ETV Bharat / bharat

ರಾಜಧಾನಿ ತೊರೆಯಲು ರೈಲ್ವೆ, ಬಸ್ ನಿಲ್ದಾಣಗಳತ್ತ ದೌಡಾಯಿಸಿದ ವಲಸೆ ಕಾರ್ಮಿಕರು

author img

By

Published : Apr 26, 2021, 6:59 AM IST

Updated : Apr 26, 2021, 6:30 PM IST

Corona
Corona

18:00 April 26

ಬಿಗಿ ಕ್ರಮ ಘೋಷಣೆ ಬೆನ್ನಲ್ಲೇ ದಿನಸಿ ಖರೀದಿಗೆ ಮುಗಿಬಿದ್ದ ಜನ

ವಲಸೆ ಕಾರ್ಮಿಕರು
ವಲಸೆ ಕಾರ್ಮಿಕರು

ಬೆಂಗಳೂರು: ಸರ್ಕಾರದ ಬಿಗಿ ಕ್ರಮ ಘೋಷಣೆ ಹಿನ್ನಲೆಯಲ್ಲಿ ರಾಜಧಾನಿ ತೊರೆಯುವವರ ಸಂಖ್ಯೆ ಹೆಚ್ಚಳವಾಗಿದ್ದು, ತತ್ಪರಿಣಾಮ ಕೆಎಸ್‌ಆರ್‌ಟಿಸಿ ಬಸ್​ಗಳಿಗೆ ಅನಿರೀಕ್ಷಿತ ಬೇಡಿಕೆ ಸೃಷ್ಟಿಯಾಗಿದೆ.

ಸಾರಿಗೆ ಮುಷ್ಕರದ ನಂತರ ಕಳೆದೊಂದು ವಾರದಿಂದ ಕೆಎಸ್​ಆರ್‌ಟಿಸಿ ಬಸ್‌ಗಳಿಗೆ ಪ್ರಯಾಣಿಕರ ಸಂಖ್ಯೆ ಕುಸಿತವಾಗಿತ್ತು. ಇಂದೂ ಭಾರೀ ಪ್ರಯಾಣದಲ್ಲಿ ಪ್ರಯಾಣಿಕರ ಸಂಖ್ಯೆ ಕಡಿಮೆಯಾಗುತ್ತದೆ ಎಂದು ನಿರೀಕ್ಷಿಸಲಾಗಿತ್ತು. ಬೆಳಗ್ಗೆಯಿಂದಲೇ ಬೆಂಗಳೂರು ನಗರದಿಂದ ರಾಜ್ಯದ ವಿವಿಧ ಸ್ಥಳಗಳಿಗೆ ಸಂಚರಿಸುವ ಬಸ್‌ಗಳಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಿತ್ತು.

ಚಿಕ್ಕಮಗಳೂರು, ಮಂಗಳೂರು, ಶಿವಮೊಗ್ಗ, ಮಡಿಕೇರಿ ಹಾಗೂ ತಿರುಪತಿ ಮಾರ್ಗದಲ್ಲಿ ಸಂಚರಿಸುವ ಬಸ್‌ಗಳು ಶೇ 100ರಷ್ಟು ಭರ್ತಿಯಾಗಿದ್ದವು. ಮೈಸೂರು, ಶಿವಮೊಗ್ಗ, ದಾವಣಗೆರೆ ಮಾರ್ಗದಲ್ಲಿ ಸಂಚರಿಸುವ ನಿಗದಿತ ಬಸ್‌ಗಳು ಭರ್ತಿಯಾಗಿದ್ದು, ಈ ಮಾರ್ಗಗಳಲ್ಲಿ ಹೆಚ್ಚುವರಿ ಬಸ್‌ಗಳ ಕಾರ್ಯಾಚರಣೆಗೆ ನಿಯೋಜಿಸಲಾಗಿದೆ.  

ಬಿಗಿ ಕ್ರಮ ಘೋಷಣೆ ಬೆನ್ನಲ್ಲೇ ದಿನಸಿ ಖರೀದಿಗೆ ಮುಗಿಬಿದ್ದ ಜನ

ಬೆಳಗಾವಿ: ಸಿಎಂ ಬಿಎಸ್​ ಯಡಿಯೂರಪ್ಪ ನಾಳೆಯಿಂದ 14 ದಿನ ಬಿಗಿ ಕ್ರಮಗಳ ಆದೇಶ ಘೋಷಿಸುತ್ತಿದ್ದಂತೆ ‌ಬೆಳಗಾವಿ ಜಿಲ್ಲೆಯ ಜನರು ದಿನಸಿ ಖರೀದಿಗೆ ಮುಗಿಬಿದ್ದರು.

ಸಂಜೆ ವೇಳೆಗೆ ಮಾರುಕಟ್ಟೆಗಳು ಜನದಟ್ಟಣೆಯಿಂದ ಕೂಡಿತ್ತು. ನೆಹರು ನಗರದ ಚಿಲ್ಲರೆ ಮಳಿಗೆ ಮಾಲ್​ ಮುಂದೆ ದಿನಸಿ ವಸ್ತುಗಳ ಕೊಳ್ಳಲು ಜನರು ಸರದಿ ಸಾಲಿನಲ್ಲಿ ನಿಂತಿದ್ದು ಸಾಮಾನ್ಯವಾಗಿತ್ತು. ಜನರನ್ನು ನಿಯಂತ್ರಿಸಲು ಮಾಲ್​ ಸಿಬ್ಬಂದಿ ಹೈರಾಣಾದರು. ಸಿಎಂ ಅವರ ಬಿಗಿ ಕ್ರಮದ ಘೋಷಣೆಯಿಂದ ಕಿರಾಣಿ ಅಂಗಡಿಗಳಲ್ಲಿ ದಿನಸಿ ವಸ್ತುಗಳ ದರ ದುಪ್ಪಟ್ಟಾಗುವ ಆತಂಕದಿಂದ ಜನರು ಖರೀದಿಗೆ ಮುಗಿಬಿದ್ದರು.

ಖಡೇಬಜಾರ್, ಗಣಪತಿ ಗಲ್ಲಿ, ಸಮಾದೇವಿ ಗಲ್ಲಿಯಲ್ಲಿ ಜನರ ಓಡಾಟ ಹೆಚ್ಚಾಗಿತ್ತು. ವಸ್ತುಗಳ ಖರೀದಿಗೆ ಜನರು ಮಾರುಕಟ್ಟೆಗೆ ದೌಡಾಯಿಸಿದ್ದರು. ಕೆಲವರು ಮಾಸ್ಕ್ ಧರಿಸಿದ್ದರೂ ಸಾಮಾಜಿಕ ಅಂತರ ಮರೆತು ಓಡಾಡುತ್ತಿದ್ದರು.

ಸರ್ಕಾರಿ ಕಚೇರಿಗಳ ಕಾರ್ಯಸ್ಥಗಿತ; ಕಡತ ವಿಲೇವಾರಿಗೆ ತೊಡಕು

ಬೆಂಗಳೂರು: ಕೋವಿಡ್ ಎರಡನೇ ಅಲೆ ಮೊದಲಿಗಿಂತಲೂ ವೇಗವಾಗಿ ರಾಜ್ಯಾದ್ಯಂತ ಹಬ್ಬುತ್ತಿದ್ದು, ಬಹುತೇಕ ಆಡಳಿತ ಯಂತ್ರ ಸೋಂಕು ನಿಯಂತ್ರಣ ಹೇರುವ ಕಾರ್ಯದಲ್ಲಿ ಮಗ್ನವಾಗಿದೆ. ಮುಂಜಾಗ್ರತಾ ಕ್ರಮವಾಗಿ ಸರ್ಕಾರಿ ಕಚೇರಿಗಳಲ್ಲಿ ಶೇ 50ರಷ್ಟು ಸಿಬ್ಬಂದಿಗೆ ಅವಕಾಶವಿದೆ. ಈಗಾಗಲೇ ಕುಂಟುತ್ತಾ ಸಾಗುತ್ತಿದ್ದ ಕಡತ ವಿಲೇವಾರಿಗೆ ಅಕ್ಷರಶಃ ಗ್ರಹಣ ಹಿಡಿಯಲಿದೆ.

17:10 April 26

ಲಾಕ್​ಡೌನ್ ಪದ ಬಳಕೆಗೆ ಯಡಿಯೂರಪ್ಪ ಮೀನಾಮೇಷ: ಕಾಂಗ್ರೆಸ್ ಟೀಕೆ

ತವರಿನತ್ತ ವಲಸೆ ಕಾರ್ಮಿಕರು
ತವರಿನತ್ತ ವಲಸೆ ಕಾರ್ಮಿಕರು

ಮಂಗಳೂರು: ರಾಜ್ಯ ಸರ್ಕಾರ ನಾಳೆ ರಾತ್ರಿಯಿಂದ 14 ಕಠಿಣ ಕ್ರಮಗಳು ಜಾರಿ ಮಾಡಿದ್ದರಿಂದ, ನಗರದಿಂದ ವಲಸೆ ಕಾರ್ಮಿಕರು ತಮ್ಮ ಊರಿಗೆ ಪ್ರಯಾಣ ಬೆಳೆಸಲು ಆರಂಭಿಸಿದ್ದಾರೆ‌. ಕೆಎಸ್ಆರ್​ಟಿಸಿ ಬಸ್ ನಿಲ್ದಾಣ ಜನರಿಂದ ತುಂಬಿದೆ.

ವಿವಿಧ ಜಿಲ್ಲೆಗಳಿಂದ ಆಗಮಿಸಿರುವ ವಲಸಿಗ ಕಾರ್ಮಿಕರು ಮಂಗಳೂರು ನಗರದಲ್ಲಿ ಬದುಕು ಕಟ್ಟಿಕೊಂಡಿದ್ದರು‌. ಆದರೆ ಇದೀಗ ರಾಜ್ಯ ಸರ್ಕಾರದ ದಿಢೀರ್​ 14 ದಿನಗಳ ಬಿಗಿ ಕ್ರಮದ ಘೋಷಣೆ ಮಾಡಿದ್ದು, ಎಲ್ಲರೂ ಸಾಮಾನು ಸರಂಜಾಮುಗಳೊಂದಿಗೆ ತವರಿನತ್ತ ಪ್ರಯಾಣ ಬೆಳೆಸುತ್ತಿದ್ದಾರೆ. ನಗರದ ಕೆಎಸ್ಆರ್​ಟಿಸಿ ಬಸ್ ನಿಲ್ದಾಣ ವಲಸಿಗ ಕಾರ್ಮಿಕರಿಂದ ತುಂಬಿ ತುಳುಕುತ್ತಿದ್ದು, ಕಠಿಣ ಕ್ರಮಗಳ ಪರಿಣಾಮ ಕೆಲಸಗಳು ಇಲ್ಲದಿರುವುದರಿಂದ ಎಲ್ಲರೂ ತಮ್ಮ ಊರುಗಳತ್ತ ಮುಖ ಮಾಡಿದ್ದಾರೆ.

ರಾಯಚೂರು, ಕುಷ್ಟಗಿ, ಗದಗ, ಬಾದಾಮಿ, ಬಿಜಾಪುರ ಮುಂತಾದ ಕಡೆಗಳಿಗೆ ಹೊರಟಿರುವ ವಲಸಿಗ ಕಾರ್ಮಿಕರು ಕೆಎಸ್ಆರ್ ಟಿಸಿ ಬಸ್ ಮೂಲಕ ತಮ್ಮ ಊರುಗಳನ್ನು ತಲುಪಲಿದ್ದಾರೆ.

ಲಾಕ್​ಡೌನ್ ಪದ ಬಳಕೆಗೆ ಯಡಿಯೂರಪ್ಪ ಮೀನಾಮೇಷ: ಕಾಂಗ್ರೆಸ್ ಟೀಕೆ

ಬೆಂಗಳೂರು: ನಾಳೆಯಿಂದ ಕಠಿಣ ನಿಯಮ ಜಾರಿ ಎಂದು ಹೇಳುವ ಮೂಲಕ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಲಾಕ್​ಡೌನ್ ಪದ ಬಳಕೆಗೆ ಮೀನಾಮೇಷ ಎಣಿಸಿದ್ದಾರೆ ಎಂದು ವಿಧಾನಪರಿಷತ್ ಪ್ರತಿಪಕ್ಷ ನಾಯಕ ಎಸ್ಆರ್ ಪಾಟೀಲ್ ಆರೋಪಿಸಿದ್ದಾರೆ.

ಟ್ವೀಟ್ ಮಾಡಿದ ಅವರು, ನಾಳೆಯಿಂದ 14 ದಿನ ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಲಾಕ್​ಡೌನ್ ಜಾರಿ ಮಾಡಿದೆ. ಆದರೆ, ಯಡಿಯೂರಪ್ಪ ಅವರು ನಾಳೆಯಿಂದ ಕಠಿಣ ನಿಯಮ ಜಾರಿ ಎಂದು ಹೇಳಿದ್ದಾರೆ. ಈಗಾಗಲೇ ರಾಜ್ಯದಲ್ಲಿ ಅಘೋಷಿತ ಲಾಕ್​ಡೌನ್ ಇದೆ. ಇನ್ನು ನಾಳೆಯಿಂದ ಕಠಿಣ ನಿಯಮ ಎನ್ನುತ್ತಿದ್ದಾರೆ. ಲಾಕ್​ಡೌನ್ ಎಂದು ಹೇಳಲು ಮೀನಾಮೇಷ ಯಾಕೆ? ಅಧಿಕೃತವಾಗಿ ಲಾಕ್​ಡೌನ್ ಎಂದರೆ ಜನಸಾಮಾನ್ಯರಿಗೆ ನೆರವು ನೀಡಬೇಕಾಗುತ್ತದೆ ಎಂಬ ಕಾರಣಕ್ಕೆ ಲಾಕ್​ಡೌನ್ ಬದಲಿಗೆ ಕೊರೊನಾ ಕರ್ಫ್ಯೂ, ಕೋವಿಡ್ ಕರ್ಫ್ಯೂ ಎಂದು ಸರ್ಕಾರ ಹೇಳುತ್ತಿದೆ. ಸರ್ಕಾರ ಹಿಂಬಾಗಿಲ ಮೂಲಕ ಕರ್ಫ್ಯೂ ಹೆಸರಲ್ಲಿ ಲಾಕ್​ಡೌನ್ ಹೇರುತ್ತಿದೆ. ಇಡೀ ರಾಜ್ಯ ಬಂದ್ ಮಾಡುವ ನಿರ್ಧಾರಕ್ಕೆ ಲಾಕ್​ಡೌನ್ ಎಂದು ಹೇಳಲು ಸಮಸ್ಯೆ ಏನು? ಎಂದಿದ್ದಾರೆ.

