ETV Bharat / bharat

ರಾಜಕೀಯ ಪರಿಹಾರ ಸಿಗದ ಕಾರಣದಿಂದಲೇ ಕಾವೇರಿ ನ್ಯಾಯಮಂಡಳಿ ಸ್ಥಾಪನೆ: ಈಟಿವಿ ಭಾರತ್ ಸಂದರ್ಶನದಲ್ಲಿ ತಮಿಳುನಾಡು ಸಿಎಂ ಸ್ಟಾಲಿನ್ ಹೇಳಿಕೆ

author img

By ETV Bharat Karnataka Team

Published : Oct 28, 2023, 8:24 PM IST

Updated : Oct 29, 2023, 11:58 AM IST

chief Minister Mk stalin
ತಮಿಳುನಾಡು ಸಿಎಂ ಸ್ಟಾಲಿನ್ ಹೇಳಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರು 'ಈಟಿವಿ ಭಾರತ್​'ಗೆ ವಿಶೇಷ ಸಂದರ್ಶನ ನೀಡಿದ್ದಾರೆ. ಕಾವೇರಿ ವಿಚಾರ, ಪ್ರತಿಪಕ್ಷಗಳ 'ಇಂಡಿಯಾ' ಮೈತ್ರಿಕೂಟ, ಕೇಂದ್ರದ ಬಿಜೆಪಿ ಸರ್ಕಾರದ ನಡೆ ಸೇರಿದಂತೆ ಅನೇಕ ವಿಚಾರಗಳ ಕುರಿತು ಅವರು ಮಾತನಾಡಿದ್ದಾರೆ.

ಚೆನ್ನೈ (ತಮಿಳುನಾಡು): ಕೇಂದ್ರ ಸರ್ಕಾರದ ತಾರತಮ್ಯದ ಅನುದಾನ ಹಂಚಿಕೆ ಜೊತೆಗೆ ಅನೇಕ ಸವಾಲುಗಳ ನಡುವೆಯೂ ಮಹಿಳೆಯರಿಗೆ ಗೌರವಧನ ಸೇರಿದಂತೆ ಎಲ್ಲ ಜನಕಲ್ಯಾಣ ಯೋಜನೆಗಳನ್ನು ಜಾರಿಗೆ ತರಲು ದ್ರಾವಿಡ ಮಾದರಿ ಸರ್ಕಾರ ಬದ್ಧವಾಗಿದೆ. ರಾಜ್ಯವನ್ನು ಅಭಿವೃದ್ಧಿಯ ಪಥದಲ್ಲಿ ಕೊಂಡೊಯ್ದಿದ್ದೇವೆ ಎಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ತಿಳಿಸಿದ್ದಾರೆ.

ಪ್ರಶ್ನೆ: ವಿವಿಧ ಜನಕಲ್ಯಾಣ ಕಾರ್ಯಕ್ರಮಗಳನ್ನು ಜಾರಿಗೊಳಿಸುತ್ತಿದ್ದೀರಿ. ಬೆಳಗಿನ ಉಪಹಾರ ಯೋಜನೆ, ಗೃಹಿಣಿಯರಿಗೆ ಗೌರವಧನದಂತಹ ದೊಡ್ಡ ಆರ್ಥಿಕ ಹೊರೆಯ ಯೋಜನೆಗಳ ಅನುಷ್ಠಾನದಲ್ಲಿ ನೀವು ಎದುರಿಸುತ್ತಿರುವ ಸವಾಲುಗಳೇನು?.

