ETV Bharat / bharat

ಹೈಕೋರ್ಟ್ ಆದೇಶ ಉಲ್ಲಂಘಿಸಿ ಆಂಧ್ರದಲ್ಲಿ ಕೋಳಿ ಕಾಳಗ... ಜನಪ್ರತಿನಿಧಿಗಳಿಂದಲೇ ಉದ್ಘಾಟನೆ!

author img

By

Published : Jan 15, 2023, 5:21 PM IST

representative image
ಸಾಂದರ್ಭಿಕ ಚಿತ್ರ

ಆಂಧ್ರಪ್ರದೇಶದಲ್ಲಿ ಕೋಳಿ ಕಾಳಗ ಹಾಗೂ ಜೂಜಾಟಗಳು ಜೋರಾಗಿ ನಡೆಯುತ್ತಿದ್ದು, ಪೊಲೀಸರು ಮತ್ತು ಜಿಲ್ಲಾಡಳಿತ ಕಣ್ಮುಚ್ಚಿ ಕುಳಿತಿದೆ ಎಂಬ ಆರೋಪ ಕೇಳಿ ಬಂದಿದೆ.

ವಿಜಯವಾಡ: ಮೂರು ದಿನಗಳ ಸಂಕ್ರಾಂತಿ ಹಬ್ಬದ ಮೊದಲ ದಿನವಾದ ಶನಿವಾರ ಆಂಧ್ರಪ್ರದೇಶದ ವಿಜಯವಾಡದ ಸುತ್ತಮುತ್ತಲಿನ ಕೃಷ್ಣ ಮತ್ತು ಎನ್‌ಟಿಆರ್ ಜಿಲ್ಲೆಗಳ ಹಲವು ಗ್ರಾಮಗಳಲ್ಲಿ ಕೋಳಿ ಕಾಳಗ ಮತ್ತು ಜೂಜಾಟವನ್ನು ಅದ್ಧೂರಿಯಾಗಿ ನಡೆಸಲಾಯಿತು. ಕೋಳಿ ಕಾಳಗವನ್ನು ನಿಷೇಧಿಸಿ ಹೈಕೋರ್ಟ್ ಆದೇಶ ನೀಡಿದ್ದರೂ ಚೋಡಾವರಂನ ಎಡುಪುಗಲ್ಲುನಲ್ಲಿ 'ಸಂಕ್ರಾಂತಿ ಆಚರಣೆ' ನೆಪದಲ್ಲಿ ಸ್ಥಳೀಯ ಮುಖಂಡರು ಮತ್ತು ಚುನಾಯಿತ ಪ್ರತಿನಿಧಿಗಳ ಬೆಂಬಲದೊಂದಿಗೆ ಸಂಘಟನಾ ಸಮಿತಿಗಳನ್ನು ರಚಿಸಿ 'ಸುವ್ಯವಸ್ಥಿತ' ರೀತಿಯಲ್ಲಿ ಅಖಾಡಗಳನ್ನು ಸ್ಥಾಪಿಸಲಾಗಿತ್ತು.

ಎನ್‌ಟಿಆರ್, ಕೃಷ್ಣಾ, ಏಲೂರು, ಪಶ್ಚಿಮ ಗೋದಾವರಿ, ಪೂರ್ವ ಗೋದಾವರಿ, ಡಾ.ಬಿ.ಆರ್.ಅಂಬೇಡ್ಕರ್ ಕೋಣಸೀಮಾ, ಕಾಕಿನಾಡ, ರಾಜಮಹೇಂದ್ರವರಂ, ಗುಂಟೂರು, ಪ್ರಕಾಶಂ, ನೆಲ್ಲೂರು ಮತ್ತಿತರ ಜಿಲ್ಲೆಗಳಲ್ಲಿ ಕಾಳಗ ನಡೆಸಲಾಗಿದೆ ಎಂದು ತಿಳಿದು ಬಂದಿದೆ. ಕೋಳಿಗಳ ಕಾದಾಟ ನೋಡಲು ಹೆಚ್ಚಿನ ಸಂಖ್ಯೆಯಲ್ಲಿ ಜನರು ನೆರೆದಿದ್ದರು. ಹುಂಜಗಳ ಮೇಲೆ ಪಣತೊಡುವವರನ್ನು ಹೊರತುಪಡಿಸಿ ಇತರರಿಗೆ ಅವಕಾಶ ನೀಡದಂತೆ ಕೋಳಿಗಳ ಕಾದಾಟದ ಅಖಾಡದ ಸುತ್ತ ಮುಳ್ಳು ಬೇಲಿ ಹಾಕಲಾಗಿತ್ತು. ಕಾಳಗ ವೀಕ್ಷಿಸಲು ಎತ್ತರದ ಆಸನ ವ್ಯವಸ್ಥೆಗಳನ್ನು ಮಾಡಲಾಗಿತ್ತು. ಪ್ರತಿಯೊಂದು ಕೋಳಿ ಕಾಳಗ ಪಂದ್ಯದ ಬೆಟ್ಟಿಂಗ್ 5 ಸಾವಿರಕ್ಕಿಂತ ಕಡಿಮೆಯಿಲ್ಲ ಎಂದು ವರದಿಯಾಗಿದೆ.

