ETV Bharat / bharat

ಗಾಂಧಿ ಜಯಂತಿ 2023: 'ಬಾಪು' ನೆನಪು.. ಭಾರತದ ಸ್ವಾತಂತ್ರ್ಯ ಹೋರಾಟದ ಸಂಕೇತ

author img

By ETV Bharat Karnataka Team

Published : Oct 2, 2023, 7:51 AM IST

Gandhi Jayanti 2023: Remembering 'Bapu'; A symbol of India's independence struggle
ಗಾಂಧಿ ಜಯಂತಿ 2023: 'ಬಾಪು' ನೆನಪು.. ಭಾರತದ ಸ್ವಾತಂತ್ರ್ಯ ಹೋರಾಟದ ಸಂಕೇತ

ಅಕ್ಟೋಬರ್ 2, 2023, ಇಂದು ಮಹಾತ್ಮ ಗಾಂಧಿಯವರ 154 ನೇ ಜನ್ಮದಿನ, ದೇಶದ ಜನರು ಪ್ರೀತಿಯಿಂದ ಗಾಂಧೀಜಿ ಅವರನ್ನು 'ಬಾಪು' ಅಥವಾ ರಾಷ್ಟ್ರಪಿತ ಎಂದು ಕರೆಯುತ್ತಾರೆ.

ಹೈದರಾಬಾದ್: ಅಕ್ಟೋಬರ್ 2, 1869 ರಂದು ಗುಜರಾತ್‌ನ ಪೋರಬಂದರ್‌ನಲ್ಲಿ ಜನಿಸಿದ ಮೋಹನ್​ದಾಸ ಕರಮಚಂದ್​ ಗಾಂಧಿ ಬ್ರಿಟಿಷ್ ಆಳ್ವಿಕೆಯ ವಿರುದ್ಧ ಹೋರಾಟ ಮಾಡಿ ಭಾರತಕ್ಕೆ ಸ್ವಾತಂತ್ರ್ಯ ತಂದು ಕೊಡುವಲ್ಲಿ ತಮ್ಮ ಜೀವನವನ್ನು ಮುಡಿಪಾಗಿಟ್ಟವರು. ಅಹಿಂಸಾತ್ಮಕವಾಗಿ ಹೋರಾಟ ಮಾಡಿ ಒಂದು ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟ ಮಹಾನ್ ಸಂತ. ಅವರ ಈ ಹೋರಾಟ ಜನಮಾನಸದಲ್ಲಿ ಎಂದೂ ಅಳಿಸಲಾಗದ ಒಂದು ಹೆಜ್ಜೆ ಗುರುತು.

ಮಹಾತ್ಮ ಗಾಂಧಿ ಅಥವಾ ಬಾಪು ಎಂದು ಪ್ರೀತಿಯಿಂದ ಕರೆಯಲ್ಪಡುವ ಮೋಹನ್‌ದಾಸ್ ಕರಮಚಂದ್ ಗಾಂಧಿ ಅವರು ಭಾರತದ ಪ್ರಮುಖ ರಾಜಕೀಯ ಮತ್ತು ಅಧ್ಯಾತ್ಮಿಕ ನಾಯಕ. ಅಸಹಕಾರ ಚಳವಳಿ, ದಂಡಿ ಮಾರ್ಚ್ ಮತ್ತು ಕ್ವಿಟ್ ಇಂಡಿಯಾ ಚಳವಳಿಯಂತಹ ಪ್ರಮುಖ ಚಳವಳಿಗಳನ್ನು ಮುನ್ನಡೆಸಿದ್ದು ಇದೇ ಬಾಪುಜಿ. ತಮ್ಮ ಶಾಂತಿಯುತ ಹಾಗೂ ಅಹಿಂಸಾತ್ಮಕ ಹೋರಾಟದ ಮೂಲಕ ಮಹಾತ್ಮ ಗಾಂಧಿ ಅವರು ದೇಶದ ಮೂಲೆ ಮೂಲೆಯಲ್ಲಿ ತಮ್ಮ ಪ್ರಭಾವವನ್ನು ವಿಸ್ತರಿಸಿಕೊಂಡರು.