ಉತ್ತರ: ದ್ರಾವಿಡ ಮಾದರಿ ಸರ್ಕಾರದ ಜನಕಲ್ಯಾಣ ಕಾರ್ಯಕ್ರಮಗಳಲ್ಲಿ ಮಹಿಳೆಯರಿಗೆ ಗೌರವಧನ ಕಲ್ಪಿಸುವುದು ಅತ್ಯಂತ ಪ್ರಮುಖವಾಗಿದೆ. ಈ ಎಲ್ಲ ಯೋಜನೆಗಳು ದಿನನಿತ್ಯದ ಅಗತ್ಯಗಳ ಪೂರೈಸುವ ಗುರಿ ಹೊಂದಿರುವುದಿಲ್ಲ. ಆದರೆ, ಭವಿಷ್ಯದ ಅಭಿವೃದ್ಧಿಗೆ ಅಡಿಪಾಯವಾಗಿ ಉಳಿಯುತ್ತವೆ. ಆದ್ದರಿಂದ ದ್ರಾವಿಡ ಮಾದರಿ ಸರ್ಕಾರವು ಯಾವುದೇ ಸವಾಲುಗಳಿದ್ದರೂ ಅವುಗಳನ್ನು ಕಾರ್ಯಗತಗೊಳಿಸಲು ಬದ್ಧವಾಗಿದೆ. ಕಳೆದೆರಡು ವರ್ಷಗಳಲ್ಲಿ ನಾವು ಸಾಲದ ಹೊರೆ, ಆರ್ಥಿಕ ಕೊರತೆ ಮತ್ತು ಆಡಳಿತದ ಅವ್ಯವಸ್ಥೆಯನ್ನು ನಿವಾರಿಸಿದ್ದೇವೆ. ಕೇಂದ್ರ ಸರ್ಕಾರದ ತಾರತಮ್ಯದ ಹಣಕಾಸು ಹಂಚಿಕೆಯಿಂದ ನಾವು ಇನ್ನೂ ಸಂಪೂರ್ಣ ಸ್ವತಂತ್ರವಾಗಿ ಉಸಿರಾಡಲು ಸಾಧ್ಯವಾಗದೇ ಇದ್ದರೂ ರಾಜ್ಯವನ್ನು ಅಭಿವೃದ್ಧಿಯ ಪಥದಲ್ಲಿ ಕೊಂಡೊಯ್ಯುತ್ತಿದ್ದೇವೆ. ಈಗ ದಿಕ್ಸೂಚಿ ಯೋಜನೆಗಳು ಮತ್ತು ಚುನಾವಣಾ ಭರವಸೆಗಳನ್ನು ಅನುಷ್ಠಾನಗೊಳಿಸುವಲ್ಲಿ ಇಡೀ ದೇಶ ತಮಿಳುನಾಡಿನತ್ತ ನೋಡುತ್ತಿದೆ.

ಪ್ರಶ್ನೆ: ಉತ್ತರ ಭಾರತದಲ್ಲಿ ಬಹಳ ಪ್ರಬಲವಾಗಿರುವ ಹಿಂದುತ್ವ ಸಮೀಕರಣ ಮುರಿಯಲು ಪ್ರತಿಪಕ್ಷಗಳ 'ಇಂಡಿಯಾ' ಮೈತ್ರಿಕೂಟದ ತಂತ್ರವೇನು?.

ಉತ್ತರ: ಬಿಜೆಪಿಗೆ ಕೋಮುವಾದ ಹೊರತುಪಡಿಸಿ ಬೇರೆ ಯಾವುದೇ ಸಿದ್ಧಾಂತವಿಲ್ಲ. ಆ ಪಕ್ಷಕ್ಕೆ ತನ್ನ ಕಾರ್ಯಕ್ಷಮತೆಯ ಮೇಲೆ ಮತಗಳನ್ನು ಪಡೆಯಲು ಸಾಧ್ಯವಿಲ್ಲ. ಆದ್ದರಿಂದ ದ್ವೇಷದ ರಾಜಕೀಯದ ಮೇಲೆ ಮತ ಬ್ಯಾಂಕಿಂಗ್ ಮಾಡುತ್ತಿದೆ. ಆದರೆ, 'ಇಂಡಿಯಾ' ಮೈತ್ರಿಕೂಟದ ಶಕ್ತಿಯು ಧಾರ್ಮಿಕ ಸಾಮರಸ್ಯವಾಗಿದೆ. ನಾವು ಸಾಂವಿಧಾನಿಕ ತತ್ವಗಳನ್ನು ನಂಬುತ್ತೇವೆ. ಬಹುತ್ವದ ರಾಜ್ಯಗಳ ಹಕ್ಕುಗಳಲ್ಲಿ ನಂಬಿಕೆ ಹೊಂದಿದ್ದೇವೆ. ಜನರು ಎದುರಿಸುತ್ತಿರುವ ಮೂಲಭೂತ ಸಮಸ್ಯೆಗಳ ಮೇಲೆ ಕೇಂದ್ರೀಕರಿಸುತ್ತೇವೆ. ಹೀಗಾಗಿ ಚುನಾವಣಾ ಕಣದಲ್ಲಿ ಬಿಜೆಪಿಯ ಕೋಮುವಾದಿ ರಾಜಕಾರಣವನ್ನು ವಿರೋಧಿಸುವ ಎಲ್ಲ ಪ್ರಜಾಸತ್ತಾತ್ಮಕ ಶಕ್ತಿಗಳನ್ನು ಒಗ್ಗೂಡಿಸಿ ಮತ್ತು ಗೆಲುವಿನ ಸಾಧ್ಯತೆ ಅವಲಂಬಿಸಿ ಮಿತ್ರಪಕ್ಷಗಳ ನಡುವೆ ಹೊಂದಾಣಿಕೆ ಖಾತ್ರಿಪಡಿಸುವ ಮೂಲಕ ಭಾರಿ ಜನಾದೇಶದೊಂದಿಗೆ ಚುನಾವಣೆಯನ್ನು ಗೆಲ್ಲುವುದು ತಮ್ಮ ಮೈತ್ರಿಕೂಟದ ತಂತ್ರವಾಗಿದೆ. ಇದು ಇತ್ತೀಚಿನ ಉಪಚುನಾವಣೆಗಳು ಮತ್ತು ಕರ್ನಾಟಕ ವಿಧಾನಸಭೆ ಚುನಾವಣೆ ಹೇಗೆ ಸಾಬೀತುಪಡಿಸಿದೆ ಎಂಬುದನ್ನು ನೋಡಿದ್ದೀರಿ.

