ETV Bharat / bharat

ಆಂಧ್ರ, ಉತ್ತರಪ್ರದೇಶ, ಹಿಮಾಚಲದಲ್ಲಿ ಅನಾಹುತ: 17 ಮಂದಿ ದುರ್ಮರಣ

author img

By

Published : Feb 9, 2023, 11:05 AM IST

Updated : Feb 9, 2023, 11:42 AM IST

Andhra pradesh
ಹಿಮಾಚಲದಲ್ಲಿ ನಾಲ್ವರು ಮಕ್ಕಳು ಸಜೀವ ದಹನ

ಆಂಧ್ರಪ್ರದೇಶದಲ್ಲಿ ಕಾರ್ಮಿಕರು ಸಾವು- ತೈಲ ಟ್ಯಾಂಕರ್​ ಸ್ವಚ್ಛ ವೇಳೆ ಅವಘಡ- ಹಿಮಾಚಲಪ್ರದೇಶದಲ್ಲಿ ನಾಲ್ವರು ಮಕ್ಕಳು ಸಜೀವ ದಹನ- ಗುಡಿಸಲಿಗೆ ಬೆಂಕಿ ತಗುಲಿ ಕಾರ್ಮಿಕರ ಮಕ್ಕಳು ದುರ್ಮರಣ- ಉತ್ತರಪ್ರದೇಶದಲ್ಲಿ ರಸ್ತೆ ಅಪಘಾತ- ವರ ಸೇರಿ 6 ಮಂದಿ ಸಾವು

ಆಂಧ್ರಪ್ರದೇಶ/ಹಿಮಾಚಲಪ್ರದೇಶ: ಆಂಧ್ರಪ್ರದೇಶದ ಕಾಕಿನಾಡದಲ್ಲಿ ನಿರ್ಮಾಣ ಹಂತದಲ್ಲಿರುವ ಆಯಿಲ್​ ಫ್ಯಾಕ್ಟರಿಯ ತೈಲ ಟ್ಯಾಂಕರ್​ನಲ್ಲಿ ಇಳಿದ 7 ಮಂದಿ ಕಾರ್ಮಿಕರು ಸಾವನ್ನಪ್ಪಿದ್ದರೆ, ಇತ್ತ ಹಿಮಾಚಲಪ್ರದೇಶದಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ ಮೂವರು ಸಹೋದರರು ಸೇರಿ ನಾಲ್ವರು ಮಕ್ಕಳು ಸಜೀವ ದಹನವಾದ ದಾರುಣ ಘಟನೆ ನಡೆದಿದೆ.

ಆಂಧ್ರಪ್ರದೇಶದ ಕಾಕಿನಾಡ ಜಿಲ್ಲೆಯ ಪೆದ್ದಾಪುರಂ ಮಂಡಲದ ರಾಮಂಪೇಟೆಯಲ್ಲಿ ನಿರ್ಮಾಣ ಹಂತದಲ್ಲಿರುವ ಅಂಬಟಿ ಸುಬ್ಬಣ್ಣ ಆಯಿಲ್ ಫ್ಯಾಕ್ಟರಿಯಲ್ಲಿ ತೈಲ ಟ್ಯಾಂಕರ್ ಅನ್ನು ಸ್ವಚ್ಛಗೊಳಿಸುವ ಕೆಲಸ ನಡೆಯುತ್ತಿತ್ತು. ಈ ವೇಳೆ ಏಳು ಕಾರ್ಮಿಕರು ಒಬ್ಬೊಬ್ಬರಾಗಿ ತೈಲ ಟ್ಯಾಂಕರ್​ನ ಒಳಗೆ ಇಳಿದಿದ್ದಾರೆ. ವಿಷಗಾಳಿಯಿಂದಾಗಿ ಎಲ್ಲರೂ ಉಸಿಗುಗಟ್ಟಿ ಸಾವನ್ನಪ್ಪಿದ್ದಾರೆ. ಮೃತರಲ್ಲಿ ಐವರು ಪಾಡೇರು ಗ್ರಾಮದ ನಿವಾಸಿಗಳ ಎಂದು ಗುರುತಿಸಲಾಗಿದೆ. ಉಳಿದವರನ್ನು ಪುಲಿಮೇರು ನಿವಾಸಿಗಳು ಎಂದು ಹೇಳಲಾಗಿದೆ.

ಹಿಮದ ನಾಡಿನಲ್ಲಿ ಅಗ್ನಿ ಅವಘಡ: ಹಿಮದ ನಾಡಾದ ಹಿಮಾಚಲ ಪ್ರದೇಶದ ಉನಾ ಜಿಲ್ಲೆಯಲ್ಲಿ ಎರಡು ಗುಡಿಸಲುಗಳಿಗೆ ಬುಧವಾರ ತಡರಾತ್ರಿ ಬೆಂಕಿ ತಗುಲಿ ಮೂವರು ಸಹೋದರರು ಸೇರಿದಂತೆ ನಾಲ್ವರು ಮಕ್ಕಳು ಸಜೀವ ದಹನಗೊಂಡಿದ್ದಾರೆ. ಈ ಕುಟುಂಬ ಬಿಹಾರದಿಂದ ವಲಸೆ ಬಂದಿತ್ತು ಎಂದು ಹೇಳಲಾಗಿದೆ.

