ETV Bharat / bharat

LIVE UPDATE: ಭಾರತ್ ಬಂದ್​ಗೆ ಮಿಶ್ರ ಪ್ರತಿಕ್ರಿಯೆ... ಬೆಂಗಳೂರಲ್ಲಿ ಪ್ರತಿಭಟನಾ ಸಭೆ ಮುಕ್ತಾಯ

author img

By

Published : Sep 27, 2021, 7:13 AM IST

Updated : Sep 27, 2021, 3:19 PM IST

bharat bandh
ಭಾರತ್ ಬಂದ್

15:04 September 27

ಪ್ರತಿಭಟನಾ ಸಭೆ ಮುಕ್ತಾಯ

  • ಬೆಂಗಳೂರಲ್ಲಿ ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಹೇಳಿಕೆ
  • ಇವತ್ತು ದೇಶದಾದ್ಯಂತ, ಕರ್ನಾಟಕದಾದ್ಯಂತ ಬಂದ್ ನಡೀತಿದೆ
  • ಸರ್ಕಾರ ಹಠಕ್ಕೆ ಬಿದ್ದು ಬಸ್ ಓಡಿಸ್ತಿದಾರೆ
  • ಭಾರತ ಸರ್ಕಾರದ ಅಜೆಂಡ್ ಕಂಪನೀಕರಣ
  • ಕೈಗಾರಿಕೆ, ಉದ್ದಿಮೆ, ವಾಣಿಜ್ಯವನ್ನು ಅದಾನಿ, ಅಂಬಾನಿಯವರಿಗೆ ಗುತ್ತಿಗೆ ಕೊಡೋದು ಅಥವಾ ಮಾರುವ ಪ್ರಕ್ರಿಯೆ ಆಗ್ತಿದೆ
  • ರಾಷ್ಟ್ರೀಯ ಹೆದ್ದಾರಿ, ಜನರ ಆಸ್ತಿಯಾಗಿರುವ ವಿದ್ಯುಚ್ಛಕ್ತಿ ಉತ್ಪಾದನೆ ಮಾಡಿದ್ದನ್ನು ಖಾಸಗಿಗೆ ಮಾರಾಟ ಮಾಡ್ತಿದ್ದಾರೆ
  • ವಿಮಾನ ನಿಲ್ದಾಣ, ಬಂದರು ಎಲ್ಲವನ್ನು ನಗದೀಕರಣ ಮಾಡ್ತಿದ್ದಾರೆ
  • ಇದು ಸಾಮಾನ್ಯ ಜನಕ್ಕೆ ಅರ್ಥ ಆಗ್ತಿಲ್ಲ
  • ಪೆಟ್ರೋಲ್ ದರ 105 ರೂ, ಇದರಲ್ಲಿ 37 ರೂ ತೆರಿಗೆಯಾಗಿ ನರೇಂದ್ರ ಮೋದಿ‌ ಖಜಾನೆಗೆ, 36 ರೂ. ಬೊಮ್ಮಾಯಿ ಸರ್ಕಾರದ ಖಜಾನೆಗೆ ಹೋಗ್ತಿದೆ
  • ಯಾಕೆ ಹೀಗೆ ಸರ್ಕಾರ ನಡೆಸ್ತೀರಿ ಎಂದು ಪ್ರತಿಭಟನೆ ಮೂಲಕನೇ ಕೇಳಬೇಕಿದೆ
  • ಗ್ಯಾಸ್, ಡೀಸೆಲ್ ಹಣೆಬರವೂ ಇದೆ
  • ಕಂಪನೀಕರಣದ ಒಂದು ಭಾಗ ಕೃಷಿ ಕಾಯ್ದೆಗಳು
  • ಕೋವಿಡ್ ಕಡಿಮೆ ಆದ್ರೆ ಕಾನೂನು ಮಾಡಲು ಸಾಧ್ಯ ಎಂದು ಕೋವಿಡ್ ವೇಳೆ ಸುಗ್ರೀವಾಜ್ಞೆ ತಂದರು
  • ಹತ್ತು ತಿಂಗಳಿಂದ ಟ್ರ್ಯಾಕ್ಟರ್ ಅನ್ನೇ ಮನೆ ಮಾಡಿಕೊಂಡು, ಚಳಿ ಮಳೆ ಗಾಳಿ ಲೆಕ್ಕಿಸದೇ ಪ್ರತಿಭಟನೆ ಮಾಡ್ತಿದಾರೆ
  • ಪ್ರತಿಭಟನೆಯಲ್ಲಿದ್ದ 700 ಜನ ಸತ್ತಿದ್ದಾರೆ
  • ಇದನ್ನು ನೋಡುವ ಬದಲು ಪ್ರಧಾನಿ ಅಮೆರಿಕಾಕ್ಕೆ ಹೋಗಿದ್ದರು
  • ಇಂದು ಬಂದ್ ಕಾರ್ಯಕ್ರಮ ಯಶಸ್ವಿಯಾಗಿದೆ, ದೇಶದಲ್ಲಿ ಚರ್ಚೆಗೆ ಕಾರಣವಾಗಿದೆ
  • ಪ್ರತಿಭಟನಾ ಸಭೆ ಮುಕ್ತಾಯ, ಮೈಸೂರು ಬ್ಯಾಂಕ್​​ನಿಂದ ಚದುರಿದ ಪ್ರತಿಭಟನಾಕಾರರು

13:35 September 27

ದೇವಿ ಮೈಮೇಲೆ ಬಂದಿದ್ದಾಳೆಂದು ರೈತ ಮಹಿಳೆ ಹೈಡ್ರಾಮಾ

ಬೆಳಗಾವಿ: ಬೆಳಗಾವಿಯಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆ ವೇಳೆ ಮಹಿಳೆಯೋರ್ವರು ಹೈಡ್ರಾಮಾ ಮಾಡಿದ ಘಟನೆ ನಡೆದಿದೆ.

ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಹಟ್ಟಿಹೊಳಿ ಗ್ರಾಮದ ರೇಣುಕಾ ತಡಕೋಡ ಎಂಬಾಕೆ ಮೈಮೇಲೆ ಸವದತ್ತಿಯ ರೇಣುಕಾದೇವಿ ಬಂದಿದ್ದಾಳೆ ಎಂದು ಹೈಡ್ರಾಮಾ ಮಾಡಿದರು. ನಮ್ಮ ಹೋರಾಟಕ್ಕೆ ತೊಂದರೆ ಕೊಟ್ಟರೆ ನಿಮ್ಮನ್ನು ಬಿಡುವುದಿಲ್ಲ ಎಂದು ಮಹಿಳೆ ಕಿರುಚಾಡಿದ್ದಾಳೆ.

13:35 September 27

ಬಾರುಕೋಲು ಪ್ರತಿಭಟನೆಗೆ ಮುಂದಾದ ರೈತರು:

ಅಥಣಿ: ರೈತ ಮುಖಂಡ ಮಹಾದೇವ ಮಡಿವಾಳ ಹಾಗೂ ಪ್ರಕಾರ ಪೂಜಾರಿ ನೇತೃತ್ವದಲ್ಲಿ ಪಟ್ಟಣದಲ್ಲಿ ರೈತರು  ಪ್ರತಿಭಟನೆ ನಡೆಸಿದರು. ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದ ಹೋರಾಟಗಾರರು, ಬಾರುಕೋಲು ಪ್ರತಿಭಟನೆ ನಡೆಸಿದರು.

12:37 September 27

ಬಂದ್ ಕೈ ಬಿಟ್ಟರೆ ಸೂಕ್ತ: ಸಂಸದ ಜಿ.ಎಂ ಸಿದ್ದೇಶ್ವರ್

ದಾವಣಗೆರೆ: ನಾನು ಚಡ್ಡಿ ಹಾಕಿಕೊಳ್ಳುವಾಗ ಪೆಟ್ರೋಲ್ ಹಾಗೂ ಇತರ ವಸ್ತುಗಳ ಬೆಲೆ ಕಡಿಮೆ ಇತ್ತು, ಆದರೆ ಇದೀಗ ಪ್ಯಾಂಟ್ ಹಾಕಿಕೊಳ್ಳುತ್ತಿದ್ದೇನೆ. ಹಾಗಾಗಿ, ಎಲ್ಲಾ ವಸ್ತುಗಳ ಬೆಲೆ ಜಾಸ್ತಿಯಾಗಿದೆ ಎಂದು ಸಂಸದ ಜಿ.ಎಂ. ಸಿದ್ದೇಶ್ವರ್ ರೈತರ ಪ್ರತಿಭಟನೆಯನ್ನು ಅಲ್ಲಗೆಳೆದರು.  

ರೈತರಿಗೆ ಅನುಕೂಲವಾಗುವ ಕಾಯ್ದೆಗಳನ್ನು ಕೇಂದ್ರ ಸರ್ಕಾರ ನೀಡಿದ್ದು, ರೈತರು ಈ ಕಾಯ್ದೆಗಳನ್ನು ವಿರೋಧಿಸುತ್ತಿಲ್ಲ, ಸಂಘಟನೆಯವರು ಮಾತ್ರ ವಿರೋಧಿಸುತ್ತಿದ್ದಾರೆ. ಕೊರೊನಾದಿಂದ ಜನ ಬೇಸತ್ತಿದ್ದಾರೆ, ಹೋರಾಟಗಾರರು ಬಂದ್ ಕೈ ಬಿಟ್ಟರೆ ಸೂಕ್ತ ಎಂದು ಸಲಹೆ‌ ನೀಡಿದರು.  

