ETV Bharat / bharat

ಬದುಕಿದ್ದ ವ್ಯಕ್ತಿ ಸತ್ತಿದ್ದಾನೆ ಎಂದು ಶವ ನೀಡಿದ ಆಸ್ಪತ್ರೆ : ಆಘಾತದಿಂದ ಪತ್ನಿ ಆತ್ಮಹತ್ಯೆ

author img

By ETV Bharat Karnataka Team

Published : Jan 7, 2024, 8:18 PM IST

Updated : Jan 7, 2024, 8:38 PM IST

hospital-blast-case-confusion-arises-over-identification-of-dead-dilip-days-after-grief-stricken-wifes-suicide
ಬದುಕಿದ್ದ ವ್ಯಕ್ತಿ ಸತ್ತಿದ್ದಾನೆ ಎಂದು ಶವ ನೀಡಿದ ಆಸ್ಪತ್ರೆ : ಆಘಾತದಿಂದ ಪತ್ನಿ ಆತ್ಮಹತ್ಯೆ

ಆಸ್ಪತ್ರೆ ಸಿಬ್ಬಂದಿಗಳ ಎಡವಟ್ಟಿನಿಂದ ಮೃತನೆಂದು ಘೋಷಿಸಿದ್ದ ವ್ಯಕ್ತಿ ಬದುಕಿ ಬಂದಿರುವ ಘಟನೆ ಒಡಿಶಾದ ಭುವನೇಶ್ವರದಲ್ಲಿ ನಡೆದಿದೆ.

ಭುವನೇಶ್ವರ್ (ಒಡಿಶಾ): ಇಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ಸಂಭವಿಸಿದ ಎಸಿ ಕಂಪ್ರೆಸ್ಸರ್​ ಸ್ಫೋಟ ಪ್ರಕರಣದಲ್ಲಿ ಆಸ್ಪತ್ರೆ ಸಿಬ್ಬಂದಿ ಎಡವಟ್ಟಿನಿಂದ ಎರಡು ಕುಟುಂಬಗಳು ಗೊಂದಲಕ್ಕೆ ಸಿಲುಕಿದ ಘಟನೆ ನಡೆದಿದೆ. ಆಸ್ಪತ್ರೆ ಸಿಬ್ಬಂದಿ ಮೃತಪಟ್ಟಿದ್ದಾನೆ ಎಂದು ಘೋಷಿಸಿದ್ದ ವ್ಯಕ್ತಿ ಬದುಕಿರುವುದು ಬೆಳಕಿಗೆ ಬಂದಿದೆ.

ಪ್ರಕರಣದ ಹಿನ್ನೆಲೆ; ಕಳೆದ ಡಿಸೆಂಬರ್​ 26ರಂದು ಭುವನೇಶ್ವರದ ಖಾಸಗಿ ಆಸ್ಪತ್ರೆಯೊಂದರಲ್ಲಿ ಎಸಿ ಕಂಪ್ರೆಸ್ಸರ್​ ಸ್ಫೋಟಗೊಂಡು ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದರು. ಕೂಡಲೇ ಅವರನ್ನು ಇದೇ ಆಸ್ಪತ್ರೆಯಲ್ಲಿ ದಾಖಲು ಮಾಡಲಾಗಿತ್ತು. ಡಿಸೆಂಬರ್​ 30ರಂದು ದಿಲೀಪ್ ಸಮಂತ್ರಿ​ ಎಂಬವರು ಮೃತಪಟ್ಟಿರುವುದಾಗಿ ಆಸ್ಪತ್ರೆ ಘೋಷಿಸಿತ್ತು. ಬಳಿಕ ಡಿಸೆಂಬರ್​ 31ರಂದು ಸಂಪೂರ್ಣವಾಗಿ ಸುಟ್ಟು ಹೋಗಿದ್ದ ದೇಹವನ್ನು ಆಸ್ಪತ್ರೆ ಸಿಬ್ಬಂದಿ ದಿಲೀಪ್​ ಕುಟುಂಬಕ್ಕೆ ಹಸ್ತಾಂತರಿಸಿದ್ದರು. ಬಳಿಕ ದಿಲೀಪ್​ ಕುಟುಂಬಸ್ಥರು ಅಂತ್ಯ ಸಂಸ್ಕಾರಗಳನ್ನು ನಡೆಸಿದ್ದರು. ದಿಲೀಪ್​ ಸಾವನ್ನಪ್ಪಿರುವ ಬಗ್ಗೆ ತಿಳಿದ ಪತ್ನಿ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದು ತಿಳಿದುಬಂದಿದೆ.