ಸೋಂಕಿಗೆ ಪೊಲೀಸ್ ಹೆಡ್ ಕಾನ್ಸ್‌ಟೇಬಲ್ ಬಲಿ

ವಿಜಯಪುರ: ಕೊರೊನಾ ಸೋಂಕಿಗೆ ಪೊಲೀಸ್ ಹೆಡ್ ಕಾನ್ಸ್‌ಟೇಬಲ್ ಎಸ್ ಎನ್ ಢವಳಗಿ ಎಂಬುವವರು ಮೃತಪಟ್ಟಿದ್ದಾರೆ.

ಬಸವನ ಬಾಗೇವಾಡಿ ಡಿಎಸ್​ಪಿ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ಕಳೆದ ಎರೆಡು ವಾರಗಳಿಂದ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಉಸಿರಾಟ ತೊಂದರೆಯಿಂದ ಬಳಲುತ್ತಿದ್ದ ಢವಳಗಿ, ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ.

ಗ್ರಾಮೀಣ ಭಾಗದಲ್ಲೇ ಕೊರೊನಾ ಅಬ್ಬರ

ಚಾಮರಾಜನಗರ: ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಕೊರೊನಾ ಸೋಂಕಿನ ಪ್ರಕರಣಗಳು ಹೆಚ್ಚಾಗುತ್ತಿದ್ದು, ಗ್ರಾಮೀಣ ಭಾಗದ ಜನರು ಎಚ್ಚರಿಕೆಯಿಂದ ಇರಬೇಕು ಎಂದು ಜಿಲ್ಲಾಧಿಕಾರಿ ಡಾ.ಎಂ. ಆರ್.ರವಿ ಮನವಿ‌ ಮಾಡಿದರು.

ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿವೆ. ಕಳೆದ 25 ದಿನದ ಅವಧಿಯಲ್ಲಿ 2255 ಪ್ರಕರಣ ದಾಖಲಾಗಿದ್ದು, ಕಳೆದ ವರ್ಷ ಇಷ್ಟು ದೊಡ್ಡ ಪ್ರಮಾಣದಲ್ಲಿ ವೇಗವಾಗಿ ಪ್ರಕರಣಗಳು ವರದಿಯಾಗಿರಲಿಲ್ಲ. ಕಳೆದ 5 ದಿನಗಳಿಂದ ಪ್ರತಿನಿತ್ಯ 200ಕ್ಕೂ ಹೆಚ್ಚು ಪ್ರಕರಣ ದಾಖಲಾಗುತ್ತಿದೆ. ದಾಖಲಾಗಿರುವ 2255 ಪ್ರಕರಣಗಳಲ್ಲಿ 1697 ಪ್ರಕರಣಗಳು ಗ್ರಾಮೀಣ ಭಾಗದಲ್ಲಿ ಕಂಡುಬಂದಿದೆ. ಶಿವರಾತ್ರಿ ನಂತರ ಗ್ರಾಮೀಣ ಭಾಗದಲ್ಲಿ ಜರುಗಿದ ಹಬ್ಬ ಹರಿದಿನಗಳು, ಜಾತ್ರೆಗಳಿಂದ ಹೆಚ್ಚಾಗಲು ಕಾರಣವಿರಬಹುದು. ಆದ್ದರಿಂದ ಗ್ರಾಮೀಣ ಭಾಗದ ಜನರು ಎಚ್ಚರಿಕೆಯಿಂದಿದ್ದು ಕೊರೊನಾದಿಂದ ದೂರ ಇರುವಂತೆ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

16:33 April 26

ವಿದೇಶಗಳಿಂದ ಆಮ್ಲಜನಕ ಟ್ಯಾಂಕರ್ ಖರೀದಿಗೆ ಕೇಂದ್ರದ ನಿರ್ಧಾರ!

ಪ್ಯಾಟ್ ಕಮ್ಮಿನ್ಸ್​ ಟ್ವೀಟ್
ಪ್ಯಾಟ್ ಕಮ್ಮಿನ್ಸ್​ ಟ್ವೀಟ್

ನವದೆಹಲಿ: ಭಾರತವು ಆಮ್ಲಜನಕ ಟ್ಯಾಂಕರ್‌ಗಳನ್ನು ವಿದೇಶದಿಂದ ಖರೀದಿ ಅಥವಾ ನೇಮಕ ಆಧಾರದ ಮೇಲೆ ಪಡೆದುಕೊಳ್ಳಲಿದೆ. ಆಮ್ಲಜನಕ ಟ್ಯಾಂಕರ್‌ಗಳ ಸಾಗಣೆ ಒಂದು ದೊಡ್ಡ ಸವಾಲಾಗಿದೆ. ನೈಜ-ಸಮಯದ ಟ್ರ್ಯಾಕಿಂಗ್ ಅನ್ನು ಬಳಸಿಕೊಂಡು, ನಾವು ಆಮ್ಲಜನಕ ಟ್ಯಾಂಕರ್‌ಗಳ ಚಲನೆ ಮೇಲ್ವಿಚಾರಣೆ ಮಾಡುತ್ತಿದ್ದೇವೆ ಎಂದು ಗೃಹ ವ್ಯವಹಾರಗಳ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಬಿ.ಆರ್. ಶರ್ಮಾ ತಿಳಿಸಿದ್ದಾರೆ.

  • ಆಸ್ಟ್ರೇಲಿಯಾದ ಕ್ರಿಕೆಟಿಗ ಪ್ಯಾಟ್ ಕಮ್ಮಿನ್ಸ್ ಪಿಎಂ ಕೇರ್ಸ್ ಫಂಡ್‌ಗೆ ನಿರ್ದಿಷ್ಟವಾಗಿ ಭಾರತದ ಆಸ್ಪತ್ರೆಗಳಿಗೆ ಆಮ್ಲಜನಕ ಸಾಮಗ್ರಿಗಳನ್ನು ಖರೀದಿಸಲು 50,000 ಡಾಲರ್​ ದೇಣಿಗೆ ನೀಡಿದ್ದಾರೆ.
  • ದೇಶಾದ್ಯಂತ ಇಲ್ಲಿಯವರೆಗೆ 14.19 ಕೋಟಿ ಲಸಿಕೆ ಪ್ರಮಾಣ ನೀಡಲಾಗಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ. ಮೇ 1ರಿಂದ 18 ವರ್ಷ ಮೇಲ್ಪಟ್ಟ ಎಲ್ಲಾ ವಯಸ್ಕರಿಗೆ ಲಸಿಕೆ ವಿತರಣೆ ಮಾಡಲಾಗುತ್ತಿದೆ. ಈಗಾಗಲೇ ನೋಂದಣಿ ಪ್ರಕ್ರಿಯೆ ಸಹ ಆರಂಭವಾಗಿದೆ.
  • ಕೋವಿಡ್ -19 ಪ್ರಕರಣಗಳಲ್ಲಿ 'ಆತಂಕಕಾರಿ ಉಲ್ಬಣ'ದ ದೃಷ್ಟಿಯಿಂದ ಜಮ್ಮು ಮತ್ತು ಕಾಶ್ಮೀರ ಹೈಕೋರ್ಟ್‌ನಲ್ಲಿ ಮಾತ್ರವಲ್ಲದೆ ಜಿಲ್ಲೆ, ಅಧೀನ ನ್ಯಾಯಾಲಯಗಳು ಮತ್ತು ನ್ಯಾಯಮಂಡಳಿಗಳಲ್ಲಿ ಮೇ 15ರವರೆಗೆ ವರ್ಚುವಲ್ ಮೋಡ್ ಮೂಲಕ ಪ್ರಕರಣಗಳ ದಾಖಲು ಮತ್ತು ವಿಚಾರಣೆ ನಡೆಸುವುದಾಗಿ ಜಮ್ಮು ಮತ್ತು ಕಾಶ್ಮೀರ ಹೈಕೋರ್ಟ್ ತಿಳಿಸಿದೆ.
  • ಮಹಾರಾಷ್ಟ್ರ, ಉತ್ತರ ಪ್ರದೇಶ, ಕರ್ನಾಟಕ, ಕೇರಳ, ರಾಜಸ್ಥಾನ, ಛತ್ತೀಸ್‌ಗಢ, ಗುಜರಾತ್ ಮತ್ತು ತಮಿಳುನಾಡು ರಾಜ್ಯಗಳಲ್ಲಿ 1 ಲಕ್ಷಕ್ಕೂ ಅಧಿಕ ಕೋವಿಡ್ ಕೇಸ್​ಗಳು ಸಕ್ರಿಯವಾಗಿವೆ ಎಂದು ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.
  • ಚೀನಾದ ಸರ್ಕಾರಿ ಸಿಚುವಾನ್ ಏರ್​ಲೈನ್ಸ್ ಭಾರತಕ್ಕೆ ತನ್ನ ಎಲ್ಲಾ ಸರಕು ವಿಮಾನಯಾನಗಳನ್ನು 15 ದಿನಗಳವರೆಗೆ ಸ್ಥಗಿತಗೊಳಿಸಿದೆ. ಬೀಜಿಂಗ್ ಬೆಂಬಲ ಮತ್ತು ಸಹಾಯ ನೀಡುತ್ತಿದ್ದರೂ ಚೀನಾದಿಂದ ಹೆಚ್ಚು ಅಗತ್ಯವಿರುವ ಆಮ್ಲಜನಕ ಮತ್ತು ಇತರ ವೈದ್ಯಕೀಯ ಸರಬರಾಜುಗಳನ್ನು ಚೀನಾದಿಂದ ಖರೀದಿಸುವ ಖಾಸಗಿ ವ್ಯಾಪಾರಿಗಳ ಪ್ರಯತ್ನಗಳಿಗೆ ಈ ನಿರ್ಧಾರ ದೊಡ್ಡ ಅಡ್ಡಿ ಉಂಟುಮಾಡಿದೆ.

14:04 April 26

ನಾಳೆ ಸಂಜೆಯಿಂದ 14 ದಿನಗಳ ಕಾಲ ಕರ್ನಾಟಕದಲ್ಲಿ ಬಿಗಿ ಕ್ರಮ

ನಾಳೆ ಸಂಜೆಯಿಂದ 14 ದಿನಗಳ ಕಾಲ ಕರ್ನಾಟಕದಲ್ಲಿ ಬಿಗಿ ಕ್ರಮ. ಸಚಿವ ಸಂಪುಟ ಸಭೆಯಲ್ಲಿ ರಾಜ್ಯ ಸರ್ಕಾರ ಈ ನಿರ್ಧಾರ ಕೈಗೊಂಡಿದೆ. 

13:03 April 26

ಯುಎಸ್​ನಿಂದ ಆಮ್ಲಜನಕ ಹೊತ್ತು ದೆಹಲಿಗೆ ಆಗಮಿಸಿದ ವಿಮಾನ

ಯುಎಸ್​ನಿಂದ ಆಮ್ಲಜನಕ ಹೊತ್ತು ದೆಹಲಿಗೆ ಆಗಮಿಸಿದ ವಿಮಾನ
ಯುಎಸ್​ನಿಂದ ಆಮ್ಲಜನಕ ಹೊತ್ತು ದೆಹಲಿಗೆ ಆಗಮಿಸಿದ ವಿಮಾನ

ನವದೆಹಲಿ: 318 ಆಮ್ಲಜನಕ ಸಾಂದ್ರಕಗಳನ್ನು ಹೊತ್ತ ಏರ್ ಇಂಡಿಯಾದ ಎ 102 ವಿಮಾನ ಯುನೈಟೆಡ್ ಸ್ಟೇಟ್ಸ್‌ನಿಂದ ದೆಹಲಿ ವಿಮಾನ ನಿಲ್ದಾಣಕ್ಕೆ ಆಗಮಿಸಿದೆ. ಏರ್ ಇಂಡಿಯಾ ವಿಮಾನವು ಏಪ್ರಿಲ್ 25 ರಂದು ನ್ಯೂಯಾರ್ಕ್​ನ ಜೆಎಫ್‌ಕೆ ವಿಮಾನ ನಿಲ್ದಾಣದಲ್ಲಿ ಆಮ್ಲಜನಕ ಲೋಡ್ ಮಾಡಿಕೊಂಡಿದ್ದು, ಇಂದು ದೆಹಲಿಯನ್ನು ತಲುಪಿದೆ.

12:58 April 26

ಕೊರೊನಾ ಕರ್ಫ್ಯೂ ಹಿನ್ನೆಲೆ ಮೇ 3 ರವರೆಗೆ ಜೆಎನ್‌ಯು ಕೇಂದ್ರ ಗ್ರಂಥಾಲಯ ಬಂದ್​

ಜೆಎನ್‌ಯು ಕೇಂದ್ರ ಗ್ರಂಥಾಲಯ ಬಂದ್​
ಜೆಎನ್‌ಯು ಕೇಂದ್ರ ಗ್ರಂಥಾಲಯ ಬಂದ್​

ಕೊರೊನಾ ಸೋಂಕು ವೇಗವಾಗಿ ಹೆಚ್ಚುತ್ತಿರುವ ಹಿನ್ನೆಲೆ ದೆಹಲಿ ಸರ್ಕಾರವು ಮೇ 3 ರವರೆಗೆ ಲಾಖ್​ಡೌನ್​ ವಿಸ್ತರಿಸಿದೆ. ಸರ್ಕಾರದ ಈ ತೀರ್ಮಾನದ ನಂತರ, ಜವಾಹರಲಾಲ್ ನೆಹರು ವಿಶ್ವವಿದ್ಯಾಲಯ ಆಡಳಿತವು ಏಪ್ರಿಲ್ 26 ಸೋಮವಾರ ಬೆಳಿಗ್ಗೆ 10 ರಿಂದ ಸಂಜೆ 5 ರವರೆಗೆ ವಿಶ್ವವಿದ್ಯಾಲಯ ಆವರಣದಲ್ಲಿ ಕರ್ಫ್ಯೂ ವಿಧಿಸಿದೆ. ಆದಾಗ್ಯೂ ಎಲ್ಲಾ ಅಗತ್ಯ ಸೌಲಭ್ಯಗಳು ಮುಂದುವರಿಯಲಿದ್ದು, ಮುಂದಿನ ಆದೇಶದವರೆಗೆ ಡಾ.ಬಿ.ಆರ್.ಅಂಬೇಡ್ಕರ್ ಗ್ರಂಥಾಲಯವನ್ನು ಮುಚ್ಚಲಾಗುವುದು ಎಂದು ತಿಳಿಸಿದೆ.  

12:51 April 26

ಚಾಮರಾಜನಗರದಲ್ಲಿ ಐಸಿಯು ಫುಲ್​

ಚಾಮರಾಜನಗರ: ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೋವಿಡ್‌ ಸೋಂಕಿತರ ಪ್ರಮಾಣ ಹೆಚ್ಚಳ ಆಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯ 67 ಬೆಡ್‌ಗಳ ಸಾಮರ್ಥ್ಯದ ತೀವ್ರ ನಿಗಾ ಘಟಕಗಳು (ಐಸಿಯು) ಭಾನುವಾರ ಸಂಪೂರ್ಣ ಭರ್ತಿಯಾಗಿವೆ.

