ETV Bharat / bharat

ಕೇಂದ್ರ ಸಚಿವ ಕೌಶಲ್ ಕಿಶೋರ್ ಪುತ್ರನ ಮನೆಯಲ್ಲಿ ಶೂಟೌಟ್: ಮಹತ್ವದ ಮಾಹಿತಿ ಕಲೆಹಾಕಿದ ಪೊಲೀಸರು

author img

By ETV Bharat Karnataka Team

Published : Sep 2, 2023, 12:52 PM IST

gambling dispute at Minister Kaushal Kishore
ಕೌಶಲ್ ಕಿಶೋರ್ ಪುತ್ರನ ಮನೆಯಲ್ಲಿ ನಡೆದಿದ್ದ ಕೊಲೆ ಪ್ರಕರಣ

ಕೇಂದ್ರ ಸಚಿವ ಕೌಶಲ್ ಕಿಶೋರ್ ಪುತ್ರನ ಮನೆಯಲ್ಲಿ ನಡೆದಿದ್ದ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳ ವಿಚಾರಣೆ ವೇಳೆ ಪೊಲೀಸರು ಹಲವು ಮಹತ್ವದ ಮಾಹಿತಿ ಕಲೆಹಾಕಿದ್ದಾರೆ.

ಲಖನೌ (ಉತ್ತರ ಪ್ರದೇಶ) : ಲಖನೌದ ಠಾಕುರ್‌ಗಂಜ್ ಪೊಲೀಸ್ ಠಾಣಾ ವ್ಯಾಪ್ತಿಯ ಬೆಗಾರಿಯಾ ಗ್ರಾಮದಲ್ಲಿರುವ ಕೇಂದ್ರ ಸಚಿವ ಕೌಶಲ್ ಕಿಶೋರ್ ಪುತ್ರನ ಮನೆಯಲ್ಲಿ ನಡೆದಿದ್ದ ವಿನಯ್ ಶ್ರೀವಾಸ್ತವ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಗಳ ವಿಚಾರಣೆ ವೇಳೆ ಹಲವು ಸಂಗತಿಗಳು ಬೆಳಕಿಗೆ ಬಂದಿವೆ. ಆರೋಪಿ ಅಂಕಿತ್, ವಿಕಾಸ್ ಕಿಶೋರ್​ನ ಪಿಸ್ತೂಲ್ ನಿಂದ ವಿನಯ್ ಶ್ರೀವಾಸ್ತವ್​ನ ಹಣೆಗೆ ಗುರಿಯಿಟ್ಟು ಗುಂಡು ಹಾರಿಸಿರುವುದಾಗಿ ತಿಳಿದು ಬಂದಿದೆ. ವಿನಯ್ ಮರಣೋತ್ತರ ಪರೀಕ್ಷೆ ವರದಿಯಲ್ಲಿ ಸಹ ಆತನ ತಲೆಯ ಮೂಲಕ ಗುಂಡು ಹಾದು ಹೋಗಿರುವುದು ದೃಢಪಟ್ಟಿದೆ.

ಪೊಲೀಸರು ನೀಡಿದ ಮಾಹಿತಿ ಪ್ರಕಾರ, ವಿಕಾಸ್ ಕಿಶೋರ್ ಮನೆಯಲ್ಲಿದ್ದ ಸ್ನೇಹಿತರೆಲ್ಲರೂ ಮೊದಲು ಪಾರ್ಟಿ ಮಾಡಿದ್ದಾರೆ. ಈ ವೇಳೆ ಅಂಕಿತ್ ಮತ್ತು ವಿನಯ್ ನಡುವೆ ಜೂಜಾಟದ ವಿಚಾರವಾಗಿ ಜಗಳ ನಡೆದಿದೆ. ಬಳಿಕ ಮಾತಿಗೆ ಮಾತು ಬೆಳೆದಿದ್ದು, ಆರೋಪಿಗಳಿಂದ ವಿನಯ್ ತಪ್ಪಿಕೊಳ್ಳಲು ರೂಮ್​ ಒಳಗೆ ಓಡಿ ಹೋಗಿದ್ದಾನೆ. ಆದರೆ ಅಲ್ಲಿಗೂ ಆರೋಪಿಗಳು ಬಂದಿದ್ದು, ಶಮಿ ಮತ್ತು ಅಜಯ್ ಎಂಬುವರು ವಿನಯ್​ ಶ್ರೀವಾಸ್ತವ್ ಅವರ ಕೈಗಳನ್ನು ಹಿಡಿದುಕೊಂಡಿದ್ದಾರೆ. ಈ ವೇಳೆ ಅಂಕಿತ್ ಹಾಸಿಗೆಯಲ್ಲಿ ದಿಂಬಿನ ಕೆಳಗೆ ಇರಿಸಿದ್ದ ಪಿಸ್ತೂಲ್ ಅನ್ನು ಹೊರತೆಗೆದು ಆತನ ಹಣೆಗೆ ಗುಂಡು ಹಾರಿಸಿದ್ದಾನೆ. ಪರಿಣಾಮ ವಿನಯ್ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ : Bihar firing : ಕೋರ್ಟ್ ಆವರಣಕ್ಕೆ ನುಗ್ಗಿ ಕೈದಿಗಳ ಮೇಲೆ ಗುಂಡು ಹಾರಿಸಿದ ದುಷ್ಕರ್ಮಿಗಳು

