ETV Bharat / bharat

ತೃಣಮೂಲ ಕಾಂಗ್ರೆಸ್​ ಶಾಸಕರು, ಕೌನ್ಸಿಲರ್​ಗಳ ಮನೆ ಮೇಲೆ ಸಿಬಿಐ ದಾಳಿ

author img

By ETV Bharat Karnataka Team

Published : Nov 30, 2023, 6:04 PM IST

CBI raids on houses of Trinamool Congress MLAs and councillors
ತೃಣಮೂಲ ಕಾಂಗ್ರೆಸ್​ ಶಾಸಕರು, ಕೌನ್ಸಿಲರ್​ಗಳ ಮನೆ ಮೇಲೆ ಸಿಬಿಐ ದಾಳಿ

CBI raids on TMC leaders: ಶಾಲಾ ಶಿಕ್ಷಕರ ನೇಮಕಾತಿ ಹಗರಣ ಪ್ರಕರಣದ ತನಿಖೆ ಸಂಬಂಧ ಸಿಬಿಐ ಅಧಿಕಾರಿಗಳು ಇಂದು ಬೆಳಗ್ಗೆ ಏಕಕಾಲದಲ್ಲಿ ಟಿಎಂಸಿ ನಾಯಕರ ಮನೆ ಹಾಗೂ ಕಚೇರಿಗಳಿಗೆ ದಾಳಿ ನಡೆಸಿದ್ದಾರೆ.

ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಶಾಲಾ ಶಿಕ್ಷಕರ ನೇಮಕಾತಿ ಅಕ್ರಮ ಪ್ರಕರಣಗಳಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ಶಾಸಕ ಹಾಗೂ ಇಬ್ಬರು ಕೌನ್ಸಿಲರ್​ಗಳು ಸೇರಿದಂತೆ ತೃಣಮೂಲ ಕಾಂಗ್ರೆಸ್​ ನಾಯಕರ ನಿವಾಸಗಳ ಮೇಲೆ ಗುರುವಾರ ಬೆಳಗ್ಗೆ ಏಕಕಾಲದಲ್ಲಿ ಕೇಂದ್ರ ತನಿಖಾ ದಳ ದಾಳಿ ನಡೆಸಿದೆ.

ಮುರ್ಷಿದಾಬಾದ್​ ಜಿಲ್ಲೆಯ ಡೊಮ್ಕಲ್​ನ ಶಾಸಕ ಜಫಿಕುಲ್​ ಇಸ್ಲಾಂ ಮತ್ತು ಶಿಕ್ಷಕರ ನೇಮಕಾತಿ ಹಗರಣ ಪ್ರಕರಣದಲ್ಲಿ ಇದೀಗ ಜೈಲು ಸೇರಿರುವ ಪಾರ್ಥ ಚಟರ್ಜಿ ಅವರ ಆಪ್ತ ಸಹಾಯಕ ಹಾಗೂ ಕೋಲ್ಕತ್ತಾ ಮುನ್ಸಿಪಲ್​ ಕಾರ್ಪೋರೇಷನ್​ ಕೌನ್ಸಿಲರ್​ ಬಪ್ಪಡಿತ್ತಾ ದಾಸ್​ಗುಪ್ತಾ ಹಾಗೂ ತೃಣಮೂಲ ಕಾಂಗ್ರೆಸ್​ ಶಾಸಕಿ ಅದಿತಿ ಮುನ್ಷಿ ಅವರ ಪತಿ ಹಾಗೂ ಬೀಧಾನ ನಗರ ಮುನ್ಸಿಪಲ್​ ಕಾರ್ಪೋರೇಷನ್​ ಕೌನ್ಸಿಲರ್​ ದೇಬ್ರಾಜ್​ ಚಕ್ರವರ್ತಿ ಅವರ ಮನೆಗಳ ಮೇಲೆ ಸಿಬಿಐ ದಾಳಿ ನಡೆಸಿದೆ.

ಶಿಕ್ಷಕರ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಸಿಬಿಐ ತನಿಖೆಯ ಭಾಗವಾಗಿ ಈ ದಾಳಿಗಳನ್ನು ನಡೆಸಲಾಗುತ್ತಿದೆ. ಮನೆಗಳು ಹಾಗೂ ಕಚೇರಿಗಳ ಮೇಲೆ ದಾಳಿ ನಡೆಸಿರುವ ಅಧಿಕಾರಿಗಳು ಮಾಹಿತಿ ಕಲೆ ಹಾಕಿದ್ದಾರೆ. ತನಿಖೆ ಸಂಬಂಧಿಸಿದಂತೆ ಕೋಲ್ಕತ್ತಾ, ಮುರ್ಷಿದಾಬಾದ್​ ಮತ್ತು ಕೂಚ್​ ಬೆಹಾರ್​ ಜಿಲ್ಲೆಗಳಲ್ಲಿ ಮತ್ತು ಸುತ್ತಮುತ್ತಲಿನ ವಿವಿಧ ಸ್ಥಳಗಳಲ್ಲಿ ದಾಳಿ ನಡೆಸಿದ್ದಾರೆ.

