ETV Bharat / bharat

ರಾಖಿ ಕಟ್ಟಬೇಕೆಂಬ ಮಗಳ ಬೇಡಿಕೆ ಈಡೇರಿಸಲು ಫುಟ್‌ಪಾತ್‌ನಲ್ಲಿ ಮಲಗಿದ್ದ ಮಗು ಅಪಹರಿಸಿದ ದಂಪತಿ!

author img

By ETV Bharat Karnataka Team

Published : Aug 26, 2023, 9:10 PM IST

DELHI: Parents kidnapped a boy because their daughter demanded a brother in Rakhi
ರಾಖಿ ಕಟ್ಟಬೇಕೆಂಬ ಮಗಳ ಬೇಡಿಕೆ ಈಡೇರಿಸಲು ಫುಟ್‌ಪಾತ್‌ನಲ್ಲಿ ಮಲಗಿದ್ದ ಮಗು ಅಪಹರಿಸಿದ ದಂಪತಿ

ದೇಶಾದ್ಯಂತ ಸಂಭ್ರಮದಿಂದ ಆಚರಿಸುವ ರಕ್ಷಾ ಬಂಧನ ಅಥವಾ ರಾಖಿ ಹಬ್ಬ ಹತ್ತಿರವಾಗಿದೆ. ಇದರ ನಡುವೆ ರಾಖಿ ಕಟ್ಟಬೇಕೆಂಬ ಮಗಳ ಬೇಡಿಕೆ ಈಡೇರಿಸಲು ದಂಪತಿಯೊಬ್ಬರು ಫುಟ್‌ಪಾತ್‌ನಲ್ಲಿ ಮಲಗಿದ್ದ ಮಗುವನ್ನು ಅಪಹರಿಸಿದ ಘಟನೆ ದೆಹಲಿಯಲ್ಲಿ ವರದಿಯಾಗಿದೆ.

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಿಂದ ಅಚ್ಚರಿ ಹಾಗೂ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ಅಪ್ರಾಪ್ತ ವಯಸ್ಸಿನ ಬಾಲಕಿಯೊಬ್ಬಳು ರಾಖಿ ಕಟ್ಟಲು ಸಹೋದರನಿಗಾಗಿ ಪೋಷಕರಿಗೆ ಬೇಡಿಕೆ ಇಟ್ಟಿದ್ದಾಳೆ. ಮಗಳ ಈ ಬೇಡಿಕೆ ಈಡೇರಿಸಲು ದಂಪತಿಯೊಬ್ಬರು ರಸ್ತೆ ಪಕ್ಕದಲ್ಲಿ ಮಲಗಿದ್ದ ಪುಟ್ಟ ಮಗುವನ್ನು ಅಪಹರಿಸಿದ್ದನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ.

ಮಗು ಅಪಹರಿಸಿದ ಆರೋಪಿಗಳನ್ನು ಇಲ್ಲಿನ ಟ್ಯಾಗೋರ್ ಗಾರ್ಡನ್‌ನ ರಘುಬೀರ್ ನಗರದ ನಿವಾಸಿಗಳಾದ ಸಂಜಯ್ ಗುಪ್ತಾ ಹಾಗೂ ಅನಿತಾ ಗುಪ್ತಾ ಎಂದು ಗುರುತಿಸಲಾಗಿದೆ. ಸದ್ಯ ಇಬ್ಬರನ್ನೂ ಪೊಲೀಸರು ಬಂಧಿಸಿ ಮಗುವನ್ನು ರಕ್ಷಣೆ ಮಾಡಿದ್ದಾರೆ. ಆಗಸ್ಟ್ 23ರಂದು ರಾತ್ರಿ ಪುಟ್ಟ ಮಗುವನ್ನು ಈ ದಂಪತಿ ಅಪಹರಣ ಮಾಡಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಫುಟ್‌ಪಾತ್‌ನಿಂದ ಮಗು ಅಪಹರಣ: ಇಲ್ಲಿನ ಚಟ್ಟಾ ರೈಲ್ ಚೌಕ್‌ನ ಫುಟ್‌ಪಾತ್‌ನಲ್ಲಿ ಆಗಸ್ಟ್ 23ರಂದು ರಾತ್ರಿ ದೀಪಕ್ ಎಂಬುವವರು ತನ್ನ ಪತ್ನಿ ರಾಮಶೀಲಾ, 2 ವರ್ಷದ ಮಗಳು ಮತ್ತು ಒಂದು ತಿಂಗಳ ಮಗನೊಂದಿಗೆ ಮಲಗಿದ್ದರು. ಬೆಳಗ್ಗೆ 6 ಗಂಟೆಗೆ ಎಚ್ಚರವಾಗಿ ನೋಡಿದಾಗ ಮಗು ಕಾಣೆಯಾಗಿರುವುದು ಗೊತ್ತಾಗಿದೆ. ಹೀಗಾಗಿ ಮೊದಲು ಸುತ್ತಮುತ್ತಲ ಪ್ರದೇಶದಲ್ಲಿ ಮಗುವಿಗಾಗಿ ಹುಡುಕಾಟ ನಡೆಸಿದ್ದಾರೆ. ಆದರೂ ಮಗು ಸಿಗದ ಹಿನ್ನೆಲೆಯಲ್ಲಿ ಸ್ಥಳೀಯ ಪೊಲೀಸ್ ಠಾಣೆಗೆ ಘಟನೆಯ ಬಗ್ಗೆ ದೂರು ನೀಡಿದ್ದರು ಎಂದು ದೆಹಲಿ ಉತ್ತರ ಜಿಲ್ಲೆಯ ಉಪ ಪೊಲೀಸ್​ ಆಯುಕ್ತ ಸಾಗರ್ ಸಿಂಗ್ ಕಲ್ಸಿ ತಿಳಿಸಿದ್ದಾರೆ.

