ETV Bharat / bharat

ಹನುಮ ಜಯಂತಿ ಮೆರವಣಿಗೆ: ಸಂಬಲ್​ಪುರದಲ್ಲಿ ಮತ್ತೆ ಹಿಂಸಾಚಾರ, ನಿಷೇಧಾಜ್ಞೆ ಜಾರಿ

author img

By

Published : Apr 15, 2023, 12:30 PM IST

ಸಂಬಲ್​ಪುರದಲ್ಲಿ ಮತ್ತೆ ಹಿಂಸಾಚಾರ
ಸಂಬಲ್​ಪುರದಲ್ಲಿ ಮತ್ತೆ ಹಿಂಸಾಚಾರ

ಒಡಿಶಾದ ಸಂಬಲ್​ಪುರದಲ್ಲಿ ಹನುಮ ಜಯಂತಿ ಯಾತ್ರೆಯ ವೇಳೆ ಮತ್ತೆ ಹಿಂಸಾಚಾರ ನಡೆದಿದೆ. ಮೂರು ದಿನಗಳ ಅಂತರದಲ್ಲಿ ನಡೆದ 2ನೇ ಗಲಭೆ ಇದಾಗಿದೆ.

ಸಂಬಲ್‌ಪುರ(ಒಡಿಶಾ): ನಿನ್ನೆ(ಶುಕ್ರವಾರ) ರಾತ್ರಿ ಹನುಮ ಜಯಂತಿ ಯಾತ್ರೆಯಲ್ಲಿ ನಡೆದ ಹಿಂಸಾಚಾರದಲ್ಲಿ ಯುವಕ ಸಾವನ್ನಪ್ಪಿದ್ದು, ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟಾಗಿದೆ. ಇದರಿಂದ ಮುಂದಿನ ಆದೇಶದವರೆಗೆ ತಕ್ಷಣಕ್ಕೆ ಜಾರಿಗೆ ಬರುವಂತೆ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಅಲ್ಲದೇ, 48 ಗಂಟೆಗಳ ಕಾಲ ಅಂತರ್ಜಾಲ ಸೇವೆ ಬಂದ್​ ಮಾಡಲಾಗಿದೆ ಎಂದು ಅಲ್ಲಿನ ಜಿಲ್ಲಾಡಳಿತ ಆದೇಶ ಮಾಡಿದೆ.

ಅಪರಾಧ ಪ್ರಕ್ರಿಯಾ ಸಂಹಿತೆಯ (ಸಿಆರ್‌ಪಿಸಿ) ಸೆಕ್ಷನ್ 144(1) ಪ್ರಕಾರ ಸಂಬಲ್​ಪುರ ಜಿಲ್ಲೆಯಲ್ಲಿ ತುರ್ತು ಪರಿಸ್ಥಿತಿ ಇರಲಿದೆ. ಯಾವುದೇ ವ್ಯಕ್ತಿಗಳು ಅಥವಾ ಗುಂಪುಗಳು ಸಾರ್ವಜನಿಕವಾಗಿ ಕಾಣಿಸಿಕೊಳ್ಳುವಂತಿಲ್ಲ. ಅಗತ್ಯ ಸೇವೆಗಳಿಗಾಗಿ ಬೆಳಗ್ಗೆ 2 ಸಂಜೆ 2 ಗಂಟೆ ಮಾತ್ರ ವಿನಾಯಿತಿ ನೀಡಲಾಗಿದೆ. ಮುಂದಿನ ಆದೇಶದವರೆಗೆ ಇದು ಮುಂದುವರಿಯಲಿದೆ ಎಂದು ಜಿಲ್ಲಾಧಿಕಾರಿ ಆದೇಶದಲ್ಲಿ ತಿಳಿಸಿದ್ದಾರೆ.

ತುರ್ತು ವೇಳೆಯೂ ಯಾವುದೇ ಅಗತ್ಯ ವಸ್ತುಗಳ ಖರೀದಿಯನ್ನು ಬೆಳಗ್ಗೆ 8 ರಿಂದ 10 ಮತ್ತು ಮಧ್ಯಾಹ್ನ 3.30 ರಿಂದ ಸಂಜೆ 5.30 ರವರೆಗೆ ಮಾಡಬಹುದು. ಯಾವುದೇ ವೈದ್ಯಕೀಯ ತುರ್ತುಸ್ಥಿತಿಗಾಗಿ 7655800760 ಸಹಾಯವಾಣಿಯನ್ನು ಸಂಪರ್ಕಿಸಬಹುದು. ನಿಮಯ ಉಲ್ಲಂಘಿಸುವವರ ವಿರುದ್ಧ ಕಾನೂನು ಪ್ರಕಾರ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