ಪಶ್ಚಿಮ ವಿಭಾಗದ ಎಡಿಸಿಪಿ ಚಿರಂಜೀವಿ ನಾಥ್ ಸಿಂಗ್ ಮಾತನಾಡಿ, "ಗುರುವಾರ ಅಜಯ್ ಮತ್ತು ಅಂಕಿತ್ ವಿಕಾಸ್ ಕಿಶೋರ್ ಅವರನ್ನು ಡ್ರಾಪ್ ಮಾಡಲು ವಿಮಾನ ನಿಲ್ದಾಣಕ್ಕೆ ತೆರಳಿದ್ದರು. ವಾಪಸ್​ ಹಿಂತಿರುಗಿದ ನಂತರ ಘಟನೆ ಜರುಗಿದೆ. ತನಿಖೆ ಸಮಯದಲ್ಲಿ ಆರೋಪಿಗಳು ಸತ್ಯ ಬಾಯ್ಬಿಟ್ಟಿದ್ದು, ಮೊದಲು ಮಿಸ್ ಫೈರ್​ ಆಗಿದೆ. ಎರಡನೇ ಬಾರಿಗೆ ಹಾರಿಸಿದ ಗುಂಡಿನಿಂದ ಯುವಕ ಸಾವನ್ನಪ್ಪಿರುವುದಾಗಿ ಒಪ್ಪಿಕೊಂಡಿದ್ದಾನೆ. ಈ ಘಟನೆ ಮುಂಜಾನೆ 2:50 ರ ಸುಮಾರಿಗೆ ನಡೆದಿದ್ದು, ಬೆಳಗ್ಗೆ 4:35 ಕ್ಕೆ ವಿನಯ್ ಕುಟುಂಬಕ್ಕೆ ಮಾಹಿತಿ ನೀಡಲಾಗಿದೆ" ಎಂದರು.

ಇದನ್ನೂ ಓದಿ : ಸಾರ್ವಜನಿಕವಾಗಿ ಗನ್​ ಹಿಡಿದು ಓಡಾಟ.. ಯುವಕನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ ಸ್ಥಳೀಯರು

ಇನ್ನು ಇಡೀ ಮನೆಯಲ್ಲಿ ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದಾರೆ. ಘಟನೆ ನಡೆದ ಕೊಠಡಿಯಲ್ಲೂ ಕ್ಯಾಮರಾ ಅಳವಡಿಸಲಾಗಿದ್ದು, ಅದು ಸ್ವಿಚ್ ಆಫ್​ ಆಗಿರುವುದು ತನಿಖೆಯಿಂದ ತಿಳಿದು ಬಂದಿದೆ. ಘಟನೆ ನಡೆದ ವೇಳೆ ವಿನಯ್ ಸೇರಿದಂತೆ ನಾಲ್ವರು ಮಾತ್ರ ಮನೆಯಲ್ಲಿದ್ದರು ಎಂದು ಎಡಿಸಿಪಿ ಚಿರಂಜೀವಿ ನಾಥ್ ಸಿಂಗ್ ತಿಳಿಸಿದ್ದಾರೆ.

ಇದನ್ನೂ ಓದಿ : MP crime : ಗುಂಡು ಹಾರಿಸಿ ಇಬ್ಬರ ಹತ್ಯೆಗೈದ​ ಬ್ಯಾಂಕ್‌ ಸೆಕ್ಯೂರಿಟಿ ಗಾರ್ಡ್! ಗರ್ಭಿಣಿ ಸೇರಿ 6 ಜನರಿಗೆ ಗಾಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.