ಜಿಲ್ಲಾಸ್ಪತ್ರೆಯಲ್ಲಿ 48 ಬೆಡ್‌, ಹನೂರು ತಾಲ್ಲೂಕಿನ ಕಾಮಗೆರೆ ಹೋಲಿಕ್ರಾಸ್‌ ಆಸ್ಪತ್ರೆಯಲ್ಲಿ 4, ಸಂತೇಮರಹಳ್ಳಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ 10, ಕೊಳ್ಳೇಗಾಲ ತಾಲ್ಲೂಕು ಆಸ್ಪತ್ರೆಯಲ್ಲಿ 5 ಹಾಗೂ ಗುಂಡ್ಲುಪೇಟೆ ತಾಲ್ಲೂಕು ಆಸ್ಪತ್ರೆಯಲ್ಲಿ 4 ಬೆಡ್‌ ಸೇರಿ ಜಿಲ್ಲೆಯಲ್ಲಿ 67 ಐಸಿಯು ಬೆಡ್‌ಗಳಿವೆ. ಇವು ಭಾನುವಾರ ಸಂಪೂರ್ಣ ಭರ್ತಿಯಾಗಿವೆ.

ಜಿಲ್ಲೆಯ ತೀವ್ರ ನಿಗಾ ಘಟಕಗಳಲ್ಲಿ 12 ಜನ ವೆಂಟಿಲೇಟರ್‌ ಸಹಿತ ಬೆಡ್‌ನಲ್ಲಿದ್ದರೆ, ಉಳಿದ 55 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಡಿಮೆ ತೀವ್ರತೆಯ ಸೋಂಕಿತರನ್ನು ಜಿಲ್ಲೆಯ ಇತರೆಡೆ ಇರುವ ಐಸಿಯು ಘಟಕಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

12:46 April 26

ಹುಣಸೂರಿನಲ್ಲಿ ಆಕ್ಸಿಜನ್ ಸಿಗದೆ ಇಬ್ಬರು ಕೊರೊನಾ ಸೋಂಕಿತರು ಸಾವು

ಮೈಸೂರು: ಹುಣಸೂರಿನಲ್ಲಿ ಕೋವಿಡ್ ಸೋಂಕಿನಿಂದ ಬಳಲುತ್ತಿದ್ದ ಇಬ್ಬರು ಆಕ್ಸಿಜನ್ ಸಿಗದೆ ಮೃತಪಟ್ಟಿದ್ದಾರೆ.

ಹುಣಸೂರು ತಾಲ್ಲೂಕಿನ ಹೆಬ್ಬನಕುಪ್ಪೆ ಗ್ರಾಮದ ಸಣ್ಣತಮ್ಮೇಗೌಡ (82) ಹಾಗೂ ಮಾರುತಿ ಬಡಾವಣೆ ನಿವಾಸಿ ವತ್ಸಲ(54) ಕೋವಿಡ್​ನಿಂದ ಸಾವನ್ನಪ್ಪಿದ್ದಾರೆ‌. ಇವರಿಬ್ಬರು ಕೋವಿಡ್ ಸೋಂಕಿಗೆ ತುತ್ತಾಗಿ ಹುಣಸೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.  

12:33 April 26

ಹೆಚ್ಚುತ್ತಿರುವ ಕೋವಿಡ್ -19: ಐಪಿಎಲ್​​ ಬಿಟ್ಟು ತವರಿಗೆ ಮರಳಲು ಆಸೀಸ್​ ಆಟಗಾರರ ಚಿಂತನೆ..

ಸಿಡ್ನಿ: ಭಾರತದಲ್ಲಿ ಹೆಚ್ಚುತ್ತಿರುವ ಕೋವಿಡ್ -19 ಪ್ರಕರಣಗಳ ಹಿನ್ನೆಲೆಯಲ್ಲಿ ಆಸ್ಟ್ರೇಲಿಯಾದ ಹಲವಾರು ಕ್ರಿಕೆಟಿಗರು ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ತೊರೆಯಲು ಮುಂದಾಗಿದ್ದಾರೆ. ಆಸ್ಟ್ರೇಲಿಯಾದ ವೇಗದ ಬೌಲರ್ ಆಂಡ್ರ್ಯೂ ಟೈ ಅವರು ತಮ್ಮ ವೈಯಕ್ತಿಕ ಕಾರಣಗಳಿಗಾಗಿ ರಾಜಸ್ಥಾನ್ ರಾಯಲ್ಸ್ ತಂಡ ತೊರೆದು ತವರಿಗೆ ಮರಳಿದ್ದಾರೆ. ಇತ್ತ ಐದು ದಿನದ ಹಿಂದೆ ರಾಜಸ್ತಾನ ರಾಯಲ್ಸ್​ ತಂಡದ ಇನ್ನೊಬ್ಬ ಆಟಗಾರ ಲಿಯಾಮ್​ ಲಿವಿಂಗ್ಸ್ಟೋನ್ ಕೂಡ ತಂಡ ತೊರೆದಿದ್ದಾರೆ.  ಐಪಿಎಲ್‌ನಲ್ಲಿ 17 ಆಸೀಸ್‌ ಆಟಗಾರರು ಭಾಗಿಯಾಗಿದ್ದಾರೆ. ಇದರಲ್ಲಿ ಈಗಾಗಲೇ ಆಂಡ್ರ್ಯೂ ಟೈ ತವರಿಗೆ ಮರಳಿದ್ದು, ಇನ್ನೂ 16 ಆಟಗಾರರು ಐಪಿಎಲ್​ನಲ್ಲಿ ಭಾಗಿಯಾಗಿದ್ದಾರೆ. 

12:30 April 26

ಆಸ್ಪತ್ರೆಯಲ್ಲೇ ಯದ್ವಾತದ್ವಾ ಹೊಡೆದಾಡಿಕೊಂಡ ಎರಡು ಗುಂಪು

ಆಸ್ಪತ್ರೆಯಲ್ಲೇ ಯದ್ವಾತದ್ವಾ ಹೊಡೆದಾಡಿಕೊಂಡ ಎರಡು ಗುಂಪು

ಇಂದೋರ್​ : ಇಂದೋರ್ ನಗರದ ಚಿರಾಯು ಆಸ್ಪತ್ರೆಯಲ್ಲಿ ನಡೆದ ಹೊಡೆದಾಟದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಮೂಡಿಸುತ್ತಿದೆ. ಈ ಜಗಳಕ್ಕೆ ಕಾರಣ ಏನೆಂಬುದು ಇನ್ನೂ ಸ್ಪಷ್ಟವಾಗಿಲ್ಲ. ಆದರೆ, ವ್ಯಕ್ತಿಯೊಬ್ಬ ಮಹಿಳೆಯರೆಂದು ನೋಡದೇ ಮನಸೋಯಿಚ್ಛೆ ಥಳಿಸಿದ್ದಾನೆ. ಈ ಘಟನೆ ಇಂದೋರ್‌ನ ಚಂದನ್ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.  

12:28 April 26

ಭಾರತಕ್ಕೆ 400 ಆಮ್ಲಜನಕ ಸಾಂದ್ರಕ ಕಳುಹಿಸುತ್ತಿರುವ ಅನಿವಾಸಿ ಭಾರತೀಯರು

ಹೋಸ್ಟನ್ (ಅಮೆರಿಕ): ಕೋವಿಡ್​ ಆರ್ಭಟದಿಂದಾಗಿ ಮೆಡಿಕಲ್​ ಆಕ್ಸಿಜನ್​ ಸೇರಿದಂತೆ ವ್ಯಕ್ತಿಯ ಜೀವ ಉಳಿಸಲು ಬೇಕಾದ ಅಗತ್ಯ ವಸ್ತುಗಳ ಅಭಾವ ಎದುರಿಸುತ್ತಿರುವ ಭಾರತದ ಸಹಾಯಕ್ಕೆ ಭಾರತೀಯ-ಅಮೆರಿಕನ್ನರು ಮುಂದೆ ಬಂದಿದ್ದಾರೆ.

ಅಮೆರಿಕದಲ್ಲಿರುವ ಅನಿವಾಸಿ ಭಾರತೀಯರ 'ಸೇವಾ ಇಂಟರ್ನ್ಯಾಷನಲ್ ಯುಎಸ್ಎ' ಲಾಭರಹಿತ ಸಂಸ್ಥೆಯು ಇನ್ನೆರಡು ದಿನಗಳಲ್ಲಿ ತುರ್ತು ವೈದ್ಯಕೀಯ ಸಾಧನಗಳು ಹಾಗೂ 400 ಆಮ್ಲಜನಕ ಸಾಂದ್ರಕಗಳನ್ನು ರವಾನಿಸುತ್ತಿದೆ. ಅಲ್ಲದೇ ಐದು ಮಿಲಿಯನ್ ಡಾಲರ್​ ಹಣವನ್ನು ಸಂಗ್ರಹಿಸುವ ಗುರಿ ಹೊಂದಿದ್ದು, ಈಗಾಗಲೇ 1.5 ಮಿಲಿಯನ್ ಡಾಲರ್​ಗಳನ್ನು ಸಂಗ್ರಹಿಸಿದೆ.

ಭಾರತದಲ್ಲಿ ಹೆಚ್ಚುತ್ತಿರುವ ಕೊರೊನಾ ಪ್ರಕರಣಗಳಿಂದ ಉಂಟಾಗುವ ಆಮ್ಲಜನಕದ ಕೊರತೆ ನೀಗಿಸಲು ಸೇವಾ ಸಂಸ್ಥೆಯು ‘ಹೆಲ್ಪ್ ಇಂಡಿಯಾ ಡಿಫೀಟ್ ಕೋವಿಡ್ -19’ (ಕೊರೊನಾ ವಿರುದ್ಧ ಹೋರಾಡಲು ಭಾರತಕ್ಕೆ ಸಹಕರಿಸಿ) ಎಂಬ ಅಭಿಯಾನವನ್ನು ಪ್ರಾರಂಭಿಸಿದ್ದು, ವಿಶ್ವದಾದ್ಯಂತ ಅನೇಕ ಪೂರೈಕೆದಾರರಿಂದ ಆಕ್ಸಿಜನ್ ಸಂಗ್ರಹಿಸುತ್ತಿದೆ.

ಸೇವಾ ಸಂಸ್ಥೆಯು ಸುಮಾರು 10,000 ಕುಟುಂಬಗಳು, 1,000ಕ್ಕೂ ಹೆಚ್ಚು ಅನಾಥಾಶ್ರಮ-ವೃದ್ಧಾಶ್ರಮಗಳಿಗೆ ಆಹಾರ ಮತ್ತು ಔಷಧಿಗಳನ್ನು ಒದಗಿಸುತ್ತಿದೆ ಎಂದು ಹೋಸ್ಟನ್​ನಲ್ಲಿರುವ ಸಂಸ್ಥೆಯ ವಕ್ತಾರ ಗೀತೇಶ್ ದೇಸಾಯಿ ತಿಳಿಸಿದ್ದಾರೆ.

12:26 April 26

ಮಾಸ್ಕ್ ಧರಿಸದೇ ಮದುವೆ ಕಾರ್ಯಕ್ರಮದಲ್ಲಿ ಭಾಗಿಯಾದ ಸ್ಪೀಕರ್ ಕಾಗೇರಿ

ಮಾಸ್ಕ್ ಧರಿಸದೇ ಮದುವೆ ಕಾರ್ಯಕ್ರಮದಲ್ಲಿ ಭಾಗಿಯಾದ ಸ್ಪೀಕರ್ ಕಾಗೇರಿ
ಮಾಸ್ಕ್ ಧರಿಸದೇ ಮದುವೆ ಕಾರ್ಯಕ್ರಮದಲ್ಲಿ ಭಾಗಿಯಾದ ಸ್ಪೀಕರ್ ಕಾಗೇರಿ

ಕಾರವಾರ: ಬೆಂಗಳೂರಿನಿಂದ ಆಗಮಿಸಿದ್ದ ವಿಧಾನಸಭೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಸಿದ್ದಾಪುರದಲ್ಲಿ ನಡೆದ ಮದುವೆ ಕಾರ್ಯಕ್ರಮದಲ್ಲಿ ಮಾಸ್ಕ್ ಧರಿಸದೇ ಭಾಗಿಯಾಗಿರುವ ಫೋಟೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ವ್ಯಾಪಕ ಟೀಕೆ ವ್ಯಕ್ತವಾಗಿದೆ.

ಶಿರಸಿ-ಸಿದ್ದಾಪುರ ಕ್ಷೇತ್ರದ ಶಾಸಕರೂ ಆಗಿರುವ ಕಾಗೇರಿ, ಭಾನುವಾರ ಸಿದ್ದಾಪುರದಲ್ಲಿ ನಿಗದಿಯಾಗಿದ್ದ ಆಪ್ತರ ಮದುವೆ ಕಾರ್ಯಕ್ರಮವೊಂದಕ್ಕೆ ಆಗಮಿಸಿದ್ದರು. ಕೊರೊನಾ ಹಾಟ್‌ಸ್ಪಾಟ್ ಆಗಿರುವ ಬೆಂಗಳೂರಿನಿಂದ ಆಗಮಿಸಿದ್ದರೂ ಕೂಡ ಮದುವೆ ಸಮಾರಂಭದಲ್ಲಿ ಮಾಸ್ಕ್ ಧರಿಸದೇ ಅವರು ಪಾಲ್ಗೊಂಡಿದ್ದರು.

12:26 April 26

ಕೊಪ್ಪಳದಲ್ಲಿ ಮದುಮಗಳಿಗೆ ಕೊರೊನಾ

ಕೊಪ್ಪಳ: ಮದುಮಗಳು ಹಾಗೂ ಆಕೆಯ ತಾಯಿ ಹಾಗೂ ಸಹೋದರಿಯರಿಗೆ ಕೊರೊನಾ ಪಾಸಿಟಿವ್ ಬಂದಿದ್ದು, ಮದುವೆಗೆ ಹೋದವರಿಗೆ ಇದೀಗ ಆತಂಕ ಶುರುವಾಗಿದೆ.

ತಾಲೂಕಿನ ಕಿನ್ನಾಳ ಗ್ರಾಮದ ಯುವತಿ ಮದುವೆಗೂ ಮುನ್ನ ಕೊರೊನಾ ಟೆಸ್ಟ್​ಗೆ ಗಂಟಲು ದ್ರವ ನೀಡಿ ಬಂದಿದ್ದರು. ಮದುವೆಯಾದ ಬಳಿಕ ಅಂದರೆ ಭಾನುವಾರ ಯುವತಿಗೆ ಕೊರೊನಾ ಪಾಸಿಟಿವ್ ರಿಪೋರ್ಟ್ ಬಂದಿದೆ.