ಶುಕ್ರವಾರ ಸಂಜೆ ಹನುಮ ಜಯಂತಿ ಮೆರವಣಿಗೆ ಹೊರಡುವಾಗ ಎರಡು ಗುಂಪುಗಳ ಮಧ್ಯೆ ಘರ್ಷಣೆ ಏರ್ಪಟ್ಟಿದೆ. ಇದು ಹಿಂಸಾಚಾರಕ್ಕೆ ತಿರುಗಿ ನಗರದ ಕೆಲವು ಭಾಗಗಳಲ್ಲಿ ದುಷ್ಕರ್ಮಿಗಳು ಹಲವಾರು ಅಂಗಡಿಗಳು ಮತ್ತು ಕಚೇರಿಗಳಿಗೆ ಬೆಂಕಿ ಹಚ್ಚಿದ್ದಾರೆ. ತಕ್ಷಣವೇ ಕ್ರಮ ಕೈಗೊಂಡಿರುವ ಪೊಲೀಸರು ಇನ್ನಷ್ಟು ಅಹಿತಕರ ಘಟನೆ ನಡೆಯದಂತೆ ಕರ್ಫ್ಯೂ ಹೇರಿದ್ದಾರೆ.

ಏಪ್ರಿಲ್ 12 ರಂದು ಅಂದರೆ ಮೂರು ದಿನಗಳ ಹಿಂದೆ ಇದೇ ರೀತಿಯ ಘರ್ಷಣೆ ಸಂಭವಿಸಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು 12 ಶಂಕಿತರನ್ನು ಬಂಧಿಸಿದ್ದಾರೆ. ಅಲ್ಲದೇ, ಇನ್ನುಳಿದ ಕಿಡಿಗೇಡಿಗಳ ಗುರುತಿಸುವ ಪ್ರಕ್ರಿಯೆಯಲ್ಲಿದ್ದಾರೆ. ನಿನ್ನೆಯ ಹಿಂಸಾಚಾರದ ನಡುವೆಯೂ ಹನುಮ ಜಯಂತಿ ಮೆರವಣಿಗೆ ಅದ್ಧೂರಿಯಾಗಿ ಜರುಗಿತು.

ಇಂಟರ್​ನೆಟ್​ ಬಂದ್​: ಸಂಬಲ್​ಪುರದಲ್ಲಿ ಮೂರು ದಿನಗಳ ಅಂತರದಲ್ಲಿ 2 ನೇ ಹಿಂಸಾಚಾರ ಇದಾಗಿದ್ದು, ಒಡಿಶಾ ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ಸಂಬಲ್​ಪುರದಲ್ಲಿ ಉದ್ವಿಗ್ನ ಸ್ಥಿತಿ ಇರುವ ಕಾರಣ ಸಾರ್ವಜನಿಕ ಹಿತದೃಷ್ಟಿಯಿಂದ ಮುಂದಿನ 48 ಗಂಟೆಗಳ ಕಾಲ ಇಂಟರ್​​ನೆಟ್​ ಸೇವೆಯನ್ನು ಬಂದ್​ ಮಾಡಲಾಗಿದೆ. ಏಪ್ರಿಲ್ 17 ರಂದು ಬೆಳಗ್ಗೆ 10 ಗಂಟೆಯವರೆಗೆ ಅಂತರ್ಜಾಲ ಸೇವೆಗಳನ್ನು ಸ್ಥಗಿತ ಮಾಡಲಾಗಿದೆ ಎಂದು ಗೃಹ ಇಲಾಖೆ ಆದೇಶ ಹೊರಡಿಸಿದೆ.

ವದಂತಿಗಳನ್ನು ಹಬ್ಬಿಸಬೇಡಿ, ನಂಬಬೇಡಿ. ಸುಳ್ಳು ಸುದ್ದಿಗಳು ಕೇಳಿ ಬಂದರೆ ತಕ್ಷಣ ಪೊಲೀಸ್ ಠಾಣೆಗೆ ಮಾಹಿತಿ ನೀಡಿ. ನಗರದಲ್ಲಿ ಸದ್ಯಕ್ಕೆ ಪರಿಸ್ಥಿತಿ ನಿಯಂತ್ರಣದಲ್ಲಿದೆ. 43 ತುಕಡಿ ಪೊಲೀಸ್ ಪಡೆಗಳನ್ನು ಭದ್ರತೆಗೆ ನಿಯೋಜಿಸಲಾಗಿದೆ ಎಂದು ಜಿಲ್ಲಾಧಿಕಾರಿ ಅನನ್ಯ ದಾಸ್​ ಹೇಳಿದ್ದಾರೆ. ನಾಳೆ ನಡೆಯಲಿರುವ ವಿವಿಧ ಪರೀಕ್ಷೆಗಳ ಕುರಿತು ಶೀಘ್ರವೇ ಚರ್ಚೆ ನಡೆಸಲಾಗುವುದು. ಇಂತಹ ಸಂದರ್ಭದಲ್ಲಿ ಎಲ್ಲರ ಸಹಕಾರ ಅಗತ್ಯ ಎಂದು ಮನವಿ ಮಾಡಿದ್ದಾರೆ.

ಓದಿ: ವಿಷಪೂರಿತ ಮದ್ಯ ಸೇವಿಸಿ 8 ಜನರ ಸಾವು.. ಬಿಹಾರದಲ್ಲಿ ಮತ್ತೆ ದುರಂತ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.