ಪ್ರಶ್ನೆ: ರಾಷ್ಟ್ರ ರಾಜಕಾರಣದಲ್ಲಿ ಡಿಎಂಕೆ ಗಟ್ಟಿಯಾಗಿ ನೆಲೆಯೂರಲು ಪ್ರಯತ್ನಿಸುತ್ತಿದೆಯೇ?, ಹಿಂದಿಯಲ್ಲಿ ಹಿಂದೆಂದೂ ಕಾಣದಷ್ಟು ನಿಮ್ಮ ಭಾಷಣಗಳು ಪ್ರಕಟವಾಗುತ್ತಿವೆ. ನೀವು ಪ್ರಧಾನಿಯಾಗುವ ಮಹತ್ವಾಕಾಂಕ್ಷೆ ಹೊಂದಿದ್ದೀರಾ?.

ಉತ್ತರ: ಡಿಎಂಕೆ ಈಗಾಗಲೇ ರಾಷ್ಟ್ರ ರಾಜಕಾರಣದಲ್ಲಿ ಮೂರನೇ ಅತಿ ದೊಡ್ಡ ಪಕ್ಷ. 40 ವರ್ಷಗಳಿಗೂ ಹೆಚ್ಚು ಕಾಲ ತನ್ನ ಛಾಪು ಮೂಡಿಸಿ ಇಂದು ಈ ಉತ್ತುಂಗಕ್ಕೇರಿದೆ. ದಿ. ಪ್ರಧಾನಿ ಇಂದಿರಾ ಗಾಂಧಿಯವರ ಬ್ಯಾಂಕ್ ರಾಷ್ಟ್ರೀಕರಣ ಸೇರಿದಂತೆ ಪ್ರಗತಿಪರ ಕ್ರಮಗಳನ್ನು ಬೆಂಬಲಿಸುವ ಮೂಲಕ ರಾಷ್ಟ್ರ ರಾಜಕಾರಣದಲ್ಲಿ ಪಕ್ಷದ ಛಾಪು ಮೂಡಿಸಿದವರು ಎಂ. ಕರುಣಾನಿಧಿ. ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ ಅವರು ಪ್ರಜಾಸತ್ತಾತ್ಮಕ ಧ್ವನಿಯಾಗಿ ಉತ್ತರ ಭಾರತದ ನಾಯಕರಿಗೆ ತಮಿಳುನಾಡಿನಲ್ಲಿ ಉಸಿರಾಡಲು ಅನುವು ಮಾಡಿಕೊಟ್ಟರು. ಡಿಎಂಕೆ ಸಾಮಾಜಿಕ ನ್ಯಾಯದ ಹೋರಾಟಗಾರ ವಿಪಿ ಸಿಂಗ್ ನ್ಯಾಷನಲ್ ಫ್ರಂಟ್​ ಸರ್ಕಾರದ ಬೆನ್ನೆಲುಬು ಆಗಿತ್ತು. ಇದು ಹಿಂದುಳಿದ ವರ್ಗಗಳಿಗೆ ಶೇ.27ರಷ್ಟು ಕೋಟಾವನ್ನು ಸಕ್ರಿಯಗೊಳಿಸುವ ಮೂಲಕ ದೇಶಾದ್ಯಂತ ಸಾಮಾಜಿಕ ನ್ಯಾಯದ ಜ್ವಾಲೆ ಬೆಳಗಿಸಲು ನೆರವಾಯಿತು. ಸಾಮಾನ್ಯ ಕನಿಷ್ಠ ಕಾರ್ಯಕ್ರಮದೊಂದಿಗೆ ವಾಜಪೇಯಿ ಸರ್ಕಾರವನ್ನು ಬೆಂಬಲಿಸಿತ್ತು. ಡಿಎಂಕೆ ಇದ್ದಾಗ ಕೋಮುವಾದಕ್ಕೆ ಯಾವುದೇ ಜಾಗವಿಲ್ಲ ಎಂಬ ಮೆಚ್ಚುಗೆ ಗಳಿಸಿತು. ಸಮ್ಮಿಶ್ರ ಸರ್ಕಾರವು ತನ್ನ ಪೂರ್ಣಾವಧಿ ನಡೆಸಬಹುದೆಂದು ಖಚಿತಪಡಿಸಿಕೊಂಡ ಡಿಎಂಕೆ ಮತ್ತು ಒಕ್ಕೂಟದಲ್ಲಿ ರಾಜಕೀಯ ಸ್ಥಿರತೆಗೆ ಸಹಾಯ ಮಾಡಿತು.