ಇದನ್ನೂ ಓದಿ: ಕೋಳಿಗಳ ಕಾಲಿಗೆ ಬ್ಲೇಡ್‌ ಕಟ್ಟದೇ ಕಾಳಗ ನಡೆಸಲು ಕೋರ್ಟ್​ ಸಮ್ಮತಿ

ತಾತ್ಕಾಲಿಕ ಟೋಲ್ ಗೇಟ್‌ ನಿರ್ಮಾಣ: ಎಡುಪುಗಲ್ಲು ಅಖಾಡದಲ್ಲಿ ಕೋಳಿ ಕಾಳಗವಲ್ಲದೆ, ಇಸ್ಪೀಟ್​, ರೂಲೆಟ್ ಮತ್ತಿತರ ಜೂಜಿನ ಆಟಗಳನ್ನು ಆಯೋಜಿಸಲಾಗಿತ್ತು. ಅಖಾಡಗಳಿಗೆ ಹೋಗುವ ರಸ್ತೆಗಳಲ್ಲಿ ಬ್ಯಾನರ್‌ಗಳ ಮೇಲೆ ಮಾಹಿತಿ ಪ್ರದರ್ಶನದ ಮೂಲಕ ಜನರು ಸುಲಭವಾಗಿ ಅಖಾಡಗಳನ್ನು ತಲುಪಬಹುದು ಎಂದು ಸಂಘಟಕರು ಖಚಿತಪಡಿಸಿದರು. ಅಲ್ಲದೇ ಸಂಘಟಕರು ತಾತ್ಕಾಲಿಕ ಟೋಲ್ ಗೇಟ್‌ಗಳು ಮತ್ತು ಪಾರ್ಕಿಂಗ್ ಸ್ಥಳಗಳನ್ನು ನಿರ್ಮಿಸಿ, ₹ 50 ರಿಂದ ₹ 200 ರವರೆಗೆ ಪಾರ್ಕಿಂಗ್ ಶುಲ್ಕವನ್ನು ಸಂಗ್ರಹಿಸಿದ್ದಾರೆ ಎನ್ನಲಾಗಿದೆ.

ಆಂಧ್ರಪ್ರದೇಶ ಕೋಳಿ ಕಾಳಗಕ್ಕೆ ಪ್ರಸಿದ್ಧಿ: ವರ್ಷದ ಮೊದಲ ಹಬ್ಬ ಸಂಕ್ರಾಂತಿ ಬಂದರೆ ದೇಶದೆಲ್ಲೆಡೆ ಸುಗ್ಗಿಯ ಸಂಭ್ರಮ. ಜತೆಗೆ, ಪ್ರಾಣಿಗಳ ಕಾಳಗ ಕೂಡ ಜೋರಾಗಿಯೇ ಇರುತ್ತದೆ. ತಮಿಳುನಾಡಿನಲ್ಲಿ ಜಲ್ಲಿಕಟ್ಟು, ಆಂಧ್ರಪ್ರದೇಶವು ಕೋಳಿ ಕಾಳಗಕ್ಕೆ ಪ್ರಸಿದ್ಧಿ. ಮೂರು ದಿನಗಳ ಸಂಕ್ರಾಂತಿ ಹಬ್ಬದಲ್ಲಿ ಗೋದಾವರಿ ಮತ್ತು ಕೃಷ್ಣಾ ಮತ್ತು ಗುಂಟೂರು ಜಿಲ್ಲೆಗಳ ಕೆಲವು ಭಾಗಗಳಲ್ಲಿ ಕೋಳಿ ಕಾಳಗ ಅತೀ ಆಕರ್ಷಣೀಯವಾಗಿದೆ. ನಾನು ಮತ್ತು ನನ್ನ ಕುಟುಂಬ ಬೆಂಗಳೂರಿನಿಂದ ಭೀಮಾವರಂಗೆ ಕಾಳಗ ವೀಕ್ಷಿಸಲು ಬಂದಿದ್ದೇವೆ ಎಂದು ಟೆಕ್ಕಿ ಭವ್ಯ ಎಂಬುವವರು ಹೇಳಿದರು.