ಸತ್ಯಾಗ್ರಹ (ಸತ್ಯ-ಬಲ) ಮತ್ತು ಅಹಿಂಸೆಯಂತಹ ಗಾಂಧಿ ಅವರ ಕಾರ್ಯತಂತ್ರಗಳು ಬ್ರಿಟಿಷ್ ವಸಾಹತುಶಾಹಿ ವಿರುದ್ಧ ಭಾರಿ ಪರಿಣಾಮ ಬೀರಿದವು. 1917 ರಲ್ಲಿ ಚಂಪಾರಣ್ ಸತ್ಯಾಗ್ರಹದಿಂದ ಪ್ರಾರಂಭವಾಗಿ 1942 ರಲ್ಲಿ ಭಾರತ ಬಿಟ್ಟು ತೊಲಗಿ ಚಳವಳಿಯವರೆಗೆ, ಅವರು ರಾಷ್ಟ್ರದಾದ್ಯಂತ ಸ್ವಾತಂತ್ರ್ಯಕ್ಕಾಗಿ ತನ್ನ ಹೋರಾಟದ ಕಿಚ್ಚನ್ನು ಹೊತ್ತಿಸಿದರು, ಸಮಾಜದ ಎಲ್ಲಾ ವರ್ಗಗಳ ಜನರನ್ನು ಒಗ್ಗೂಡಿಸಿ, ದೇಶಕ್ಕೆ ಸ್ವಾತಂತ್ರ್ಯ ತಂದು ಕೊಡುವಲ್ಲಿ ಯಶಸ್ವಿಯಾದರು.

ಮಹಾತ್ಮಾ ಗಾಂಧಿ ಮತ್ತು ಕುಟುಂಬ: ಗಾಂಧೀಜಿ ಅವರ ತಂದೆ ಕರಮಚಂದ್ ಗಾಂಧಿ, ಬ್ರಿಟಿಷ್ ಇಂಡಿಯಾದ ಪೋರಬಂದರ್ ರಾಜ್ಯದ ದಿವಾನ್ ಆಗಿದ್ದರು. ಅವರ ತಾಯಿ ಪುಥಲಿಬಾಯಿ, ಕರಮಚಂದ್ ಅವರ ನಾಲ್ಕನೇ ಪತ್ನಿ. ಹಿಂದೂ ಕುಟುಂಬದಲ್ಲಿ ಜನಿಸಿದ ಗಾಂಧೀಜಿ ಅವರು, ಸ್ವಯಂ ಶುದ್ಧೀಕರಣದ ಸಾಧನವಾಗಿ ಸಸ್ಯಾಹಾರ ಮತ್ತು ಉಪವಾಸವನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಿದರು. 13 ನೇ ವಯಸ್ಸಿನಲ್ಲಿ, ಅವರು ಕಸ್ತೂರಬಾ ಅವರನ್ನು ವಿವಾಹವಾದರು. 1885 ರಲ್ಲಿ, ಕಸ್ತೂರಬಾ ತಮ್ಮ ಮೊದಲ ಮಗುವಿಗೆ ಜನ್ಮ ನೀಡಿದರು, ದಂಪತಿಗೆ ನಾಲ್ಕು ಗಂಡು ಮಕ್ಕಳಿದ್ದರು. ಇನ್ನು ಮಹಾತ್ಮಾಗಾಂಧಿ ತಮ್ಮ ಶಾಲಾ ದಿನಗಳಲ್ಲಿ ಒಬ್ಬ ಸಾಧಾರಣ ವಿದ್ಯಾರ್ಥಿ ಆಗಿದ್ದರು. ಗುಜರಾತ್‌ನ ಸಮಲ್ದಾಸ್ ಕಾಲೇಜಿನಲ್ಲಿ ತಮ್ಮ ಮೆಟ್ರಿಕ್ಯುಲೇಷನ್ ಪರೀಕ್ಷೆಯನ್ನು ಮೂರನೇ ದರ್ಜೆಯಲ್ಲಿ ಉತ್ತೀರ್ಣರಾಗಿದ್ದರು. ಸೆಪ್ಟೆಂಬರ್ 4, 1888ರಲ್ಲಿ ಅವರು ಬಾರಿಸ್ಟರ್​ ಓದಲು ಇಂಗ್ಲೆಂಡ್​ಗೆ ಪ್ರಯಾಣ ಬೆಳೆಸಿದರು. ಯೂನಿವರ್ಸಿಟಿ ಕಾಲೇಜ್ ಲಂಡನ್‌ನಲ್ಲಿ ಅವರು ಕಾನೂನು ಅಧ್ಯಯನ ನಡೆಸಿದರು.

