ETV Bharat / bharat

ಗಾಂಧಿ ಜಯಂತಿ: ರಾಜ್​ಘಾಟ್​ನಲ್ಲಿ ಪುಷ್ಪನಮನ ಸಲ್ಲಿಸಿದ ಪ್ರಧಾನಿ ಮೋದಿ, ಖರ್ಗೆ

author img

By ETV Bharat Karnataka Team

Published : Oct 2, 2023, 9:31 AM IST

Updated : Oct 2, 2023, 9:46 AM IST

PM Modi, dignitaries pays tribute to Gandhiji at Rajghat
ರಾಜ್​ಘಾಟ್​ನಲ್ಲಿ ಪುಷ್ಪನಮನ ಸಲ್ಲಿಸಿದ ಪ್ರಧಾನಿ ಮೋದಿ

ಕಾಂಗ್ರೆಸ್​ ರಾಷ್ಟ್ರಿಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೇರಿ, ರಾಷ್ಟ್ರಪತಿ, ಉಪರಾಷ್ಟ್ರಪತಿ, ಸಚಿವರು ರಾಜ್​ಘಾಟ್​ನಲ್ಲಿ ಇಂದು ಗಣ್ಯರು ಮಹಾತ್ಮ ಗಾಂಧೀಜಿ ಅವರಿ ಪುಷ್ಪ ನಮನ ಸಲ್ಲಿಸಿದರು.

ನವದೆಹಲಿ: ದೇಶದೆಲ್ಲೆಡೆ ಇಂದು ಮಹಾತ್ಮ ಗಾಂಧೀಜಿ ಅವರ ಹುಟ್ಟುಹಬ್ಬವನ್ನು ಆಚರಿಸಲಾಗುತ್ತಿದ್ದು, ಗಾಂಧಿ ಜಯಂತಿ ಹಿನ್ನೆಲೆ ಇಂದು ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವು ಗಣ್ಯರು ರಾಜ್​ಘಾಟ್​ನಲ್ಲಿ ಮಹಾತ್ಮ ಗಾಂಧೀಜಿ ಅವರಿಗೆ ಪುಷ್ಪನಮನ ಸಲ್ಲಿಸಿದರು.

ರಾಷ್ಟ್ರಪತಿ ದ್ರೌಪದಿ ಮುರ್ಮು, ಉಪರಾಷ್ಟ್ರಪತಿ ಜಗದೀಪ್​ ಧನ್​ಕರ್​, ಕಾಂಗ್ರೆಸ್​ ರಾಷ್ಟ್ರೀಯ ಅಧ್ಯಕ್ಷ ಹಾಗೂ ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಮತ್ತು ದೆಹಲಿ ಲೆಫ್ಟಿನೆಂಟ್ ಗವರ್ನರ್ ಎಲ್ ಜಿ ಸಕ್ಸೇನಾ, ಕೇಂದ್ರ ಸಚಿವರಾದ ಡಾ ಜಿತೇಂದ್ರ ಸಿಂಗ್ ಮತ್ತು ಮೀನಾಕ್ಷಿ ಲೇಖಿ ರಾಜ್​ಘಾಟ್​ನಲ್ಲಿ ಶ್ರದ್ಧಾಂಜಲಿ ಅರ್ಪಿಸಿದರು.

"ಮಹಾತ್ಮ ಗಾಂಧೀಜಿ ಅವರು ಜಾಗತಿಕ ಮಟ್ಟದಲ್ಲಿ ಪ್ರಭಾವ ಬೀರಿರುವ ವ್ಯಕ್ತಿ" ಎಂದು ಎಕ್ಸ್​ನಲ್ಲಿ ಪೋಸ್ಟ್​ ಮಾಡಿರುವ ನರೇಂದ್ರ ಮೋದಿ ಗಾಂಧೀಜಿ ಅವರ ಕನಸುಗಳನ್ನು ಈಡೇರಿಸುವ ನಿಟ್ಟಿನಲ್ಲಿ ಕೆಲಸ ಮಾಡುವಂತೆ ಒತ್ತಾಯಿಸಿದ್ದಾರೆ.

"ಗಾಂಧಿ ಜಯಂತಿಯ ಈ ವಿಶೇಷ ದಿನದಂದು ನಾನು ಮಹಾತ್ಮ ಗಾಂಧಿ ಅವರಿಗೆ ನಮನಗಳನ್ನು ಸಲ್ಲಿಸುತ್ತೇನೆ. ಅವರ ಬೋಧನೆಗಳು ಸದಾ ನಮ್ಮ ಹಾದಿಯನ್ನು ಬೆಳಗುತ್ತಲೇ ಇರುತ್ತವೆ. ಜಾಗತಿಕವಾಗಿ ಪ್ರಭಾವ ಬೀರಿರುವ ಗಾಂಧೀಜಿ, ಇಡೀ ಮಾನವಕುಲದಲ್ಲಿ ಏಕತೆ ಮತ್ತು ಸಹಾನುಭೂತಿಯ ಮನೋಭಾವ ಮತ್ತಷ್ಟು ಹೆಚ್ಚುವಂತೆ ಪ್ರೇರೇಪಿಸಿದವರು. ಅವರ ಕನಸುಗಳನ್ನು ನನಸು ಮಾಡಲು ನಾವು ಯಾವಾಗಲು ಕೆಲಸ ಮಾಡೋಣ. ಅವರು ಕನಸು ಕಂಡ ಬದಲಾವಣೆಯ ರಾಯಭಾರಿಗಳಾಗುವಂತೆ ಅವರ ಆಲೋಚನೆಗಳು ಮಾಡಲಿ. ಎಲ್ಲಾ ಕಡೆ ಏಕತೆ ಮತ್ತು ಸೌಹಾರ್ದತೆ ಬೆಳೆಸಲಿ" ಎಂದು ಪೋಸ್ಟ್​​ ನಲ್ಲಿ ಹಂಚಿಕೊಂಡಿದ್ದಾರೆ.

