ETV Bharat / bharat

ಅಯೋಧ್ಯೆ ವಿಮಾನ ನಿಲ್ದಾಣದ ಮೊದಲ ಹಂತ ಡಿಸೆಂಬರ್ 15ಕ್ಕೆ ಉದ್ಘಾಟನೆ: ಸಿಎಂ ಆದಿತ್ಯನಾಥ್

author img

By PTI

Published : Dec 3, 2023, 9:01 AM IST

ಅಯೋಧ್ಯೆ ವಿಮಾನ ನಿಲ್ದಾಣ
ಅಯೋಧ್ಯೆ ವಿಮಾನ ನಿಲ್ದಾಣ

Ayodhya airport: ಅಯೋಧ್ಯೆಯಲ್ಲಿ ರಾಮನ ಮೂರ್ತಿ ಪ್ರತಿಷ್ಠಾಪನೆಗೂ ಮೊದಲು ಇಲ್ಲಿ ನಿರ್ಮಾಣವಾಗುತ್ತಿರುವ ವಿಮಾನ ನಿಲ್ದಾಣವನ್ನು ಉದ್ಘಾಟಿಸಲು ಸಿಎಂ ಯೋಗಿ ಆದಿತ್ಯನಾಥ್​ ಸರ್ಕಾರ ಮುಂದಾಗಿದೆ.

ಅಯೋಧ್ಯೆ(ಉತ್ತರಪ್ರದೇಶ): ರಾಮಜನ್ಮಭೂಮಿ ಅಯೋಧ್ಯೆಯಲ್ಲಿ ಮುಂದಿನ ವರ್ಷ ಭವ್ಯ ಮಂದಿರ ಲೋಕಾರ್ಪಣೆಗೂ ಒಂದು ತಿಂಗಳು ಮುಂಚೆ ಇಲ್ಲಿ ನಿರ್ಮಿಸಲಾಗುತ್ತಿರುವ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಮೊದಲ ಹಂತವನ್ನು ಡಿಸೆಂಬರ್​ 15ರಂದು ಉದ್ಘಾಟನೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ತಿಳಿಸಿದರು.

ಕೇಂದ್ರ ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಮತ್ತು ರಾಜ್ಯ ಸಚಿವ ಜನರಲ್ (ನಿವೃತ್ತ) ವಿ.ಕೆ.ಸಿಂಗ್ ಅವರೊಂದಿಗೆ 'ಮರ್ಯಾದಾ ಪುರುಷೋತ್ತಮ ಶ್ರೀರಾಮ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ನಿರ್ಮಾಣ ಕಾಮಗಾರಿಯನ್ನು ಪರಿಶೀಲಿಸಿದರು. ಜೊತೆಗೆ ಸಿಎಂ, ಕೇಂದ್ರ ಸಚಿವರು ವಿಮಾನ ನಿಲ್ದಾಣ ನಿರ್ಮಾಣ ಸಂಬಂಧ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಯೋಗಿ, ಮುಂದಿನ ವರ್ಷ ಜನವರಿ 22ರಂದು ವಿಶ್ವವಿಖ್ಯಾತ ಭವ್ಯ ರಾಮಮಂದಿರ ಉದ್ಘಾಟನೆ ನಡೆಯಲಿದೆ. ಅಂದು ದೇಶ-ವಿದೇಶಗಳಿಂದ ಜನರು ಆಗಮಿಸಲಿದ್ದಾರೆ. ಹೀಗಾಗಿ ಅಂತಿಮಘಟ್ಟದಲ್ಲಿರುವ ವಿಮಾನ ನಿಲ್ದಾಣದ ಮೊದಲ ಹಂತವನ್ನು ಡಿಸೆಂಬರ್​ನಲ್ಲಿ ಉದ್ಘಾಟನೆ ಮಾಡಲಾಗುವುದು ಎಂದರು.