12:29 September 27

ಡಿಸಿಪಿ ಕಾಲಿನ ಮೇಲೆ ಕಾರು ಹತ್ತಿಸಿದ ಚಾಲಕ

ಬೆಂಗಳೂರು: ರೈತಪರ ಸಂಘಟನೆಗಳು ಕೈಗೊಂಡಿರುವ ಪ್ರತಿಭಟನಾ ಮೆರವಣಿಗೆ ವೇಳೆ ಅವಾಂತ‌ರ ನಡೆದಿದೆ‌. ಮೆರವಣಿಗೆ ವೇಳೆ ಭದ್ರತೆ ಉಸ್ತುವಾರಿ ವಹಿಸಿಕೊಂಡಿದ್ದ ನಗರ ಉತ್ತರ ವಿಭಾಗದ ಡಿಸಿಪಿ ಧರ್ಮೇಂದ್ರ ಕುಮಾರ್ ಮೀನಾ ಅವರ ಕಾಲಿನ ಮೇಲೆ ಚಾಲಕ ಕಾರು ಹತ್ತಿಸಿದ್ದಾನೆ. ಗೋರಗುಂಟೆಪಾಳ್ಯ ಬಳಿ ಪ್ರತಿಭಟನಾಕಾರರು ಜಾಥಾ ನಡೆಸುತ್ತಿರುವ ವೇಳೆ ಕನ್ನಡ ಪರ ಹೋರಾಟಗಾರ ಗಿರೀಶ್ ಗೌಡ ಕಾರಿನ ಚಾಲಕ ಈ ಕೃತ್ಯವೆಸಗಿದ್ದಾನೆ.

ಈ ಸಂಬಂಧ ಯಶವಂತಪುರ ಸಂಚಾರಿ ಪೊಲೀಸರು ಚಾಲಕ ಹಾಗೂ ಕಾರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

12:21 September 27

ಧರಣಿ ವೇಳೆ ಆತ್ಮಹತ್ಯೆಗೆ ಯತ್ನಿಸಿದ ಅನ್ನದಾತರು

ಹಾವೇರಿ: ಬಂದ್ ಬೆಂಬಲಿಸಿ ಪ್ರತಿಭಟನೆಗೆ ಬಂದಿದ್ದ ಇಬ್ಬರು ರೈತರು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಹಾವೇರಿ ನಗರದ ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ನಡೆದಿದೆ. ಇಬ್ಬರು ರೈತರು ಆತ್ಮಹತ್ಯೆ ಮಾಡಿಕೊಳ್ಳಲು ಹಗ್ಗವನ್ನು ಟವೇಲ್​ನಲ್ಲಿ ಮುಚ್ಚಿ ಇಟ್ಕೊಂಡು ಬಂದಿದ್ದರು. ರೈತರ ಬಳಿಯಿದ್ದ ಹಗ್ಗವನ್ನು ಗಮನಿಸಿದ ಪೊಲೀಸರು ಅದನ್ನು ಕಿತ್ತುಕೊಂಡಿದ್ದಾರೆ.  

12:21 September 27

ಎತ್ತಿನ ಬಂಡಿ ಮೂಲಕ ಬೃಹತ್ ಪ್ರತಿಭಟನೆ

ಬಳ್ಳಾರಿ: ಕೃಷಿ ಕಾಯ್ದೆಗಳನ್ನು ವಿರೋಧಿಸಿ ನಾನಾ ಸಂಘಟನೆಗಳು ನಗರದ ರಾಯಲ್ ವೃತ್ತದಲ್ಲಿ ಎತ್ತಿನ ಬಂಡಿನ ಮೂಲಕ ಬೃಹತ್ ಪ್ರತಿಭಟನೆ ನಡೆಸಿದವು.  

ತುಂಗಭದ್ರಾ ರೈತಸಂಘ, ಎಐಟಿಯುಸಿ, ಎಸ್​ಯುಸಿಐ ಸೇರಿದಂತೆ 15 ಕ್ಕೂ ಹೆಚ್ಚು ಸಂಘಟನೆಗಳು ಬೃಹತ್ ಪ್ರತಿಭಟನೆ ನಡೆಸಿದವು. ಈ ಹೋರಾಟಕ್ಕೆ ಕಾಂಗ್ರೆಸ್ ಸಹ ಸಾಥ್​ ನೀಡಿತು.

12:01 September 27

ರಾಜಧಾನಿಯಲ್ಲಿ ಬೃಹತ್ ರ್‍ಯಾಲಿ:

ಬೆಂಗಳೂರು: ದಲಿತ, ಕಾರ್ಮಿಕ, ವಕೀಲ, ಕನ್ನಡಪರ ಸಂಘಟನೆಯ ನೂರಾರು ಕಾರ್ಯಕರ್ತರು ಟೌನ್ ಹಾಲ್​ನಿಂದ ಮೈಸೂರು ಬ್ಯಾಂಕ್ ಸರ್ಕಲ್ ವರೆಗೆ ಬೃಹತ್ ರ್‍ಯಾಲಿ, ತಮಟೆ ಚಳವಳಿ ನಡೆಸಿ, ಕೇಂದ್ರ ಹಾಗೂ ರಾಜ್ಯಸರ್ಕಾರದ ವಿರುದ್ಧ ಎಂದು ಆಕ್ರೋಶ ಹೊರಹಾಕಿದರು.  

ಈ ವೇಳೆ ಮಾತನಾಡಿದ ಕೋಡಿಹಳ್ಳಿ ಚಂದ್ರಶೇಖರ್, ಈಗಾಗಲೇ ನಗರದ ವಿವಿಧ ಭಾಗಗಳಿಂದ ರ್‍ಯಾಲಿಯಲ್ಲಿ ಭಾಗವಹಿಸಲು ರೈತರು ಬರುತ್ತಿದ್ದಾರೆ. ಆದರೆ ಪೊಲೀಸರು ಪ್ರತಿಭಟನೆಗೆ ಅಡ್ಡಿಪಡಿಸುತ್ತಿದ್ದಾರೆ. ಸರ್ಕಾರ ಬಂದ್ ಹತ್ತಿಕ್ಕುವ ಕೆಲಸ ಮಾಡುತ್ತಿದೆ.  ಜನಸಾಮಾನ್ಯರಿಂದ ಬಂದ್​ಗೆ ಬೆಂಬಲ ಸಿಕ್ಕಿದೆ. ಮೋದಿಯವರು ಕೃಷಿ ಕಾಯ್ದೆಗಳನ್ನು ಹಿಂಪಡೆಯಬೇಕು ಎಂದರು.  

ಮೆರವಣಿಗೆ ಹಿನ್ನೆಲೆ 600 ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ.

11:37 September 27

ದೆಹಲಿ, ಹರಿಯಾಣ ಗಡಿಯಲ್ಲಿ ಸಂಚಾರ ಅಸ್ತವ್ಯಸ್ತ:

ನವದೆಹಲಿ: ರೈತರು ಕೇಂದ್ರದ ನೂತನ ಕೃಷಿ ಕಾಯ್ದೆಗಳ ವಿರುದ್ಧ ನಡೆಸುತ್ತಿರುವ ಹೋರಾಟದಿಂದಾಗಿ  ದೆಹಲಿ, ಹರಿಯಾಣ ಗಡಿಗಳಲ್ಲಿ ಸಂಚಾರ ಅಸ್ತವ್ಯಸ್ತಗೊಂಡಿದೆ.  

ಹೋರಾಟಗಾರರು ಬಂದ್​ಗೆ ಬೆಂಬಲ ಸೂಚಿಸುವಂತೆ ಒತ್ತಾಯಿಸಿ ಹೆದ್ದಾರಿಗಳಲ್ಲಿ ವಾಹನ ಸಂಚಾರವನ್ನು ನಿರ್ಬಂಧಿಸಿದ್ದಾರೆ. ಜೊತೆಗೆ ರೈಲು ಹಳಿಗಳ ಮೇಲೆ ಕುಳಿತು ರೈತರು ಕೇಂದ್ರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಅನ್ನದಾತರ ಪ್ರತಿಭಟನೆಯಿಂದಾಗಿ ಸಂಚಾರ ಅಸ್ತವ್ಯಸ್ತಗೊಂಡಿದ್ದು, ಪೊಲೀಸರು ಟ್ರಾಫಿಕ್​ ಸಮಸ್ಯೆ ನಿವಾರಿಸಲು ಹರಸಾಹಸ ಪಡುತ್ತಿದ್ದಾರೆ. 

11:21 September 27

ರೈಲ್ವೆ ಹಳಿ ಮೇಲೆ ಕುಳಿತು ರೈತರ ಹೋರಾಟ:

ಪಂಜಾಬ್: ಮೂರು ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತರು ನಡೆಸುತ್ತಿರುವ ಆಂದೋಲನಕ್ಕೆ ದೇಶಾದ್ಯಂತ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಭಾರತ್ ಬಂದ್ ಬೆಂಬಲಿಸಿ ಅಮೃತಸರದ ದೇವಿದಾಸಪುರ ಗ್ರಾಮದಲ್ಲಿ ಹೋರಾಟಗಾರರು ರೈಲ್ವೆ ಹಳಿಗಳ ಮೇಲೆ ಕುಳಿತು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

11:13 September 27

ಭಾರತ್​ ಬಂದ್ ಮಾಡಿ ಜನರಿಗೆ ತೊಂದರೆ ಮಾಡಬೇಡಿ: ಬಸವರಾಜ ಬೊಮ್ಮಾಯಿ

ಹುಬ್ಬಳ್ಳಿ: ಭಾರತ ಬಂದ್ ಮಾಡಿ ಜನರಿಗೆ ತೊಂದರೆ ನೀಡುವ ಕೆಲಸ ಮಾಡಬಾರದು. ಜನರು ಈಗಷ್ಟೇ ಕೊರೊನಾ ಹೊಡೆತದಿಂದ ಚೇತರಿಸಿಕೊಳ್ಳುತ್ತಿದ್ದಾರೆ. ವೈಚಾರಿಕತೆಯ ಹಿನ್ನೆಲೆಯಲ್ಲಿ ಹೋರಾಟ ಮಾಡಬೇಕು ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.

