ETV Bharat / bharat

ಮಹಾರಾಷ್ಟ್ರದ ಮಾಜಿ ಗೃಹ ಮಂತ್ರಿ ಅನಿಲ್ ದೇಶಮುಖ್ ನ.6ರವರೆಗೆ ಇಡಿ ಕಸ್ಟಡಿಗೆ

author img

By

Published : Nov 2, 2021, 5:43 PM IST

ಈ ತನಿಖೆ ನಡೆಸಲು ಜಾರಿ ನಿರ್ದೇಶನಾಲಯಕ್ಕೆ ಯಾವುದೇ ಅಧಿಕಾರ ಇಲ್ಲ. ಬಾಂಬೆ ಹೈಕೋರ್ಟ್ ಈ ಮೊದಲು ಸಿಬಿಐ ಮಾತ್ರ ಈ ತನಿಖೆ ವಿಚಾರಣೆ ನಡೆಸುವಂತೆ ಸೂಚನೆ ನೀಡಿತ್ತು. ಜಾರಿ ನಿರ್ದೇಶನಾಲಯಕ್ಕೆ ಯಾರೂ ತನಿಖೆ ನಡೆಸುವಂತೆ ನಿರ್ದೇಶನ ನೀಡಿರಲಿಲ್ಲ ಎಂದು ವಿಕ್ರಮ್ ಚೌಧರಿ ಆಕ್ಷೇಪ ವ್ಯಕ್ತಪಡಿಸಿದ್ದರು..

Anil deshmukh sent to ed custody  till nov 6
ಮಹಾರಾಷ್ಟ್ರದ ಮಾಜಿ ಗೃಹ ಮಂತ್ರಿ ಅನಿಲ್ ದೇಶಮುಖ್ ನ.6ರವರೆಗೆ ಇಡಿ ಕಸ್ಟಡಿಗೆ

ಮುಂಬೈ, ಮಹಾರಾಷ್ಟ್ರ: ಅಕ್ರಮ ಹಣ ವರ್ಗಾವಣೆ ಮತ್ತು ಸುಲಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳಿಂದ ಬಂಧಿಸಲ್ಪಟ್ಟಿದ್ದ ಮಹಾರಾಷ್ಟ್ರದ ಮಾಜಿ ಗೃಹ ಸಚಿವ ಅನಿಲ್ ದೇಶಮುಖ್​ರನ್ನು ನವೆಂಬರ್ 6ರವರೆಗೆ ಇಡಿ ಕಸ್ಟಡಿಗೆ ನೀಡಲಾಗಿದೆ.

ವಿಶೇಷ ಪಿಎಂಎಲ್​ಎ(Prevention of Money Laundering Act) ಕೋರ್ಟ್ ಆದೇಶ ನೀಡಿದ್ದು, ಇದರ ಜೊತೆಗೆ ಅನಿಲ್ ದೇಶಮುಖ್ ಜಾರಿ ನಿರ್ದೇಶನಾಲಯದ ಕಸ್ಟಡಿಯಲ್ಲಿರುವಾಗ ಮನೆ ಭೋಜನ ಮತ್ತು ಔಷಧಗಳಿಗೆ ಅನುಮತಿ ನೀಡಿದೆ.

ಅತ್ಯಂತ ಮುಖ್ಯವಾಗಿ ಅನಿಲ್ ದೇಶಮುಖ್ ಅವರನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ವಿಚಾರಣೆ ನಡೆಸಬೇಕಾದರೆ, ಅವರ ವಕೀಲರೂ ಕೂಡ ಸ್ಥಳದಲ್ಲಿ ಹಾಜರಿರಲು ಕೋರ್ಟ್ ಅನುಮತಿ ನೀಡಿದೆ.

ಸೋಮವಾರ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ 12 ಗಂಟೆಗಳ ಕಾಲ ವಿಚಾರಣೆಗೆ ಒಳಗಾಗಿದ್ದ ಅನಿಲ್ ದೇಶಮುಖ್​,​ ತಡರಾತ್ರಿ ಬಂಧನಕ್ಕೆ ಒಳಗಾಗಿದ್ದರು. ಇದಾದ ನಂತರ ಅವರನ್ನು ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಪಿ ಬಿ ಜಾಧವ್ ಅವರ ಮುಂದೆ ಹಾಜರುಪಡಿಸಲಾಗಿತ್ತು.