ಸದ್ಯ ಸೋಂಕಿತರು ಮನೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದು ಬಂದಿದೆ. ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಕಿನ್ನಾಳ ಗ್ರಾಮದ 4ನೇ ವಾರ್ಡ್​ನಲ್ಲಿರುವ ಮದುಮಗಳ ಮನೆಯ ಸುತ್ತ ಸ್ಯಾನಿಟೈಸ್​ ಮಾಡಲಾಗಿದೆ.

12:08 April 26

18 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲರಿಗೂ ಉಚಿತ ಲಸಿಕೆ: ದೆಹಲಿ ಸಿಎಂ ಕೇಜ್ರಿವಾಲ್

ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್

ನವದೆಹಲಿ: ದೆಹಲಿ ಸರ್ಕಾರ 18 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲರಿಗೂ ಉಚಿತ ಲಸಿಕೆಗಳನ್ನು ನೀಡಲು ನಿರ್ಧರಿಸಿದೆ. ಇಂದು ನಾವು 1.34 ಕೋಟಿ ಲಸಿಕೆಗಳನ್ನು ಖರೀದಿಸಲು ಅನುಮೋದನೆ ನೀಡಿದ್ದೇವೆ. ಅದನ್ನು ಶೀಘ್ರದಲ್ಲೇ ಖರೀದಿಸಲಾಗುವುದು ಮತ್ತು ಜನರಿಗೆ ಬೇಗನೆ ನೀಡಲಾಗುತ್ತದೆ ಎಂದು ಖಚಿತಪಡಿಸಿಕೊಳ್ಳಲು ನಾವು ಪ್ರಯತ್ನಿಸುತ್ತೇವೆ ಎಂದು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.

ಲಸಿಕೆ ತಯಾರಕರಿಗೆ ಪ್ರತಿ ಡೋಸ್​ ಬೆಲೆಯನ್ನು 150 ರೂ.ಗೆ ಇಳಿಸುವಂತೆ ನಾನು ಮನವಿ ಮಾಡುತ್ತೇನೆ. ಲಾಭ ಗಳಿಸಲು ನಿಮಗೆ ಸಂಪೂರ್ಣ ಜೀವಿತಾವಧಿ ಇದೆ. ಕೊರೊನಾ ಸಾಂಕ್ರಾಮಿಕದ ಸಮಯದಲ್ಲಿ ಲಾಭ ಮಾಡುವ ಸಮಯವಲ್ಲ. ಅಗತ್ಯವಿದ್ದರೆ ಲಸಿಕೆಗಳ ಬೆಲೆಯನ್ನು ನಿಗದಿಪಡಿಸುವಂತೆ ನಾನು ಕೇಂದ್ರ ಸರ್ಕಾರಕ್ಕೆ ಮನವಿ ಮಾಡುತ್ತೇನೆ ಎಂದಿದ್ದಾರೆ.

ಮಹಾರಾಷ್ಟ್ರ, ಉತ್ತರ ಪ್ರದೇಶ, ತೆಲಂಗಾಣ, ಆಂಧ್ರ ಪ್ರದೇಶ, ಛತ್ತೀಸ್​ಗಢ ಸೇರಿದಂತೆ ಕೆಲವು ರಾಜ್ಯಗಳು ತಮ್ಮ ಜನತೆಗೆ ಫ್ರೀ ವ್ಯಾಕ್ಸಿನೇಷನ್​ ಡ್ರೈವ್​ ಘೋಷಿಸಿವೆ. 

12:07 April 26

ಕೊರೊನಾ ಪರೀಕ್ಷಾ ಕೇಂದ್ರಗಳ ನವೀಕರಣಕ್ಕೆ ದೆಹಲಿ ಸರ್ಕಾರಕ್ಕೆ ಹೈಕೋರ್ಟ್​ ಸೂಚನೆ

ದೆಹಲಿಯಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಕೊರೊನಾ ಪರೀಕ್ಷಾ ಪ್ರಯೋಗಾಲಯಗಳು ಮತ್ತು ಪರೀಕ್ಷಾ ಕೇಂದ್ರಗಳಿಗೆ ಸಂಬಂಧಿಸಿದ ಮೂಲಸೌಕರ್ಯಗಳನ್ನು ನವೀಕರಿಸಲು ದೆಹಲಿ ಹೈಕೋರ್ಟ್ ದೆಹಲಿ ಸರ್ಕಾರಕ್ಕೆ ಸೂಚಿಸಿದೆ.  

12:04 April 26

ಅಕ್ರಮವಾಗಿ ರೆಮ್‌ಡೆಸಿವಿರ್‌ ಮಾರುತ್ತಿದ್ದ ಮೂವರ ಬಂಧನ

ಅಕ್ರಮವಾಗಿ ರೆಮ್‌ಡೆಸಿವಿರ್‌ ಮಾರುತ್ತಿದ್ದ ಮೂವರ ಬಂಧನ
ಅಕ್ರಮವಾಗಿ ರೆಮ್‌ಡೆಸಿವಿರ್‌ ಮಾರುತ್ತಿದ್ದ ಮೂವರ ಬಂಧನ

ದೆಹಲಿ: ಅಕ್ರಮವಾಗಿ ರೆಮ್‌ಡೆಸಿವಿರ್‌ ಮಾರುತ್ತಿದ್ದ 3 ಜನರನ್ನು ಬಂಧಿಸಲಾಗಿದೆ. ಬಂಧಿತರಿಂದ 7 ಬಾಟಲಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಒಂದು ರೆಮ್‌ಡೆಸಿವಿರ್‌ ವಯಲ್​ನ್ನು 70,000 ರೂಗಳಿಗೆ ಮಾರಾಟ ಮಾಡುತ್ತಿದ್ದರು.  ಲಿಖಿತ್ ಗುಪ್ತಾ ಮತ್ತು ಅನುಜ್ ಜೈನ್ ಕ್ರಮವಾಗಿ ದರಿಯಗಂಜ್ ಮತ್ತು ಚಾಂದನಿ ಚೌಕ್‌ನಲ್ಲಿ ವೈದ್ಯಕೀಯ ಮಳಿಗೆಗಳನ್ನು ನಡೆಸುತ್ತಿದ್ದರು. 3 ನೇ ಆರೋಪಿ ಆಕಾಶ್ ವರ್ಮಾ ಆಭರಣ ವ್ಯಾಪಾರಿಯಾಗಿದ್ದರು. 

11:59 April 26

ಮಹಾರಾಷ್ಟ್ರದಲ್ಲಿ ಆಮ್ಲಜನಕದ ಕೊರತೆಯಿಂದ ಆರು ಜನ ಸಾವು

ಥಾಣೆ: ಮಹಾರಾಷ್ಟ್ರದ ಥಾಣೆಯ ವರ್ತಕ್ ನಗರ ಪ್ರದೇಶದಲ್ಲಿರುವ ವೇದಾಂತ ಆಸ್ಪತ್ರೆಯಲ್ಲಿ ಆಮ್ಲಜನಕದ ಕೊರತೆಯಿಂದಾಗಿ ಆರು ರೋಗಿಗಳು ಸಾವನ್ನಪ್ಪಿದ್ದಾರೆ

11:50 April 26

ಮುಸ್ಲಿಂ ಯುವಕರಿಂದ ಹಿಂದೂ ವ್ಯಕ್ತಿಯ ಅಂತ್ಯಸಂಸ್ಕಾರ

ಮುಸ್ಲಿಂ ಯುವಕರಿಂದ ಹಿಂದೂ ವ್ಯಕ್ತಿಯ ಅಂತ್ಯಸಂಸ್ಕಾರ

ಕೊಪ್ಪಳದ ವಿಕಾಸ್ ನಗರದ ವ್ಯಕ್ತಿಯೊಬ್ಬರು ನಿನ್ನೆ ರಾತ್ರಿ ತೀವ್ರ ಉಸಿರಾಟ ಸಮಸ್ಯೆಯಿಂದ ಅಸುನೀಗಿದ್ದರು. ಮೃತನ ಮಗ ಕೂಡ ಕೋವಿಡ್ ಪಾಸಿಟಿವ್ ಆಗಿ ಆಸ್ಪತ್ರೆಯಲ್ಲಿ ಇದ್ದಾರೆ. ಹೀಗಾಗಿ, ಮೃತ ವ್ಯಕ್ತಿಯ ಅಂತ್ಯ ಸಂಸ್ಕಾರ ಮಾಡಲು ಜನ ಹಿಂದೇಟು ಹಾಕಿದ್ದಾರೆ. ಈ ವೇಳೆ ಮುಸ್ಲಿಂ ಸಂಘಟನೆ ಹ್ಯೂಮನಿಟೇರಿಯನ್ ರಿಲೀಫ್ ಸೊಸೈಟಿ (ಹೆಚ್​ಆರ್​ಎಸ್​) ಯ ಸದಸ್ಯರು ಅಂತ್ಯಕ್ರಿಯೆ ನೆರವೇರಿಸಿದರು.

11:36 April 26

ಇಂದಿನಿಂದ ಐಟಿಬಿಪಿ ಆರೋಗ್ಯ ಕೇಂದ್ರ ಕಾರ್ಯಾಚರಣೆ ಆರಂಭ

ಐಟಿಬಿಪಿ ಆರೋಗ್ಯ ಕೇಂದ್ರ ಕಾರ್ಯಾಚರಣೆ ಆರಂಭ

ದೆಹಲಿ: ಐಟಿಬಿಪಿ ನಡೆಸುತ್ತಿರುವ ಸರ್ದಾರ್ ಪಟೇಲ್ ಕೋವಿಡ್ ಕೇರ್ ಸೆಂಟರ್, ರಾಧಾ ಸೋಮಿ ಬಿಯಾಸ್, ಛತ್ತರ್‌ಪುರಕ್ಕೆ ರೋಗಿಗಳು ಆಗಮಿಸಿದ್ದು, ಆರೋಗ್ಯ ಕೇಂದ್ರವು ಇಂದು ಕಾರ್ಯಾಚರಣೆ ಪ್ರಾರಂಭಿಸಿದೆ. ಸಿಎಂ ಅರವಿಂದ್ ಕೇಜ್ರಿವಾಲ್, ಡಿಸಿಎಂ ಮನೀಶ್ ಸಿಸೋಡಿಯಾ ಮತ್ತು ಆರೋಗ್ಯ ಸಚಿವ ಸತ್ಯೇಂದರ್ ಜೈನ್ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ, ಪರಿಶೀಲಿಸಿದರು. 

11:36 April 26

ಗೋರಖ್‌ಪುರದ ಆಮ್ಲಜನಕ ಸ್ಥಾವರಕ್ಕೆ ಸಂಸದ ರವಿ ಕಿಶನ್ ಧನ ಸಹಾಯ

ಉತ್ತರ ಪ್ರದೇಶದ ಗೋರಖ್‌ಪುರದಲ್ಲಿ ಆಮ್ಲಜನಕ ಸ್ಥಾವರ ಸ್ಥಾಪಿಸಲು ಸ್ಥಳವನ್ನು ಗುರುತಿಸುವಂತೆ ಕೋರಿ ಬಿಜೆಪಿ ಸಂಸದ ರವಿ ಕಿಶನ್ ಅವರು ಗೋರಖ್‌ಪುರ ಜಿಲ್ಲಾ ಮ್ಯಾಜಿಸ್ಟ್ರೇಟ್ ವಿಜಯೇಂದ್ರ ಪಾಂಡ್ಯನ್‌ಗೆ ಪತ್ರ ಬರೆದಿದ್ದಾರೆ.

ಇದಕ್ಕಾಗಿ ಅವರು 40 ಲಕ್ಷ ರೂಪಾಯಿ ಧನಸಹಾಯ ಮಾಡಿದ್ದಾರೆ.

11:04 April 26

ರಾಜ್ಯ ಸಚಿವ ಸಂಪುಟ ಸಭೆ ಆರಂಭ

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ರಾಜ್ಯ ಸಚಿವ ಸಂಪುಟ ಸಭೆ ಆರಂಭಗೊಂಡಿದೆ. ಕರ್ಫ್ಯೂ ವಿಚಾರದಲ್ಲಿ, 18 ವರ್ಷ ತುಂಬಿದ ಎಲ್ಲರಿಗೂ ಲಸಿಕೆ ನೀಡಿಕೆ ಸಂಬಂಧ ಮಹತ್ವದ ನಿರ್ಧಾರ ಹೊರಬೀಳುವ ಸಂಭವವಿದೆ. ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಸಚಿವ ಸಂಪುಟ ಸಭೆ ನಡೆಯುತ್ತಿದೆ. 

10:57 April 26

ಆಮ್ಲಜನಕ ಪೂರೈಕೆ ವೇಳೆ ತಾಂತ್ರಿಕ ದೋಷ, ಇಬ್ಬರು ಕೊರೊನಾ ಸೋಂಕಿತರು ಸಾವು

ವಿಜಯನಗರಂ(ಆಂಧ್ರಪ್ರದೇಶ): ವಿಜಯನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಇಂದು ಮುಂಜಾನೆ ಆಮ್ಲಜನಕ ಪೂರೈಕೆ ವೇಳೆ ಉಂಟಾದ ತಾಂತ್ರಿಕ ದೋಷದಿಂದ ಇಬ್ಬರು ಕೊರೊನಾ ಸೋಂಕಿತರು ಮೃತಪಟ್ಟಿದ್ದಾರೆ.

ಆಸ್ಪತ್ರೆಯಲ್ಲಿ 97 ರೋಗಿಗಳಿಗೆ ಆಮ್ಲಜನಕ ನೀಡಲಾಗುತ್ತಿತ್ತು. ಅದರಲ್ಲಿ ಇಬ್ಬರು ರೋಗಿಗಳನ್ನು ಅಧಿಕ ಒತ್ತಡದ ಆಮ್ಲಜನಕ ಹೊಂದಿರುವ ವೆಂಟಿಲೇಟರ್‌ಗಳಲ್ಲಿ ಇರಿಸಲಾಗಿತ್ತು. ತಡರಾತ್ರಿ ಉಂಟಾದ ತಾಂತ್ರಿಕ ಅಡಚಣೆಯಿಂದ ಇಬ್ಬರು ಕೋವಿಡ್‌ ರೋಗಿಗಳು ಸಾವಿಗೀಡಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

10:48 April 26

ಇನ್ನೊಂದು ತಿಂಗಳು ಎರಡನೇ ಅಲೆ ಎಫೆಕ್ಟ್, ಸಂಪುಟದಲ್ಲಿ ಮುಂದಿನ ಕ್ರಮದ ಬಗ್ಗೆ ನಿರ್ಧಾರ: ಸಚಿವ ಸುಧಾಕರ್

ಸಚಿವ ಸುಧಾಕರ್
ಸಚಿವ ಸುಧಾಕರ್

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಅಟ್ಟಹಾಸದ ಹಿನ್ನೆಲೆಯಲ್ಲಿ ಸಚಿವ ಸಂಪುಟ ಸಭೆಯಲ್ಲಿ ಈ ಸಂಬಂಧ ಗಂಭೀರ ಚರ್ಚೆ ನಡೆಯಲಿದೆ. ಎರಡನೇ ಅಲೆ ಇನ್ನು 30-40ದಿನ ಇರಲಿದೆ ಎಂದು ತಜ್ಞರು ಹೇಳಿದ್ದಾರೆ. ಸಂಪುಟ ಸಭೆಯಲ್ಲಿ ಮುಂದಿನ ಕ್ರಮದ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಆರೋಗ್ಯ ಸಚಿವ ಡಾ.ಕೆ ಸುಧಾಕರ್ ತಿಳಿಸಿದರು.