ನಗರದಲ್ಲಿಂದು ಕೆಎಲ್ಇ ಕಾಲೇಜಿನ ಕಾರ್ಯಕ್ರಮಕ್ಕೆ ಆಗಮಿಸಿದ ವೇಳೆ ಸುದ್ದಿಗಾರರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಗುಲಾಮಗಿರಿ ಪಾರ್ಟಿಯಾಗಿದೆ. ಅಲ್ಲದೇ, ಬಿಜೆಪಿ ಆಡಳಿತ ನೋಡಿ ಮಾಜಿ ಸಿಎಂ ಸಿದ್ದರಾಮಯ್ಯನವರು ಹತಾಶರಾಗಿದ್ದಾರೆ ಎಂದು ವಾಗ್ದಾಳಿ ನಡೆಸಿದರು.  

ಭಾರತ್​ ಬಂದ್​ಗೆ ಕಾಂಗ್ರೆಸ್ ಬೆಂಬಲ ನೀಡಿರುವ ಕುರಿತು ಪ್ರತಿಕ್ರಿಯೆ ನೀಡಿದ ಅವರು, ನಾನು ಅಧಿವೇಶನದಲ್ಲಿಯೂ ಹೇಳಿದ್ದೇನೆ, ಈಗಲೂ ಹೇಳುತ್ತಿದ್ದೇನೆ. ಕಾಂಗ್ರೆಸ್ ವಿಪಕ್ಷವಾಗಿ ಭಾರತ ಬಂದ್​ಗೆ ಬೆಂಬಲ ನೀಡುತ್ತಿದೆ ಎಂದು ಅವರು ಹೇಳಿದರು.

10:49 September 27

ರೈತರ ಪ್ರತಿಭಟನೆಗೆ ಎಮ್ಮೆ ಎಂಟ್ರಿ:

ಧಾರವಾಡ: ಕೃಷಿ ಕಾಯ್ದೆಗಳನ್ನು ವಿರೋಧಿಸಿ ಧಾರವಾಡದ ಜ್ಯುಬಿಲಿ ಸರ್ಕಲ್‌ನಲ್ಲಿ ರೈತರು ಎಮ್ಮೆ ತಂದು ಪ್ರತಿಭಟನೆ ನಡೆಸಿದರು.

ಜಯ ಕರ್ನಾಟಕ ಸಂಘಟನೆ ಕಾರ್ಯಕರ್ತರು ಎಮ್ಮೆ ತಂದು ವಿನೂತನವಾಗಿ ಪ್ರತಿಭಟಿಸಿ ಕೇಂದ್ರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

10:38 September 27

ಬಿಕೋ ಎನ್ನುತ್ತಿರುವ ರಸ್ತೆಗಳು:

ವಿಜಯಪುರ: ಭಾರತ್ ಬಂದ್ ಹಿನ್ನೆಲೆ ಎಪಿಎಂಸಿ ವ್ಯಾಪ್ತಿಯ ಮಾರುಕಟ್ಟೆಗಳು ಬಂದ್ ಆಗಿದ್ದು, ವ್ಯಾಪಾರಸ್ಥರು ರೈತರ ಹೋರಾಟಕ್ಕೆ ಬೆಂಬಲ ಸೂಚಿಸಿದ್ದಾರೆ. ಬಂದ್ ಹಿನ್ನೆಲೆಯಲ್ಲಿ ವಿಜಯಪುರದಲ್ಲಿ ಹೆಚ್ಚಿನ ಪೊಲೀಸ್ ಭದ್ರತೆ ಒದಗಿಸಲಾಗಿದ್ದು, ಮಾರುಕಟ್ಟೆ ಆವರಣ ಹಾಗೂ ರಸ್ತೆಗಳು ಬಿಕೋ ಎನ್ನುತ್ತಿವೆ.

10:27 September 27

ಮಂಗಳೂರಿನಲ್ಲಿ ಹೇಗಿದೆ ಬಂದ್​?:

ಮಂಗಳೂರು: ಕೇಂದ್ರ ಸರ್ಕಾರದ ಕೃಷಿ ಕಾಯ್ದೆಗಳನ್ನು ವಿರೋಧಿಸಿ ಇಂದು‌ ಕರೆ ನೀಡಿರುವ ಭಾರತ ಬಂದ್​ಗೆ ಮಂಗಳೂರಿನಲ್ಲಿ ಬೆಂಬಲ ವ್ಯಕ್ತವಾಗಿಲ್ಲ.  

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜನ ಸಂಚಾರ, ವಾಹನ ಸಂಚಾರ ನಿರಾಳವಾಗಿ ನಡೆಯುತ್ತಿದ್ದು, ಸಾರ್ವಜನಿಕರಿಗೆ ಬಂದ್ ಬಿಸಿ ತಟ್ಟಿಲ್ಲ.  

ಇನ್ನು ಬಂದ್ ಬೆಂಬಲಿಸಿ ಮಂಗಳೂರು ಬಂದರಿನ ಕಾರ್ಮಿಕರ ಕಟ್ಟೆ ಬಳಿ ಬಂದರು ಶ್ರಮಿಕರ ಸಂಘದ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು‌ . ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಕರ್ನಾಟಕ ರಾಜ್ಯ ಹಮಾಲಿ ಕಾರ್ಮಿಕರ ಫೆಡರೇಶನ್ ಅಧ್ಯಕ್ಷ ಮಹಾಂತೇಶ್, ಕೃಷಿ ಕಾಯ್ದೆ ಜಾರಿಯಾದ್ರೆ ಕೃಷಿ ಮಾರುಕಟ್ಟೆಗಳು ಖಾಸಗಿಯವರ ಪಾಲಾಗಲಿದ್ದು , ರೈತರು ಮತ್ತು ಕೃಷಿ ಕಾರ್ಮಿಕರು ಸಂಕಷ್ಟಕ್ಕೊಳಗಾಗಲಿದ್ದಾರೆ ಎಂದರು.  

10:19 September 27

ರೈತರ ಹೋರಾಟಕ್ಕೆ ನಮ್ಮ ಬೆಂಬಲವಿದೆ: ಸಿದ್ದರಾಮಯ್ಯ

ಬೆಂಗಳೂರು: ರೈತರ ಹೋರಾಟಕ್ಕೆ ನಮ್ಮ ಸಂಪೂರ್ಣ ಬೆಂಬಲವಿದೆ. ನಾವು ಸಹ ಸಪೋರ್ಟ್ ಮಾಡಿದ್ದೇವೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ತಿಳಿಸಿದರು.

ಬೆಂಗಳೂರಿನಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ರೈತರ ಹೋರಾಟ ಕಾಂಗ್ರೆಸ್ ಪ್ರೇರಿತ ಬಂದ್ ಅಲ್ಲ, ಕಾಂಗ್ರೆಸ್ ಪರವಾದ ಹೋರಾಟವೂ ಅಲ್ಲ. ರೈತ ವಿರೋಧಿ ಕಾನೂನುಗಳನ್ನು ವಾಪಸ್​ ತೆಗೆದುಕೊಳ್ಳಿ ಎಂದು ಪ್ರತಿಭಟನೆ ಮಾಡ್ತಿದ್ದಾರೆ ಎಂದರು. 

ನಮ್ಮದು ರೈತ ಪರವಾಗಿರುವ ಪಕ್ಷವಾಗಿರುವುದರಿಂದ ನಾವೂ ಸಹ ಬೆಂಬಲ ನೀಡಿದ್ದೇವೆ. ಕೇಂದ್ರ ಸರ್ಕಾರ ಕೂಡಲೇ ಕಾಯ್ದೆಗಳನ್ನು ವಾಪಸ್​ ತೆಗೆದುಕೊಳ್ಳಲ್ಲಿ ಎಂದು ಒತ್ತಾಯಿಸಿದರು.

09:59 September 27

ಬಿಜೆಪಿಯವರು ಕಾಯ್ದೆಗಳನ್ನು ಹಿಂಪಡೆಯಲಿ: ಕೋಡಿಹಳ್ಳಿ ಚಂದ್ರಶೇಖರ್

ಕೆ.ಆರ್ ಪುರ : ಬಿಜೆಪಿಯವರಿಗೆ ರಾಜಕೀಯದ ಆಸೆ ಇದ್ದರೆ ಈ ರೈತ ವಿರೋಧಿ ಕಾಯ್ದೆಗಳನ್ನು ಬಿಟ್ಟಾಕಿ, ಇಲ್ಲವಾದ್ರೆ ಜನರು ನಿಮ್ಮನ್ನು ಕಸದ ತೊಟ್ಟಿಗೆ ಎಸೆಯುತ್ತಾರೆ ಎಂದು ಕೋಡಿಹಳ್ಳಿ ಚಂದ್ರಶೇಖರ್ ಹೇಳಿದರು.