ಜಾರಿ ನಿರ್ದೇಶನಾಲಯ ಪರವಾಗಿ ಹೆಚ್ಚುವರಿ ಸಾಲಿಸಿಟರ್ ಜನರಲ್ ಅನಿಲ್ ಸಿಂಗ್ ವಾದಿಸಿದ್ದು, ಬಾರ್ ಮತ್ತು ಆರ್ಕೆಸ್ಟ್ರಾ ಮಾಲೀಕರಿಂದ ಅನಿಲ್ ದೇಶಮುಖ್ ಮತ್ತು ಅವರ ಕುಟುಂಬಸ್ಥರು ಸುಮಾರು 4.7 ಕೋಟಿ ರೂಪಾಯಿ ಹಣ ಸಂಗ್ರಹಿಸಿರುವ ಆರೋಪವಿದೆ ಎಂದಿದ್ದಾರೆ.

ಇದರ ಜೊತೆಗೆ ಪ್ರಕರಣದ ಹೆಚ್ಚಿನ ತನಿಖೆಯನ್ನು ಕೈಗೊಳ್ಳಲು ಮತ್ತು ಹಣದ ಮೂಲಗಳನ್ನು ಪರಿಶೀಲನೆ ನಡೆಸಲು ಅನಿಲ್ ದೇಶಮುಖ್ ಅವರನ್ನು 14 ದಿನಗಳ ಇಡಿ ಕಸ್ಟಡಿಗೆ ನೀಡಬೇಕೆಂದು ಕೋರಿದ್ದರು. ಅನಿಲ್ ದೇಶಮುಖ್ ಪರ ವಕೀಲ ವಿಕ್ರಮ್ ಚೌಧರಿ ಮತ್ತು ವಕೀಲ ಅನಿಕೇತ್ ನಿಕ್ಕಂ ವಾದಿಸಿದ್ದರು.

ಈ ತನಿಖೆ ನಡೆಸಲು ಜಾರಿ ನಿರ್ದೇಶನಾಲಯಕ್ಕೆ ಯಾವುದೇ ಅಧಿಕಾರ ಇಲ್ಲ. ಬಾಂಬೆ ಹೈಕೋರ್ಟ್ ಈ ಮೊದಲು ಸಿಬಿಐ ಮಾತ್ರ ಈ ತನಿಖೆ ವಿಚಾರಣೆ ನಡೆಸುವಂತೆ ಸೂಚನೆ ನೀಡಿತ್ತು. ಜಾರಿ ನಿರ್ದೇಶನಾಲಯಕ್ಕೆ ಯಾರೂ ತನಿಖೆ ನಡೆಸುವಂತೆ ನಿರ್ದೇಶನ ನೀಡಿರಲಿಲ್ಲ ಎಂದು ವಿಕ್ರಮ್ ಚೌಧರಿ ಆಕ್ಷೇಪ ವ್ಯಕ್ತಪಡಿಸಿದ್ದರು.

ಅದರ ಜೊತೆಗೆ ಅನಿಲ್ ದೇಶಮುಖ್ ವಯಸ್ಸಿನಲ್ಲಿ ಹಿರಿಯರಾಗಿದ್ದು, ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದಾರೆ. ಫೆಬ್ರವರಿಯಲ್ಲಿ ಅನಿಲ್ ದೇಶಮುಖ್​ಗೆ ಕೋವಿಡ್ ಕಾಣಿಸಿತ್ತು. ಇದರ ಜೊತೆಗೆ ಹೃದಯ ಸಮಸ್ಯೆ ಮತ್ತು ರಕ್ತದೊತ್ತಡದಿಂದ ಬಳಲುತ್ತಿದ್ದಾರೆ ಎಂದು ಚೌಧರಿ ಮಾಹಿತಿ ನೀಡಿದರು.

ವಾದ- ಪ್ರತಿವಾದ ಆಲಿಸಿದ ನ್ಯಾಯಾಲಯ ಅನಿಲ್ ದೇಶಮುಖ್ ಅವರನ್ನು 4 ದಿನಗಳ ಕಾಲ ಅಂದರೆ ನವೆಂಬರ್ 6ರ ತನಕ ಜಾರಿ ನಿರ್ದೇಶನಾಲಯದ ಅಧೀನಕ್ಕೆ ನೀಡಿದ್ದು, ಕೆಲವೊಂದು ಸೌಲಭ್ಯಗಳನ್ನು ಒದಗಿಸಿದೆ.

ಇದನ್ನೂ ಓದಿ: ಪ.ಬಂಗಾಳ ಉಪಚುನಾವಣೆ: ನಾಲ್ಕೂ ಕ್ಷೇತ್ರಗಳಲ್ಲೂ ಟಿಎಂಸಿ ಮಿಂಚು, ಬಿಜೆಪಿಗೆ ಮುಖಭಂಗ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.