ಡಾ. ಮನಮೋಹನ್ ಸಿಂಗ್ ಅವರ ಎರಡು ಅವಧಿಯ ಯುಪಿಎ ಸರ್ಕಾರಗಳಲ್ಲಿ ಡಿಎಂಕೆ ನಿರ್ಣಾಯಕ ಪಾಲುದಾರ ಆಗಿತ್ತು. ರಾಷ್ಟ್ರಪತಿ ಚುನಾವಣೆಯಲ್ಲಿ ಡಿಎಂಕೆಯ ನಿಲುವು ಯಶಸ್ವಿಯಾಗಿದ್ದು, ರಾಷ್ಟ್ರಮಟ್ಟದಲ್ಲಿ ಗಮನ ಸೆಳೆದಿದೆ. ಪ್ರಸ್ತುತ ರಾಜಕೀಯ ಪರಿಸ್ಥಿತಿಯನ್ನು ಪರಿಗಣಿಸಿ, ಸಾಮಾಜಿಕ ಮಾಧ್ಯಮ ಸೇರಿದಂತೆ ಹಲವು ರೀತಿಯಲ್ಲಿ ಡಿಎಂಕೆ 'ಇಂಡಿಯಾ' ಮೈತ್ರಿಕೂಟಕ್ಕೆ ಕೊಡುಗೆ ನೀಡುತ್ತಿದೆ. ನನಗೆ ನನ್ನ ಎತ್ತರ ಗೊತ್ತು ಎಂದು ನಮ್ಮ ನಾಯಕ ಕರುಣಾನಿಧಿ ಹೇಳಿದ್ದು ಹಾಗೂ ಎಂಕೆ ಸ್ಟಾಲಿನ್ ಆಗಿ ನನಗೂ ನನ್ನ ಎತ್ತರ ಏನು ಎಂಬುದು ಚೆನ್ನಾಗಿ ಗೊತ್ತು.

ಪ್ರಶ್ನೆ: ಕೇಂದ್ರ ಸರ್ಕಾರವು ಪ್ರತಿ ಹೊಸ ಮಸೂದೆಗೆ ಹಿಂದಿಯಲ್ಲಿ ಹೆಸರಿಸುತ್ತಿದೆ. ಹಿಂದಿನ ಶಾಸನಗಳನ್ನು ಹಿಂದಿಯಲ್ಲಿ ಮರುನಾಮಕರಣ ಮಾಡಲಾಗಿದೆ. ಹಿಂದಿ ಪ್ರಾಬಲ್ಯದ ವಿರೋಧಕ್ಕೆ ಹೆಸರಾದ ಡಿಎಂಕೆ ಮತ್ತು ತಮಿಳುನಾಡಿನ ಪ್ರತಿಕ್ರಿಯೆ ಏನು?.