ಕೊರೊನಾ ಸ್ಫೋಟವಾಗುತ್ತಿರುವ ಕುರಿತು ಸಚಿವ ಸಂಪುಟ ಸಭೆಯಲ್ಲಿ ಗಂಭೀರ ಚರ್ಚೆ ಆಗಲಿದೆ. ರಾಜ್ಯಾದ್ಯಂತ ಕೆಲವು ಜಿಲ್ಲೆಗಳಲ್ಲಿ ಸೋಂಕು ಹೆಚ್ಚಾಗಿದೆ ಹಾಗೂ ಬೆಂಗಳೂರಿನಲ್ಲಿ 20 ಸಾವಿರಕ್ಕೂ ಹೆಚ್ಚು ಸೋಂಕಿತರು ಪತ್ತೆಯಾಗುತ್ತಿದ್ದು, ಇದರ ನಿಯಂತ್ರಣಕ್ಕೆ ಕಠಿಣ ತೀರ್ಮಾನ ತೆಗೆದುಕೊಳ್ಳಬೇಕು. ಸಂಪುಟ ಸಹೋದ್ಯೋಗಿಗಳ ನೇತೃತ್ವದಲ್ಲಿ ನಡೆಯುವ ಸಭೆಯಲ್ಲಿ ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದರು.

10:46 April 26

ಮಂಡ್ಯದಲ್ಲಿ ಆಸ್ಪತ್ರೆಯ ಆವರಣದಲ್ಲಿ ಕೊರೊನಾ ರೋಗಿ ಆತ್ಮಹತ್ಯೆ

ಮಂಡ್ಯ: ನೇಣು ಬಿಗಿದುಕೊಂಡು ಕೊರೊನಾ ಸೋಂಕಿತ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮಂಡ್ಯದ ಶ್ರೀರಂಗಪಟ್ಟಣ ಸಾರ್ವಜನಿಕ ಆಸ್ಪತ್ರೆಯಲ್ಲಿ ನಡೆದಿದೆ.

ಶ್ರೀರಂಗಪಟ್ಟಣ ತಾಲೂಕಿನ ಅರಕೆರೆ ಗ್ರಾಮದ ನಿವಾಸಿಗೆ ಏ.21ರಿಂದ ಕೋವಿಡ್ ಚಿಕಿತ್ಸೆ ಪಡೆಯುತ್ತಿದ್ದರು. ಇಂದು ಬೆಳಿಗ್ಗೆ ಆಸ್ಪತ್ರೆಯ ಆವರಣದಲ್ಲಿ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಶ್ರೀರಂಗಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

10:39 April 26

ಹಾಸಿಗೆ ಭರ್ತಿ, ವೆಂಟಿಲೇಟರ್ ಫುಲ್- ಕೆ.ಆರ್. ಆಸ್ಪತ್ರೆ ಮುಂದೆ ಬೋರ್ಡ್

ಕೆ.ಆರ್. ಆಸ್ಪತ್ರೆ ಮುಂದೆ ಬೋರ್ಡ್
ಕೆ.ಆರ್. ಆಸ್ಪತ್ರೆ ಮುಂದೆ ಬೋರ್ಡ್

ಮೈಸೂರು: ನಮ್ಮಲ್ಲಿ ಹಾಸಿಗೆ ಭರ್ತಿ, ವೆಂಟಿಲೇಟರ್ ಫುಲ್ ಎಂದು ಕೆ.ಆರ್.ಆಸ್ಪತ್ರೆ ಮುಂದೆ ಬೋರ್ಡ್​ ಹಾಕಲಾಗಿದೆ. ಮೈಸೂರು ಜಿಲ್ಲಾಸ್ಪತ್ರೆ ಹಾಗೂ ಕೆ.ಆರ್.ಆಸ್ಪತ್ರೆಯಲ್ಲಿ ಹಾಸಿಗೆ ಇಲ್ಲದೇ ರೋಗಿಗಳ ಪರದಾಟ ಶುರುವಾಗಿದೆ.  

ನಗರದ ಸರ್ಕಾರಿ ಆಸ್ಪತ್ರೆಗಳಲ್ಲಿ 405 ಮಂದಿ ಕೋವಿಡ್ ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. 70 ವೆಂಟಿಲೇಟರ್‌ಗಳು ಭರ್ತಿಯಾಗಿವೆ‌. ಜಿಲ್ಲಾಸ್ಪತ್ರೆ, ಕೆಆರ್.ಆಸ್ಪತ್ರೆ ಹಾಗೂ‌ ಟ್ರಾಮಾ ಸೆಂಟರ್ ಸೇರಿ 54 ಐಸಿಯುಗಳು ಫುಲ್ ಆಗಿವೆ.

10:36 April 26

ಜಿಂದಾಲ್ ಸಮೂಹ ಸಂಸ್ಥೆಯ 525 ಸಿಬ್ಬಂದಿಗೆ ಕೋವಿಡ್‌ ಸೋಂಕು

ಬಳ್ಳಾರಿ: ಕೊರೊನಾ ಎರಡನೇ ಅಲೆಯು ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಗಳಲ್ಲಿ ಹೆಚ್ಚಾಗುತ್ತಿದ್ದು, ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಜಿಂದಾಲ್ ಸಮೂಹ ಸಂಸ್ಥೆಯಲ್ಲೇ ಈ ವರ್ಷ 525 ನೌಕರರಲ್ಲಿ ಸೋಂಕು ದೃಢಪಟ್ಟಿದೆ.

ಜಿಲ್ಲೆಯಲ್ಲಿ ಕಳೆದೊಂದು ವಾರದಿಂದ ಐದರಿಂದ ಎಂಟು ಮಂದಿ ಸೋಂಕಿನಿಂದ ಮೃತಪಡುತ್ತಿದ್ದರು. ಆದರೆ, ನಿನ್ನೆ ಒಂದೇ ದಿನ 16 ಮಂದಿ ಸೋಂಕಿಗೆ ಬಲಿಯಾಗಿದ್ದು, ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಸಿದೆ. ಈ ಮೂಲಕ ಸಾವಿನ ಸಂಖ್ಯೆ 656ಕ್ಕೆ ಏರಿಕೆಯಾಗಿದೆ.

ಜಿಲ್ಲೆಯ ಜಿಂದಾಲ್ ಸಮೂಹ ಸಂಸ್ಥೆ ಸಂಡೂರು, ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನಲ್ಲೇ ಸೋಂಕು ಹೆಚ್ಚುತ್ತಿದ್ದು, ಮರಣ ಪ್ರಮಾಣವು ಹೆಚ್ಚಾಗಿದೆ.

10:32 April 26

ಕೋಲಾರದಲ್ಲಿ ಆಕ್ಸಿಜನ್ ಇಲ್ಲದೆ ನಾಲ್ವರು ಮೃತ

ಕೋಲಾರದಲ್ಲಿ ಆಕ್ಸಿಜನ್ ಇಲ್ಲದೆ ನಾಲ್ವರು ಮೃತ

ಕೋಲಾರ: ನಗರದ ಎಸ್.ಎನ್.ಆರ್ ಜಿಲ್ಲಾಸ್ಪತ್ರೆಯಲ್ಲಿ ಕಳೆದ ರಾತ್ರಿ ಆಕ್ಸಿಜನ್ ಇಲ್ಲದೆ ನಾಲ್ವರು ಮೃತಪಟ್ಟಿದ್ದಾರೆ. ಏಕಾಏಕಿ ಐಸಿಯು ವಾರ್ಡ್​ನಲ್ಲಿದ್ದ ಕೊರೊನಾ ರೋಗಿಗಳಿಗೆ ಆಕ್ಸಿಜನ್ ವ್ಯತ್ಯಯದಿಂದಾಗಿ ನಾಲ್ವರು ಮೃತಪಟ್ಟಿದ್ದಾರೆಂದು, ಮೃತರ ಸಂಂಬಂಧಿಕರು ಆರೋಪಿಸಿದ್ದಾರೆ.  

ಜಿಲ್ಲಾಸ್ಪತ್ರೆಯ ಐಸಿಯು ವಾರ್ಡ್​ನಲ್ಲಿ ಸುಮಾರು 15 ಕೊರೊನಾ ರೋಗಿಗಳಿದ್ದು, ಕಳೆದ ರಾತ್ರಿ ಏಕಾಏಕಿ ಆಕ್ಸಿಜನ್ ಪೂರೈಕೆ ಮಾಡುವುದನ್ನ ನಿಲ್ಲಿಸಿದ ಪರಿಣಾಮ, ನಾಲ್ವರು ಮೃತಪಟ್ಟಿದ್ದಾರೆ.  

ಮೂವರು ಪುರುಷರು ಸೇರಿದಂತೆ ಓರ್ವ ಮಹಿಳೆ ಆಕ್ಸಿಜನ್ ಇಲ್ಲದೆ ಕಳೆದ ರಾತ್ರಿ ಮೃತಪಟ್ಟಿದ್ದಾರೆ.

10:27 April 26

ಸೋಂಕಿತರಿಗೆ ಬೆಡ್ ವಿಚಾರ ಖಾಸಗಿ ಆಸ್ಪತ್ರೆ ಸಿಇಓ ಸೇರಿ ಆರು ಮಂದಿ ವಿರುದ್ದ ಎಫ್ಐಆರ್

ಬೆಂಗಳೂರು: ಕೊರೊನಾ ಸಂಕಷ್ಟ ಕಾಲದಲ್ಲಿ ಸೋಂಕಿತರಿಗೆ ನೀಡಲು ಹಾಸಿಗೆ ಇಲ್ಲ ಎನ್ನುತ್ತಿದ್ದ ಖಾಸಗಿ ಆಸ್ಪತ್ರೆಯೊಂದರ ಕಳ್ಳಾಟ ಬಯಲಾಗಿದ್ದು ಈ ಸಂಬಂಧ ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿಇಓ) ಸೇರಿ ಆರು ಮಂದಿ ವಿರುದ್ಧ ಪುಟ್ಟೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೊಮ್ಮನಹಳ್ಳಿ ವಲಯದ ಬಿಬಿಎಂಪಿ ವೈದ್ಯಾಧಿಕಾರಿ ನಾಗೇಂದ್ರ ಕುಮಾರ್ ನೀಡಿದ ದೂರಿನ‌ ಮೇರೆಗೆ ಬನ್ನೇರುಘಟ್ಟ ರಸ್ತೆಯಲ್ಲಿರುವ ಖಾಸಗಿ ಆಸ್ಪತ್ರೆಯ ಸಿಇಓ ಡಾ.ಡೇವಿಡ್ ಸೋನಾ, ಆಪರೇಷನ್ ಹೆಡ್ ಕಲ್ಪನಾ, ಮೆಡಿಕಲ್ ಸೂಪರಿಟೆಂಡೆಂಟ್ ಡಾ.ಶಾಂತಾ ಸೇರಿದಂತೆ ಆರು ಮಂದಿ ವಿರುದ್ಧ ರಾಷ್ಟ್ರೀಯ ವಿಕೋಪ ನಿರ್ವಹಣಾ ಕಾಯ್ದೆ (ಎನ್ ಡಿಎಂಎ) ಪ್ರಕರಣ ದಾಖಲಿಸಿಕೊಂಡಿದ್ದಾರೆ.

10:25 April 26

ತಮಿಳುನಾಡಿನಲ್ಲಿ ಸರ್ವಪಕ್ಷ ಸಭೆ ಆರಂಭ

ತಮಿಳುನಾಡಿನಲ್ಲಿ ಸರ್ವಪಕ್ಷ ಸಭೆ ಆರಂಭ
ತಮಿಳುನಾಡಿನಲ್ಲಿ ಸರ್ವಪಕ್ಷ ಸಭೆ ಆರಂಭ

ತಮಿಳುನಾಡು: ಸಿಎಂ ಎಡಪ್ಪಾಡಿ ಕೆ. ಪಳನಿಸ್ವಾಮಿ ಕರೆದ ಸರ್ವಪಕ್ಷ ಸಭೆ ಚೆನ್ನೈನಲ್ಲಿ ಪ್ರಾರಂಭವಾಗಿದೆ.

ವೈದ್ಯಕೀಯ ಆಮ್ಲಜನಕದ ಉತ್ಪಾದನೆಗಾಗಿ ವೇದಾಂತ ಪ್ಲಾಂಟ್ ಸಮಸ್ಯೆ ಮತ್ತು ತೂತುಕುಡಿಯಲ್ಲಿ ಸ್ಥಾವರವನ್ನು ಪುನಃ ತೆರೆಯಲು ಅನುಮತಿ ನೀಡುವ ಕುರಿತು ಚರ್ಚಿಸಲು ಸಭೆ ಕರೆಯಲಾಗಿದೆ.

10:20 April 26

72 ಗಂಟೆಗಳಲ್ಲಿ ಆಮ್ಲಜನಕ ಘಟಕ ರೆಡಿ..

ಆಮ್ಲಜನಕ ಘಟಕ
ಆಮ್ಲಜನಕ ಘಟಕ

ಬನಸ್ಕಂತ (ಗುಜರಾತ್): ಆಮ್ಲಜನಕದ ಪೂರೈಕೆಯ ಕೊರತೆಯ ಮಧ್ಯೆ, ಗುಜರಾತ್‌ನ ಬನಸ್ಕಂತ ಜಿಲ್ಲೆಯ ಬನಸ್ ಡೈರಿಯ ಎಂಜಿನಿಯರ್‌ಗಳ ತಂಡವು 72 ಗಂಟೆಗಳಲ್ಲಿ ಆಮ್ಲಜನಕ ಘಟಕವನ್ನು ಸ್ಥಾಪಿಸಿ ತನ್ನ ವೈದ್ಯಕೀಯ ಕಾಲೇಜು ಮತ್ತು ಜಿಲ್ಲಾ ನಾಗರಿಕ ಆಸ್ಪತ್ರೆಗೆ ಸಹಾಯ ಮಾಡುತ್ತಿದೆ.