ಸ್ವಾತಂತ್ರ್ಯ ಹೋರಾಟದಲ್ಲಿ ಮಹಾತ್ಮ ಗಾಂಧಿ ಪಾತ್ರ

ಚಂಪಾರಣ್ ಸತ್ಯಾಗ್ರಹ (1917): 1917 ರ ಚಂಪಾರಣ್ ಸತ್ಯಾಗ್ರಹವು ಭಾರತದಲ್ಲಿ ಗಾಂಧಿ ನೇತೃತ್ವದ ಮೊದಲ ಸತ್ಯಾಗ್ರಹ ಚಳವಳಿಯಾಗಿದೆ. ಇದನ್ನು ಭಾರತೀಯ ಸ್ವಾತಂತ್ರ್ಯ ಚಳವಳಿಯಲ್ಲಿ ಐತಿಹಾಸಿಕವಾಗಿ ಮಹತ್ವದ ದಂಗೆ ಎಂದು ಪರಿಗಣಿಸಲಾಗಿದೆ. ಬಿಹಾರದ ಚಂಪಾರಣ್ ಜಿಲ್ಲೆಯಲ್ಲಿ ನಡೆದ ರೈತ ದಂಗೆಯಾಗಿದೆ. ಇಂಡಿಗೋ ಬೆಳೆಗೆ ತೆರಿಗೆ ಪಾವತಿಸದೇ ಬ್ರಿಟಿಷ್​ ಸರ್ಕಾರದ ವಿರುದ್ಧ ರೈತರು ಮಾಡಿದ ಪ್ರತಿಭಟನೆ ಇದಾಗಿತ್ತು. ಗಾಂಧೀಜಿ ಅವರು 1915 ರಲ್ಲಿ ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ಹಿಂದಿರುಗಿದಾಗ ಮತ್ತು ಉತ್ತರ ಭಾರತದ ರೈತರು ಇಂಡಿಗೋ ಪ್ಲಾಂಟರ್ಸ್‌ನಿಂದ ತುಳಿತಕ್ಕೊಳಗಾದುದನ್ನು ಕಂಡರು. ಈ ಅನ್ಯಾಯದ ವಿರುದ್ಧ ಅವರು ಶಾಂತಿಯುತ ಪ್ರತಿಭಟನೆಯ ಅಸ್ತ್ರ ಬಳಿಸಿದರು. ದಕ್ಷಿಣ ಆಫ್ರಿಕಾದಲ್ಲಿ ಅವರು ಅನುಸರಿಸಿದ್ದ ಹೋರಾಟದ ತಂತ್ರಗಳನ್ನೇ ಇಲ್ಲಿ ಬಳಸಿದರು.

ಖೇಡಾ ಸತ್ಯಾಗ್ರಹ (1917 -1918): ಗುಜರಾತ್‌ನ ಖೇಡಾ ಎಂಬ ಗ್ರಾಮವು ಪ್ರವಾಹದಿಂದ ತೀವ್ರವಾಗಿ ಹಾನಿಗೊಳಗಾಗಿತ್ತು. ಈ ವೇಳೆ, ಸ್ಥಳೀಯ ರೈತರು ತೆರಿಗೆ ಮನ್ನಾ ಮಾಡುವಂತೆ ಅಲ್ಲಿನ ಸ್ಥಳೀಯ ಆಡಳಿತಗಾರರಿಗೆ ಮನವಿ ಮಾಡಿದರು. ಆದರೆ ಇದಕ್ಕೆ ಕಿವಿಗೊಡದಾಗ, ಗಾಂಧೀಜಿ ಅವರು ಸಹಿ ಅಭಿಯಾನ ಪ್ರಾರಂಭಿಸಿದರು, ಅಲ್ಲಿ ರೈತರು ತೆರಿಗೆ ಪಾವತಿಸುವುದಿಲ್ಲ ಎಂದು ಪ್ರತಿಜ್ಞೆ ಮಾಡಿದರು. ಅಷ್ಟೇ ಅಲ್ಲ ಮಮ್ಲೇದಾರರಿಗೆ ಸಾಮಾಜಿಕ ಬಹಿಷ್ಕಾರ ಕೂಡಾ ಹಾಕಿಸಿದ್ದರು. ಗಾಂಧೀಜಿ ಅವರ ಹೋರಾಟಕ್ಕೆ ಮಣಿದ ಸ್ಥಳೀಯ ಸರ್ಕಾರ 1918 ರಲ್ಲಿ ಬರಗಾಲ ಮುಗಿಯುವವರೆಗೆ ಆದಾಯ ತೆರಿಗೆ ಪಾವತಿಯ ಷರತ್ತುಗಳನ್ನು ಸಡಿಲಿಕೆ ಮಾಡಿತ್ತು.

ಖಿಲಾಫತ್ ಚಳವಳಿ (1919): ಮುಸ್ಲಿಂ ಸಮುದಾಯದ ಮೇಲೆ ಗಾಂಧಿಯವರ ಪ್ರಭಾವ ಗಮನಾರ್ಹವಾಗಿದೆ. ಖಿಲಾಫತ್ ಚಳವಳಿಗೆ ಅವರು ಬೆಂಬಲ ನೀಡಿದ್ದರು. ಮೊದಲನೆಯ ಮಹಾಯುದ್ಧದ ನಂತರ, ಮುಸ್ಲಿಮರು ತಮ್ಮ ಖಲೀಫ್ ಅಥವಾ ಧಾರ್ಮಿಕ ನಾಯಕನ ಸುರಕ್ಷತೆಗಾಗಿ ವಿಶ್ವಾದ್ಯಂತ ಪ್ರತಿಭಟನೆ ನಡೆಸಿದ್ದರು.

