಮನ ಅಗತ್ಯ'' ಎಂದು ಹೇಳಿದರು.

ಕಾನೂನು ಸುವ್ಯವಸ್ಥೆ ಬಗ್ಗೆ ತೃಪ್ತಿ ಇಲ್ಲ: ಮುಖ್ಯಮಂತ್ರಿಗಳ ಬಗ್ಗೆ ಬೋಸ್ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದರೂ, ರಾಜ್ಯದ ಕಾನೂನು ಸುವ್ಯವಸ್ಥೆ ಬಗ್ಗೆ ತೃಪ್ತಿ ಇಲ್ಲ ಎಂದು ಸ್ಪಷ್ಟಪಡಿಸಿದರು. ''ಶಿಸ್ತಿನ ಕ್ಷೇತ್ರ ಕಾನೂನು ಸಂಕೀರ್ಣವಾಗಿದೆ. ಆದರೂ, ಕೆಲವು ಘಟನೆಗಳು ಸ್ಥಾಪಿತ ಕಾರ್ಯವಿಧಾನಗಳನ್ನು ಅಡ್ಡಿಪಡಿಸಿದೆ ಎಂದು ಖುದ್ದು ಸ್ಥಳ ಪರೀಶಿಲನೆ ವೇಳೆ ಬಹಿರಂಗವಾಯಿತು. ಕೆಲವು ಸಂದರ್ಭಗಳಲ್ಲಿ ಸಹಜ ಸ್ಥಿತಿಗೆ ತರಲು ರಾಜ್ಯ ಸರ್ಕಾರಕ್ಕೆ ಶಿಫಾರಸುಗಳನ್ನು ಮಾಡಲಾಗಿದೆ. ಇದರ ನಂತರ ಕ್ರಮಗಳನ್ನು ಪ್ರಾರಂಭಿಸಲಾಗಿದೆ. ಆದರೆ, ಕೆಲವು ಕ್ಷೇತ್ರಗಳಲ್ಲಿ ಯಥಾಸ್ಥಿತಿ ಮುಂದುವರಿಯುತ್ತದೆ. ಹಿಂಸಾತ್ಮಕ ಘಟನೆಗಳ ಸಂದರ್ಭದಲ್ಲಿ ರಾಜ್ಯ ಸರ್ಕಾರ ಅಥವಾ ಪೊಲೀಸ್ ಆಡಳಿತವು ತೆಗೆದುಕೊಂಡ ಕ್ರಮಗಳು ತೃಪ್ತಿಕರ ಎಂದು ಪರಿಗಣಿಸಲಾಗುವುದಿಲ್ಲ'' ಎಂದು ಅಭಿಪ್ರಾಯಪಟ್ಟರು.

ರಾಜಭವನದಿಂದ 365 ಜೋಡಿಗಳ ಸಾಮೂಹಿಕ ವಿವಾಹ: ರಾಜ್ಯಪಾಲ ಬೋಸ್ ಅವರು ರಾಜ್ಯಪಾಲರಾಗಿ ಅಧಿಕಾರ ಸ್ವೀಕರಿಸಿ ಒಂದು ವರ್ಷ ಪೂರೈಸುತ್ತಿರುವ ನಿಮಿತ್ತ ನವೆಂಬರ್ 23ರಂದು ವಿವಿಧ ಕಾರ್ಯಕ್ರಮಗಳು ಆರಂಭವಾಗಲಿದ್ದು, ಇವು ವರ್ಷವಿಡೀ ಮುಂದುವರಿಯಲಿವೆ. ಖುದ್ದು ರಾಜ್ಯಪಾಲರು ಸಾಮೂಹಿಕ ವಿವಾಹ ಕಾರ್ಯಕ್ರಮ ಏರ್ಪಡಿಸುವುದಾಗಿ ಘೋಷಿಸಿದರು.

''ರಾಜಭವನದಿಂದ 365 ಜೋಡಿಗಳ ಸಾಮೂಹಿಕ ವಿವಾಹವನ್ನು ಆಯೋಜಿಸಲಾಗುವುದು. ರಾಜಭವನದ ಅಧಿಕಾರಿಗಳೇ ಎಲ್ಲ ವೆಚ್ಚ ಮತ್ತು ಸಿದ್ಧತೆಗಳನ್ನು ನೋಡಿಕೊಳ್ಳುತ್ತಾರೆ. ಮುಖ್ಯವಾಗಿ ಆರ್ಥಿಕವಾಗಿ ಹಿಂದುಳಿದ ಜನರಿಗೆ ಆರ್ಥಿಕ, ಸಾಮಾಜಿಕ ಮತ್ತು ನೈತಿಕ ಬೆಂಬಲ ನೀಡಲು ಸಾಮೂಹಿಕ ವಿವಾಹ ಉಪಕ್ರಮವನ್ನು ತೆಗೆದುಕೊಳ್ಳಲಾಗಿದೆ'' ಎಂದು ರಾಜ್ಯಪಾಲರು 'ಈಟಿವಿ ಭಾರತ್‌'ಗೆ ತಿಳಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.