ETV Bharat / bharat

ಭೀಕರ ಅಗ್ನಿ ಅವಘಡ: 100ಕ್ಕೂ ಹೆಚ್ಚು ಮನೆಗಳು ಬೆಂಕಿಗೆ ಆಹುತಿ

author img

By

Published : Feb 24, 2023, 10:10 AM IST

Fire in Guwahati
ಗುವಾಹಟಿಯಲ್ಲಿ ಭೀಕರ ಅಗ್ನಿ ಅವಘಡ

ಗುವಾಹಟಿಯಲ್ಲಿ ಭೀಕರ ಅಗ್ನಿ ಅವಘಡ - 100ಕ್ಕೂ ಹೆಚ್ಚು ಮನೆಗಳು ಬೆಂಕಿಗೆ ಆಹುತಿ - ಕೋಟ್ಯಂತರ ರೂ. ಮೌಲ್ಯದ ಆಸ್ತಿ ಹಾನಿ.

ಗುವಾಹಟಿಯಲ್ಲಿ ಭೀಕರ ಅಗ್ನಿ ಅವಘಡ..

ಗುವಾಹಟಿ(ಅಸ್ಸೋಂ): ಗುವಾಹಟಿ ನಗರದ ಹಟಿಗಾಂವ್ ಚರಿಯಾಲಿಯಲ್ಲಿ ಗುರುವಾರ ರಾತ್ರಿ ಭೀಕರ ಅಗ್ನಿ ಅವಘಡ ಸಂಭವಿಸಿದೆ. ಘಟನೆಯಲ್ಲಿ ಸುಮಾರು 100ಕ್ಕೂ ಅಧಿಕ ಮನೆಗಳು ಬೆಂಕಿಗೆ ಆಹುತಿಯಾಗಿವೆ. ಕೋಟ್ಯಂತರ ರೂ. ಮೌಲ್ಯದ ಆಸ್ತಿ ಹಾನಿ ಎಂದು ಅಂದಾಜಿಸಲಾಗಿದೆ.

ಗುರುವಾರ ರಾತ್ರಿ 11 ಗಂಟೆ ಸುಮಾರಿಗೆ ಹಟಿಗಾಂವ್‌ನ ಅಜಂತಾ ರಸ್ತೆಯ ರಿಜು ಅಲಿ ಎಂಬುವರ ಬಾಡಿಗೆ ಮನೆಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಬಳಿಕ ಬೆಂಕಿಯ ಜ್ವಾಲೆಯು ಇಡೀ ವಸತಿ ಪ್ರದೇಶವನ್ನು ಆವರಿಸಿದೆ. ಬೆಂಕಿ ಅನಾಹುತಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ. ಆದರೆ, ಬಾಡಿಗೆ ಮನೆಯಲ್ಲಿ ಸಿಲಿಂಡರ್ ಸ್ಫೋಟದಿಂದ ಘಟನೆ ಸಂಭವಿಸಿದೆ ಎಂದು ಕೆಲವರು ಶಂಕಿಸಿದ್ದಾರೆ. ಸುಮಾರು 15 ಸಿಲಿಂಡರ್‌ಗಳು ಸ್ಫೋಟಗೊಂಡಿವೆ. ಎರಡು ಕಾರುಗಳು ಬೆಂಕಿಗೆ ಆಹುತಿಯಾಗಿವೆ. ಬೆಂಕಿ ಅವಘಡದಲ್ಲಿ ಇಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ತಿಳಿದು ಬಂದಿದೆ.

100ಕ್ಕೂ ಹೆಚ್ಚು ಜನರ ರಕ್ಷಣೆ: ಘಟನೆಯ ಬಗ್ಗೆ ಮಾಹಿತಿ ಪಡೆದ ಸುಮಾರು 15 ಅಗ್ನಿಶಾಮಕ ದಳಗಳು ಸ್ಥಳಕ್ಕೆ ಧಾವಿಸಿವೆ. ಸತತ ಪ್ರಯತ್ನ ಬಳಿಕ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸ್ಥಳದಿಂದ 100ಕ್ಕೂ ಹೆಚ್ಚು ಜನರನ್ನು ರಕ್ಷಿಸಲಾಗಿದೆ ಮತ್ತು ಯಾವುದೇ ಸಾವು ನೋವುಗಳು ವರದಿಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಗುವಾಹಟಿ ಪೊಲೀಸ್ ಉಪ ಆಯುಕ್ತ ಸೂರಜಿತ್ ಸಿಂಗ್ ಪನೇಸರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. "ಈವರೆಗೆ ಎಷ್ಟು ಹಾನಿಯಾಗಿದೆ ಎಂಬುದನ್ನು ನಾವು ವಿವರಿಸಲು ಸಾಧ್ಯವಿಲ್ಲ, ತನಿಖೆಯ ನಂತರವೇ ಎಲ್ಲವೂ ಬೆಳಕಿಗೆ ಬರಲಿದೆ" ಎಂದು ಅವರು ಮಾಹಿತಿ ನೀಡಿದ್ದಾರೆ.