ಸಂಯುಕ್ತ  ಕಿಸಾನ್ ಮೋರ್ಚಾ 3ನೇ ಬಾರಿಗೆ ಭಾರತ್ ಬಂದ್​ಗೆ ಕರೆ ನೀಡಿದೆ. ಕಳೆದ 1 ವರ್ಷದಿಂದ ದೆಹಲಿಯಲ್ಲಿ ರೈತರು ಬೀಡುಬಿಟ್ಟು ಕೃಷಿ ಕಾಯ್ದೆಯನ್ನು ಹಿಂಪಡೆಯಲು ಒತ್ತಾಯಿಸುತ್ತಿದ್ದಾರೆ ಎಂದು ಕೇಂದ್ರದ ವಿರುದ್ಧ ಕೋಡಿಹಳ್ಳಿ ಆಕ್ರೋಶ ವ್ಯಕ್ಯಪಡಿಸಿದರು. ನಂತರ ಟೌನ್ ಹಾಲ್​ ಮಾರ್ಗವಾಗಿ ಜಾಥಾ ಪ್ರಾರಂಭಿಸಿದರು. ಈ ವೇಳೆ ಕೋಡಿಹಳ್ಳಿಗೆ ನೂರಾರು ರೈತರು ಬೆಂಬಲ ಸೂಚಿಸಿದರು.

ರೈತರು ಜಾಥಾ ನಡೆಸಿದ ಹಿನ್ನೆಲೆ ಹೆದ್ದಾರಿ 65 ರಲ್ಲಿ ಟ್ರಾಫಿಕ್ ಜಾಮ್ ಸಮಸ್ಯೆ ಉಂಟಾಯಿತು. ಟ್ರಾಫಿಕ್ ನಿವಾರಣೆಗೆ ಪೊಲೀಸರು ಹರಸಾಹಸ ಪಟ್ಟರು.

09:40 September 27

ಹೆದ್ದಾರಿ ತಡೆಗೆ ಮುಂದಾದ ರೈತರ ಬಂಧನ:

ದಾವಣಗೆರೆ: ದಾವಣಗೆರೆಯಲ್ಲಿ ಬಂದ್​ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಎಂದಿನಂತೆ ಬಸ್, ಆಟೋ ಸಂಚಾರ ಆರಂಭವಾಗಿದೆ. ಜೊತೆಗೆ ಹೆದ್ದಾರಿ ತಡೆ ನಡೆಸಲು ಮುಂದಾಗಿದ್ದ ರೈತರನ್ನು ಪೊಲೀಸರು ಬಂಧಿಸಿದ್ದಾರೆ.  

ದಾವಣಗೆರೆ ಹೊರವಲಯದಲ್ಲಿರುವ ರಾಷ್ಟ್ರೀಯ ಹೆದ್ದಾರಿ 4  ಅನ್ನು ತಡೆದ ರೈತ ಸಂಘಟನೆಗಳು, ಕೇಂದ್ರ ಸರ್ಕಾರದ ಬೆಲೆ ಏರಿಕೆ ಖಂಡಿಸಿ ಆಕ್ರೋಶ ಹೊರಹಾಕಿದವು. ಈ ವೇಳೆ ರೈತರು ಮತ್ತು ಪೊಲೀಸರ ನಡುವೆ ವಾಗ್ವದ ನಡೆಯಿತು. ನಂತರ  20 ಕ್ಕೂ ಹೆಚ್ಚು ರೈತರನ್ನು ಪೊಲೀಸರು ವಶಕ್ಕೆ ಪಡೆದರು. 

09:39 September 27

ಕೇರಳದಲ್ಲಿ ಬಿಕೋ ಎನ್ನುತ್ತಿರುವ ರಸ್ತೆಗಳು

ಕೇರಳ: ಭಾರತ್​ ಬಂದ್​ಗೆ ಕೇರಳದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ತಿರುವನಂತಪುರಂನಲ್ಲಿ ಅಂಗಡಿಗಳನ್ನು ಮುಚ್ಚಲಾಗಿದ್ದು, ರಸ್ತೆಗಳು ಬಿಕೋ ಎನ್ನುತ್ತಿವೆ.  ಜೊತೆಗೆ  ರೈತರ ಹೋರಾಟಕ್ಕೆ ಎಲ್‌ಡಿಎಫ್ ಮತ್ತು ಯುಡಿಎಫ್‌ಗೆ ಸೇರಿದ ಟ್ರೇಡ್ ಯೂನಿಯನ್ ಬೆಂಬಲ ನೀಡಿದೆ.

09:26 September 27

ಅಮೃತಸರ:  ರೈತರು ಪ್ರತಿಭಟನೆ ನಡೆಸುತ್ತಿರುವ ಎಲ್ಲಾ ಸ್ಥಳಗಳಲ್ಲೂ ಬೆಳಗ್ಗೆ 5 ಗಂಟೆಯಿಂದಲೇ ಸೂಕ್ತ ಭದ್ರತೆ ನೀಡಲು ಪೊಲೀಸರನ್ನು ನಿಯೋಜಿಸಲಾಗಿದೆ. ರೈತರು ಶಾಂತಿಯುತವಾಗಿ ಹೋರಾಟ ಮುಂದುವರೆಸಿದರೆ ಅವರ ಜೊತೆ ಅಹಿತಕರವಾಗಿ ವರ್ತಿಸಬೇಡಿ, ಏನಾದರೂ ಸಮಸ್ಯೆ ಸಂಭವಿಸಿದರೆ ನನ್ನ ಗಮನಕ್ಕೆ ತನ್ನಿ ಎಂದು ಪೊಲೀಸರಿಗೆ ಸೂಚಿಸಿರುವುದಾಗಿ ಇನ್ಸ್‌ಪೆಕ್ಟರ್ ಸಂಜೀವ್ ಕುಮಾರ್ ತಿಳಿಸಿದರು.

09:25 September 27

ಅಂಗಡಿ ಮುಂದೆ ಅಡ್ಡಬಿದ್ದು ಬಾಗಿಲು ಮುಚ್ಚಿಸಿದ ಪ್ರತಿಭಟನಾಕಾರರು

ಚಾಮರಾಜನಗರ: ಇಂದು ಬೆಳಗ್ಗೆ 6.30 ರಿಂದಲೇ ಬಂದ್ ಬೆಂಬಲಿಸಿ ಪ್ರತಿಭಟಿಸುತ್ತಿರುವ ಪ್ರತಿಭಟನಾಕಾರು ತೆರೆದಿದ್ದ ಹೋಟೆಲ್, ಮಳಿಗೆ, ಬೀದಿಬದಿ ವ್ಯಾಪಾರಿಗಳ ಮುಂದೆ ಅಡ್ಡಡ್ಡ ಮಲಗಿ, ನಮಸ್ಕರಿಸಿ ಬಾಗಿಲು ಮುಚ್ಚಿಸಿದರು.

ಕಬ್ಬು ಬೆಳೆಗಾರರ ಸಂಘ, ಬಿಎಸ್​ಪಿ, ಕನ್ನಡಪರ ಹೋರಾಟಗಾರರು ಸಂಯುಕ್ತವಾಗಿ ಪ್ರತಿಭಟನಾ ಮೆರವಣಿಗೆ ನಡೆಸಿ, ಬಂದ್ ನಡುವೆಯೂ ತೆರೆದಿದ್ದ ಮಾರುಕಟ್ಟೆ ರಸ್ತೆ, ಡಿವಿಏಷನ್ ರಸ್ತೆ, ದೊಡ್ಡಂಗಡಿ ಬೀದಿ, ಗುಂಡ್ಲುಪೇಟೆ ವೃತ್ತದ ಬಳಿಯ ಹೋಟೆಲ್, ಅಂಗಡಿಗಳ ಮುಂಭಾಗ ಅಡ್ಡಡ್ಡ ಬಿದ್ದು ನಮಸ್ಕರಿಸಿ, ಬಾಗಿಲು ಮುಚ್ಚುವ ತನಕ  ಪ್ರತಿಭಟನಾಕಾರರು ಮನವೊಲಿಸಿದರು.

09:16 September 27

ಉರುಳು ಸೇವೆ ಮೂಲಕ ಪ್ರತಿಭಟನೆ

ಶಿವಮೊಗ್ಗ : ಬೆಳಗ್ಗೆಯಿಂದಲೇ ಕನ್ನಡಪರ ಸಂಘಟನೆಗಳು ಶಿವಮೊಗ್ಗದ‌ ಅಶೋಕ ವೃತ್ತ, ಸರ್ಕಾರಿ ಹಾಗೂ ಖಾಸಗಿ ಬಸ್ ನಿಲ್ದಾಣಗಳ ಮುಂದೆ ಉರುಳು ಸೇವೆ ಮಾಡುವ ಮೂಲಕ ಪ್ರತಿಭಟನೆ ನಡೆಸುತ್ತಿವೆ.

ಎಂದಿನಂತೆ ಸರ್ಕಾರಿ ಹಾಗೂ ಖಾಸಗಿ ಬಸ್ ಸಂಚಾರ :  ಶಿವಮೊಗ್ಗ ಜಿಲ್ಲೆಯಾದ್ಯಂತ ಸರ್ಕಾರಿ ಹಾಗೂ ಖಾಸಗಿ ಬಸ್ ಸಂಚಾರ ಎಂದಿನಂತೆ ಇದೆ. ಕೆಲ ಆಟೋ ಸಂಘಟನೆಗಳು ಬಂದ್​ಗೆ ಬೆಂಬಲ ಸೂಚಿಸಿದರೂ ಸಹ ಕೆಲ ಆಟೋಗಳು ರಸ್ತೆಗಳಿದಿವೆ. ಲಾರಿ, ಟ್ಯಾಂಟರ್ ಸೇರಿದಂತೆ ಇತರ ವಾಹನಗಳು ಸಂಚಾರ ನಡೆಸುತ್ತಿವೆ.  