ಉತ್ತರ: ಡಿಎಂಕೆ ಸಂಸದರು ಸಂಸತ್ತಿನ ಉಭಯ ಸದನಗಳಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿದ್ದಾರೆ. ಹಿಂದಿಯಲ್ಲಿದ್ದ ಆಮಂತ್ರಣಗಳನ್ನು ಹರಿದು ಹಾಕುವ ಮೂಲಕ ತಮ್ಮ ಪ್ರತಿಭಟನೆಯನ್ನು ದಾಖಲಿಸಿದ್ದಾರೆ. ಡಿಎಂಕೆಯು ಬಿಜೆಪಿಯ 'ಒಂದು ರಾಷ್ಟ್ರ, ಒಂದು ಭಾಷೆ'ಯ ಗುಪ್ತ ಯೋಜನೆಯ ಅಪಾಯಗಳನ್ನು ನಿರಂತರವಾಗಿ ಒತ್ತಿ ಹೇಳುತ್ತಿದೆ. ಇದು ತಮಿಳಿಗೆ ಮಾತ್ರವಲ್ಲದೆ ಇತರ ರಾಜ್ಯಗಳ ಎಲ್ಲ ಭಾಷೆಗಳಿಗೆ ಹಾನಿಕಾರಕವಾಗಿದೆ. ಈ ಬಗ್ಗೆ ಬೇರೆ ರಾಜ್ಯಗಳಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಯಾವುದೇ ಭಾಷೆಗೆ ನಮ್ಮ ವಿರೋಧವಿಲ್ಲ. ಆದರೆ, ಯಾವುದೇ ಭಾಷೆಯ ಹೇರಿಕೆಯನ್ನು ನಾವು ಬಲವಾಗಿ ವಿರೋಧಿಸುತ್ತೇವೆ. ಈ ನಿಲುವು ಮುಂದುವರಿಯುತ್ತದೆ. ಸಂಸತ್ತಿನ ಚುನಾವಣೆಯ ನಂತರ ಹೊಸ ಸರ್ಕಾರವು ಎಲ್ಲ ಭಾಷೆಗಳಿಗೆ ಸಮಾನ ಸ್ಥಾನಮಾನ ಮತ್ತು ಪ್ರಾಮುಖ್ಯತೆ ಸಿಗಲಿದೆ.

ಪ್ರಶ್ನೆ: 'ಇಂಡಿಯಾ' ಮೈತ್ರಿಕೂಟದ ಪ್ರಸ್ತುತ ಸ್ಥಿತಿ ಏನು?, ಈ ಮೈತ್ರಿಕೂಟವನ್ನು ಸಂಘಟಿಸುವ ಚಾಲನಾ ಶಕ್ತಿ ಯಾವುದು?.

ಉತ್ತರ: ಕರ್ನಾಟಕ ವಿಧಾನಸಭೆ ಚುನಾವಣೆ ಮತ್ತು ಇತ್ತೀಚಿನ ಉಪಚುನಾವಣೆಗಳ ಗೆಲುವುಗಳೊಂದಿಗೆ 'ಇಂಡಿಯಾ' ಮೈತ್ರಿಕೂಟ ಮೊದಲ ಸುತ್ತಿನಲ್ಲಿ ಯಶಸ್ಸನ್ನು ಕಂಡಿದೆ. ಬಿಜೆಪಿಯ ಪ್ರಜಾಪ್ರಭುತ್ವ ವಿರೋಧಿ, ಜನವಿರೋಧಿ ಮತ್ತು ಸಂವಿಧಾನ ವಿರೋಧಿ 9 ವರ್ಷಗಳ ಆಡಳಿತವು 'ಇಂಡಿಯಾ' ಮೈತ್ರಿಕೂಟವನ್ನು ಒಂದುಗೂಡಿಸಿದೆ. ಬಿಜೆಪಿಯ ನೆರಳಿನ ಮಿತ್ರಪಕ್ಷಗಳಾದ ಜಾರಿ ನಿರ್ದೇಶನಾಲಯ ಮತ್ತು ಆದಾಯ ತೆರಿಗೆ ಇಲಾಖೆಯು ನಮ್ಮ ಮೈತ್ರಿಕೂಟಕ್ಕೆ ಹೆಚ್ಚಿನ ಪಕ್ಷಗಳನ್ನು ತರಲಿದೆ. ಸಂವಿಧಾನ ಮತ್ತು ಅದರ ತತ್ವಗಳು ಹಾಗೂ ಜನರೇ ನಮ್ಮ ಮೈತ್ರಿಯ ಪ್ರೇರಕ ಶಕ್ತಿ.

ಪ್ರಶ್ನೆ: ದೇವಸ್ಥಾನಗಳು ಹಿಂದೂ ಧಾರ್ಮಿಕ ಮತ್ತು ದತ್ತಿ ಇಲಾಖೆಯ ನಿಯಂತ್ರಣದಲ್ಲಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಟೀಕಿಸಿದ್ದಾರೆ. ತಮಿಳುನಾಡು ಸರ್ಕಾರದ ಪ್ರತಿಕ್ರಿಯೆ ಏನು?

