ETV Bharat / bharat

ರಾಹುಲ್​ ಗಾಂಧಿ ಅನಕ್ಷರಸ್ಥ, ರಾಜಕೀಯ ಜ್ಞಾನವೇ ಇಲ್ಲ: ಅಸ್ಸಾಂ ಸಿಎಂ ಹಿಮಂತ​ ಬಿಸ್ವಾ ಶರ್ಮಾ

author img

By ETV Bharat Karnataka Team

Published : Oct 18, 2023, 6:15 PM IST

Updated : Oct 18, 2023, 6:28 PM IST

ಅಸ್ಸಾಂ ಸಿಎಂ ಟೀಕೆ
ಅಸ್ಸಾಂ ಸಿಎಂ ಟೀಕೆ

ಬಿಜೆಪಿ ಕುಟುಂಬ ರಾಜಕಾರಣದ ಬಗ್ಗೆ ಮಾತನಾಡಿದ್ದ ರಾಹುಲ್​ ಗಾಂಧಿಗೆ, ಅಸ್ಸಾಂ ಸಿಎಂ ಹಿಮಂತ​ ಬಿಸ್ವಾ ಶರ್ಮಾ ಅವರು ಗಾಂಧಿ ಕುಟುಂಬದ ರಾಜಕೀಯವನ್ನು ಪ್ರಶ್ನಿಸಿದ್ದಾರೆ.

ಗುವಾಹಟಿ: ಬಿಜೆಪಿ ಕುಟುಂಬ ರಾಜಕಾರಣ ನಡೆಸುತ್ತಿದೆ ಎಂದು ಟೀಕಿಸಿದ್ದ ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿಯನ್ನು ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮಾ ಅವರು ತರಾಟೆಗೆ ತೆಗೆದುಕೊಂಡಿದ್ದು, ಗಾಂಧಿ 'ಕುಟುಂಬ'ವೇ ರಾಜಕೀಯದಲ್ಲಿದೆ. ಈ ಬಗ್ಗೆ ಅರಿಯದ ರಾಹುಲ್​ ಗಾಂಧಿ ಬಿಜೆಪಿ ಬಗ್ಗೆ ಮಾತನಾಡುತ್ತಾರೆ. ಅವರೊಬ್ಬ 'ಅಶಿಕ್ಷಿತ ವ್ಯಕ್ತಿ' ಎಂದು ಕಟುವಾಗಿ ಟೀಕಿಸಿದರು.

ವಂಶಾಡಳಿತದ ಮೂಲವೇ ಗಾಂಧಿ ಕುಟುಂಬ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಪುತ್ರ ಜಯ್​ಶಾ ಬಿಜೆಪಿಯಲ್ಲಿ ಯಾವುದೇ ಸ್ಥಾನ ಪಡೆದಿಲ್ಲ. ಆದರೂ ರಾಹುಲ್ ಗಾಂಧಿ ಈ ಬಗ್ಗೆ ಟೀಕೆ ಮಾಡಿದ್ದಾರೆ. ರಕ್ಷಣಾ ಸಚಿವ ರಾಜನಾಥ್​ ಸಿಂಗ್​ ಅವರ ಪುತ್ರ ಶಾಸಕರಾಗಿದ್ದಾರೆ. ಗಾಂಧಿ ಕುಟುಂಬದಲ್ಲಿ ಎಷ್ಟು ಜನ ರಾಜಕೀಯದಲ್ಲಿದ್ದಾರೆ ಎಂಬುದು ರಾಹುಲ್​ಗೆ ಗೊತ್ತಿಲ್ಲವೇ?. ಅವರ ಇಡೀ ಕುಟುಂಬ ರಾಜಕೀಯದಲ್ಲಿದೆ. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಬಿಜೆಪಿಯ ಭಾಗವೆಂದು ರಾಹುಲ್ ಭಾವಿಸಿದ್ದಾರೆ. ಇದೆಲ್ಲಾ ನೋಡಿದರೆ ರಾಹುಲ್​ ಗಾಂಧಿ ಒಬ್ಬ 'ಅನಕ್ಷರಸ್ಥ' ಎಂದು ಅನಿಸುತ್ತದೆ ಎಂದರು.