ಬಂದ್​ಗೆ ಕೃಷಿ ಉತ್ಪನ್ನ ಸಮಿತಿ ಬೆಂಬಲ: ಶಿವಮೊಗ್ಗದ ವಿನೋಬ ನಗರದಲ್ಲಿನ ಕೃಷಿ ಉತ್ಪನ್ನ ಸಮಿತಿಯ ತರಕಾರಿ ಮಾರುಕಟ್ಟೆ ಸಂಪೂರ್ಣ ಬಂದ್ ಮಾಡಲಾಗಿದೆ.

09:16 September 27

ಪ್ರಯಾಣಿಕರಿಗೆ ತಟ್ಟಿದ ಬಂದ್ ಬಿಸಿ

ಕಲಬುರಗಿ: ಕಲಬುರಗಿ ಪ್ರಯಾಣಿಕರಿಗೆ ಭಾರತ್​ ಬಂದ್ ಬಿಸಿ ತಟ್ಟಿದೆ. ಸಾರಿಗೆ ಬಸ್ ತಾತ್ಕಾಲಿಕವಾಗಿ ಸ್ಥಗಿತವಾಗಿರುವ ಹಿನ್ನೆಲೆ ಕೇಂದ್ರ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರು ಕಾದು ಕುಳಿತ ದೃಶ್ಯ ಕಂಡು ಬಂದಿದೆ.

ಹೋರಾಟಗಾರರು ಸದ್ಯಕ್ಕೆ ಕೇಂದ್ರ ಬಸ್ ನಿಲ್ದಾಣದ ಎದುರು ಠಿಕಾಣಿ ಹೂಡಿದ್ದರಿಂದ ಸಾರಿಗೆ ಇಲಾಖೆ ಬಸ್ ಸಂಚಾರ ತಾತ್ಕಾಲಿಕವಾಗಿ ಸ್ತಬ್ಧವಾಗಿದೆ. ಹೀಗಾಗಿ ಬೀದರ್, ಬಳ್ಳಾರಿ, ಯಾದಗಿರಿ ಸೇರಿದಂತೆ ಬೇರೆ ಜಿಲ್ಲೆಗಳಿಗೆ ತೆರಳಬೇಕಾದ ಜನರು ಪರದಾಟ ನಡೆಸಬೇಕಾಯಿತು.

09:15 September 27

ಬೆಳಗಾವಿಯಲ್ಲಿ ಬಂದ್ ವಿಫಲ

ಬೆಳಗಾವಿ: ಕುಂದಾನಗರಿಯಲ್ಲಿ ಬಂದ್ ಸಂಪೂರ್ಣ ವಿಫಲವಾಗಿದೆ. ಎಪಿಎಂಸಿಯಲ್ಲಿ ಎಂದಿನಂತೆ ವ್ಯಾಪಾರ ವಹಿವಾಟು ನಡೆಯುತ್ತಿದೆ. ಎಂದಿನಂತೆ ಜನಜೀವನ ಆರಂಭಗೊಂಡಿದ್ದು, ಬೆಳಗ್ಗೆ 10 ಗಂಟೆಗೆ ಚನ್ನಮ್ಮ ವೃತ್ತದಲ್ಲಿ ಪ್ರತಿಭಟನೆ ನಡೆಸಲು ರೈತ ಸಂಘಟನೆಗಳ ನಿರ್ಧರಿಸಿವೆ.

09:06 September 27

ಕಾಂಗ್ರೆಸ್ ಕಾರ್ಯಕರ್ತರನ್ನು ವಶಕ್ಕೆ ಪಡೆದ ಪೊಲೀಸರು :

ಬೆಳಗಾವಿ: ರಾಷ್ಟ್ರೀಯ ಕಿಸಾನ್ ಮೋರ್ಚಾ ನೀಡಿರುವ ಭಾರತ್ ಬಂದ್ ಬೆಂಬಲಿಸಿ ಬೆಳಗಾವಿ ತಾಲೂಕಿನ ಹಿರೇಬಾಗೇವಾಡಿ ಬಳಿ ಪುಣೆ - ಬೆಂಗಳೂರು ಹೆದ್ದಾರಿ ತಡೆಯಲು ಯತ್ನಿಸಿದ ಕಾಂಗ್ರೆಸ್ ಕಿಸಾನ್ ಮೋರ್ಚಾ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದರು.

ಬಂದ್​ಗೆ ಬೆಂಬಲ ಸೂಚಿಸಿ ಬೆಳಗ್ಗೆ ಹಿರೇಬಾಗೇವಾಡಿ ಟೋಲ್​ ಬಳಿ ಹೆದ್ದಾರಿ ತಡೆಯಲು ಕೈ ಕಾರ್ಯಕರ್ತರು ಮುಂದಾದರು. ಕಾಂಗ್ರೆಸ್ ಮಹಿಳಾ ಕಾರ್ಯಕರ್ತೆ ಹೆದ್ದಾರಿ ಮೇಲೆ ಕುಳಿತು ಬೊಬ್ಬೆ ಹಾಕಿ, ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಪೊಲೀಸರ ಮನವೊಲಿಕೆಗೆ ಜಗ್ಗದ ಕೈ ಕಾರ್ಯಕರ್ತರನ್ನು ಹಿರೇಬಾಗೇವಾಡಿ ಠಾಣೆ ಪೊಲೀಸರು ವಶಕ್ಕೆ ಪಡೆದರು. 

09:06 September 27

  • ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಲಗ್ಗೆಯಿಟ್ಟ ಪ್ರಯಾಣಿಕರ ದಂಡು
  • ಬಂದ್ ಹಿನ್ನೆಲೆ ಬಸ್ ಸಿಗುತ್ತೋ, ಇಲ್ಲವೋ ಅಂತಾ ಬೆಳಗ್ಗೆಯೇ ವಿಮಾನ ನಿಲ್ದಾಣಕ್ಕೆ ಆಗಮಿಸುತ್ತಿರುವ ಪ್ರಯಾಣಿಕರು

09:06 September 27

ಉತ್ತರಕನ್ನಡ ಜಿಲ್ಲೆಯಲ್ಲಿ ಬಂದ್​​ಗೆ ನೀರಸ ಪ್ರತಿಕ್ರಿಯೆ

ಕಾರವಾರ: ಕೃಷಿ ಕಾಯ್ದೆ ತಿದ್ದುಪಡಿ ಹಾಗೂ ಅಗತ್ಯ ವಸ್ತುಗಳ ಬೆಲೆ ಏರಿಕೆ ವಿರೋಧಿಸಿ ರೈತಪರ ಸಂಘಟನೆಗಳು ಕರೆ ನೀಡಿರುವ ಭಾರತ್ ಬಂದ್ ಗೆ ಉತ್ತರಕನ್ನಡ ಜಿಲ್ಲೆಯಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.  

ಜಿಲ್ಲಾಕೇಂದ್ರ ಕಾರವಾರದಲ್ಲಿ ಬೆಳಗ್ಗೆಯಿಂದ ಬಸ್, ಆಟೋ, ಟ್ಯಾಕ್ಸಿ ಸಂಚಾರ ಪ್ರಾರಂಭವಾಗಿದೆ. ನಗರದ ಸರ್ಕಾರಿ ಬಸ್ ನಿಲ್ದಾಣದಿಂದ ಎಂದಿನಂತೆ ಬಸ್​ಗಳು ಹೊರ ಪ್ರದೇಶಕ್ಕೆ ತೆರಳುತ್ತಿದ್ದು, ನೆರೆಯ ಗೋವಾ ರಾಜ್ಯಕ್ಕೆ ಸಹ ಬಸ್​ಗಳು ಪ್ರಯಾಣಿಸುತ್ತಿವೆ. ಅಂಗಡಿಗಳು ಬಾಗಿಲು ತೆರೆದಿದ್ದು, ಶಾಲಾ ಕಾಲೇಜುಗಳಲ್ಲಿ ತರಗತಿಗಳು ಎಂದಿನಂತೆ ನಡೆಯಲಿದೆ.  

09:05 September 27

ಗಡಿಭಾಗದಲ್ಲಿ ಎಂದಿನಂತೆ ವಾಹನ ಸಂಚಾರ:

ಚಿಕ್ಕಬಳ್ಳಾಪುರ: ರಾಷ್ಟ್ರೀಯ ಹೆದ್ದಾರಿ 7 ಹಾಗೂ ಆಂಧ್ರ  ಗಡಿಭಾಗದಲ್ಲಿ ಬಂದ್​ಗೆ ಬೆಂಬಲ ಸಿಕ್ಕಿಲ್ಲ. ಎಂದಿನಂತೆ ವಾಹನ ಸಂಚಾರ ಮುಂದುವರೆದಿದೆ. ಬಾಗೇಪಲ್ಲಿ ಗಡಿಭಾಗದಲ್ಲಿ ಸಹ ಯಾವುದೇ ಅಡೆತಡೆ ಇಲ್ಲದೆ ಸಾರಿಗೆ ಬಸ್​ಗಳು ಸಂಚಾರ ನಡೆಸುತ್ತಿವೆ.

