ತಿರುಪತಿ (ಆಂಧ್ರಪ್ರದೇಶ) : ತಿರುಪತಿ ತಿರುಮಲ ದೇವಸ್ಥಾನದ ಹೆಸರಿನಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಮತ್ತೊಂದು ನಕಲಿ ವೆಬ್ಸೈಟ್ ಒಂದನ್ನು ಪತ್ತೆ ಮಾಡಿರುವ ದೇವಸ್ಥಾನದ ವ್ಯವಹಾರಗಳನ್ನು ನಿರ್ವಹಿಸುತ್ತಿರುವ ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ಸಂಸ್ಥೆ ಈ ಕುರಿತು ಪೊಲೀಸರಿಗೆ ದೂರು ನೀಡಿದೆ. ಟಿಟಿಡಿಯ ಐಟಿ ವಿಭಾಗದ ದೂರಿನ ಮೇರೆಗೆ ತಿರುಮಲ-1 ಟೌನ್ ಪೊಲೀಸ್ ಠಾಣೆಯಲ್ಲಿ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 420, 468 ಮತ್ತು 471 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ದೂರಿನ ಆಧಾರದ ಮೇಲೆ, ಆಂಧ್ರ ಪ್ರದೇಶ ಫೋರೆನ್ಸಿಕ್ ಸೈಬರ್ ಸೆಲ್ ಕೂಡ ನಕಲಿ ವೆಬ್ಸೈಟ್ನ ತನಿಖೆ ನಡೆಸುತ್ತಿದೆ. ಇಲ್ಲಿಯವರೆಗೆ ಟಿಟಿಡಿ ಹೆಸರಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದ 40 ನಕಲಿ ವೆಬ್ಸೈಟ್ಗಳ ವಿರುದ್ಧ ಪ್ರಕರಣಗಳನ್ನು ದಾಖಲಿಸಲಾಗಿದೆ ಮತ್ತು ಹೊಸದನ್ನು ಸೈಬರ್ ಕ್ರೈಂ ಅಡಿಯಲ್ಲಿ 41 ನೇ ವೆಬ್ಸೈಟ್ ಎಂದು ದಾಖಲಿಸಲಾಗಿದೆ ಎಂದು ಟಿಟಿಡಿ ತಿಳಿಸಿದೆ. ನಕಲಿ ವೆಬ್ಸೈಟ್ ಅನ್ನು ದುಷ್ಕರ್ಮಿಗಳು ಬಹುತೇಕ ಟಿಟಿಡಿ ಅಧಿಕೃತ ವೆಬ್ಸೈಟ್ನಂತೆಯೇ ಅತ್ಯಲ್ಪ ಮಾರ್ಪಾಡುಗಳೊಂದಿಗೆ ಅಭಿವೃದ್ಧಿಪಡಿಸಿದ್ದಾರೆ. ನಕಲಿ ವೆಬ್ಸೈಟ್ URL ನ ವಿಳಾಸ https:// tirupatibalaji-ap-gov.org/ ಆಗಿದೆ. ಆದರೆ ಅಧಿಕೃತ ವೆಬ್ಸೈಟ್ ವಿಳಾಸ URL https:// tirupatibalaji.ap.gov.in/ ಆಗಿದೆ.
ಇಂತಹ ನಕಲಿ ವೆಬ್ಸೈಟ್ಗಳಿಗೆ ಬಲಿಯಾಗದಂತೆ ಭಕ್ತರಿಗೆ ಟಿಟಿಡಿ ಎಚ್ಚರಿಕೆ ನೀಡಿದೆ. ಭಕ್ತರು ಟಿಟಿಡಿ ಅಧಿಕೃತ ವೆಬ್ಸೈಟ್ನ URL ವಿಳಾಸವನ್ನು ಗಮನಿಸುವಂತೆ ಮತ್ತು ಆನ್ಲೈನ್ ಟಿಕೆಟ್ಗಳನ್ನು ಬುಕ್ ಮಾಡುವ ಮೊದಲು ಅಸಲಿ ವೆಬ್ಸೈಟ್ ಖಾತ್ರಿ ಪಡಿಸಿಕೊಳ್ಳುವಂತೆ ಟಿಟಿಡಿ ಕೋರಿದೆ. ಭಕ್ತರು ಟಿಟಿಡಿ ಅಧಿಕೃತ ಮೊಬೈಲ್ ಅಪ್ಲಿಕೇಶನ್ - ಟಿಟಿದೇವಸ್ಥಾನಮ್ (TTD official Mobile App - TTDevasthanams) ಮೂಲಕ ಕೂಡ ಟಿಕೆಟ್ಗಳನ್ನು ಬುಕ್ ಮಾಡಬಹುದು.