ಉತ್ತರ: ಡಿಎಂಕೆ ಅಧಿಕಾರಕ್ಕೆ ಬಂದ ನಂತರ 1118 ದೇವಸ್ಥಾನಗಳಲ್ಲಿ ಮಹಾಮಸ್ತಕಾಭಿಷೇಕ ಮಾಡಲಾಯಿತು. ಇದುವರೆಗೆ ಮಾನವ ಸಂಪನ್ಮೂಲ ಮತ್ತು ದತ್ತಿ ಇಲಾಖೆಗೆ ಸೇರಿದ 5,473 ಕೋಟಿ ರೂಪಾಯಿ ಮೌಲ್ಯದ 5,820 ಎಕರೆ ಭೂಮಿಯನ್ನು ವಶಪಡಿಸಿಕೊಳ್ಳಲಾಗಿದೆ. ಪ್ರಧಾನಿಯವರು ಇದನ್ನು ತಿಳಿಯದೆ ಮಾತನಾಡಿದ್ದಾರೆ. ಇದಕ್ಕೆ ನಾನು ಈಗಾಗಲೇ ಪ್ರತಿಕ್ರಿಯಿಸಿದ್ದೇನೆ. ಇಂದು ಬಿಜೆಪಿ ಸರ್ಕಾರದಲ್ಲಿ ಏನಾಗುತ್ತಿದೆ?, ಅವರಿಗೆ ಏಮ್ಸ್ ಆಸ್ಪತ್ರೆ ಕಟ್ಟಲು ಸಾಧ್ಯವಾಗಲಿಲ್ಲ. ನೀಟ್​ ವಿನಾಯಿತಿ ಮಸೂದೆಗೆ ಒಪ್ಪಿಗೆ ನೀಡಲು ಸಾಧ್ಯವಾಗಲಿಲ್ಲ. ರಾಜ್ಯದ ಹಣಕಾಸಿನ ಹಕ್ಕುಗಳು ಮತ್ತು ರಾಜ್ಯಗಳ ಹಕ್ಕುಗಳನ್ನು ನೀಡಲಾಗಿಲ್ಲ. ರಾಜ್ಯ ಸರ್ಕಾರಕ್ಕೆ ಯಾವುದೇ ಸಹಕಾರ ನೀಡದ, ರಾಜಕೀಯ ವಾಗ್ದಾಳಿ ನಡೆಸುವ ಮೂಲಕ ರಾಜ್ಯಪಾಲರ ಹುದ್ದೆಯನ್ನು ಅವಹೇಳನ ಮಾಡುವ ವ್ಯಕ್ತಿಯನ್ನು ರಾಜ್ಯಪಾಲರನ್ನಾಗಿ ಇರಿಸಲಾಗುತ್ತಿದೆ. ಇದು ತಮಿಳು ಮತ್ತು ತಮಿಳುನಾಡಿನ ಅಭಿವೃದ್ಧಿಗೆ ಅಡ್ಡಿಪಡಿಸುತ್ತದೆ. ಇದರಿಂದಾಗಿ ನಮ್ಮ ಯುವಕರಿಗೆ ಉದ್ಯೋಗ ಸೃಷ್ಟಿಗೆ ಅಡ್ಡಿಯಾಗಿದೆ. 9 ವರ್ಷಗಳ ಆಡಳಿತದಲ್ಲಿ ಬಿಜೆಪಿ ಸರ್ಕಾರ ತಮಿಳುನಾಡಿಗೆ ಯಾವುದೇ ಕೊಡುಗೆ ನೀಡಿಲ್ಲ ಹಾಗೂ ವಿಶೇಷ ಯೋಜನೆಗಳನ್ನು ಕೊಟ್ಟಿಲ್ಲ. ಹೀಗಾಗಿ ತಮ್ಮ ಕೆಲಸದ ಆಧಾರದ ಮೇಲೆ ಮತ ಕೇಳಲು ಪ್ರಧಾನಿಗೆ ಸಮಸ್ಯೆಯಾಗಿದೆ. ಬಿಜೆಪಿ ಸರ್ಕಾರದ ವೈಫಲ್ಯವನ್ನು ದಿಕ್ಕು ತಪ್ಪಿಸುವ ಸಲುವಾಗಿ ಶ್ಲಾಘನೀಯ ಕೆಲಸ ಮಾಡುತ್ತಿರುವ ನಮ್ಮ ಇಲಾಖೆಗಳನ್ನು ಗುರಿಯಾಗಿಸಿಕೊಂಡಿದ್ದಾರೆ.