ಅಸಹಕಾರ ಚಳವಳಿ (1920): ಬ್ರಿಟಿಷರು ಭಾರತದಲ್ಲಿ ನೆಲೆಯೂರಲು ಸಾಧ್ಯವಾಗಿದ್ದು, ಭಾರತೀಯರಿಂದಲೇ ಎಂಬುದನ್ನು ಗಾಂಧಿ ಅರಿತುಕೊಂಡಿದ್ದರು. ಇದನ್ನು ಗಮನದಲ್ಲಿಟ್ಟುಕೊಂಡು ಅಸಹಕಾರ ಚಳವಳಿಗೆ ಅವರು ಕರೆ ನೀಡಿದ್ದರು. ಶಾಂತಿಯುತ ಅಸಹಕಾರವು ಸ್ವಾತಂತ್ರ್ಯದ ಕೀಲಿ ಕೈ ಎಂಬುದನ್ನು ಅವರು ಜನರಿಗೆ ಮನವರಿಕೆ ಮಾಡಿಕೊಡುವಲ್ಲಿ ಅವರು ಯಶಸ್ವಿಯಾದರು. ಜಲಿಯನ್ ವಾಲಾಬಾಗ್ ಹತ್ಯಾಕಾಂಡ ಗಾಂಧೀಜಿ ಅವರು ಅಸಹಕಾರ ಚಳವಳಿಗೆ ಕರೆ ನೀಡಲು ಕಾರಣವಾದ ಪ್ರಮುಖ ಅಂಶಗಳಲ್ಲಿ ಒಂದು. ಗಾಂಧಿಯವರು ಸ್ವರಾಜ್ ಅಥವಾ ಸ್ವ-ಆಡಳಿತದ ಗುರಿಯನ್ನು ಹೊಂದಿದ್ದರು, ಅದುವೇ ಭಾರತೀಯ ಸ್ವಾತಂತ್ರ್ಯ ಚಳವಳಿಯ ಧ್ಯೇಯವಾಕ್ಯವಾಯಿತು.

ದಂಡಿ ಮಾರ್ಚ್ (1930): ದಂಡಿ ಮೆರವಣಿಗೆ ಮಾರ್ಚ್ 12, 1930 ರಂದು ಪ್ರಾರಂಭವಾಯಿತು. ಏಪ್ರಿಲ್ 6, 1930 ರಂದು ಈ ಮಾರ್ಚ್​​ ಕೊನೆಗೊಂಡಿತು. ಗಾಂಧೀಜಿ ಅವರು ತಮ್ಮ ಸಬರಮತಿ ಆಶ್ರಮದಿಂದ ತಮ್ಮ ದಂಡಿ ಸತ್ಯಾಗ್ರಹ ಪ್ರಾರಂಭಿಸಿದರು. ಮೂರು ವಾರಗಳ ಸತತ ನಡಿಗೆಯ ನಂತರ ದಂಡಿ ತಲುಪಿ, ಅಲ್ಲಿ ಉಪ್ಪನ್ನು ತಯಾರಿಸುವ ಮೂಲಕ ಬ್ರಿಟಿಷ್​ ಸರ್ಕಾರಕ್ಕೆ ಬಿಸಿ ಮುಟ್ಟಿಸಿದರು.

ನಾಗರಿಕ-ಅಸಹಕಾರ ಚಳವಳಿ (1930): ಭಾರತೀಯ ರಾಷ್ಟ್ರೀಯತಾವಾದಿ ಚಳವಳಿಯಲ್ಲಿ ಒಂದು ಪ್ರಮುಖ ಕ್ಷಣವೆಂದರೆ ಅದು ಅಸಹಕಾರ ಚಳವಳಿ. ನಾಗರಿಕ ಅಸಹಕಾರ ಚಳವಳಿಯು ಭಾರತಕ್ಕೆ ಹಲವಾರು ರೀತಿಯಲ್ಲಿ ಸ್ವಾತಂತ್ರ್ಯ ತಂದು ಕೊಡುವಲ್ಲಿ ಸಹಾಯ ಮಾಡಿತು.

ಇದನ್ನು ಓದಿ:ಸ್ವಚ್ಛತಾ ಹಿ ಸೇವಾ.. ದೇಶಾದ್ಯಂತ ಸ್ವಚ್ಛತಾ ಅಭಿಯಾನಕ್ಕೆ ಉತ್ತಮ ಸ್ಪಂದನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.