ಪಾಲನ್‌ಪುರದ ಬನಾಸ್ ಡೈರಿಯ ಹಿರಿಯ ಪ್ರಧಾನ ವ್ಯವಸ್ಥಾಪಕ ಬಿಪಿನ್ ಪಟೇಲ್ ಮಾತನಾಡಿ, "ಈ ಘಟಕವು 70 ಜಂಬೊ ಆಕ್ಸಿಜನ್ ಸಿಲಿಂಡರ್‌ಗಳಿಗೆ ಸಮಾನವಾದ ಆಮ್ಲಜನಕವನ್ನು ಅಥವಾ 680 ಕಿಲೋಗ್ರಾಂ ಅನ್ನು ಉತ್ಪಾದಿಸುತ್ತದೆ. ಇದು ಒಂದು ದಿನ 35-40 ರೋಗಿಗಳಿಗೆ ಸಾಕಾಗುತ್ತದೆ." ಎಂದಿದ್ದಾರೆ.

10:20 April 26

100 ದಿನಗಳನ್ನು ಪೂರೈಸಿದ ವ್ಯಾಕ್ಸಿನೇಷನ್ ಡ್ರೈವ್

ಹೈದರಾಬಾದ್: ಕೋವಿಡ್ ಹರಡುವಿಕೆಯನ್ನು ತಡೆಯುವ ಪ್ರಯತ್ನದಲ್ಲಿ ಭಾರತ ಸರ್ಕಾರವು 2021 ರ ಜನವರಿ 16 ರಿಂದ ತನ್ನ ನಾಗರಿಕರಿಗೆ ಲಸಿಕೆ ಹಾಕಲು ಪ್ರಾರಂಭಿಸಿತ್ತು. ಏಪ್ರಿಲ್ 25 ರಂದು ಭಾರತವು 100 ದಿನಗಳ ವ್ಯಾಕ್ಸಿನೇಷನ್ ಡ್ರೈವ್ ಅನ್ನು ಪೂರ್ಣಗೊಳಿಸಿದೆ.

10:19 April 26

ಬೆಂಗಳೂರಿನಲ್ಲಿ 16,665 ಜನರಿಗೆ ಕೋವಿಡ್ ಪಾಸಿಟಿವ್

ಬೆಂಗಳೂರು: ನಿನ್ನೆ ಭಾನುವಾರ ಹಿನ್ನೆಲೆ ಕೋವಿಡ್ ಟೆಸ್ಟಿಂಗ್ ಹಾಗೂ ಪ್ರಯೋಗಾಲಯಗಳಲ್ಲಿ ಮಾದರಿ ಪರೀಕ್ಷೆ ಪ್ರಮಾಣದಲ್ಲಿ ಇಳಿಕೆ ಕಂಡಿದ್ದು, ಸೋಂಕಿತ ಪ್ರಕರಣಗಳಲ್ಲೂ ಇಳಿಕೆಯಾಗಿದೆ. ಹೀಗಾಗಿ 16,665 ಜನರಲ್ಲಿ ಕೋವಿಡ್ ಪಾಸಿಟಿವ್ ದೃಢಪಟ್ಟಿದೆ.

ಬೊಮ್ಮನಹಳ್ಳಿಯಲ್ಲಿ-1794, ದಾಸರಹಳ್ಳಿ- 443, ಪೂರ್ವವಲಯ-2505, ಮಹದೇವಪುರ-2045, ಆರ್.ಆರ್ ನಗರ-1135, ದಕ್ಷಿಣ ವಲಯ-2866, ಪಶ್ಚಿಮ ವಲಯ-1821, ಯಲಹಂಕ-1396, ಬೆಂಗಳೂರು ಹೊರವಲಯದಲ್ಲಿ-1473 ಜನರಲ್ಲಿ ಪಾಸಿಟಿವ್ ದೃಢಪಟ್ಟಿದೆ.

ನಿನ್ನೆಯ ವರದಿಯಲ್ಲಿ 20,733 ಜನರಿಗೆ ಪಾಸಿಟಿವ್ ದೃಢಪಟ್ಟಿತ್ತು. 

10:05 April 26

ಮೇ 2ರವರೆಗೆ ಉತ್ತರಾಖಂಡ್‌ ಹೈಕೋರ್ಟ್‌ ಬಂದ್​

ಉತ್ತರಾಖಂಡ್‌ ಹೈಕೋರ್ಟ್‌
ಉತ್ತರಾಖಂಡ್‌ ಹೈಕೋರ್ಟ್‌

ಉತ್ತರಾಖಂಡ್‌ನಲ್ಲಿ ಕೊರೊನಾ ಆರ್ಭಟ ಹಿನ್ನೆಲೆ ಮೇ 2ರವರೆಗೆ ಉತ್ತರಾಖಂಡ್‌ ಹೈಕೋರ್ಟ್‌ ಬಂದ್​ ಮಾಡಲು ಆದೇಶಿಸಲಾಗಿದೆ. ಮೇ 3 ರಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ಅರ್ಜಿಗಳ ವಿಚಾರಣೆಗೆ ನಿರ್ಧರಿಸಲಾಗಿದೆ.

10:01 April 26

ಭಾರತದ ಪ್ರಸ್ತುತ ಪರಿಸ್ಥಿತಿ ಭೀತಿ ಹುಟ್ಟಿಸುತ್ತಿದೆ: ಮೈಕ್ರೋಸಾಫ್ಟ್ ಸಿಇಒ ಸತ್ಯ ನಾಡೆಲ್ಲಾ

ಭಾರತದ ಪ್ರಸ್ತುತ ಪರಿಸ್ಥಿತಿ ಭೀತಿ ಹುಟ್ಟಿಸುತ್ತಿದೆ. ಯುಎಸ್ ಸರ್ಕಾರವು ಸಹಾಯ ಮಾಡಲು ಸಜ್ಜಾಗಿರುವುದಕ್ಕೆ ನಾನು ಕೃತಜ್ಞನಾಗಿದ್ದೇನೆ. ಪರಿಹಾರ ಪ್ರಯತ್ನಗಳಿಗೆ ಸಹಾಯ ಮಾಡಲು ಮತ್ತು ನಿರ್ಣಾಯಕ ಆಮ್ಲಜನಕ ಸಾಂದ್ರತೆಯ ಸಾಧನಗಳ ಖರೀದಿಗೆ ತನ್ನ ಬೆಂಬಲವನ್ನು ಮೈಕ್ರೋಸಾಫ್ಟ್ ಮುಂದುವರಿಸುತ್ತದೆ ಎಂದು ಮೈಕ್ರೋಸಾಫ್ಟ್ ಸಿಇಒ ಸತ್ಯ ನಾಡೆಲ್ಲಾ ಹೇಳಿದ್ದಾರೆ.

10:00 April 26

ಕನ್ನಡದಲ್ಲಿ ಟ್ವೀಟ್ ಮಾಡಿದ ಅಮೆರಿಕ ರಾಯಭಾರ ಕಚೇರಿ

ಕೊರೊನಾಗೆ ತತ್ತರಿಸಿರುವ ಭಾರತಕ್ಕೆ ಅಗತ್ಯ ನೆರವು ನೀಡುವುದಾಗಿ ಅಮೆರಿಕ ಸರ್ಕಾರ ಪ್ರಕಟಿಸಿದ ಬೆನ್ನಲ್ಲೇ ಚೆನ್ನೈನಲ್ಲಿರುವ ಅಮೆರಿಕ ರಾಯಭಾರ ಕಚೇರಿ ಕನ್ನಡದಲ್ಲಿಯೂ ಸಂದೇಶಗಳನ್ನು ಪ್ರಕಟಿಸಿದೆ.  

‘ಭಾರತದಲ್ಲಿ ಕೋವಿಡ್‌ ಸಾಂಕ್ರಾಮಿಕ ತೀವ್ರವಾಗಿರುವ ಬಗ್ಗೆ ಅಮೆರಿಕ ಕಳಕಳಿ ಹೊಂದಿದೆ. ಸಾಂಕ್ರಾಮಿಕದ ವಿರುದ್ಧ ಹೋರಾಡುವಾಗ ಭಾರತದ ನಮ್ಮ ಸ್ನೇಹಿತರು ಮತ್ತು ಸಹಭಾಗಿಗಳಿಗೆ ಹೆಚ್ಚಿನ ಸಾಮಗ್ರಿಗಳು ಮತ್ತು ಅಗತ್ಯ ಬೆಂಬಲ ನೀಡಲು ಶ್ರಮಿಸುತ್ತಿದ್ದೇವೆ’ ಎಂದು ಅಮೆರಿಕ ಕಾನ್ಸುಲೇಟ್‌ ಕಚೇರಿಯು ಇದನ್ನು ಕನ್ನಡ, ತಮಿಳು ಹಾಗೂ ಮಲಯಾಳಂನಲ್ಲಿ ಪ್ರಕಟಿಸಿದೆ.

09:59 April 26

ದೆಹಲಿಯಲ್ಲಿ ಲಾಕ್​ಡೌನ್​ ಹಿನ್ನೆಲೆ ವಾಹನ ಸವಾರರ ತಪಾಸಣೆ

ದೆಹಲಿಯಲ್ಲಿ ಲಾಕ್​ಡೌನ್​ ಹಿನ್ನೆಲೆ ವಾಹನ ಸವಾರರ ತಪಾಸಣೆ
ದೆಹಲಿಯಲ್ಲಿ ಲಾಕ್​ಡೌನ್​ ಹಿನ್ನೆಲೆ ವಾಹನ ಸವಾರರ ತಪಾಸಣೆ

ದೆಹಲಿ: ಕೊರೊನಾ ಸಾಂಕ್ರಾಮಿಕದ ಹಿನ್ನೆಲೆ ದೆಹಲಿಯಲ್ಲಿ ಒಂದು ವಾರ ಲಾಕ್‌ಡೌನ್ ವಿಸ್ತರಿಸಿದ್ದು, ಪೊಲೀಸರು ವಾಹನ ಸವಾರರ ಐಡಿಗಳನ್ನು ಪರೀಕ್ಷಿಸುತ್ತಿದ್ದಾರೆ.  

09:44 April 26

ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 3,52,991 ಹೊಸ ಕೊರೊನಾ ಪ್ರಕರಣಗಳು ಪತ್ತೆ

ನವದೆಹಲಿ: ಕಳೆದೊಂದು ದಿನದಲ್ಲಿ ದೇಶದಲ್ಲಿ 3,52,991 ಹೊಸ ಕೊರೊನಾ ಸೋಂಕು ಪ್ರಕರಣಗಳು ಪತ್ತೆಯಾಗಿವೆ. 2,812 ಮಂದಿ ಸೋಂಕಿನಿಂದ ಸಾವನ್ನಪ್ಪಿದ್ದಾರೆ. 2,19,272 ಮಂದಿ ಸೋಂಕಿನಿಂದ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಪ್ರಸ್ತುತ ದೇಶದಲ್ಲಿ 28,13,658 ಸಕ್ರಿಯ ಕೋವಿಡ್​ ಪ್ರಕರಣಗಳಿವೆ. ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

ಏಪ್ರಿಲ್​ 25 ರವರೆಗೆ 27,93,21,177 ಮಂದಿಗೆ ಕೊರೊನಾ ಟೆಸ್ಟ್​ ಮಾಡಲಾಗಿದೆ. ನಿನ್ನೆ ಒಂದೇ ದಿನ 14,02,367 ಸ್ಯಾಂಪಲ್ಸ್​ಗಳನ್ನು ಪರೀಕ್ಷೆ ಮಾಡಲಾಗಿದೆ ಎಂದು ICMR ತಿಳಿಸಿದೆ.

09:41 April 26

ಭಾರತಕ್ಕೆ ಗೂಗಲ್​ ಸಹಾಯ ಹಸ್ತ

  • Devastated to see the worsening Covid crisis in India. Google & Googlers are providing Rs 135 Crore in funding to @GiveIndia, @UNICEF for medical supplies, orgs supporting high-risk communities, and grants to help spread critical information.https://t.co/OHJ79iEzZH

    — Sundar Pichai (@sundarpichai) April 26, 2021 " class="align-text-top noRightClick twitterSection" data=" ">

ಭಾರತದಲ್ಲಿನ ಕೋವಿಡ್ ಬಿಕ್ಕಟ್ಟಿಗೆ ಗೂಗಲ್​ ಸಹಾಯ ಹಸ್ತ ಚಾಚಿದೆ. ಗೂಗಲ್​ ಮತ್ತು ಗೂಗ್ಲರ್​ಗಳು ವೈದ್ಯಕೀಯ ಸರಬರಾಜುಗಳಿಗಾಗಿ 135 ಕೋಟಿ ರೂಪಾಯಿ ಸಹಾಯಧನ ನೀಡಿದ್ದಾರೆ. 

09:32 April 26

ಗ್ವಾಲಿಯರ್​ನಲ್ಲಿ ಆಕ್ಸಿಜನ್ ಸಿಲಿಂಡರ್ ವಿಚಾರವಾಗಿ ಎಸ್​ಐ - ಆಸ್ಪತ್ರೆ ಸಿಬ್ಬಂದಿ ನಡುವೆ ಜಗಳ- ವಿಡಿಯೋ ವೈರಲ್​

ಎಸ್​ಐ - ಆಸ್ಪತ್ರೆ ಸಿಬ್ಬಂದಿ ನಡುವೆ ಜಗಳ

ಗ್ವಾಲಿಯರ್ ಮಹಾರಾಜಪುರ ಪೊಲೀಸ್ ಠಾಣೆ ಪ್ರದೇಶದಲ್ಲಿ ಆಕ್ಸಿಜನ್ ಸಿಲಿಂಡರ್ ವಿಚಾರವಾಗಿ ಸಬ್ ಇನ್​ಸ್ಪೆಕ್ಟರ್ ಮತ್ತು ಖಾಸಗಿ ಆಸ್ಪತ್ರೆಯ ಸಿಬ್ಬಂದಿ ನಡುವೆ ಜಗಳ ನಡೆದ ವಿಡಿಯೋ ವೈರಲ್ ಆಗುತ್ತಿದೆ. ಈ ಕುರಿತು ಮಹಾರಾಜಪುರ ಪೊಲೀಸರು ಪ್ರಕರಣದ ತನಿಖೆ ಆರಂಭಿಸಿದ್ದಾರೆ. ಪಿಂಟೊ ಪಾರ್ಕ್ ಕೈಗಾರಿಕಾ ಪ್ರದೇಶದಲ್ಲಿರುವ ಆಕ್ಸಿಜನ್ ಸ್ಥಾವರದಲ್ಲಿ ರುದ್ರಶನ್ ಆಸ್ಪತ್ರೆಯ ಸಿಬ್ಬಂದಿ ಸಿಲಿಂಡರ್ ತುಂಬಲು ಹೋಗಿದ್ದರು ಎಂದು ಹೇಳಲಾಗುತ್ತಿದೆ. ಏತನ್ಮಧ್ಯೆ, ಅಲ್ಲಿಗೆ ತಲುಪಿದ ಪೊಲೀಸ್ ತಂಡ ಮತ್ತು ಆಸ್ಪತ್ರೆಯ ಸಿಬ್ಬಂದಿ ನಡುವೆ ವಾಗ್ವಾದ ನಡೆದಿದ್ದು, ಅದು ಘಟನೆಗೆ ಕಾರಣವಾಗಿರಬಹುದೆಂದು ಹೇಳಲಾಗುತ್ತಿದೆ.