ತಿರುಮಲ ವೆಂಕಟೇಶ್ವರ ದೇವಸ್ಥಾನವು ಭಾರತದ ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ತಿರುಪತಿಯಲ್ಲಿರುವ ತಿರುಮಲ ಬೆಟ್ಟದ ವೈಷ್ಣವ ದೇವಾಲಯವಾಗಿದೆ. ಈ ದೇವಾಲಯವು ವಿಷ್ಣುವಿನ ಅವತಾರವಾದ ಶ್ರೀ ವೆಂಕಟೇಶ್ವರನಿಗೆ ಸಮರ್ಪಿತವಾಗಿದೆ. ಕಲಿಯುಗದ ತೊಂದರೆಗಳಿಂದ ಮಾನವಕುಲವನ್ನು ರಕ್ಷಿಸಲು ವೆಂಕಟೇಶ್ವರ ದೇವರು ಇಲ್ಲಿ ಕಾಣಿಸಿಕೊಂಡಿದ್ದಾರೆ ಎಂದು ನಂಬಲಾಗಿದೆ. ಆದ್ದರಿಂದ ಈ ಸ್ಥಳವು ಕಲಿಯುಗ ವೈಕುಂಠಂ ಎಂಬ ಹೆಸರನ್ನು ಪಡೆದುಕೊಂಡಿದೆ ಮತ್ತು ಇಲ್ಲಿ ಭಗವಂತನನ್ನು ಕಲಿಯುಗ ಪ್ರತ್ಯಕ್ಷ ದೈವಂ ಎಂದು ಕರೆಯಲಾಗುತ್ತದೆ. ಈ ದೇವಸ್ಥಾನವನ್ನು ತಿರುಮಲ ದೇವಸ್ಥಾನ, ತಿರುಪತಿ ದೇವಸ್ಥಾನ, ತಿರುಪತಿ ಬಾಲಾಜಿ ದೇವಸ್ಥಾನ ಮುಂತಾದ ಇತರ ಹೆಸರುಗಳಿಂದ ಕರೆಯಲಾಗುತ್ತದೆ. ವೆಂಕಟೇಶ್ವರನನ್ನು ಬಾಲಾಜಿ, ಗೋವಿಂದ ಮತ್ತು ಶ್ರೀನಿವಾಸ ಹೀಗೆ ಹಲವಾರು ಹೆಸರುಗಳಿಂದ ಕರೆಯಲಾಗುತ್ತದೆ.
ತಿರುಮಲದ ಏಳು ಬೆಟ್ಟಗಳು: ವೃಷಭಾದ್ರಿ, ನಂದಿ ಬೆಟ್ಟ, ಶಿವನ ವಾಹನ. ಅಂಜನಾದ್ರಿ, ಹನುಮಂತನ ಬೆಟ್ಟ. ನೀಲಾದ್ರಿ, ನೀಲಾದೇವಿ ಬೆಟ್ಟ. ಗರುಡಾದ್ರಿ, ಗರುಡನ ಬೆಟ್ಟ, ವಿಷ್ಣುವಿನ ವಾಹನ. ಶೇಷಾದ್ರಿ, ಶೇಷ ಬೆಟ್ಟ, ವಿಷ್ಣುವಿನ ದಾಸ. ನಾರಾಯಣಾದ್ರಿ, ನಾರಾಯಣ ಬೆಟ್ಟ (ವಿಷ್ಣು). ವೆಂಕಟಾದ್ರಿ, ವೆಂಕಟೇಶ್ವರನ ಬೆಟ್ಟ. 1930 ರಲ್ಲಿ ರಚನೆಯಾದ ತಿರುಮಲ ತಿರುಪತಿ ದೇವಸ್ಥಾನಂ ಮಂಡಳಿಯು ದೇವಸ್ಥಾನಗಳ ನಿತ್ಯದ ವ್ಯವಹಾರಗಳನ್ನು ನಿರ್ವಹಿಸುತ್ತದೆ. ಇದು ದೇವಾಲಯದ ಎಲ್ಲಾ ದತ್ತಿ ಚಟುವಟಿಕೆಗಳನ್ನು ಸಹ ನೋಡಿಕೊಳ್ಳುತ್ತದೆ.
ಇದನ್ನೂ ಓದಿ : ನಕಲಿ ಆಧಾರ್ ಕಾರ್ಡ್ ಬಳಸಿ ಜನರಿಗೆ ತಿರುಪತಿ ತಿಮ್ಮಪ್ಪನ ದರ್ಶನ ಮಾಡಿಸುತ್ತಿದ್ದ ಎಂಎಲ್ಸಿ!