ಹೈದರಾಬಾದ್: ಕೇಂದ್ರ ಸರ್ಕಾರದ ಕಾರ್ಯವೈಖರಿಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದ ಬಿಜೆಪಿ ಸಂಸದ ವರುಣ್ ಗಾಂಧಿ ಇದೀಗ ಉತ್ತರಪ್ರದೇಶದ ಯೋಗಿ ಆದಿತ್ಯನಾಥ್ ಸರ್ಕಾರವನ್ನು ಮತ್ತೆ ತರಾಟೆಗೆ ತೆಗೆದುಕೊಂಡಿದ್ದಾರೆ.
ಉತ್ತರಪ್ರದೇಶದಲ್ಲಿ ನ.28ರಂದು ನಡೆದ ಶಿಕ್ಷಕರ ಅರ್ಹತಾ ಪರೀಕ್ಷೆ (UPTET)ಪತ್ರಿಕೆಯು, ಪರೀಕ್ಷೆಗೂ ಮುನ್ನವೇ ಸೋರಿಕೆಯಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದ್ದವು. ಇದನ್ನು ಯೋಗಿ ಆದಿತ್ಯನಾಥ್ ಸರ್ಕಾರದ ಅಸಮರ್ಥತೆ ಎಂದು ಆರೋಪಿಸಿರುವ ವರುಣ್ ಗಾಂಧಿ ತಮ್ಮ ಅಸಮಾಧಾನ ಟ್ವೀಟ್ ಮಾಡುವ ಮೂಲಕ ಹೊರಹಾಕಿದ್ದಾರೆ.
'ಮೊದಲೇ ಯುವಕರಿಗೆ ಸರ್ಕಾರಿ ನೌಕರಿ ಸಿಗುತ್ತಿಲ್ಲ. ಒಂದು ವೇಳೆ ಸಿಗುವ ಅವಕಾಶ ಇದ್ದರೆ ಈ ರೀತಿ ಪ್ರಶ್ನೆ ಪತ್ರಿಕೆ ಸೋರಿಕೆಯಾಗುತ್ತದೆ. ಸರ್ಕಾರ ಪರೀಕ್ಷೆಯೊಂದನ್ನು ನಡೆಸಿದರೆ ವಿದ್ಯಾರ್ಥಿಗಳು ಅದರ ಫಲಿತಾಂಶಕ್ಕಾಗಿ ವರ್ಷಾನುಗಟ್ಟಲೇ ಕಾಯಬೇಕು. ಇದರ ಮಧ್ಯೆ ಹಲವಾರು ಹಗರಣಗಳೂ ಸುಳಿಯುತ್ತವೆ ಎಂದು ಹರಿಹಾಯ್ದಿದ್ದಾರೆ.
1.25 ಕೋಟಿ ಉದ್ಯೋಗಾಸಕ್ತರು ರೈಲ್ವೆ ಇಲಾಖೆಯ ಗ್ರೂಪ್ ಡಿ ಹುದ್ದೆಗೆ ನಡೆದ ಪರೀಕ್ಷಾ ಫಲಿತಾಂಶಕ್ಕಾಗಿ 2 ವರ್ಷದಿಂದ ಕಾಯುತ್ತಿದ್ದಾರೆ. ಸೇನಾ ನೇಮಕಾತಿಯಲ್ಲೂ ಇದೇ ರೀತಿ ಆಗಿದೆ. ಹೀಗಾದರೆ ದೇಶದ ಯುವಕರು ಎಲ್ಲಿಯತನಕ ತಾಳ್ಮೆಯಿಂದರಬೇಕು? ಎಂದು ಪ್ರಶ್ನಿಸಿ ಟ್ವೀಟ್ ಮಾಡಿದ್ದಾರೆ. ಬಿಜೆಪಿ ಸಂಸದ ವರುಣ್ ಗಾಂಧಿ ಅವರು ಈ ಹಿಂದೆಯೂ ಕೃಷಿ ಕಾಯ್ದೆಗಳ ವಿಚಾರವಾಗಿ ಯೋಗಿ ಆದಿತ್ಯನಾಥ್ ಸರ್ಕಾರವನ್ನು ಟೀಕಿಸಿದ್ದರು.