ETV Bharat / bharat

ಮರ್ಯಾದೆ ಹತ್ಯೆ: ನೌಕರನೊಂದಿಗೆ ಓಡಿ ಹೋಗಿ ಮದುವೆಯಾದ ಸಹೋದರಿಯನ್ನು ಗುಂಡಿಕ್ಕಿ ಕೊಂದ ಸಹೋದರ!

author img

By

Published : Aug 6, 2023, 10:36 PM IST

ADCP Shubham Agarwal spoke at the press conference.
ಎಡಿಸಿಪಿ ಶುಭಂ ಅಗರ್ವಾಲ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಸಹೋದರಿ ಹಾಗೂ ಆಕೆಯ ಪ್ರಿಯಕರನ ಮೇಲೆ ಗುಂಡಿನ ದಾಳಿ ಮಾಡಿದ್ದ ಆರೋಪಿಯನ್ನು ಲೂಧಿಯಾನ ಪೊಲೀಸ್ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಲೂಧಿಯಾನ (ಪಂಜಾಬ್): ಸಹೋದರನೊಬ್ಬ ತನ್ನ ಸಹೋದರಿಯನ್ನೇ ಕೊಂದು ಆಕೆಯ ಪತಿಗೆ ಗುಂಡು ಹಾರಿಸಿ ಗಾಯಗೊಳಿಸಿರುವ ಮರ್ಯಾದೆಗೇಡು ಹತ್ಯೆ ಪ್ರಕರಣ ಲೂಧಿಯಾನದ ಪೊಲೀಸ್ ಠಾಣೆ ಪಿಎಯು ವ್ಯಾಪ್ತಿಯ ಪಂಜ್‌ಪಿರ್ ರಸ್ತೆ ಕಾರ್ಪೊರೇಷನ್ ಕಾಲೋನಿಯಲ್ಲಿ ನಡೆದಿದೆ.

ಗುಂಡೇಟಿನಿಂದ ತೀವ್ರವಾಗಿ ಗಾಯಗೊಂಡಿದ್ದ ಸಹೋದರಿ ಸಂದೀಪ್ ಕೌರ್ (28) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಗಾಯಗೊಂಡಿದ್ದ ಪತಿ ರವಿಕುಮಾರ್​​​ನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆರೋಪಿ ಸೂರಜ್ ಸಿಂಗ್ ಎಂಬಾತನನ್ನು ಪೊಲೀಸರು ಬಂಧಿಸಿದ್ದು, ಆತನ ಬಳಿಯಿದ್ದ 32 ಬಾರ್ ಕಂಟ್ರಿ ಪಿಸ್ತೂಲ್​, 2 ಮ್ಯಾಗಜೀನ್ ವಶಕ್ಕೆ ಪಡೆಯಲಾಗಿದೆ.

ತಮ್ಮ ಸಂಸ್ಥೆಯ ನೌಕರನ ಜೊತೆ ಸೋದರಿ ಸಂದೀಪ್‌ ಓಡಿಹೋಗಿದ್ದಳು. ಅಷ್ಟೇ ಅಲ್ಲದೇ ಆತನೊಂದಿಗೆ ಮದುವೆ ಮಾಡಿಕೊಂಡಿದ್ದಳು. ಇದರಿಂದ ಕುಪಿತಗೊಂಡಿದ್ದ ಸೋದರ ಆಕೆಯ ಪತಿಯನ್ನು ಕೊಲ್ಲಲು ಸಂಚು ರೂಪಿಸಿದ್ದ.

ಆರೋಪಿ ಸೂರಜ್​ನ ತಂದೆ ಭೂಪಿಂದರ್ ಸಿಂಗ್ ಕೌರ್​ ಒಬ್ಬ ಫೈನಾನ್ಸಿಯರ್. ಸಂತ್ರಸ್ತ ರವಿ ಎಂಬಾತ ಹಲವಾರು ವರ್ಷಗಳಿಂದ ಅವರ ಫೈನಾನ್ಸ್‌ನಲ್ಲಿ ನೌಕರನಾಗಿ ಕೆಲಸ ಮಾಡುತ್ತಿದ್ದ. ಭೂಪಿಂದರ್ ಸಿಂಗ್ ಕುಟುಂಬದ ಜತೆ ರವಿಕುಮಾರ್ ಅನ್ಯೋನ್ಯತೆ ಬೆಳೆಸಿಕೊಂಡು ಆತ್ಮೀಯರಾಗಿದ್ದನು. ಆಗಾಗ್ಗೆ ಅವರ ಮನೆಗೂ ಭೇಟಿ ನೀಡುತ್ತಿದ್ದ. ಕ್ರಮೇಣ ರವಿ ಹಾಗೂ ಸಂದೀಪ್ ಪ್ರೀತಿಸುತ್ತಿದ್ದರು. ಜುಲೈ 21ರಂದು ಮನೆಯಿಂದ ಓಡಿ ಹೋಗಿದ್ದು, 29ರಂದು ವಿವಾಹವಾಗಿದ್ದರು ಎಂದು ಎಡಿಸಿಪಿ ಶುಭಂ ಅಗರ್ವಾಲ್ ಮಾಹಿತಿ ನೀಡಿದ್ದಾರೆ.