ಆದರೆ, ಇದೀಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಜ್ಯೋತಿರಂಜನ್​ ಮಲಿಕ್ ಎಂದುಕೊಂಡಿದ್ದ ವ್ಯಕ್ತಿ ಗುಣಮುಖನಾಗಿದ್ದಾನೆ. ಅಲ್ಲದೇ, ತಾನು ಜ್ಯೋತಿರಂಜನ್​ ಮಲಿಕ್ ಅಲ್ಲ, ಬದಲಿಗೆ ದಿಲೀಪ್​ ಸಮಂತ್ರಿ ಎಂದು ಹೇಳಿಕೊಂಡಿದ್ದಾನೆ. ಹೀಗಾಗಿ ಮೃತಪಟ್ಟಿರುವುದು ಯಾರು ಎಂಬುದಾಗಿ ಎರಡೂ ಕುಟುಂಬಗಳ ನಡುವೆ ಗೊಂದಲಕ್ಕೆ ಕಾರಣವಾಗಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಖಾಸಗಿ ಆಸ್ಪತ್ರೆಯ ಸಿಇಒ ಸ್ಮಿತಾ ಪಧಿ, ಆಸ್ಪತ್ರೆಯಲ್ಲಿ ಸಂಭವಿಸಿದ ಎಸಿ ಕಂಪ್ರೆಸ್ಸರ್​ ಸ್ಫೋಟ ಸಂದರ್ಭ ನಾಲ್ವರು ಗಂಭೀರ ಗಾಯಗೊಂಡಿದ್ದರು. ಇವರಾರು ಆಸ್ಪತ್ರೆಯ ಸಿಬ್ಬಂದಿಗಳಲ್ಲ. ಇವರು ಹೊರಗಿನ ಸಂಸ್ಥೆಯ ಕೆಲಸಗಾರರಾಗಿದ್ದಾರೆ. ಈ ಸಂಸ್ಥೆಯ ವ್ಯಕ್ತಿಯೊಬ್ಬರು ಸ್ಫೋಟದಲ್ಲಿ ಗಾಯಗೊಂಡವರ ಗುರುತನ್ನು ಪತ್ತೆ ಹಚ್ಚಿದ್ದರು. ಡಿಸೆಂಬರ್​ 30ರಂದು ವ್ಯಕ್ತಿಯೊಬ್ಬರು ಮೃತಪಟ್ಟಿದ್ದರು. ಇವರನ್ನು ದಿಲೀಪ್​ ಸಮಂತ್ರಿ ಎಂದು ಹೇಳಲಾಗಿತ್ತು. ಅಲ್ಲದೇ, ಕುಟುಂಬಸ್ಥರು ಕೂಡ ಮೃತದೇಹವನ್ನು ದಿಲೀಪ್​ ಸಮಂತ್ರಿ ಅವರದ್ದೇ ಎಂದು ಗುರುತಿಸಿದ್ದರು. ಆದ್ದರಿಂದ ನಾವು ಮೃತದೇಹವನ್ನು ದಿಲೀಪ್​ ಕುಟುಂಬಕ್ಕೆ ಹಸ್ತಾಂತರಿಸಿದ್ದೆವು ಎಂದು ಹೇಳಿದರು.

ಈ ಬಗ್ಗೆ ದಿಲೀಪ್​ ಅಳಿಯ ಮನೋಜ್ ಸಮಂತ್ರಿ ಮಾತನಾಡಿ, ಡಿಸೆಂಬರ್​ 31ರಂದು ಆಸ್ಪತ್ರೆ ಸಿಬ್ಬಂದಿ ದಿಲೀಪ್​​ ಎಂದು ಹೇಳಿ ಒಂದು ಮೃತದೇಹವನ್ನು ನೀಡಿದ್ದರು. ಈ ಮೃತದೇಹವನ್ನು ಪ್ಲಾಸ್ಟಿಕ್​ನಿಂದ ಮುಚ್ಚಲಾಗಿತ್ತು. ಶವ ಸಂಪೂರ್ಣವಾಗಿ ಸುಟ್ಟು ಹೋಗಿತ್ತು. ಬಳಿಕ ನಾವು ಮೃತದೇಹದ ಅಂತ್ಯಸಂಸ್ಕಾರಗಳನ್ನು ಮುಗಿಸಿದ್ದೇವೆ. ಆದರೆ, ಇದೀಗ ದಿಲೀಪ್​ ಬದುಕಿದ್ದಾನೆ ಎಂದು ಹೇಳಿದರು. ಇನ್ನೊಂದೆಡೆ, ದಿಲೀಪ್​ ಸಾವಿನ ಸುದ್ದಿ ಕೇಳಿ ಆತನ ಹೆಂಡತಿ ಸುನಾ ಸಮಂತ್ರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದರಿಂದ ಸಮಂತ್ರಿ ಕುಟುಂಬ ಇನ್ನಷ್ಟು ಆಘಾತಕ್ಕೆ ಒಳಗಾಗಿದೆ.

ಸ್ಫೋಟ ಪ್ರಕರಣದಲ್ಲಿ ಒಟ್ಟು ನಾಲ್ವರು ಗಾಯಗೊಂಡಿದ್ದು, ಡಿಸೆಂಬರ್​ 30ರಂದು ಓರ್ವ ಸಾವನ್ನಪ್ಪಿದ್ದ. ಜನವರಿ 3ರಂದು ಮತ್ತೋರ್ವ ಸಾವನ್ನಪ್ಪಿದ್ದು, ಮೃತನನ್ನು ಸ್ರೀತಮ್​ ಸಾಹು ಎಂದು ಗುರುತಿಸಲಾಗಿದೆ. ಸ್ಫೋಟ ಪ್ರಕರಣದಲ್ಲಿ ಆಸ್ಪತ್ರೆ ಸಿಬ್ಬಂದಿಗಳ ನಿರ್ಲಕ್ಷ್ಯ ಎದ್ದು ಕಾಣುತ್ತಿದ್ದು, ಈ ಸಂಬಂಧ ತನಿಖೆ ನಡೆಸುವಂತೆ ಮೃತರ ಕುಟುಂಬಸ್ಥರು ಪೊಲೀಸರಿಗೆ ಒತ್ತಾಯಿಸಿದ್ದಾರೆ.

ಇದನ್ನೂ ಓದಿ : ಯುವತಿ ಮೇಲೆ ಅತ್ಯಾಚಾರ ಆರೋಪ : ಎಎಸ್​ಪಿ ವಿರುದ್ಧ ಪ್ರಕರಣ ದಾಖಲು

Last Updated :Jan 7, 2024, 8:38 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.