ದೇಬ್ರಾಜ್​ ಚಕ್ರವರ್ತಿ ಅವರ ರಾಜ್​ಹತ್​ನಲ್ಲಿರುವ ಮನೆಯಲ್ಲಿ ಹಲವು ಗಂಟೆಗಳ ಕಾಲ ಶೋಧ ನಡೆಸಿದ ಸಿಬಿಐ ತನಿಖಾಧಿಕಾರಿಗಳು ಮಧ್ಯಾಹ್ನ ಚಕ್ರವರ್ತಿ ಅವರನ್ನು ತಮ್ಮೊಂದಿಗೆ ಕರೆದೊಯ್ದಿದ್ದಾರೆ. ಸಿಬಿಐ ಮೂಲಗಳ ಪ್ರಕಾರ ದೇವರಾಜ್​ ವಿರುದ್ಧ ಚುನಾವಣೋತ್ತರ ಹಿಂಸಾಚಾರದಲ್ಲಿ ಭಾಗಿಯಾದ ಆರೋಪಗಳು ಹಾಗೂ ಪುರಸಭೆಯ ನೇಮಕಾತಿ ಭ್ರಷ್ಟಾಚಾರ ಪ್ರಕರಣದಲ್ಲೂ ಅವರ ಹೇಸರು ಕೇಳಿ ಬಂದಿದೆ.

ತನಿಖೆ ಸಂಬಂಧ ಮೊದಲ ಬಾರಿಗೆ ಕೂಚ್​ ಬಿಹಾರ್​ ತೃಣಮೂಲ ಕಾಂಗ್ರೆಸ್​ ಅಧ್ಯಕ್ಷ ಸಜಲ್​ ಸರ್ಕಾರ್​ ಅವರ ಮನೆ ಮೇಲೆ ದಾಳಿ ಮಾಡಿರುವ ಸಿಬಿಐ ಅಧಿಕಾರಿಗಳು ಕೋಲ್ಕತ್ತಾದ ಗಡಿ ದಾಟಿ ತನಿಖೆ ಕೈಗೊಂಡಿದ್ದಾರೆ. ಕೂಚ್​ ಬಿಹಾರ್​ನ ಪರೇಶ್​ ಕರ್​ ಚೌಪತಿ ಪ್ರದೇಶದಲ್ಲಿರುವ ಬಿಎಲ್​ಡಿ ಕಾಲೇಜಿನ ಮಾಲೀಕರ ಮನೆಗೆ ತೆರಳಿದ್ದಾರೆ. ಆದರೆ, ಆ ವೇಳೆ ಅಲ್ಲಿ ಯಾರೂ ಇಲ್ಲದ ಕಾರಣ ನೆರೆ ಹೊರೆಯವರೊಂದಿಗೆ ಮಾತನಾಡಿ ನಿರ್ಣಾಯಕ ಮಾಹಿತಿ ಸಂಗ್ರಹಿಸಿದ್ದಾರೆ.

ಬುರ್ವಾನ್​ ಶಾಸಕ ಜಿಬಾನ್​ ಕೃಷ್ಣ ಸಹಾ ಅವರನ್ನು ಸಿಬಿಐ ಬಂಧಿಸಿದ್ದು, ಇದೀಗ ಡೊಮ್ಕಲ್​ನ ಶಾಸಕ ಜಫಿಕುಲ್​ ಇಸ್ಲಾಂ ಅವರ ಮನೆ ಮೇಲೆ ದಾಳಿ ನಡೆಸಿದೆ. ಸುಮಾರು ಒಂದೂವರೆ ಗಂಟೆಗೂ ಹೆಚ್ಚು ಕಾಲ ಅಲ್ಲೇ ಇದ್ದು ತನಿಖೆ ನಡೆಸಿದ್ದಾರೆ. ಇದಲ್ಲದೇ ಬುರ್ವಾನ್​ ಪೊಲೀಸ್​ ಠಾಣೆಯ ಕೂಲಿ ಚೌರಸ್ತಾ ಇಂಟರ್​ ಸೆಕ್ಷನ್​ನಲ್ಲಿರುವ ಬಿಇ ಕಾಲೇಜಿನ ಮಾಲೀಕ ಸಜಲ್​ ಅನ್ಸಾರಿ ಅವರ ಮನೆ ಮೇಲೂ ಸಿಬಿಐ ದಾಳಿ ನಡೆಸಿದೆ. ಈ ದಾಳಿಗಳ ಮಧ್ಯೆ ಆಡಳಿತಾರೂಢ ತೃಣಮೂಲ ಕಾಂಗ್ರೆಸ್​ ಹಾಗೂ ಪ್ರತಿಪಕ್ಷ ಬಿಜೆಪಿ ಪರಸ್ಪರ ವಾಗ್ದಾಳಿ ನಡೆಸಿವೆ.

ಇದನ್ನೂ ಓದಿ: ಕೇಂದ್ರ ಸರ್ಕಾರದಿಂದ ಸಿಬಿಐ, ಇಡಿ, ತೆರಿಗೆ ಇಲಾಖೆಗಳ ದುರುಪಯೋಗ: ಶಶಿ ತರೂರ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.