ಮದುವೆಯ ಬಳಿಕ ಸಂದೀಪ್ ಮತ್ತು ರವಿ ಜುಲೈ 29ರಂದು ಮನೆಗೆ ಮರಳಿದ್ದಾರೆ. ತಮ್ಮ ಫೈನಾನ್ಸ್​​ನಲ್ಲಿದ್ದ ನೌಕರ ತನ್ನ ಸಹೋದರಿಯನ್ನೇ ಮದುವೆ ಆಗಿದ್ದು ಸಮಾಜದಲ್ಲಿ ಮನೆ ಮಾರ್ಯಾದೆ ಮಣ್ಣುಪಾಲಾಯಿತು ಎಂದು ಸೂರಜ್ ಕೋಪಗೊಂಡು, ಆತನನ್ನು ಕೊಲ್ಲಲು ಯೋಜನೆ ರೂಪಿಸಿದ್ದನು ಎಂದು ತಿಳಿಸಿದ್ದಾರೆ.

ಸಹಾಯಕ ಪೊಲೀಸ್ ಕಮೀಷನರ್ ಮಂದೀಪ್ ಸಿಂಗ್ ಮಾತನಾಡಿ, ಶನಿವಾರ ರಾತ್ರಿ ರವಿಕುಮಾರ್ ತನ್ನ ಮನೆಯ ಹೊರಗೆ ನಿಂತಿದ್ದ ಮಾಹಿತಿ ಅರಿತ ಸೂರಜ್, ಬೈಕ್ ಮೇಲೆ ಹೆಲ್ಮೆಟ್ ಧರಿಸಿ ಅಲ್ಲಿಗೆ ತೆರಳಿದ್ದಾನೆ. ಬೈಕ್‌ನಿಂದಿಳಿದ ಸೂರಜ್, ರವಿ ಮೇಲೆ ಏಕಾಏಕಿ ಗುಂಡು ಹಾರಿಸಿದ್ದಾನೆ. ರವಿ ಪ್ರಾಣ ಉಳಿಸಿಕೊಳ್ಳಲು ಮನೆಯೊಳಗೆ ಧಾವಿಸಿದರೂ, ಸೂರಜ್ ಗುಂಡು ಹಾರಿಸುತ್ತಲೇ ಬೆನ್ನು ಹತ್ತಿದ್ದ.

ಆತನ ತಂಗಿ ಸಂದೀಪ್ ಎದುರಿಗೆ ಬಂದು ತಡೆಯಲೆತ್ನಿಸಿದಾಗ ಆಕೆಯ ಮೇಲೂ ಹಲವು ಬಾರಿ ಗುಂಡು ಹಾರಿಸಿದ್ದಾನೆ. ತೀವ್ರ ಗಾಯಗೊಂಡಿದ್ದ ಆಕೆ ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ಅಷ್ಟರಲ್ಲಿ ಗಾಯಗೊಂಡಿದ್ದ ರವಿಕುಮಾರ್ ಮನೆಯಿಂದ ತಲೆಮರೆಸಿಕೊಂಡಿದ್ದ. ನೆರೆಹೊರೆಯವರ ಸಹಾಯದಿಂದ ರವಿಯನ್ನು ಆಸ್ಪತ್ರೆಗೆ ಸಾಗಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ರವಿಗೆ ಐದು ಗುಂಡುಗಳು ತಾಕಿದ್ದು, ಗಾಯಗಳಾಗಿವೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: Shooting in US: ವಾಷಿಂಗ್ಟನ್​ನಲ್ಲಿ ಅಪರಿಚಿತರಿಂದ ಗುಂಡಿನ ದಾಳಿ: ಮೂವರು ಸಾವು, ಇಬ್ಬರು ಗಂಭೀರ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.