ಪ್ರಶ್ನೆ: ಪ್ರಸಕ್ತ ವರ್ಷ ಕಾವೇರಿ ನೀರಿನ ಕೊರತೆ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ರೈತರಿಗೆ ಪರಿಹಾರವೇನು?, ರಾಜಕೀಯ ಪರಿಹಾರ ಸಾಧ್ಯವೇ?.

ಉತ್ತರ: ರಾಜಕೀಯ ಪರಿಹಾರ ಸಿಗದ ಕಾರಣದಿಂದಲೇ ಕಾವೇರಿ ನ್ಯಾಯಮಂಡಳಿ ಸ್ಥಾಪನೆಯಾಗಿದೆ. ಅದರ ಅಂತಿಮ ತೀರ್ಪನ್ನು ಸುಪ್ರೀಂಕೋರ್ಟ್ ಕೂಡ ಎತ್ತಿ ಹಿಡಿದಿತ್ತು. ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಹಾಗೂ ಸುಪ್ರೀಂ ಕೋರ್ಟ್ ಮೆಟ್ಟಿಲೇರುವ ಮೂಲಕ ರೈತರಿಗೆ ನೀರು ದೊರಕಿಸಿಕೊಡಲಾಗಿದೆ. ಕಾವೇರಿ ವಿಚಾರದಲ್ಲಿ ರೈತರು ಮತ್ತು ತಮಿಳುನಾಡಿನ ಹಕ್ಕುಗಳನ್ನು ರಕ್ಷಿಸಲು ನಮ್ಮ ಸರ್ಕಾರ ದೃಢವಾಗಿದೆ.

ಪ್ರಶ್ನೆ: ಜನಗಣತಿಯಲ್ಲಿ ಜಾತಿಯನ್ನು ಸೇರಿಸುವಂತೆ ಒತ್ತಾಯಿಸಲು ನೀವು ಪ್ರಧಾನಿಗೆ ಪತ್ರ ಬರೆದಿದ್ದೀರಿ. ರಾಜ್ಯ ಸರ್ಕಾರವೇ ಜಾತಿ ಸಮೀಕ್ಷೆ ನಡೆಸಬೇಕು ಎಂದು ಕೆಲ ಮುಖಂಡರು ಆಗ್ರಹಿಸುತ್ತಿದ್ದಾರೆ. ತಮಿಳುನಾಡು ಸರ್ಕಾರ ಜಾತಿ ಸಮೀಕ್ಷೆ ನಡೆಸುವ ಸಾಧ್ಯತೆ ಇದೆಯೇ?.

ಉತ್ತರ: ತಮಿಳುನಾಡು ಶೇ.69ರಷ್ಟು ಮೀಸಲಾತಿ ಕಲ್ಪಿಸುತ್ತಿದೆ. ಜನಗಣತಿಯು ಕೇಂದ್ರ ಪಟ್ಟಿಯ ಅಡಿಯಲ್ಲಿ ಬರುತ್ತದೆ. ಅದಕ್ಕಾಗಿಯೇ ಡಿಎಂಕೆ ಪಾಲುದಾರರಾಗಿದ್ದ ಯುಪಿಎ ಸರ್ಕಾರವು 2011ರಲ್ಲಿ ಜಾತಿವಾರು ಗಣತಿಯನ್ನು ಪ್ರಾರಂಭಿಸಿತ್ತು. ನಂತರ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರ ಆ ಗಣತಿಯ ವರದಿಯನ್ನು ಬಿಡುಗಡೆ ಮಾಡಿರಲಿಲ್ಲ. ಇದಕ್ಕಾಗಿ 2015ರಲ್ಲಿ ತಜ್ಞರ ಸಮಿತಿ ರಚಿಸಿದ್ದರೂ ಇಂದಿಗೂ ಆ ಸಮಿತಿಯ ವರದಿ ಹೊರಬಿದ್ದಿಲ್ಲ. ಹಿಂದುಳಿದ ವರ್ಗಗಳಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಶೇ.27ರಷ್ಟು ಮೀಸಲಾತಿಯನ್ನು ಮಂಡಲ್ ಆಯೋಗವು ಭದ್ರಪಡಿಸಿದೆ. ಅದೇ ರೀತಿ, ಜನಗಣತಿಯ ಭಾಗವಾಗಿ ಜಾತಿ ಎಣಿಕೆ ನಡೆದಾಗ ಮಾತ್ರ ತಮಿಳುನಾಡಿಗೆ ಮಾತ್ರವಲ್ಲದೆ ಇಡೀ ದೇಶಕ್ಕೆ ಸಾಮಾಜಿಕ ನ್ಯಾಯವನ್ನು ಖಚಿತಪಡಿಸುತ್ತದೆ. ಈ ಕಾರಣಕ್ಕಾಗಿ ನಾನು ಈ ಬಗ್ಗೆ ಪ್ರಧಾನಿಗೆ ಪತ್ರ ಬರೆದಿದ್ದೇನೆ.

