ETV Bharat / bharat

ಒಡಿಶಾ ರೈಲು ದುರಂತ.. ಸಂತ್ರಸ್ತ ಮಕ್ಕಳ ಶಿಕ್ಷಣದ ಜವಾಬ್ದಾರಿ ಹೊತ್ತ ಗೌತಮ್ ಅದಾನಿ

author img

By

Published : Jun 4, 2023, 9:58 PM IST

Adani Group to educate children who lost parents in Odisha train tragedy
ರೈಲು ದುರಂತ - ಮಕ್ಕಳ ಶಿಕ್ಷಣದ ಹೊಣೆ ಹೊತ್ತು ಅದಾನಿ

ರೈಲು ದುರಂತ ಸಂತ್ರಸ್ತರಿಗೆ ಮತ್ತು ಅವರ ಕುಟುಂಬಗಳಿಗೆ ಶಕ್ತಿಯನ್ನು ನೀಡುವುದು ಮತ್ತು ಮಕ್ಕಳಿಗೆ ಉತ್ತಮ ನಾಳೆಗಳನ್ನು ಒದಗಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ಗೌತಮ್ ಅದಾನಿ ಟ್ವೀಟ್​ ಮಾಡಿದ್ದಾರೆ.

ಅಹಮದಾಬಾದ್ (ಗುಜರಾತ್): ಒಡಿಶಾದ ಭೀಕರ ರೈಲು ದುರಂತದಲ್ಲಿ ಪೋಷಕರನ್ನು ಕಳೆದುಕೊಂಡು ಸಂತ್ರಸ್ತರಾಗಿರುವ ಮಕ್ಕಳ ಶಾಲಾ ಶಿಕ್ಷಣದ ಜವಾಬ್ದಾರಿಯನ್ನು ತೆಗೆದುಕೊಳ್ಳಲು ಅದಾನಿ ಗ್ರೂಪ್ ಮುಂದಾಗಿದೆ. ಈ ಬಗ್ಗೆ ಖ್ಯಾತಿ ಉದ್ಯಮಿ, ಅದಾನಿ ಗ್ರೂಪ್ ಅಧ್ಯಕ್ಷ ಗೌತಮ್ ಅದಾನಿ ಪ್ರಕಟಿಸಿದ್ದಾರೆ.

ಒಡಿಶಾ ರೈಲು ಅಪಘಾತದ ಸುದ್ದಿಯಿಂದ ತಾನು ತೀವ್ರ ದುಃಖಿತನಾಗಿದ್ದೇನೆ. ಸಂತ್ರಸ್ತರಿಗೆ ಮತ್ತು ಅವರ ಕುಟುಂಬಗಳಿಗೆ ಶಕ್ತಿಯನ್ನು ನೀಡುವುದು ಮತ್ತು ಮಕ್ಕಳಿಗೆ ಉತ್ತಮ ನಾಳೆಗಳನ್ನು ಒದಗಿಸುವುದು ನಮ್ಮೆಲ್ಲರ ಜಂಟಿ ಜವಾಬ್ದಾರಿಯಾಗಿದೆ ಎಂದು ಗೌತಮ್ ಅದಾನಿ ತಮ್ಮ ಟ್ವಿಟರ್‌ನಲ್ಲಿ ಬರೆದಿದ್ದಾರೆ. ಅಲ್ಲದೇ, ಈ ಅಪಘಾತದಲ್ಲಿ ಪೋಷಕರನ್ನು ಕಳೆದುಕೊಂಡ ಮಕ್ಕಳ ಶಾಲಾ ಶಿಕ್ಷಣದ ಜವಾಬ್ದಾರಿಯನ್ನು ಅದಾನಿ ಸಮೂಹವು ತೆಗೆದುಕೊಳ್ಳಲು ನಿರ್ಧರಿಸಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಒಡಿಶಾ ರೈಲು ದುರಂತಕ್ಕೆ ಕೋಮು ಬಣ್ಣ: ಪೊಲೀಸರಿಂದ ಕಠಿಣ ಕಾನೂನು ಕ್ರಮದ ಎಚ್ಚರಿಕೆ