09:32 April 26

ಕಾಂಗ್ರೆಸ್ ಮುಖಂಡ ಶಶಿ ತರೂರ್ ಖಾಸಗಿ ಆಸ್ಪತ್ರೆಗೆ ದಾಖಲು

ನವದೆಹಲಿ: ಕಾಂಗ್ರೆಸ್ ಮುಖಂಡ ಶಶಿ ತರೂರ್ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

65 ವರ್ಷದ ಅವರನ್ನು ಸರಿತಾ ವಿಹಾರ್‌ನ ಅಪೊಲೊ ಆಸ್ಪತ್ರೆಗೆ ದಾಖಲಿಸಲಾಗಿದೆ.  

ತಿರುವನಂತಪುರಂನ ಕಾಂಗ್ರೆಸ್ ಸಂಸದ ತರೂರ್ ಅವರಿಗೆ ಕೊರೊನಾ ಸೋಂಕು ತಗುಲಿರುವುದು ಏಪ್ರಿಲ್ 21 ರಂದು ದೃಢಪಟ್ಟಿತ್ತು ಎಂದು ವರದಿ ಮಾಡಿದ್ದಾರೆ.

09:26 April 26

ಆಕ್ಸಿಜನ್ ಸಿಗದೆ ಜನ ಬಲಿಯಾದರೆ ಪ್ರಧಾನಿ ಮೋದಿ, ಸಿಎಂ ಯಡಿಯೂರಪ್ಪ ಹೊಣೆ: ಈಶ್ವರ್​ ಖಂಡ್ರೆ

  • Bidar dist in Karnataka is seeing 30 deaths/day due to lack of oxygen.This will increase to 50 if oxygen supply is not regulated@narendramodi
    & @BSYBJP should value for people lives & be sensiive towards Bidars need
    Governance has exposed & govt will be responsible for the mess pic.twitter.com/tiLsBx85XR

    — Eshwar Khandre (@eshwar_khandre) April 25, 2021 " class="align-text-top noRightClick twitterSection" data=" ">

ಬೀದರ್: ಆಕ್ಸಿಜನ್ ಕೊರತೆಯಿಂದ ಪ್ರತಿ ದಿನ 30 ಜೀವಗಳು ಬಲಿಯಾಗುತ್ತಿವೆ.  ಜಿಲ್ಲೆಯಲ್ಲಿ ಆಕ್ಸಿಜನ್ ಕೊರತೆಗೆ ಉಂಟಾಗಿದೆ. ಜಿಲ್ಲೆಗೆ 30KL ಆಕ್ಸಿಜನ್ ಅಗತ್ಯವಿದ್ದು 20KL ಕೊರತೆ ಇದೆ. ನಿಗದಿತ ಪ್ರಮಾಣದ ಆಕ್ಸಿಜನ್ ಪೂರೈಸದಿದ್ದರೆ ಅನಾಹುತ ಆಗಲಿದೆ. ಆಕ್ಸಿಜನ್ ಸಿಗದೆ ಜನ ಬಲಿಯಾದರೆ ಪ್ರಧಾನಿ ಮೋದಿ, ಸಿಎಂ ಯಡಿಯೂರಪ್ಪ ಹೊಣೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಟ್ವೀಟ್​ ಮೂಲಕ ಆಕ್ರೋಶ ಹೊರಹಾಕಿದ್ದಾರೆ. 

09:19 April 26

ಗುರುಗ್ರಾಮ್‌ನಲ್ಲಿ ಪಾರ್ಕಿಂಗ್ ಪ್ರದೇಶದಲ್ಲಿ ಮೃತರ ಅಂತ್ಯಕ್ರಿಯೆ

ಗುರುಗ್ರಾಮ್‌ನಲ್ಲಿ ಪಾರ್ಕಿಂಗ್ ಪ್ರದೇಶದಲ್ಲಿ ಮೃತರ ಅಂತ್ಯಕ್ರಿಯೆ

ಗುರುಗ್ರಾಮ್‌ನಲ್ಲಿ ಸ್ಮಶಾನ ಘಾಟ್‌ನಲ್ಲಿ ಶವಸಂಸ್ಕಾರಕ್ಕೆ ಜಾಗವಿಲ್ಲದ ಕಾರಣ ಪಾರ್ಕಿಂಗ್ ಪ್ರದೇಶದಲ್ಲಿ ಮೃತರ ಅಂತ್ಯಕ್ರಿಯೆ ನಡೆಸಲಾಗುತ್ತಿದೆ.  

09:09 April 26

ಕುಟುಂಬ ಸದಸ್ಯರಿಗೆ ಕೋವಿಡ್: IPL​ನಿಂದ ಹೊರನಡೆದ ಆರ್‌.ಅಶ್ವಿನ್

  • I would be taking a break from this years IPL from tomorrow. My family and extended family are putting up a fight against #COVID19 and I want to support them during these tough times. I expect to return to play if things go in the right direction. Thank you @DelhiCapitals 🙏🙏

    — Stay home stay safe! Take your vaccine🇮🇳 (@ashwinravi99) April 25, 2021 " class="align-text-top noRightClick twitterSection" data=" ">

ಡೆಲ್ಲಿ ಕ್ಯಾಪಿಟಲ್ಸ್​ ತಂಡದ ಪ್ರಮುಖ ಸ್ಪಿನ್ನರ್​​ ರವಿಚಂದ್ರನ್ ಅಶ್ವಿನ್ ವೈಯಕ್ತಿಕ ಕಾರಣಗಳನ್ನು ನೀಡಿ ಈ ಬಾರಿಯ ಐಪಿಎಲ್​​ನಿಂದ ಹೊರ ನಡೆದಿದ್ದಾರೆ. ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದ ನಂತರ ಅವರು​ ತಮ್ಮ ಅಧಿಕೃತ ಟ್ವಿಟರ್​ನಲ್ಲಿ ಈ ಬಗ್ಗೆ ತಿಳಿಸಿದ್ದಾರೆ.  

​​"ನಾನು ಈ ವರ್ಷದ ಐಪಿಎಲ್‌ನಿಂದ ವಿರಾಮ ತೆಗೆದುಕೊಳ್ಳುತ್ತಿದ್ದೇನೆ. ನನ್ನ ಕುಟುಂಬ ಸದಸ್ಯರು ಕೋವಿಡ್​-19 ವಿರುದ್ಧ ಹೋರಾಡುತ್ತಿದ್ದು, ಈ ಸಮಯದಲ್ಲಿ ನಾನು ಅವರ ಜೊತೆ ಕಾಲ ಕಳೆಯಲು ಮತ್ತು ಅವರಿಗೆ ಧೈರ್ಯ ತುಂಬಲು ಜೊತೆ ಇರಬೇಕಾಗಿದೆ. ಎಲ್ಲವೂ ಸರಿ ಹೋದರೆ ಮತ್ತೆ ನಾನು ತಂಡಕ್ಕೆ ಮರಳುತ್ತೇನೆ" ಎಂದು ಅಶ್ವಿನ್ ಟ್ವೀಟ್​ ಮಾಡಿದ್ದಾರೆ.

09:03 April 26

ವೀಕೆಂಡ್ ಕರ್ಫ್ಯೂ ವೇಳೆ 20ಕ್ಕೂ ಅಧಿಕ ವಾಹನಗಳು ಸೀಜ್​

ವೀಕೆಂಡ್ ಕರ್ಫ್ಯೂ ವೇಳೆ 20ಕ್ಕೂ ಅಧಿಕ ವಾಹನಗಳು ಸೀಜ್​
ವೀಕೆಂಡ್ ಕರ್ಫ್ಯೂ ವೇಳೆ 20ಕ್ಕೂ ಅಧಿಕ ವಾಹನಗಳು ಸೀಜ್​

ಹೊಸಪೇಟೆ: ವೀಕೆಂಡ್ ಕರ್ಫ್ಯೂ ಹಿನ್ನೆಲೆಯಲ್ಲಿ ನಿಯಮ ಉಲ್ಲಂಘಿಸಿದ ವಾಹನ ಸವಾರಿಗೆ ಪೊಲೀಸರು ದಂಡದ‌‌ ಬಿಸಿ‌ ಮುಟ್ಟಿಸಿದ್ದಾರೆ. ಇಲ್ಲಿವರೆಗೂ 20 ಬೈಕ್ ಹಾಗೂ ಒಂದು ಕಾರ್ ಅನ್ನು ಸೀಜ್ ಮಾಡಲಾಗಿದೆ.  

08:45 April 26

ಬಸವಕಲ್ಯಾಣದ ಕೋವಿಡ್ ಕೇರ್ ಸೆಂಟರ್​ಗೆ ಸಂಸದ ಭಗವಂತ ಖೂಬಾ ಭೇಟಿ

ಸಂಸದ ಭಗವಂತ ಖೂಬಾ

ಬಸವಕಲ್ಯಾಣ(ಬೀದರ್): ಬಸವಕಲ್ಯಾಣದ ಕೋವಿಡ್ ಕೇರ್ ಸೆಂಟರ್​ಗೆ ಭೇಟಿ ನೀಡಿ ಸೋಂಕಿತರ ಆರೋಗ್ಯ ವಿಚಾರಿಸಿದ ಸಂಸದ ಭಗವಂತ ಖೂಬಾ, ಆಸ್ಪತ್ರೆಯಲ್ಲಿ ಲಭ್ಯವಿರುವ ವ್ಯವಸ್ಥೆಗಳ ಬಗ್ಗೆ ವೈದ್ಯರಿಂದ ಮಾಹಿತಿ ಪಡೆದರು.

ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕೊರೊನಾ ಸೋಂಕಿತರಿಗೆ ಅಕ್ಸಿಜನ್, ಇಂಜೆಕ್ಷನ್​ ಸೇರಿದಂತೆ ಯಾವುದೇ ಕೊರತೆಯಾಗದಂತೆ ನೋಡಿಕೊಳ್ಳಬೇಕು. ಆಸ್ಪತ್ರೆಯಲ್ಲಿ ಲಭ್ಯವಿರುವ ಕೋವಿಡ್ ಬೆಡ್​, ಆಕ್ಸಿಜನ್, ಔಷಧಗಳ ಬಗ್ಗೆ ಪ್ರತಿದಿನ ಹೊರಗಡೆ ಬೋರ್ಡ್ ಮೇಲೆ ಬರೆಯಬೇಕು. ಇದರಿಂದ ರೋಗಿಗಳಿಗೆ ಧೈರ್ಯ ಬರುತ್ತದೆ. ಸೋಂಕಿತರಿಗೆ ನಿಮ್ಮಲ್ಲಿಯೇ ಚಿಕಿತ್ಸೆ ನೀಡಿ, ಬೇರೆ ಆಸ್ಪತ್ರೆಗೆ ರೆಫರ್​ ಮಾಡಬೇಡಿ. ಏನಾದರೂ ಅವಶ್ಯಕತೆ ಇದ್ದಲ್ಲಿ ನನಗೆ ಕರೆ ಮಾಡಿದರೆ ಸಹಾಯ ಮಾಡಲಾಗುವುದು ಎಂದು ವೈದ್ಯರಿಗೆ ತಿಳಿಸಿದರು.

08:37 April 26

ಭಾರತಕ್ಕೆ 600 ಕ್ಕೂ ಹೆಚ್ಚು ಪ್ರಮುಖ ವೈದ್ಯಕೀಯ ಉಪಕರಣಗಳ ರವಾನೆಗೆ ಯುಕೆ ಸಿದ್ಧ

ಬೋರಿಸ್ ಜಾನ್ಸನ್
ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್

ಲಂಡನ್: ಕೋವಿಡ್ -19 ವಿರುದ್ಧದ ಹೋರಾಟದಲ್ಲಿ ಭಾರತಕ್ಕೆ ಬೆಂಬಲಿಸಲು 600 ಕ್ಕೂ ಹೆಚ್ಚು ಪ್ರಮುಖ ವೈದ್ಯಕೀಯ ಉಪಕರಣಗಳನ್ನು ಭಾರತಕ್ಕೆ ಕಳುಹಿಸುವುದಾಗಿ ಯುಕೆ ಸರ್ಕಾರ ಪ್ರಕಟಿಸಿದೆ.

ವಿದೇಶಿ, ಕಾಮನ್‌ವೆಲ್ತ್ ಮತ್ತು ಅಭಿವೃದ್ಧಿ ಕಚೇರಿಯಿಂದ ಧನಸಹಾಯ ಪಡೆದಿರುವ ನೆರವು ಪ್ಯಾಕೇಜ್‌ನಲ್ಲಿ ಹೆಚ್ಚುವರಿ ಷೇರುಗಳಿಂದ ವೆಂಟಿಲೇಟರ್‌ಗಳು ಮತ್ತು ಆಮ್ಲಜನಕ ಸಾಂದ್ರಕಗಳು ಸೇರಿವೆ. ಭಾರತಕ್ಕೆ ಕಳುಹಿಸಬಹುದಾದ ಮೀಸಲು ಜೀವ ಉಳಿಸುವ ಸಾಧನಗಳನ್ನು ಗುರುತಿಸಲು ಆರೋಗ್ಯ ಮತ್ತು ಸಾಮಾಜಿಕ ಆರೈಕೆ ಇಲಾಖೆ ಎನ್‌ಎಚ್‌ಎಸ್ ಜೊತೆಗೆ ಯುಕೆಯಲ್ಲಿನ ಪೂರೈಕೆದಾರರು ಮತ್ತು ತಯಾರಕರೊಂದಿಗೆ ನಿಕಟವಾಗಿ ಕೆಲಸ ಮಾಡಿದೆ. 