ಪ್ರಶ್ನೆ: ಬಿಜೆಪಿ-ಎಐಎಡಿಎಂಕೆ ಮೈತ್ರಿ ನಿಜವಾಗಿಯೂ ಮುರಿದು ಬಿದ್ದಿದೆಯೇ?, ಮೈತ್ರಿ ಲೆಕ್ಕಾಚಾರದಲ್ಲಿ ಬದಲಾವಣೆ ಆಗುತ್ತಾ?.

ಉತ್ತರ: ಬಿಜೆಪಿಯ ಮಿತ್ರ ಪಕ್ಷವು ಸಂಬಂಧವನ್ನು ಕಡಿದುಕೊಂಡ ನಂತರ ರಾಜ್ಯದಲ್ಲಿನ ಬೆಳವಣಿಗೆಗಳ ಬಗ್ಗೆ ನಿಮಗೆ ತಿಳಿದಿರಬೇಕು. ಎಐಎಡಿಎಂಕೆ ಮತ್ತು ಬಿಜೆಪಿಯನ್ನು ನೀವು ನೋಡುತ್ತಿರುವಿರಿ. ಅವು ನಿಜವಾಗಿ ಮುರಿದು ಬಿದ್ದಿವೆಯೇ ಎಂಬ ಅನುಮಾನ ನಿಮಗೂ ಇದೆ. ನಾವು ಅದರ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ. ಬಿಜೆಪಿ ಆಡಳಿತದ ಅವ್ಯವಸ್ಥೆ ಮತ್ತು ಎಐಎಡಿಎಂಕೆ ಆಡಳಿತದ ಅವ್ಯವಸ್ಥೆ ಜನರು ನೋಡಿದ್ದಾರೆ. ದೇಶದ ಗಮನವನ್ನು ತನ್ನತ್ತ ತಿರುಗಿಸುವ ಅನೇಕ ಸಾಧನೆಗಳನ್ನು ಹೊಂದಿರುವ ನಮ್ಮ ಸರ್ಕಾರವನ್ನು ಜನತೆ ನೋಡುತ್ತಿದ್ದಾರೆ. ನಾವು ನಮ್ಮ ಉತ್ತಮ ಆಡಳಿತದ ಮೇಲೆ ನಂಬಿಕೆ ಇಟ್ಟುಕೊಂಡು ಚುನಾವಣೆಗೆ ಬರುತ್ತೇವೆ. ಕಳೆದ ಎರಡೂವರೆ ವರ್ಷಗಳಲ್ಲಿ ನಾವು 10 ವರ್ಷಗಳ ಸುದೀರ್ಘ ಎಐಎಡಿಎಂಕೆ ಆಡಳಿತದ ಅವ್ಯವಸ್ಥೆಯನ್ನು ಸರಿಪಡಿಸಿದ್ದೇವೆ. ರಾಜ್ಯ ಯಂತ್ರವನ್ನು ಶ್ರೇಷ್ಠತೆಯಿಂದ ಮುನ್ನಡೆಸುತ್ತಿದ್ದೇವೆ. ಡಿಎಂಕೆಯ ಉತ್ತಮ ಆಡಳಿತ ಮತ್ತು ಮಿತ್ರಪಕ್ಷಗಳ ಅಭಿಮಾನದ ಆಧಾರದ ಮೇಲೆ ನಾವು ಜನರನ್ನು ಬಳಿಗೆ ಹೋಗುತ್ತೇವೆ. ಜನ ನಮ್ಮೊಂದಿಗಿದ್ದಾರೆ ಎಂಬ ವಿಶ್ವಾಸ ಇದೆ.

Last Updated :Oct 29, 2023, 11:58 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.