ಜನಪ್ರತಿನಿಧಿಗಳೇ ಕಾಳಗ ಉದ್ಘಾಟಿಸಿ, ಹುಂಜಗಳಿಗೆ ಚಾಕು ಕಟ್ಟದೇ ಸಾಂಸ್ಕೃತಿಕ ಕಾಳಗ ಆಯೋಜಿಸಬಹುದು ಎಂದು ಹೇಳಿರುವುದು ವರದಿಯಾಗಿದೆ. ಹೈದರಾಬಾದ್, ಚೆನ್ನೈ, ಬೆಂಗಳೂರು ಸೇರಿದಂತೆ ಇತರ ನಗರಗಳಿಂದ ಬಂದವರು ಸೇರಿದಂತೆ ಪಂಟರ್‌ಗಳು ಹುಂಜಗಳ ಮೇಲೆ 10,000 ರಿಂದ 5 ಲಕ್ಷ ರೂ. ಪಣತೊಟ್ಟಿದ್ದರು.

ಲಕ್ಷಾಂತರ ರೂಪಾಯಿ ಬೆಟ್ಟಿಂಗ್: ಕೋಳಿ ಕಾಳಗ ನಡೆಸದಂತೆ ನಿಷೇಧ ಹೇರಿದ್ದರೂ ಕೂಡ ಆಂಧ್ರಪ್ರದೇಶದ ಕೃಷ್ಣಾ, ಪ್ರಕಾಶಂ, ಪೂರ್ವ ಮತ್ತು ಪಶ್ಚಿಮ ಗೋದಾವರಿ ಜಿಲ್ಲೆಗಳಾದ್ಯಂತ ಕೋಳಿ ಕಾಳಗ ಆಯೋಜಿಸಲಾಗಿದೆ. ಮೂರು ದಿನಗಳ ಕಾಲ ನಡೆಯುವ ಹುಂಜಗಳ ಕಾದಾಟದಲ್ಲಿ ಜನರು ಲಕ್ಷಾಂತರ ರೂ. ಬೆಟ್ಟಿಂಗ್ ಕಟ್ಟಿದ್ದಾರೆ ಎನ್ನಲಾಗುತ್ತಿದೆ. ಕೋಳಿಗಳಿಗೆ ಚಾಕು ಕಟ್ಟದೆ ಸಾಂಪ್ರದಾಯಿಕ ರೀತಿಯಲ್ಲಿ ಆಯೋಜಿಸಲಾಗಿದೆ ಎಂಬ ಷರತ್ತಿನ ಮೇಲೆ ಕೆಲವೆಡೆ ಪೊಲೀಸ್ ಅಧಿಕಾರಿಗಳು ಅನುಮತಿ ನೀಡಿದ್ದಾರೆ ಎಂದು ವರದಿಯಾಗಿದೆ.

ಇದನ್ನೂ ಓದಿ: ಆಂಧ್ರದಲ್ಲಿ ಸಂಕ್ರಾಂತಿ ಕೋಳಿ ಅಂಕ: ಒಂದೇ ಜಿಲ್ಲೆಯಲ್ಲಿ 12 ಸಾವಿರಕ್ಕೂ ಹೆಚ್ಚು ಹುಂಜ ಬಲಿ, ಕೋಟ್ಯಂತರ ಬೆಟ್ಟಿಂಗ್!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.