400ಕ್ಕೂ ಹೆಚ್ಚು ಸಿಸಿಟಿವಿಗಳ ಪರಿಶೀಲನೆ: ದೀಪಕ್ ದಂಪತಿ ತಮ್ಮ ಮಗು ಕಾಣೆಯಾದ ಬಗ್ಗೆ ನೀಡಿದ ದೂರಿನ ಮೇರೆಗೆ ಪೊಲೀಸರು ತನಿಖೆ ಆರಂಭಿಸಿದ್ದರು. ಇದರ ಭಾಗವಾಗಿ ಮಗು ಪತ್ತೆಗಾಗಿ ಪೊಲೀಸರು ಸುತ್ತಮುತ್ತಲಿನ ಇಡೀ ಪ್ರದೇಶದಲ್ಲಿ ಅಳವಡಿಸಿದ್ದ ಸುಮಾರು 400 ಸಿಸಿಟಿವಿ ಕ್ಯಾಮರಾಗಳನ್ನು ಪರಿಶೀಲನೆ ನಡೆಸಿದ್ದಾರೆ. ಈ ವೇಳೆ, ಮಗು ನಾಪತ್ತೆಯಾದ ಪ್ರದೇಶದಲ್ಲಿ ಬೈಕ್​ ಮೇಲೆ ಇಬ್ಬರು ತಿರುಗಾಡುತ್ತಿರುವುದು ಕಂಡು ಬಂದಿದೆ.

ಅಂತೆಯೇ, ಆ ಬೈಕ್​ನ ನಂಬರ್​ಅನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ಆಗ ಸಂಜಯ್ ಎಂಬ ಹೆಸರಿನಲ್ಲಿ ಬೈಕ್ ನೋಂದಣಿಯಾಗಿರುವುದು ಪತ್ತೆಯಾಗಿದೆ. ಇದರಿಂದ ಬೈಕ್​ ನೋಂದಣಿಯಲ್ಲಿದ್ದ ವಿಳಾಸದ ಮಾಹಿತಿ ಆಧರಿಸಿ ಸುಮಾರು 15 ಜನ ಪೊಲೀಸರು ಟ್ಯಾಗೋರ್ ಗಾರ್ಡನ್‌ನ ರಘುಬೀರ್ ನಗರದಲ್ಲಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ, ಸಂಜಯ್ ಗುಪ್ತಾ ಮನೆಯಲ್ಲಿ ಅಪಹರಣಕ್ಕೊಳಗಾದ ಮಗು ಪತ್ತೆಯಾಗಿದೆ.

ಮಗಳ ಬೇಡಿಕೆ ಈಡೇರಿಸಲು ಮಗು ಅಪಹರಣ: ನಂತರ ಪೊಲೀಸರು ಆರೋಪಿ ಸಂಜಯ್ ಗುಪ್ತಾ ದಂಪತಿಯನ್ನು ಬಂಧಿಸಿ ಮಗುವನ್ನು ಸುರಕ್ಷಿತವಾಗಿ ರಕ್ಷಣೆ ಮಾಡಿದ್ದಾರೆ. ಅಲ್ಲದೇ, ಪೊಲೀಸ್ ವಿಚಾರಣೆಯಲ್ಲಿ ಈ ದಂಪತಿ ಮಗುವನ್ನು ಅಪಹರಣ ಮಾಡಿದ ಕುರಿತ ಕಾರಣವನ್ನೂ ಬಹಿರಂಗ ಪಡಿಸಿದ್ದಾರೆ.

''ನಮಗೆ ಇಬ್ಬರು ಮಕ್ಕಳು ಇದ್ದರು. ಆದರೆ, ಕಳೆದ ವರ್ಷ ಛಾವಣಿಯಿಂದ ಬಿದ್ದು ಮಗ ಸಾವನ್ನಪ್ಪಿದ್ದಾನೆ. ಮನೆಯಲ್ಲಿ ಈಗ ಮಗಳು ಒಬ್ಬಳೇ ಉಳಿದಿದ್ದಾಳೆ'' ಎಂದು ಆರೋಪಿ ದಂಪತಿ ಮಾಹಿತಿ ನೀಡಿದ್ದಾರೆ. ಅಷ್ಟೇ ಅಲ್ಲ, ''ಸಹೋದರ-ಸಹೋದರಿಯನ್ನು ಮನೆಯಲ್ಲಿ ಸಂತೋಷದಿಂದ ಬೆಳೆಸಲಾಗಿತ್ತು. ಇದೀಗ ರಕ್ಷಾ ಬಂಧನದಂದು ತನ್ನ ಸಹೋದರನಿಗೆ ರಾಖಿ ಕಟ್ಟಬೇಕೆಂದು ಮಗಳು ಬೇಡಿಕೆ ಇಟ್ಟಿದ್ದಳು. ಹೀಗಾಗಿ ರಾಖಿ ಕಟ್ಟಬೇಕೆಂಬ ಮಗಳ ಬೇಡಿಕೆಯನ್ನು ಈಡೇರಿಸಲು ಮಗುವನ್ನು ಅಪಹರಣ ಮಾಡಿದ್ದೇವೆ'' ಎಂದು ದಂಪತಿ ಬಾಯ್ಬಿಟ್ಟಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ಇದನ್ನೂ ಓದಿ: ಪ್ರಧಾನಿ ಮೋದಿ, ಅಮಿತ್​ ಶಾ, ಯೋಗಿ, ಮೋಹನ್​ ಭಾಗವತ್​ಗೆ ರಾಖಿ ಕಳುಹಿಸಿದ ಪಾಕ್​ ಪ್ರಜೆ ಸೀಮಾ ಹೈದರ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.