ವೇಗದಿಂದ ಸಾಗುತ್ತಿದೆ ನಿರ್ಮಾಣ ಕಾರ್ಯ: ಪ್ರಧಾನಿ ನರೇಂದ್ರ ಮೋದಿ ದೂರದೃಷ್ಟಿಯಿಂದ ಭಗವಾನ್ ಶ್ರೀರಾಮನ ಪವಿತ್ರ ನಗರವು ಹೊಸ ರೂಪ ತಾಳುತ್ತಿದೆ. ಈ ಹಿಂದೆ ಅಯೋಧ್ಯೆಯಲ್ಲಿ 178 ಎಕರೆ ವಿಸ್ತೀರ್ಣದಲ್ಲಿ ಚಿಕ್ಕದಾದ ಏರ್‌ಸ್ಟ್ರಿಪ್ ಇತ್ತು. ಈಗ ಅದನ್ನು ಅಂತರರಾಷ್ಟ್ರೀಯ ವಿಮಾನ ನಿಲ್ದಾಣವಾಗಿ ಮಾರ್ಪಡಿಸಲಾಗಿದೆ. ಇದಕ್ಕಾಗಿ ಸರ್ಕಾರ 821 ಎಕರೆ ಭೂಮಿಯನ್ನು ಒದಗಿಸಿದೆ. ಇಲ್ಲಿ ಹೊಸ ವಿಮಾನ ನಿಲ್ದಾಣದ ನಿರ್ಮಾಣ ಕಾರ್ಯವು ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರದಿಂದ ಸಮರೋಪಾದಿಯಲ್ಲಿ ನಡೆಯುತ್ತಿದೆ ಎಂದು ಅವರು ಮಾಹಿತಿ ನೀಡಿದರು.

ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಮಾತನಾಡಿ, 65,000 ಚದರ ಅಡಿಗಳ ಮೊದಲ ಹಂತದ ವಿಮಾನ ನಿಲ್ದಾಣಕ್ಕೆ ಚಾಲನೆ ಸಿಗಲಿದೆ. ಇಲ್ಲಿ ಪ್ರತಿ ಗಂಟೆಗೆ ಎರಡರಿಂದ ಮೂರು ವಿಮಾನಗಳನ್ನು ನಿರ್ವಹಿಸಬಹುದು. 2,200 ಮೀಟರ್ ಉದ್ದದ ರನ್​​ವೇ ನಿರ್ಮಿಸುವ ಕೆಲಸ ನಡೆಯುತ್ತಿದೆ. ಬೋಯಿಂಗ್ 737 ಮತ್ತು ಏರ್​ಬಸ್​ 319 ಮತ್ತು 320 ವಿಮಾನಗಳು ಕೂಡ ಇಲ್ಲಿ ಇಳಿಯಲು ಸಾಧ್ಯವಾಗುತ್ತದೆ ಎಂದರು.

ಎರಡನೇ ಹಂತಕ್ಕೆ ಶೀಘ್ರವೇ ಸಚಿವ ಸಂಪುಟದ ಒಪ್ಪಿಗೆ ಪಡೆಯಲಾಗುವುದು. ಇದು 50 ಸಾವಿರ ಚದರ ಮೀಟರ್ ಯೋಜನೆಯಾಗಿದೆ. ಅಯೋಧ್ಯೆ ನಗರವು ದೇಶದ ಭೂಪಟದಲ್ಲಿ ಮಿನುಗುವ ನಕ್ಷತ್ರವಾಗಲಿದೆ. ಅಂತರರಾಷ್ಟ್ರೀಯವಾಗಿಯೂ ಇದು ಬೆಳೆಯಬೇಕು. ಈ ಭರವಸೆಯನ್ನು ಈಡೇರಿಸಲು ನಾವೆಲ್ಲರೂ ಬದ್ಧ ಎಂದು ಹೇಳಿದರು.

ಇದನ್ನೂ ಓದಿ: ಅಯೋಧ್ಯೆಯಲ್ಲಿ ಶ್ರೀರಾಮ ಮೂರ್ತಿ ಪ್ರತಿಷ್ಠಾಪನೆ ದಿನ ಊರಲ್ಲಿ ಪೂಜೆ ಸಲ್ಲಿಸಿ: ಹಿಂದೂ ಸಮುದಾಯಕ್ಕೆ ವಿಎಚ್‌ಪಿ ಕರೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.