09:05 September 27

ಪರೀಕ್ಷೆ ಮುಂದೂಡಿಕೆ:

ವಿಜಯಪುರ: ಕೇಂದ್ರ ಸರ್ಕಾರದ ಮೂರು ಕೃಷಿ ಕಾಯ್ದೆ, ಖಾಸಗೀಕರಣ ಹಾಗೂ ಬೆಲೆ ಏರಿಕೆ ವಿರೋಧಿಸಿ ಇಂದು ವಿವಿಧ ರೈತ ಸಂಘಟನೆಗಳು ಭಾರತ್ ಬಂದ್​​ಗೆ ಕರೆ ಕೊಟ್ಟಿವೆ. ಈ ಹಿನ್ನೆಲೆಯಲ್ಲಿ ಅಕ್ಕಮಹಾದೇವಿ ವಿಶ್ವವಿದ್ಯಾಲಯದಲ್ಲಿ ಇಂದು(ಸೋಮವಾರ) ನಡೆಯಬೇಕಿದ್ದ ಪರೀಕ್ಷೆಗಳನ್ನು ಮುಂದೂಡಲಾಗಿದೆ.

ಇಂದು ಅಕ್ಕಮಹಾದೇವಿ ವಿವಿಯಲ್ಲಿ ಸ್ನಾತಕ ಮತ್ತು ಸ್ನಾತಕೋತ್ತರ, ಬಿಎಡ್ ಕೋರ್ಸ್‌ಗಳಿಗೆ ಪರೀಕ್ಷೆ ನಡೆಯಬೇಕಿತ್ತು. ಆದ್ರೆ ಬಂದ್ ಹಿನ್ನೆಲೆಯಲ್ಲಿ ವಿಶ್ವವಿದ್ಯಾಲಯ ಪರೀಕ್ಷೆಗಳನ್ನು ಮುಂದೂಡಿ ಆದೇಶ ಹೊರಡಿಸಿದೆ.

ಇಂದು ನಡೆಯಬೇಕಿದ್ದ ಬಿಎಡ್ ಪರೀಕ್ಷೆಯನ್ನ ನಾಳೆ ನಡೆಸಲು ವಿಶ್ವವಿದ್ಯಾಲಯ ನಿರ್ಧರಿಸಿದೆ. ಸ್ನಾತಕ/ಸ್ನಾತಕೋತ್ತರ ಪರೀಕ್ಷೆಗಳ ಬಗ್ಗೆ ಶೀಘ್ರದಲ್ಲೇ ನಿರ್ಧರ ಕೈಗೊಳ್ಳಲಾಗುವುದು ಎಂದು  ವಿವಿ ಆಡಳಿತ ಹೇಳಿದೆ.

08:50 September 27

ಬೆಂಗಳೂರಿನಲ್ಲಿ ಪ್ರತಿಭಟನಾಕಾರರನ್ನು ವಶಕ್ಕೆ ಪಡೆದ ಪೊಲೀಸರು

  • ಮೆಜೆಸ್ಟಿಕ್ ಒಳಗಡೆ ರ‍್ಯಾಲಿ, ಬಸ್ ತಡೆಗೆ ಯತ್ನ
  • ಕರವೇ ಶಿವರಾಮೇಗೌಡ, ಸಾರಾ ಗೋವಿಂದ್, ಗಿರೀಶ್ ಗೌಡ ನೇತೃತ್ವದಲ್ಲಿ ನಡೆದ ರ‍್ಯಾಲಿ
  • ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದ ಪ್ರತಿಭಟನಾಕಾರರು
  • ಬಸ್ ತಡೆಗೆ ಮುಂದಾದ ಹೋರಾಟಗಾರರನ್ನು ವಶಕ್ಕೆ ಪಡೆದ ಪೊಲೀಸರು
  • ಕೆ.ಆರ್‌.ಪುರ ಮಾರ್ಕೆಟ್​ನಲ್ಲಿ ಗ್ರಾಹಕರ ಸಂಖ್ಯೆ ಇಳಿಕೆ
  • ನಿನ್ನೆಯೇ ಅಗತ್ಯ ಸಾಮಾಗ್ರಿ ಖರೀದಿಸಿದ ಜನರು

08:43 September 27

ತಲೆ ಮೇಲೆ ಇಟ್ಟಿಗೆ ಇಟ್ಟು ಪ್ರತಿಭಟನೆ

ಕೊಪ್ಪಳ: ರೈತ ಸಂಘದ ಕಾರ್ಯಕರ್ತರು ನಗರದ ಕೇಂದ್ರೀಯ ಬಸ್ ನಿಲ್ದಾಣದ ಬಳಿ ವಿನೂತನವಾಗಿ ಪ್ರತಿಭಟನೆ ನಡೆಸುವ ಮೂಲಕ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ರೈತ ಸಂಘದ ಮುಖಂಡ ನಜೀರಸಾಬ ಮೂಲಿಮನಿ ನೇತೃತ್ವದಲ್ಲಿ ತಲೆ ಮೇಲೆ ಇಟ್ಟಿಗೆ ಇಟ್ಟುಕೊಂಡು ವಿನೂತನವಾಗಿ ಪ್ರತಿಭಟನೆ ನಡೆಸಿದರು. ಈ ವೇಳೆ ಬಸ್ ನಿಲ್ದಾಣದಲ್ಲಿದ್ದ ಕುರಿಗಾಹಿಯೊಬ್ಬರು ಪ್ರತಿಭಟನಾಕಾರರಿಗೆ ನಮಸ್ಕಾರ ಮಾಡುವ ಮೂಲಕ ಹೋರಾಟಕ್ಕೆ ಜಯವಾಗಲಿ ಎಂದು ಹಾರೈಸಿದರು.

ಜಿಲ್ಲೆಯಲ್ಲಿ ಸಾರಿಗೆ ಸಂಸ್ಥೆ ಬಸ್​ಗಳು ಎಂದಿನಂತೆ ಸಂಚಾರ ಮಾಡುತ್ತಿದ್ದು, 10 ಗಂಟೆಯ ನಂತರ ವಿವಿಧ ಸಂಘಟನೆಗಳು ಬಂದ್ ಬೆಂಬಲಿಸಿ ಪ್ರತಿಭಟನೆ ನಡೆಸಲಿವೆ. ವಿವಿಧ ಸಂಘಟನೆಗಳ ಮುಖಂಡರು ನಗರದಲ್ಲಿ ಸಂಚರಿಸಿ, ಹೊಟೇಲ್ ಸೇರಿದಂತೆ ಅಂಗಡಿಗಳನ್ನು ಬಂದ್ ಮಾಡಿ, ಹೋರಾಟಕ್ಕೆ ಬೆಂಬಲ ನೀಡುವಂತೆ ಮನವಿ ಮಾಡುತ್ತಿದ್ದಾರೆ.

08:39 September 27

ಮೆಜೆಸ್ಟಿಕ್‌ ಸುತ್ತಮುತ್ತ ಬಿಗಿ ಭದ್ರತೆ

ಬೆಂಗಳೂರು: ಭಾರತ್ ಬಂದ್ ಹಿನ್ನೆಲೆಯಲ್ಲಿ ಕೆಂಪೇಗೌಡ ಬಸ್ ನಿಲ್ದಾಣದ ಸುತ್ತಮುತ್ತಲು  ಪಶ್ಚಿಮ ವಿಭಾಗದ ಪೊಲೀಸರು ಬಿಗಿ ಭದ್ರತೆ ಕಲ್ಪಿಸಿದ್ದಾರೆ. ಬಸ್ ಸಂಚಾರದಲ್ಲಿ ಯಾವುದೇ ವ್ಯತ್ಯಯವಾಗದಂತೆ ಪೊಲೀಸರನ್ನು ನಿಯೋಜಿಸಲಾಗಿದೆ‌.  

ಬೆಳ್ಳಂಬೆಳಗ್ಗೆ ಮೆಜೆಸ್ಟಿಕ್​ಗೆ ಆಗಮಿಸಿದ ಡಿಸಿಪಿ ಸಂಜೀವ್ ಪಾಟೀಲ್ ಮಾಧ್ಯಮದವರೊಂದಿಗೆ ಮಾತನಾಡಿ, ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ಹಿನ್ನೆಲೆಯಲ್ಲಿ ಕಳೆದ ರಾತ್ರಿಯಿಂದ ಬಂದೋಬಸ್ತ್ ಕೈಗೊಳ್ಳಲಾಗಿದೆ. ಸಿವಿಲ್ ಪೊಲೀಸ್ ಜೊತೆಗೆ ಕೆಎಸ್​ಆರ್​ಪಿ ಹಾಗೂ ಸಿಎಆರ್ ತುಕಡಿ ನಿಯೋಜನೆ ಮಾಡಲಾಗಿದೆ. ಹಿಂಸಾತ್ಮಕ ಘಟನೆ ಆಗದಂತೆ ಎಚ್ಚರಿಕೆ ವಹಿಸಲಾಗಿದೆ. ಪಶ್ಚಿಮ ವಿಭಾಗದ ಎಲ್ಲಾ ಪೊಲೀಸರು ಕಾರ್ಯ ನಿರ್ವಹಿಸುತ್ತಿದ್ದಾರೆ. ಸಂಚಾರಿ ಪೊಲೀಸರನ್ನು ಕೂಡ ನಿಯೋಜನೆ ಮಾಡಲಾಗಿದೆ.‌ ಸಾರ್ವಜನಿಕರಿಗೆ ತೊಂದರೆ ಆದರೆ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಬಹುದು ಎಂದರು.