ಬಿಹಾರದಿಂದ ವಲಸೆ ಬಂದಿದ್ದ ಕಾರ್ಮಿಕ ಕುಟುಂಬ ಜಿಲ್ಲೆಯ ಹೊರಭಾಗದಲ್ಲಿ ಹುಲ್ಲಿನ ಗುಡಿಸಲು ಹಾಕಿಕೊಂಡು ಜೀವನ ನಡೆಸುತ್ತಿತ್ತು. ರಾತ್ರಿ ವೇಳೆ ಗುಡಿಸಲಿಗೆ ಬೆಂಕಿ ಹೊತ್ತಿಕೊಂಡಿದೆ. ಇದರಿಂದ ಎರಡು ಗುಡಿಸಲುಗಳು ಸುಟ್ಟು ಭಸ್ಮವಾಗಿವೆ. ಸಿಹಿನಿದ್ದೆಯಲ್ಲಿದ್ದ ರಮೇಶ್ ದಾಸ್ ಎಂಬುವರಿಗೆ ಸೇರಿದ ಮೂವರು ಮಕ್ಕಳಾದ ನೀತು (14), ಗೋಲು ಕುಮಾರ್ (7), ಶಿವಂ ಕುಮಾರ್ (6) ಮತ್ತು ಅವರ ಜೊತೆಗಿದ್ದ ಸಂಬಂಧಿ ಕಾಳಿದಾಸ್ ಅವರ ಮಗ ಸೋನು ಕುಮಾರ್ (17) ಬೆಂಕಿಯ ಕೆನ್ನಾಲಿಗೆಗೆ ಸಜೀವವಾಗಿ ದಹನವಾಗಿದ್ದಾರೆ.

ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ನಂದಿಸಿದ್ದಾರೆ. ಮುಖ್ಯಮಂತ್ರಿ ಸುಖವಿಂದರ್ ಸಿಂಗ್ ಸುಖು ಮತ್ತು ಉಪಮುಖ್ಯಮಂತ್ರಿ ಮುಖೇಶ್ ಅಗ್ನಿಹೋತ್ರಿ ಘಟನೆಯ ಬಗ್ಗೆ ತೀವ್ರ ಆಘಾತ ವ್ಯಕ್ತಪಡಿಸಿದ್ದಾರೆ ಮತ್ತು ಸಂತ್ರಸ್ತ ಕುಟುಂಬಗಳಿಗೆ ತಕ್ಷಣದ ಪರಿಹಾರವನ್ನು ಒದಗಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಉತ್ತರಪ್ರದೇಶದಲ್ಲಿ ರಸ್ತೆ ಅಪಘಾತಕ್ಕೆ 6 ಬಲಿ: ಉತ್ತರಪ್ರದೇಶದಲ್ಲಿ ನಡೆದ ಪ್ರತ್ಯೇಕ ರಸ್ತೆ ಅಪಘಾತದಲ್ಲಿ ಮೆರವಣಿಗೆ ಹೊರಟಿದ್ದ ವರ ಸೇರಿ 6 ಮಂದಿ ಸಾವನ್ನಪ್ಪಿದ ಘಟನೆ ನಡೆದಿದೆ. ಮೀರತ್​ನಲ್ಲಿ ಮದುವೆ ಮುಗಿಸಿಕೊಂಡು ಮಂಟಪದಿಂದ ಮೆರವಣಿಗೆ ಹೊರಟಿದ್ದಾಗ ವೇಗವಾಗಿ ಬಂದ ಕಾರೊಂದು ಸಂಭ್ರಮದಲ್ಲಿದ್ದ ಜನರಿಗೆ ರಭಸವಾಗಿ ಗುದ್ದಿದೆ. ಘಟನೆಯಲ್ಲಿ ವರ ಸೇರಿ 3 ಮಂದಿ ಸ್ಥಳದಲ್ಲೇ ಸಾವನ್ನಪ್ಪಿ, 12 ಜನರು ಗಾಯಗೊಂಡಿದ್ದಾರೆ. ಇನ್ನೊಂದು ಪ್ರಕರಣ ಅಲಿಘಡದಲ್ಲಿ ಕಾರು ಅಪಘಾತಕ್ಕೀಡಾಗಿ ಮೂವರು ಅಸುನೀಗಿದ್ದು, ಇಬ್ಬರು ಗಾಯಗೊಂಡಿದ್ದಾರೆ.

ಓದಿ: ಟರ್ಕಿ ಭೂಕಂಪ ಸಂತ್ರಸ್ತರ ನೆರವಿಗೆ ಧಾವಿಸಿದ ರೊನಾಲ್ಡೋ... ಭೂಕಂಪದಲ್ಲಿ ಮೃತಪಟ್ಟವರ ಸಂಖ್ಯೆ ಇನ್ನೂ ಹೆಚ್ಚುವ ಸಾಧ್ಯತೆ

Last Updated :Feb 9, 2023, 11:42 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.