ರಾಹುಲ್​ ಗಾಂಧಿ ಹೊಸಬರಿಗೆ ಅವಕಾಶ ನೀಡಿ, ವಂಶಾಡಳಿತ ಬಗ್ಗೆ ಮಾತನಾಡಬೇಕು. ರಾಹುಲ್ ಅವರಿಗೆ ರಾಜಕೀಯದ ಬಗ್ಗೆ ಯಾವುದೇ ಜ್ಞಾನವಿಲ್ಲ. ರಾಹುಲ್​ಗೂ ಮೊದಲು ಅಜ್ಜ, ಅಜ್ಜಿ, ಸಹೋದರ, ಸಹೋದರಿ, ತಾಯಿ ರಾಜಕೀಯದಲ್ಲಿದ್ದಾರೆ. ಪಕ್ಷವನ್ನು ನಿಯಂತ್ರಿಸುತ್ತಿದ್ದಾರೆ. ಆದರೆ, ಬಿಜೆಪಿಯಲ್ಲಿ ಅಂತಹ ಪದ್ಧತಿ ಇಲ್ಲ ಎಂದು ಅಸ್ಸಾಂ ಸಿಎಂ ಹೇಳಿದರು.

ರಾಹುಲ್​ ಹೇಳಿದ್ದೇನು?: ಮಿಜೋರಾಂನಲ್ಲಿ ಬಿಜೆಪಿ ಕುಟುಂಬ ರಾಜಕಾರಣವನ್ನು ಟೀಕಿಸಿದ್ದ ರಾಹುಲ್​ ಗಾಂಧಿ, ಅಮಿತ್ ಶಾ, ರಾಜನಾಥ್ ಸಿಂಗ್ ಅವರ ಪುತ್ರರು ಎಲ್ಲಿದ್ದಾರೆ ಎಂಬುದು ತಿಳಿಯಿರಿ. ಬಿಜೆಪಿಯ ನಾಯಕರ ಮಕ್ಕಳು ಹೇಗಿದ್ದಾರೆ. ಅವರ ಸ್ಥಾನವೇನು ಎಂಬುದನ್ನು ಅರ್ಥ ಮಾಡಿಕೊಳ್ಳಿ. ಬಿಜೆಪಿಗರ ಮಕ್ಕಳು ರಾಜವಂಶದವರು ಎಂದು ರಾಹುಲ್​ ಗಾಂಧಿ ಹೇಳಿದ್ದರು. ಅಮಿತ್​ ಶಾ ಅವರ ಪುತ್ರ ಜಯ್ ಶಾ ಬಿಸಿಸಿಐ ಕಾರ್ಯದರ್ಶಿ ಮತ್ತು ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಅಧ್ಯಕ್ಷರಾಗಿದ್ದರೆ, ರಾಜನಾಥ್​ ಸಿಂಗ್ ಅವರ ಪುತ್ರ ಉತ್ತರ ಪ್ರದೇಶದ ಶಾಸಕರಾಗಿದ್ದಾರೆ.

ಅಸ್ಸಾಂ ಸಿಎಂಗೆ ನೊಟೀಸ್​: ರಾಹುಲ್ ಗಾಂಧಿ ಅವರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪದ ಮೇಲೆ ಉತ್ತರಾಖಂಡದ ರುದ್ರಪುರದ ನ್ಯಾಯಾಲಯವು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರಿಗೆ ಬುಧವಾರ ನೊಟೀಸ್ ನೀಡಿದೆ. ಈ ನೊಟೀಸ್‌ಗೆ ನವೆಂಬರ್ 17ರೊಳಗೆ ಪ್ರತಿಕ್ರಿಯಿಸಲು ಸೂಚಿಸಲಾಗಿದೆ. ನವೆಂಬರ್ 18 ರಂದು ಪ್ರಕರಣದ ಮುಂದಿನ ವಿಚಾರಣೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.

2022 ರ ಉತ್ತರಾಖಂಡ ವಿಧಾನಸಭಾ ಚುನಾವಣಾ ಪ್ರಚಾರದ ವೇಳೆ ಹಿಮಂತ​ ಬಿಸ್ವಾ ಶರ್ಮಾ ಅವರು ರಾಹುಲ್​ ಗಾಂಧಿ ಮತ್ತು ಸೋನಿಯಾ ಗಾಂಧಿ ಅವರನ್ನು ಟೀಕಿಸಿದ್ದರು. ಈ ಕುರಿತ ವಿಚಾರಣೆ ನಡೆಸಲು ಕೋರ್ಟ್​ ಈಗ ನೊಟೀಸ್​ ಜಾರಿ ಮಾಡಿದೆ.

ಇದನ್ನೂ ಓದಿ: ಪತ್ರಕರ್ತೆ ಸೌಮ್ಯಾ ವಿಶ್ವನಾಥನ್​ ಕೊಲೆ ಕೇಸ್​: 15 ವರ್ಷಗಳ ದೀರ್ಘ ಪ್ರಕರಣದ ತೀರ್ಪು ಪ್ರಕಟ, ಐವರು ಆರೋಪಿಗಳಿಗೆ ಶಿಕ್ಷೆ

Last Updated :Oct 18, 2023, 6:28 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.