ಗಾಂಧಿ ಜಯಂತಿ ಹಿನ್ನೆಲೆ ನಿನ್ನೆ ದೇಶದ ಜನತೆಗೆ ಶುಭಾಶಯಗಳನ್ನು ತಿಳಿಸಿದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು, ಜನರು ತಮ್ಮ ಆಲೋಚನೆಗಳು, ಮಾತುಗಳು ಮತ್ತು ಕಾರ್ಯಗಳಲ್ಲಿ ಮಹಾತ್ಮ ಗಾಂಧೀಜಿ ಅವರ ಮೌಲ್ಯಗಳನ್ನು ಮತ್ತು ಬೋಧನೆಗಳನ್ನು ಅನುಸಿರಿಸಿ, ದೇಶದ ಕಲ್ಯಾಣಕ್ಕಾಗಿ ತಮ್ಮನ್ನು ತಾವು ಅರ್ಪಿಸಿಕೊಳ್ಳುವಂತೆ ಮನವಿ ಮಾಡಿದರು.

ಅಂತಾರಾಷ್ಟ್ರೀಯ ಅಹಿಂಸಾ ದಿನ: 1869 ಅಕ್ಟೋಬರ್​ 2ರಂದು ಗುಜರಾತ್​ನ ಪೋರಬಂದರ್​ ಪಟ್ಟಣದಲ್ಲಿ ಜನಿಸಿದ ಮಹಾತ್ಮ ಗಾಂಧೀಜಿ ಅವರು ತಮ್ಮ ಜೀವನದುದ್ದಕ್ಕೂ ಅಹಿಂಸಾತ್ಮಕ ತತ್ವವನ್ನು ಪ್ರದಿಪಾದಿಸಿಕೊಂಡು ಬಂದವರು. ಬ್ರಿಟಿಷ್​ ಆಳ್ವಿಕೆಯ ವಿರುದ್ಧದ ಭಾರತದ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ಗಾಂಧೀಜಿ ಭಾರತಕ್ಕೆ ಮಾತ್ರವಲ್ಲ, ಇಡೀ ವಿಶ್ವಕ್ಕೆ ಸಲ್ಲುವವರು. ಹಾಗಾಗಿ ಭಾರತ ಈ ದಿನವನ್ನು ಗಾಂಧೀ ಜಯಂತಿ ಎಂದು ಆಚರಿಸಿದರೆ, ಪ್ರಪಂಚದಾದ್ಯಂತ ಗಾಂಧೀಜಿ ಅವರ ಜನ್ಮ ದಿನವನ್ನು ಅಂತಾರಾಷ್ಟ್ರೀಯ ಅಹಿಂಸಾ ದಿನವನ್ನಾಗಿ ಆಚರಿಸಲಾಗುತ್ತದೆ.

ಗಾಂಧೀ ಜಯಂತಿ ಹಿನ್ನೆಲೆ ಅ. 1ರಂದು ಪ್ರಧಾನಿ ನರೇಂದ್ರ ಮೋದಿ ಸ್ವಚ್ಛತಾ ಅಭಿಯಾನಕ್ಕೆ ಚಾಲನೆ ನೀಡಿದರು. 'ಏಕ್​ ತಾರೀಖ್​, ಏಕ್​, ಘಂಟಾ, ಏಕ್​ ಸಾಥ್​' ಮೆಗಾ ಸ್ವಚ್ಛತಾ ಅಭಿಯಾನವಾಗಿದ್ದು, 'ಸ್ವಚ್ಛತಾ ಪಖ್ವಾಡ- ಸ್ವಚ್ಛತಾ ಹಿ ಸೇವಾ' 2023 ಅಭಿಯಾನಕ್ಕೆ ಇದು ಚಾಲನೆಯಾಗಿದೆ. ಸ್ವಚ್ಛತಾ ಅಭಿಯಾನದಲ್ಲಿ ಭಾಗಿಯಾಗುವಂತೆ ದೇಶದಾದ್ಯಂತ ಜನರನ್ನು ಪ್ರೇರೇಪಿಸಿದ ಪ್ರಧಾನಿ ಮೋದಿ, ಅಬಿಯಾನವನ್ನು ಮುಂದಕ್ಕೆ ಕೊಂಡೊಯ್ಯವುದು ಮಹಾತ್ಮ ಗಾಂಧೀಜಿಯವರ ಸ್ವಚ್ಛ ಭಾರತದ ಕನಸನ್ನು ನನಸಾಗಿಸುವ ಬಹುದೊಡ್ಡ ಹೆಜ್ಜೆಯಾಗಿದೆ ಎಂದು ಹೇಳಿದರು.

ಇದನ್ನೂ ಓದಿ: ಇದು ಗಾಂಧಿ ಮೆಟ್ಟಿದ ನೆಲ: ಇಲ್ಲಿನ ಕಣ ಕಣದಲ್ಲೂ ಗಾಂಧಿಮಯ.. ಯಾವುದು ಗೊತ್ತಾ ಕರ್ನಾಟಕದ ಈ ಗ್ರಾಮ?

Last Updated :Oct 2, 2023, 9:46 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.