ಪುಸ್ತಕಗಳು ಸುಟ್ಟು ಭಸ್ಮ: ಬೆಂಕಿ ಅವಘಡದಿಂದ ರಾತ್ರಿ ನಗರದಲ್ಲಿ ಸಂಚಾರ ದಟ್ಟಣೆ ಉಂಟಾಗಿತ್ತು. ಸ್ಥಳಕ್ಕೆ ತೆರಳುವ ರಸ್ತೆ ಇಕ್ಕಟ್ಟಾದ ಕಾರಣ ಅಗ್ನಿಶಾಮಕ ದಳ ಸಿಬ್ಬಂದಿ ಪರದಾಡಿದರು. ಹೆಚ್‌ಎಸ್‌ಎಲ್‌ಸಿ ಪರೀಕ್ಷೆ(High School Leaving Certificate Examination)ಗಳು ಮತ್ತು ಹೈಯರ್ ಸೆಕೆಂಡರಿ ಅಂತಿಮ ಪರೀಕ್ಷೆಗಳಿಗೆ ಹಾಜರಾದ ಅನೇಕ ವಿದ್ಯಾರ್ಥಿಗಳು ವಸತಿ ಪ್ರದೇಶದಲ್ಲಿದ್ದರು. ಬೆಂಕಿಯಲ್ಲಿ ವಿದ್ಯಾರ್ಥಿಗಳ ಪುಸ್ತಕ ಸಹ ಸಂಪೂರ್ಣ ಸುಟ್ಟು ಭಸ್ಮವಾಗಿವೆ.

"ವರ್ಷದ ಈ ಸಮಯದಲ್ಲಿ ಹೆಚ್ಚಿನ ಅಗ್ನಿ ಅವಘಡಗಳು ವರದಿಯಾಗುತ್ತಿವೆ. ವಿಶೇಷವಾಗಿ ಈ ಬೇಸಿಗೆ ಸಮಯದಲ್ಲಿ ಜನರು ಜಾಗರೂಕರಾಗಿ ಇರಬೇಕು. ಹೆಚ್ಚಿನ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕು ಮತ್ತು ಬೆಂಕಿ ನಂದಿಸುವ ಸಾಧನಗಳನ್ನು ತಮ್ಮ ಮನೆಗಳಲ್ಲಿ ಅಳವಡಿಸಬೇಕು. ಇದರಿಂದ ನಾವು ಬರುವವರೆಗೆ ಬೆಂಕಿಯನ್ನು ಕನಿಷ್ಠ ಹತೋಟಿಯಲ್ಲಿಡಬಹುದು" ಎಂದು ಅಗ್ನಿ ಶಾಮಕ ಸಿಬ್ಬಂದಿಯೊಬ್ಬರು ತಿಳಿಸಿದ್ದಾರೆ.

ನಾಶವಾದ ಬಹುತೇಕ ಮನೆಗಳು ಹುಲ್ಲಿನ ಮನೆಗಳಾಗಿವೆ. ಎಲ್ಲ ಮನೆಗಳು ರಿಜು ಅಲಿ ಎಂಬುವವರಿಗೆ ಸೇರಿದ್ದಾಗಿವೆ. ದಿನಗೂಲಿ ಕಾರ್ಮಿಕರು ಇಲ್ಲಿ ಬಾಡಿಗೆದಾರರಾಗಿ ವಾಸವಿದ್ದರು. ಬೆಂಕಿ ಕಾಣಿಸಿಕೊಂಡ ತಕ್ಷಣ, ಇಡೀ ಪ್ರದೇಶವನ್ನು ದಟ್ಟವಾದ ಹೊಗೆ ಆವರಿಸಿತ್ತು. ಇದರಿಂದ ಜನರು ಭಯಭೀತರಾಗಿದ್ದರು. ಬೆಂಕಿಯಲ್ಲಿ ತಮ್ಮ ಮನೆಗಳನ್ನು ಕಳೆದುಕೊಂಡ ಕೆಲವರು ತಮ್ಮ ಸಂಬಂಧಿಕರು ಮತ್ತು ಸ್ನೇಹಿತರ ಮನೆಗಳಿಗೆ ತೆರಳಿದ್ದಾರೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ: ಹೊತ್ತಿ ಉರಿದ ಜೋರ್ಹತ್ ಪಟ್ಟಣ: ಕ್ಷಣಾರ್ಧದಲ್ಲಿ ಐತಿಹಾಸಿಕ ಚೌಕ್ ಬಜಾರ್ ನಾಶ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.