ETV Bharat / bharat

ಅಡ್ಡ ಮತದಾನ: ಹರಿಯಾಣ ಕಾಂಗ್ರೆಸ್​​ ಶಾಸಕ, ರಾಜಸ್ಥಾನ ಬಿಜೆಪಿ ಶಾಸಕಿ ಅಮಾನತು

author img

By

Published : Jun 11, 2022, 11:03 PM IST

BJP MLA Shobha Rani and Congress mla Kuldeep Bishnoi suspended
ಅಡ್ಡ ಮತದಾನ: ಹರಿಯಾಣ ಕಾಂಗ್ರೆಸ್​​ ಶಾಸಕ, ರಾಜಸ್ಥಾನ ಬಿಜೆಪಿ ಶಾಸಕಿ ಅಮಾನತು

ರಾಜ್ಯಸಭಾ ಚುನಾವಣೆಯಲ್ಲಿ ಅಡ್ಡ ಮತದಾನ ಸಂಬಂಧ ಹರಿಯಾಣದಲ್ಲಿ ಕಾಂಗ್ರೆಸ್​​ ಶಾಸಕ ಕುಲದೀಪ್ ಬಿಷ್ಣೋಯಿ ಹಾಗೂ ರಾಜಸ್ಥಾನದಲ್ಲಿ ಬಿಜೆಪಿ ಶಾಸಕಿ ಶೋಭಾರಾಣಿ ಕುಶ್ವಾಹಾ ಅವರು ಪಕ್ಷದಿಂದ ಅಮಾನತುಗೊಂಡಿದ್ದಾರೆ.

ನವದೆಹಲಿ: ಶುಕ್ರವಾರ ನಡೆದ ರಾಜ್ಯಸಭಾ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿದ್ದ ಹರಿಯಾಣ ಕಾಂಗ್ರೆಸ್​​ ಶಾಸಕ ಕುಲದೀಪ್ ಬಿಷ್ಣೋಯಿ ಅವರನ್ನು ಪಕ್ಷದಿಂದ ಉಚ್ಚಾಟನೆ ಮಾಡಲಾಗಿದೆ.

ಹಿಸ್ಸಾರ್ ಜಿಲ್ಲೆಯ ಅದಮ್‌ಪುರ್ ಕ್ಷೇತ್ರದ ಶಾಸಕರಾಗಿರುವ ಕುಲದೀಪ್, ಕಾಂಗ್ರೆಸ್​ನ ಅಧಿಕೃತ ಅಭ್ಯರ್ಥಿ ಅಜಯ್ ಮಕೇನ್ ಬದಲಿಗೆ ಬಿಜೆಪಿ ಬೆಂಬಲಿತ ಸ್ವತಂತ್ರ ಅಭ್ಯರ್ಥಿ ಕಾರ್ತಿಕೇಯ ಶರ್ಮಾ ಅವರಿಗೆ ಅಡ್ಡ ಮತದಾನ ಮಾಡಿದ್ದರು. ಅಲ್ಲದೇ, ಮತ್ತೊಬ್ಬ ಕಾಂಗ್ರೆಸ್​​ ಶಾಸಕ ಕೂಡ ಅಡ್ಡ ಮತದಾನ ಮಾಡಿದ್ದರು. ಪರಿಣಾಮ ಅಜಯ್ ಮಕೇನ್ 31 ಮತ ಪೈಕಿ 29 ಮತಗಳನ್ನು ಪಡೆದು ಸೋಲು ಕಂಡಿದ್ದಾರೆ.

ಆದ್ದರಿಂದ ಇದೀಗ ಶಾಸಕ ಕುಲದೀಪ್ ಬಿಷ್ಣೋಯ್ ಅವರನ್ನು ತಕ್ಷಣವೇ ಜಾರಿಗೆ ಬರುವಂತೆ ಕಾಂಗ್ರೆಸ್​ನ ಕಾರ್ಯಕಾರಿ ಸಮಿತಿಯ ವಿಶೇಷ ಆಹ್ವಾನಿತ ಹುದ್ದೆ ಸೇರಿದಂತೆ ಪಕ್ಷದ ಎಲ್ಲ ಸ್ಥಾನಗಳಿಂದ ಉಚ್ಚಾಟನೆ ಮಾಡಲಾಗಿದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಪತ್ರಿಕಾ ಪ್ರಕಟಣೆ ಹೊರಡಿಸಿದ್ದಾರೆ.

ಬಿಜೆಪಿ ಶಾಸಕಿ ಅಮಾನತು: ರಾಜಸ್ಥಾನದಲ್ಲಿ ಧೋಲ್​ಪುರ್​ ಬಿಜೆಪಿ ಶಾಸಕಿ ಶೋಭಾರಾಣಿ ಕುಶ್ವಾಹಾ ಕೂಡ ಅಡ್ಡ ಮತದಾನ ಮಾಡಿದ್ದು, ಕಾಂಗ್ರೆಸ್​​ಗೆ ಮತ ಹಾಕಿದ್ದಾರೆ ಎನ್ನಲಾಗುತ್ತದೆ. ಆದ್ದರಿಂದ ಶಾಸಕಿ ಶೋಭಾರಾಣಿ ಅವರನ್ನು ಪಕ್ಷದಿಂದ ಉಚ್ಚಾಟನೆ ಮಾಡಲಾಗಿದೆ. ಜೊತೆಗೆ ಕೇಂದ್ರ ಶಿಸ್ತು ಸಮಿತಿ ಶೋಕಾಸ್ ನೋಟಿಸ್ ಜಾರಿ ಮಾಡಿದೆ. ಅಲ್ಲದೇ, ಈ ವಿಷಯಕ್ಕೆ ಸಂಬಂಧಿಸಿದಂತೆ ಬಿಜೆಪಿ ಹೈಕಮಾಂಡ್ ರಾಜ್ಯ ಘಟಕದಿಂದಲೂ ವಿವರಣೆ ಕೇಳಿದೆ.

ಇತ್ತ, ಬೆಳವಣಿಗೆಗಳ ಬಳಿಕ ಶಾಸಕಿ ಶೋಭಾರಾಣಿ ಬಿಜೆಪಿ ರಾಜ್ಯ ನಾಯಕತ್ವಕ್ಕೆ ಸೆಡ್ಡು ಹೊಡೆದಿದ್ದಾರೆ. ಪಕ್ಷದ ನಾಯಕರ ನಡೆಯನ್ನೇ ಪ್ರಶ್ನಿಸಿ 5 ಅಂಶಗಳ ಪತ್ರವನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಿದ್ದಾರೆ. ನನ್ನನ್ನು ಅಮಾನತುಗೊಳಿಸುವಲ್ಲಿ ಆತುರತೆ ತೋರಲಾಗಿದೆ. ಪಕ್ಷದ ಸೋಲಿಗೆ ಕಾರಣವಾಗುವ ನಾಯಕರ ಮೇಲೂ ಇದೇ ರೀತಿ ಕ್ರಮ ವಹಿಸಿದ್ದರೆ ಪಕ್ಷಕ್ಕೆ ನಷ್ಟವಾಗುತ್ತಿರಲಿಲ್ಲ ಎಂದು ಕಿಡಿಕಾರಿದ್ದಾರೆ.

ಇದನ್ನೂ ಓದಿ: ಉತ್ತರಪ್ರದೇಶದಲ್ಲಿ ಗಲಭೆ ಸೃಷ್ಟಿಸಿದ 227 ಜನರ ಬಂಧನ.. ಕಠಿಣ ಕ್ರಮಕ್ಕೆ ಸಿಎಂ ಯೋಗಿ ಸೂಚನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.