08:38 September 27

ವಾಹನ ಸಂಚಾರಕ್ಕೆ ಅವಕಾಶ:

ಗಂಗಾವತಿ: ಭಾರತ ಬಂದ್ ಅಂಗವಾಗಿ ಯಾವುದೇ ವಾಹನಗಳನ್ನು ಬಿಡಬಾರದು ಎಂದು ಒತ್ತಾಯಿಸಿ ವಿವಿಧ ಸಂಘಟನೆಗಳ ಮುಖಂಡರು ಸಾರಿಗೆ ಇಲಾಖೆ ಘಟಕಕ್ಕೆ‌ ಮುತ್ತಿಗೆ ಹಾಕಿದರು.

ಸ್ಥಳಕ್ಕೆ ಆಗಮಿಸಿದ ಪೊಲೀಸರು, ಮಕ್ಕಳಿಗೆ ಪರೀಕ್ಷೆಗಳಿವೆ, ತೊಂದರೆ ಕೊಡಬೇಡಿ. ಬಸ್ ಸಂಚಾರಕ್ಕೆ ಅವಕಾಶ ಕೊಡಿ ಎಂದರು. ಪೊಲೀಸರ ಮನವೊಲಿಕೆಗೆ ಸಂಘಟಕರು ಒಪ್ಪದಿದ್ದಾಗ ಸ್ಥಳಕ್ಕೆ ಆಗಮಿಸಿದ ನಗರ ಠಾಣೆಯ ಪಿಎಸ್​ಐ ವೆಂಕಟಸ್ವಾಮಿ, ವಾಹನ ಸಂಚಾರ, ಜನರ ಸಹಜ ಜೀವನಕ್ಕೆ ಪ್ರತಿಭಟನಾಕಾರರು ಅಡ್ಡಿಪಡಿಸುವಂತಿಲ್ಲ, ಈ ಕುರಿತು  ಕಾನೂನು ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಕೊನೆಗೆ ಹೋರಾಟಗಾರರು ವಾಹನಗಳ ಸಂಚಾರಕ್ಕೆ ಅವಕಾಶ ನೀಡಿದರು.

08:25 September 27

ಘಾಜಿಪುರ ಗಡಿಯಲ್ಲಿ ಅನ್ನದಾತರ ಪ್ರತಿಭಟನೆ:

ನವದೆಹಲಿ: ರೈತರ ಹೋರಾಟದ ಕಾವು ಹೆಚ್ಚಾಗಿದೆ. 'ಭಾರತ್ ಬಂದ್' ಗೆ ಕರೆ ನೀಡಿರುವುದರಿಂದ ಘಾಜಿಪುರ ಗಡಿಯಲ್ಲಿ ರೈತರು ಪ್ರತಿಭಟನೆ ಮುಂದುವರೆಸಿದ್ದಾರೆ.  

ಪ್ರತಿಭಟನೆ ಹಿನ್ನೆಲೆ ಉತ್ತರ ಪ್ರದೇಶದಿಂದ ಗಾಜಿಪುರ ಮಾರ್ಗದ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ. ಜೊತೆಗೆ ದೆಹಲಿ-ಅಮೃತಸರ ರಾಷ್ಟ್ರೀಯ ಹೆದ್ದಾರಿಯನ್ನು ಸಹ ಬಂದ್​ ಮಾಡಲಾಗಿದ್ದು, ಕೃಷಿ ಕಾನೂನುಗಳ ವಿರುದ್ಧದ ರೈತರ ಆಂದೋಲನಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. 

08:16 September 27

ಮಂಡ್ಯದಲ್ಲಿ ನೋ ಬಂದ್​ ಎಫೆಕ್ಟ್:

ಮಂಡ್ಯ : ನೂತನ ಕೃಷಿ ಕಾಯ್ದೆಗಳ ರದ್ದು ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆ ವಿರೋಧಿಸಿ ಇಂದು ನಡೆಯುತ್ತಿರುವ ಭಾರತ್ ಬಂದ್‌ ಬಿಸಿ ಮಂಡ್ಯದಲ್ಲಿ ಯಾವುದೇ ಪರಿಣಾಮ ಬೀರಿಲ್ಲ. ಎಂದಿನಂತೆ ಆಟೋ, ಬಸ್ ಸಂಚಾರ ಆರಂಭಗೊಂಡಿದೆ. ಈವರೆಗೆ ಹೋರಾಟಗಾರರು ಸಹ ರಸ್ತೆಗಿಳಿಯದೆ ಮರೆಯಾಗಿದ್ದಾರೆ.  

07:31 September 27

ಪಂಜಾಬ್ - ಹರಿಯಾಣ ಗಡಿ ಸಂಚಾರ ಸ್ಥಗಿತ

ಇಂದು ಭಾರತ್ ಬಂದ್​ಗೆ  ಕರೆ ನೀಡಿರುವ ಹಿನ್ನೆಲೆ ನಾವು ಶಂಭು ಗಡಿಯನ್ನು (ಪಂಜಾಬ್-ಹರಿಯಾಣ ಗಡಿ) ಸಂಜೆ 4 ಗಂಟೆಯವರೆಗೆ ನಿರ್ಬಂಧಿಸಿದ್ದೇವೆ ಎಂದು ರೈತರು ತಿಳಿಸಿದ್ದಾರೆ.

07:20 September 27

ಚಾಮರಾಜನಗರದಲ್ಲಿ ರಸ್ತೆಗಿಳಿದ ರೈತರು, ಇತರ ಸಂಘಟನೆಗಳು

ಚಾಮರಾಜನಗರ:  ಭಾರತ್ ಬಂದ್ ಬೆಂಬಲಿಸಿ ರೈತರು ಸೇರಿದಂತೆ ಹಲವು ಸಂಘಟನೆಗಳು ನಗರದಲ್ಲಿ ಬೆಳಗ್ಗೆಯೇ ರಸ್ತೆಗಿಳಿದು ಪ್ರತಿಭಟಿಸುತ್ತಿದ್ದಾರೆ. ರೈತ ಸಂಘ, ಹಸಿರು ಸೇನೆ ಮತ್ತು ಕಬ್ಬು ಬೆಳೆಗಾರರ ಸಂಘದ ಕಾರ್ಯಕರ್ತರು ನಡೆಸುತ್ತಿದ್ದ ಪ್ರತಿಭಟನೆಗೆ ಎಸ್​​ಡಿಪಿಐ, ಬಿಎಸ್ಪಿ, ಕನ್ನಡಪರ ಸಂಘಟನೆಗಳ ಬೆಂಬಲ ವ್ಯಕ್ತಪಡಿಸಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿವೆ. 

ಪೊಲೀಸರ ಎದುರೇ ರಾಷ್ಟ್ರೀಯ ಹೆದ್ದಾರಿ ಹಾದು ಹೋಗಿರುವ ಭುವನೇಶ್ವರಿ ವೃತ್ತದಲ್ಲಿ ಟೈರ್​​ಗೆ ಬೆಂಕಿ ಹಚ್ಚಿ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಸಾರಿಗೆ ಸಂಸ್ಥೆ ನಿಲ್ದಾಣ ಮುಂಭಾಗವು ರೈತರು ಧರಣಿ ನಡೆಸುತ್ತಿದ್ದು, ತಾಲೂಕು ಕೇಂದ್ರಗಳಲ್ಲೂ ಬಂದ್​ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಸಾರಿಗೆ ಬಸ್ ಸಂಚಾರ: ಬಂದ್ ನಡುವೆಯು ಕರ್ನಾಟಕ, ತಮಿಳುನಾಡು ಸಾರಿಗೆ ಸಂಸ್ಥೆ ಬಸ್ ಗಳು ಸಂಚರಿಸುತ್ತಿವೆ. ಹಾಲು, ದಿನ ಪತ್ರಿಕೆ ಅಂಗಡಿಗಳು ತೆರೆದಿವೆ, ತರಕಾರಿ ಮಾರುಕಟ್ಟೆಗೆ ವಿರಳ ಜನರು ಬರುತ್ತಿದ್ದಾರೆ.

07:19 September 27

ಧಾರವಾಡದಲ್ಲಿ ಬಸ್​ ಎದುರು ಮಲಗಿ ರೈತನಿಂದ ಆಕ್ರೋಶ

ಧಾರವಾಡ: ಧಾರವಾಡದಲ್ಲಿ ರೈತನೋರ್ವ ಬಸ್‌ಗೆ ಅಡ್ಡ ಮಲಗಿ ಪ್ರತಿಭಟನೆ ನಡೆಸಿದರು. ಎಂದಿನಂತೆ ಸಂಚಾರ ಆರಂಭಿಸಿರುವ ಬಸ್ ಸೇವೆ ಬಂದ್ ಮಾಡುವಂತೆ ಒತ್ತಾಯಿಸಿದರು. ಧಾರವಾಡ ಜ್ಯುಬಿಲಿ ಸರ್ಕಲ್‌ನಲ್ಲಿ ಬಸ್​​ ತಡೆದ ರೈತ ಮುಖಂಡ ನಿಂಗಪ್ಪಾ ಲಿಗಾಡೆ, ಬೇಕಾದರೆ ನಮ್ಮ ಮೇಲೆ ಬಸ್​ ಹಾಯಿಸಿಕೊಂಡು ಹೋಗಿ. ಆದರೆ ಬಸ್ ಆರಂಭ ಮಾಡದೆ, ರೈತರಿಗೆ ಬೆಂಬಲ ನೀಡಿ ಎಂದು ಮನವಿ ಮಾಡಿಕೊಂಡರು. ಧಾರವಾಡದ ಜ್ಯುಬಿಲಿ ಸರ್ಕಲ್‌ನಲ್ಲಿ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ.