08:31 April 26

ಕೋವಿಡ್​ ಆಸ್ಪತ್ರೆಯಲ್ಲಿ ಆಮ್ಲಜನಕ ಸಿಲಿಂಡರ್‌ ಸ್ಫೋಟ: ಸಾವಿನ ಸಂಖ್ಯೆ 82ಕ್ಕೆ ಏರಿಕೆ

ಕೋವಿಡ್​ ಆಸ್ಪತ್ರೆಯಲ್ಲಿ ಆಮ್ಲಜನಕ ಸಿಲಿಂಡರ್‌ ಸ್ಫೋಟ
ಕೋವಿಡ್​ ಆಸ್ಪತ್ರೆಯಲ್ಲಿ ಆಮ್ಲಜನಕ ಸಿಲಿಂಡರ್‌ ಸ್ಫೋಟ

ಬಾಗ್ದಾದ್ (ಇರಾಕ್): ಬಾಗ್ದಾದ್‌ನಲ್ಲಿನ ಕೊರೊನಾ ವೈರಸ್ ರೋಗಿಗಳಿಗೆ ಚಿಕಿತ್ಸೆ ನೀಡುವ ಇಬ್ನ್ ಅಲ್-ಖತೀಬ್ ಆಸ್ಪತ್ರೆಯಲ್ಲಿ ಸಂಭವಿಸಿದ ಭಾರಿ ಬೆಂಕಿ ಅವಘಡದಿಂದ ಸಾವನ್ನಪ್ಪಿದವರ ಸಂಖ್ಯೆ 82 ಕ್ಕೆ ಏರಿಕೆಯಾಗಿದೆ. 110 ಮಂದಿ ಗಾಯಗೊಂಡಿದ್ದಾರೆ ಎಂದು ಇರಾಕ್ ಆಂತರಿಕ ಸಚಿವಾಲಯ ತಿಳಿಸಿದೆ.

ಶನಿವಾರ ತಡರಾತ್ರಿ ಹಲವಾರು ಆಕ್ಸಿಜನ್ ಸಿಲಿಂಡರ್‌ಗಳು ಸ್ಫೋಟಗೊಂಡು, ಕೊರೊನಾ ವೈರಸ್ ರೋಗಿಗಳಿಗೆ ಚಿಕಿತ್ಸೆ ನೀಡಲು ಮೀಸಲಾಗಿರುವ ಇಬ್ನ್ ಅಲ್-ಖತೀಬ್ ಆಸ್ಪತ್ರೆಯಲ್ಲಿ ಭಾರಿ ಬೆಂಕಿ ಕಾಣಿಸಿಕೊಂಡಿದೆ ಎಂದು ದೇಶದ ನಾಗರಿಕ ರಕ್ಷಣಾ ಕ್ಸಿನ್ಹುವಾ ಪ್ರಕಟಣೆಯಲ್ಲಿ ತಿಳಿಸಿದೆ.  

07:43 April 26

ಎಲ್ಲರಿಗೂ ಉಚಿತವಾಗಿ ಲಸಿಕೆ ನೀಡಲು ಕೇಂದ್ರಕ್ಕೆ ಸಿದ್ದರಾಮಯ್ಯ ಆಗ್ರಹ

ಬೆಂಗಳೂರು: ಲಸಿಕೆ‌ ಪಡೆಯುವುದನ್ನು ಪ್ರೋತ್ಸಾಹಿಸಬೇಕಾದ ಕೇಂದ್ರ ಸರ್ಕಾರ, ಅದರ ಬೆಲೆ ಏರಿಸಿ ಜನತೆ ಅದನ್ನು ಪಡೆಯದಂತೆ ಮಾಡಲು ಹೊರಟಿದೆ. ಮೊದಲು ಎಲ್ಲರಿಗೂ ಉಚಿತವಾಗಿ ಲಸಿಕೆ ನೀಡಿ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

07:36 April 26

ಭಾರತದಿಂದ ಬರುವ ವಿಮಾನಗಳ ಮೇಲೆ ನೆದರ್ಲ್ಯಾಂಡ್ಸ್ ನಿರ್ಬಂಧ

ಆಂಸ್ಟರ್‌ಡ್ಯಾಮ್ [ನೆದರ್‌ಲ್ಯಾಂಡ್ಸ್]: ಕೊರೊನಾ ವೈರಸ್ ಸೋಂಕು ಹೆಚ್ಚುತ್ತಿರುವ ಮಧ್ಯೆ ಸೋಮವಾರದಿಂದ ಭಾರತದಿಂದ ಆಗಮಿಸುವ ಎಲ್ಲಾ ಪ್ರಯಾಣಿಕ ವಿಮಾನಗಳನ್ನು ಸ್ಥಗಿತಗೊಳಿಸುವುದಾಗಿ ನೆದರ್‌ಲ್ಯಾಂಡ್ಸ್ ಹೇಳಿದೆ. ಇಂದು ಸಂಜೆಯ ನಂತರ ಭಾರತದ ವಿಮಾನಯಾನದ ಮೇಲೆ ಹೇರಿರುವ ನಿರ್ಬಂಧ ಜಾರಿಗೆ ಬರಲಿದೆ. ಈ ನಿರ್ಬಂಧ ಮೇ1 ರ ವರೆಗೆ ಜಾರಿಯಲ್ಲಿರಲಿದೆ.

07:36 April 26

ಯುಎಸ್​ನಿಂದ ಭಾರತಕ್ಕೆ 300 ಕ್ಕೂ ಹೆಚ್ಚು ಆಮ್ಲಜನಕ ಸಾಂದ್ರಕಗಳ ರವಾನೆ

 ನ್ಯೂಯಾರ್ಕ್(ಯುಎಸ್​): ನ್ಯೂಯಾರ್ಕ್​ನ ಜಾನ್ ಎಫ್. ಕೆನಡಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಭಾನುವಾರ ಬೆಳಿಗ್ಗೆ  ಐದು ಟನ್​ ಆಮ್ಲಜನಕ ಸಾಂದ್ರಕಗಳನ್ನು ನ್ಯೂಯಾರ್ಕ್‌ನಿಂದ ಭಾರತಕ್ಕೆ ರವಾನಿಸಲಾಗಿದೆ. ಏರ್ ಇಂಡಿಯಾದ ಎ 102 ಐದು ಟನ್ ಆಮ್ಲಜನಕ ಸಾಂದ್ರಕಗಳನ್ನು ಸರಕುಗಳಾಗಿ ಸಾಗಿಸುತ್ತಿದೆ ಮತ್ತು ಸೋಮವಾರ ಮಧ್ಯಾಹ್ನದ ವೇಳೆಗೆ ದೆಹಲಿಗೆ ತಲುಪಲಿದೆ ಎಂದು ಯುಎಸ್​ನಲ್ಲಿರುವ ಭಾರತೀಯ ಸರ್ಕಾರಿ ಅಧಿಕಾರಿ ತಿಳಿಸಿದ್ದಾರೆ. 

07:06 April 26

ಗುಜರಾತ್‌ನ ಆಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿ ಬೆಂಕಿ ಅವಘಡ

ಭಾನುವಾರ ರಾತ್ರಿ ಗುಜರಾತ್​ನ ಸೂರತ್‌ನಲ್ಲಿರುವ ಖಾಸಗಿ ಆಸ್ಪತ್ರೆಯ ಐಸಿಯುನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಗಂಭೀರ ಸ್ಥಿತಿಯಲ್ಲಿದ್ದ 16 ಕೋವಿಡ್ ರೋಗಿಗಳನ್ನು ರಕ್ಷಿಸಿ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ಬೆಂಕಿಯಿಂದ ಯಾವುದೇ ಸಾವು-ನೋವು ಸಂಭವಿಸಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.

07:00 April 26

‘ಸ್ಟೇ ಸ್ಟ್ರಾಂಗ್​ ಇಂಡಿಯಾ’: ಬುರ್ಜ್ ಖಲೀಫಾ

ಯುನೈಟೆಡ್ ಅರಬ್ ಎಮಿರೇಟ್ಸ್: ಪ್ರಪಂಚದ ಅತಿ ಎತ್ತರದ ಕಟ್ಟಡ ಬುರ್ಜ್ ಖಲೀಫಾ ಮೇಲೆ ಭಾರತದ ತ್ರಿವರ್ಣ ಧ್ವಜದ ಬಣ್ಣಗಳು ಲೇಸರ್ ಬೆಳಕಿನಲ್ಲಿ ಮೂಡಿಬಂದಿದೆ. ಈ ಮೂಲಕ ಯುಎಇ ದೇಶ ಕೊರೊನಾ ಸವಾಲಿನ ಸಮಯದಲ್ಲಿ ಭಾರತಕ್ಕೆ ತನ್ನ ಬೆಂಬಲ ಘೋಷಿಸಿದೆ. 

ಇತ್ತ ಭಾರತಕ್ಕೆ ಮಹತ್ವದ ಆಮ್ಲಜನಕ ನೆರವು ನೀಡಲು ಫ್ರಾನ್ಸ್ ಮುಂದೆ ಬಂದಿದೆ. 

06:03 April 26

ದೇಶದಲ್ಲಿ ಕೊರೊನಾ ಮಹಾತಾಂಡವ

ಬೆಂಗಳೂರು: ದೇಶಾದ್ಯಂತ ಕೊರೊನಾ ತಲ್ಲಣ ಉಂಟು ಮಾಡಿದೆ. ಕೋವಿಡ್​ ಸೋಂಕಿಗೆ ಲಕ್ಷಾಂತರ ಜನ ತುತ್ತಾಗುತ್ತಿದ್ದಾರೆ. ಪ್ರತಿದಿನ ಸಾವಿರಾರು ಜನ ಸಾವನ್ನಪ್ಪುತ್ತಿದ್ದಾರೆ. ತಮ್ಮವರನ್ನು ಕಳೆದುಕೊಂಡ ಸಂಬಂಧಿಕರ ಆರ್ತನಾದ ಮುಗಿಲು ಮುಟ್ಟುತ್ತಿದೆ. ಇಡೀ ದೇಶವೇ ಕೊರೊನಾದಿಂದ ಉಂಟಾಗುತ್ತಿರುವ ಸಾವಿನ ಸೂತಕದಲ್ಲಿ ಕಣ್ಣೀರಿಡುತ್ತಿದೆ. 

ಆಸ್ಪತ್ರೆಯಲ್ಲಿ ಸರಿಯಾದ ಸಮಯಕ್ಕೆ ಬೆಡ್​, ಐಸಿಯು, ಸಕಾಲದಲ್ಲಿ ಚಿಕಿತ್ಸೆ, ಆಮ್ಲಜನಕ ಬೆಡ್‌ ಸಿಗದೆ ಅದೆಷ್ಟೋ ಜನರು ಕೊನೆಯುಸಿರೆಳೆಯುತ್ತಿದ್ದಾರೆ. ಇತ್ತ ಚಿತಾಗಾರದ ಮುಂದೆ ಸಾಲುಗಟ್ಟಿರುವ ಆಂಬ್ಯುಲೆನ್ಸ್​ಗಳು ಕೊರೊನಾ ಭೀಕರತೆಯ ಕಥೆ ಹೇಳುತ್ತಿವೆ. ಈ ಎಲ್ಲದರ ಮಧ್ಯೆ ಲಸಿಕೆಯಿಂದ ಮಹಾಮಾರಿಯ ವಿರುದ್ಧ ಹೋರಾಟ ಮುಂದುವರೆದಿದೆ. ಕೆಲವು ರಾಜ್ಯಗಳು ಲಾಕ್​ಡೌನ್​ ಘೋಷಿಸಿದ್ದರೆ, ಇನ್ನೂ ಕೆಲವು ವೀಕೆಂಡ್ ಕರ್ಫ್ಯೂ, ರಾತ್ರಿ ಕರ್ಫ್ಯೂ ಮೂಲಕ ಕೋವಿಡ್​ ತಡೆಗೆ ಕ್ರಮವಹಿಸುತ್ತಿವೆ. ಮಾಸ್ಕ್​ ಧರಿಸದೇ ಓಡಾಡುವ ಜನತೆಗೆ ಪೊಲೀಸರು ಬಿಸಿ ಮುಟ್ಟಿಸುತ್ತಿದ್ದಾರೆ. 

ಭಾರತದ ಕೊರೊನಾ ವಿರುದ್ಧದ ಸಮರದಲ್ಲಿ ವಿಶ್ವದ ಬೇರೆ ದೇಶಗಳು ಸಹ ಕೈಜೋಡಿಸಿವೆ. ಕೋವಿಶೀಲ್ಡ್ ಲಸಿಕೆ ತಯಾರಿಸಲು ಭಾರತೀಯರಿಗೆ ತುರ್ತಾಗಿ ಬೇಕಾದ ಕಚ್ಚಾ ಸಾಮಗ್ರಿ ತಕ್ಷಣ ಒದಗಿಸಲಾಗುವುದು ಎಂದು ಶ್ವೇತಭವನ ಭಾನುವಾರ ತಿಳಿಸಿದೆ. ಕೊರೊನಾ ರೋಗಿಗಳಿಗೆ ಚಿಕಿತ್ಸೆ ನೀಡಲು ಮತ್ತು ಭಾರತದಲ್ಲಿನ ಮುಂಚೂಣಿಯ ಆರೋಗ್ಯ ಕಾರ್ಯಕರ್ತರನ್ನು ರಕ್ಷಿಸಲು, ಸಹಾಯ ಮಾಡಲು, ಅಮೆರಿಕ ಚಿಕಿತ್ಸಕ, ಕ್ಷಿಪ್ರ ರೋಗನಿರ್ಣಯ ಪರೀಕ್ಷಾ ಕಿಟ್‌ಗಳು, ವೆಂಟಿಲೇಟರ್‌ಗಳು ಮತ್ತು ವೈಯಕ್ತಿಕ ರಕ್ಷಣಾ ಸಾಧನಗಳನ್ನು(ಪಿಪಿಇ) ಸರಬರಾಜು ಮಾಡಲಿದೆ. ಅಲ್ಲದೇ ಬ್ರಿಟನ್​, ಆಸ್ಟ್ರೇಲಿಯಾ ಸಹ ಕೊರೊನಾ ಕಷ್ಟದ ಕಾಲದಲ್ಲಿ ಭಾರತದ ಜೊತೆಗಿದ್ದೇವೆ ಎಂದು ಹೇಳಿವೆ. 

ಕರ್ನಾಟಕದಲ್ಲೂ ಕೊರೊನಾ ಅಟ್ಟಹಾಸ ಮುಂದುವರೆದಿದೆ. ಮಹಾಮಾರಿಗೆ ಭಾನುವಾರ ಒಂದೇ ದಿನ 143 ಮಂದಿ ಬಲಿಯಾಗಿದ್ದಾರೆ. 34,804 ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ. ಈಗಾಗಲೇ ಕೊರೊನಾ ತಡೆಗೆ ನೈಟ್​ ಕರ್ಫ್ಯೂ ಮತ್ತು ವೀಕೆಂಡ್​ ಕರ್ಫ್ಯೂ ವಿಧಿಸಲಾಗಿದೆ. ಆದರೂ ಕೋವಿಡ್​ ಕಂಟ್ರೋಲ್​ಗೆ ಬಾರದ ಕಾರಣ ಇಂದು ಮಹತ್ವದ ಸಚಿವ ಸಂಪುಟ ಸಭೆ ನಡೆಯಲಿದೆ. 

Last Updated :Apr 26, 2021, 6:30 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.