ದೆಹಲಿ: ಲೋಕಸಭೆಯಲ್ಲಿ ಬಜೆಟ್ ಮಂಡನೆಗೆ ಒಂದು ವಾರ ಇರುವಂತೆ ಆಯವ್ಯಯಕ್ಕೆ ಸಂಬಂಧಿಸಿದ ಪ್ರತಿಗಳನ್ನು ಮುದ್ರಣಕ್ಕೆ ಕಳುಹಿಸಿ ಕೊಡಲಾಗುತ್ತದೆ. ಈ ಹಿನ್ನೆಲೆಯಲ್ಲಿ ಬಜೆಟ್ ತಯಾರಿಕೆಯಲ್ಲಿ ಕೆಲಸ ಮಾಡಿದ ಅಧಿಕಾರಿಗಳು ಹಾಗು ಸಿಬ್ಬಂದಿಗೆ ಹಲ್ವಾ ವಿತರಿಸುವುದು ಹಿಂದಿನಿಂದಲೂ ಬಂದಿರುವ ಸಂಪ್ರದಾಯ. ಈ ಹಿನ್ನೆಲೆಯಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇವತ್ತು ಹಲ್ವಾ ಹಂಚಿದರು.
ಬಜೆಟ್ ಪ್ರಕ್ರಿಯೆ ಶುರುವಾದ ಬಳಿಕ ಹಣಕಾಸು ಸಚಿವಾಲಯದ ಅಧಿಕಾರಿಗಳು, ಸಿಬ್ಬಂದಿ ಹಾಗು ಇತರ ಸಹಾಯಕ ಸಿಬ್ಬಂದಿ ತಮ್ಮ ಮನೆಗಳಿಗೆ ಹೋಗುವ ಹಾಗಿಲ್ಲ. ಬಜೆಟ್ ಗೌಪ್ಯತೆ ಕಾಯ್ದುಕೊಳ್ಳಲು ಈ ಪದ್ಧತಿಯನ್ನು ರೂಢಿಸಿಕೊಳ್ಳಲಾಗಿದೆ. ಇಲ್ಲಿ ತಂಗುವ ಸಿಬ್ಬಂದಿಗೆ ಫೋನ್, ಇಮೇಲ್ ಅಥವಾ ಯಾವುದೇ ಮಾಧ್ಯಮದ ಮೂಲಕ ಸಂಪರ್ಕಿಸಲೂ ಕೂಡ ಅವಕಾಶವಿಲ್ಲ. ಹಣಕಾಸು ಸಚಿವಾಲಯದ ಹಿರಿಯ ಅಧಿಕಾರಿಗಳಿಗೆ ಮಾತ್ರ ಮನೆಗೆ ತೆರಳಲು ಅವಕಾಶ ಕಲ್ಪಿಸಲಾಗಿದೆ. ಈ ಹಿನ್ನೆಲೆಯಲ್ಲಿ ಅವರಿಗೆಲ್ಲಾ ಹಲ್ವಾ ಮೂಲಕ ಸಿಹಿ ಹಂಚುವ ಸಂಪ್ರದಾಯ ಬಹಳ ಹಿಂದಿನಿಂದಲೂ ನಡೆಯುತ್ತಾ ಬಂದಿದೆ.
ನಾರ್ಥ್ಬ್ಲಾಕ್ನ ಕಟ್ಟಡದಲ್ಲಿ ಬೃಹತ್ ಕಡಾಯಿಯಲ್ಲಿ ಹಲ್ವಾ ತಯಾರಿಸಲಾಗುತ್ತದೆ. ಈ ಮೂಲಕ ಬಜೆಟ್ ಪ್ರತಿಗಳ ಮುದ್ರಣಕ್ಕೆ ಅಧಿಕೃತ ಚಾಲನೆ ದೊರೆಯುತ್ತದೆ.