07:18 September 27

ಬೆಳಗಾವಿಯಲ್ಲಿ ಟೈರ್‌ಗೆ ಬೆಂಕಿ ಹಚ್ಚಿ ರೈತರ ಆಕ್ರೋಶ

ಬೆಳಗಾವಿ: ಬೆಳಗಾವಿಯ ಬಸ್ ನಿಲ್ದಾಣದ ಎದುರು ಟೈರ್‌ಗೆ ಬೆಂಕಿ ಹಚ್ಚಿ ರೈತರು ಪ್ರತಿಭಟನೆ ನಡೆಸಿದರು. ಕರ್ನಾಟಕ ರಾಜ್ಯ ರೈತ ಸಂಘ, ಹಸಿರು ಸೇನೆ, ಕರವೇ (ಶಿವರಾಮೇಗೌಡ ಬಣ) ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದಾರೆ.

ರೈತ ಮುಖಂಡ ಸಿದಗೌಡ ಮೋದಗಿ ಒತ್ತಾಯ ಪೂರ್ವಕವಾಗಿ ಬಸ್‌ಗಳ ಸಂಚಾರ ಸ್ಥಗಿತಗೊಳಿಸುವಂತೆ ಸಾರಿಗೆ ಸಿಬ್ಬಂದಿಗೆ ಆಗ್ರಹಿಸಿದರು. ಬಸ್ ಚಾಲಕನಿಗೆ ತರಾಟೆ ತೆಗೆದುಕೊಂಡ ಸಿದ್ದಗೌಡ ಮೊದಗಿ, ಏನೇ ಅನಾಹುತ ಆದರೂ ನೀವೇ ಜವಾಬ್ದಾರಿ ಎಂದು ಎಚ್ಚರಿಕೆ ನೀಡಿದರು. ರೈತರು ಒತ್ತಾಯಪೂರ್ವಕವಾಗಿ ಬಸ್ ಸಂಚಾರಕ್ಕೆ ಅಡೆತಡೆ ಮಾಡುತ್ತಿದ್ದರೂ ಪೊಲೀಸರು ಮಾತ್ರ ಸ್ಥಳಕ್ಕೆ ಬಂದಿಲ್ಲ.

ಕುಂದಾನಗರಿ ಬೆಳಗಾವಿಯಲ್ಲಿ ಎಂದಿನಂತೆ ಬಸ್‌ಗಳ ಸಂಚಾರ ಇದೆ. ಬಸ್ ನಿಲ್ದಾಣಕ್ಕೆ ಪ್ರಯಾಣಿಕರು ಆಗಮಿಸುತ್ತಿದ್ದು, ಬೆಳಗಾವಿ ನಗರದಿಂದ ತಾಲೂಕು ಕೇಂದ್ರಗಳಿಗೆ ಬಸ್‌ಗಳು ಸಂಚರಿಸುತ್ತಿವೆ. ಭಾರತ್ ಬಂದ್‌ಗೆ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ, ರಾಜ್ಯ ಕಬ್ಬು ಬೆಳೆಗಾರರ ಸಂಘ ಸೇರಿ ರೈತ ಸಂಘಟ‌ನೆಗಳ ಬೆಂಬಲಿಸುವೆ. ಹಲವು ಸಂಘಟನೆಗಳು ಕೇವಲ ನೈತಿಕ ಬೆಂಬಲ ನೀಡಿವೆ.

07:18 September 27

ರಾಮನಗರದಲ್ಲಿ ಕರ್ನಾಟಕ ಜನಪರ ವೇದಿಕೆಯಿಂದ ಆಕ್ರೋಶ

ರಾಮನಗರ: ಕೃಷಿ ಕಾಯ್ದೆ ವಿರೋಧಿಸಿ ಕರೆ ನೀಡಿರುವ ಭಾರತ್ ಬಂದ್ ಹಿನ್ನೆಲೆಯಲ್ಲಿ ರಾಮನಗರದಲ್ಲೂ  ಮುಂಜಾನೆಯಿಂದಲೇ ಪ್ರತಿಭಟನೆ ಪ್ರಾರಂಭವಾಗಿದೆ. ಜಿಲ್ಲೆಯ ಚನ್ನಪಟ್ಟಣದಲ್ಲಿ ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಕಾರ್ಯಕರ್ತರು ಬಂದ್ ಬೆಂಬಲಿಸಿ ಪ್ರತಿಭಟಿಸಿದರು.

ಚನ್ನಪಟ್ಟಣದ ಕಾವೇರಿ ವೃತ್ತದಲ್ಲಿ ವೇದಿಕೆ ರಾಜ್ಯಾಧ್ಯಕ್ಷ ರಮೇಶ್ ಗೌಡ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು. ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ‌ಪ್ರತಿಕೃತಿ ದಹಿಸಿ ಕೇಂದ್ರ ಸರ್ಕಾರದ ನೀತಿಯನ್ನು ಖಂಡಿಸಿದರು.

07:13 September 27

ಬೆಣ್ಣೆನಗರಿ ದಾವಣಗೆರೆಯಲ್ಲಿ ಬೆಳ್ಳಂಬೆಳಗ್ಗೆ ರಸ್ತೆಗಿಳಿದ ರೈತ ಸಂಘಟನೆಗಳು

ದಾವಣಗೆರೆ: ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಕೃಷಿ ಕಾಯ್ದೆಗಳನ್ನು ವಿರೋಧಿಸಿ ಇಂದು ಭಾರತ್ ಬಂದ್​ಗೆ ಕರೆ ನೀಡಿರುವ ಹಿನ್ನೆಲೆಯಲ್ಲಿ ಬೆಣ್ಣೆನಗರಿ ದಾವಣಗೆರೆಯಲ್ಲಿ ರೈತ ಸಂಘಟನೆಗಳು ಬೆಳ್ಳಂಬೆಳಗ್ಗೆ ರಸ್ತೆಗಿಳಿದು ಪ್ರತಿಭಟನೆ ಆರಂಭಿಸಿದ್ದಾರೆ. ನಗರದ ಜಯದೇವ ಸರ್ಕಲ್‌ನಲ್ಲಿ ಕೋಡಿಹಳ್ಳಿ ಚಂದ್ರಶೇಖರ್ ಬಣದ ರೈತ ಸಂಘದ ಸದಸ್ಯರು ಕೈಗೆ ಕಪ್ಪು ಪಟ್ಟಿ ಕಟ್ಟಿಕೊಂಡು ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದರು.  

ತರಕಾರಿ ಸುರಿದು ರೈತರ ಆಕ್ರೋಶ:  

ರೈತ ಸಂಘ ಹುಚ್ಚವ್ವನಹಳ್ಳಿ ಮಂಜುನಾಥ್ ನೇತೃತ್ವದ ಬಣದ ಕಾರ್ಯಕರ್ತರು ರಸ್ತೆಗೆ ತರಕಾರಿ ಸುರಿದು ಪ್ರತಿಭಟನೆ ನಡೆಸಿದರು. ರೈತರ ಬೆಳೆಗೆ ಸರಿಯಾದ ಬೆಲೆ‌ ಸಿಗುತ್ತಿಲ್ಲ, ದಿನದಿಂದ ದಿನಕ್ಕೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬಂದ್ ಹಿನ್ನೆಲೆ ಬಸ್ ನಿಲ್ದಾಣಕ್ಕೆ ಆಗಮಿಸಿದ ರೈತ ಹಾಗೂ ಕಾರ್ಮಿಕ ಸಂಘಟನೆಗಳು, ಪ್ರಯಾಣಿಕರು ಬಂದ್​ಗೆ ಬೆಂಬಲಿಸುವಂತೆ ಚಾಲಕರಿಗೆ ಹಾಗೂ ಪ್ರಯಾಣಿಕರಿಗೆ ಮನವಿ ಮಾಡಿದರು.  

06:10 September 27

ಭಾರತ್ ಬಂದ್ ಅಪ್​ಡೇಟ್​:

ಕೇಂದ್ರ ಸರ್ಕಾರ ಜಾರಿಗೆ ತಂದಿರುವ ನೂತನ ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತ ಪರ ಸಂಘಟನೆಗಳು ಇಂದು ಭಾರತ್ ಬಂದ್​​ಗೆ ಕರೆ ನೀಡಿವೆ. ಹಾಗಾಗಿ ರಾಜ್ಯ ರೈತ ಸಂಘಟನೆಗಳು, ಕಾರ್ಮಿಕ, ದಲಿತ, ಕನ್ನಡಪರ, ವಿದ್ಯಾರ್ಥಿ ಸಂಘಟನೆಗಳು, ವರ್ತಕರು ಬೆಂಬಲ ಸೂಚಿಸಿದ್ದು, ರೈತ ಸಂಘಟನೆ ಕಾರ್ಯಕರ್ತರು ಬೆಳ್ಳಂಬೆಳಗ್ಗೆ ರಸ್ತೆಗಿಳಿದು ಪ್ರತಿಭಟನೆ ಆರಂಭಿಸಿದ್ದಾರೆ.

Last Updated :Sep 27, 2021, 3:19 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.