ಒಡಿಶಾದ ಬಾಲಸೋರ್​ ಜಿಲ್ಲೆಯ ಬಹನಾಗಾ ಬಜಾರ್ ನಿಲ್ದಾಣದ ಸಮೀಪದಲ್ಲಿ ಶುಕ್ರವಾರ ಕೋರಮಂಡಲ್ ಎಕ್ಸ್‌ಪ್ರೆಸ್, ಬೆಂಗಳೂರು - ಹೌರಾ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ಹಾಗೂ ಗೂಡ್ಸ್ ರೈಲುಗಳು ಅಪಘಾತಕ್ಕೆ ಈಡಾಗಿವೆ. ಈ ಭೀಕರ ಅಪಘಾತದಲ್ಲಿ ಈ ಎರಡು ಪ್ಯಾಸೆಂಜರ್ ರೈಲುಗಳ 17 ಬೋಗಿಗಳು ಹಳಿತಪ್ಪಿ ತೀವ್ರವಾಗಿ ಹಾನಿಗೀಡಾಗಿವೆ. ಪರಿಣಾಮ ಇದುವರೆಗೆ 275 ಜನ ಪ್ರಯಾಣಿಕರು ಬಲಿಯಾಗಿದ್ದು, 1,000ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.

ಈಗಾಗಲೇ ಮೃತ 275 ಜನರ ಪೈಕಿ 88 ಮಂದಿಯ ಗುರುತಿಸಲಾಗಿದೆ. ಭಾನುವಾರ ಬೆಳಗಿನ ಜಾವದವರೆಗೆ 78 ಮೃತದೇಹಗಳನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ. ಭುವನೇಶ್ವರದ ಶವಾಗಾರಗಳು ಮತ್ತು ಇತರ ಆಸ್ಪತ್ರೆಗಳಾದ ಏಮ್ಸ್, ಕ್ಯಾಪಿಟಲ್ ಆಸ್ಪತ್ರೆ, ಎಸ್‌ಯುಎಂ, ಕೆಐಎಂ ಮತ್ತು ಎಎಂಆರ್‌ಐ ಆಸ್ಪತ್ರೆಗಳಲ್ಲಿ 170 ಮೃತದೇಹಗಳು ಇವೆ. ಭಾನುವಾರ ಬೆಳಿಗ್ಗೆ ತನಕ 793 ಜನ ಗಾಯಾಳು ಪ್ರಯಾಣಿಕರನ್ನು ಡಿಸ್ಚಾರ್ಜ್​ ಮಾಡಲಾಗಿದೆ. ಇನ್ನೂ 382 ಜನ ಗಾಯಾಳುಗಳು ಹಲವು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸದ್ಯ ಈ ರೈಲು ದುರಂತದ ಬಗ್ಗೆ ಸಿಬಿಐ (ಕೇಂದ್ರೀಯ ತನಿಖಾ ಸಂಸ್ಥೆ) ತನಿಖೆಗೆ ರೈಲ್ವೆ ಮಂಡಳಿ ಶಿಫಾರಸು ಮಾಡಿದೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.

ಇದನ್ನೂ ಓದಿ: ಒಡಿಶಾ ರೈಲು ದುರಂತ.. ಸಿಬಿಐ ತನಿಖೆಗೆ ಶಿಫಾರಸು ಮಾಡಿದ ರೈಲ್ವೆ ಮಂಡಳಿ

ಮೃತರ ಕುಟುಂಬಗಳಿಗೆ ಪ್ರಧಾನ ಮಂತ್ರಿಗಳ ರಾಷ್ಟ್ರೀಯ ಪರಿಹಾರ ನಿಧಿಯಿಂದ ತಲಾ ಎರಡು ಲಕ್ಷ ರೂಪಾಯಿ ಮತ್ತು ಗಾಯಗೊಂಡವರಿಗೆ 50,000 ರೂಪಾಯಿಗಳ ಪರಿಹಾರವನ್ನು ಘೋಷಿಸಲಾಗಿದೆ. ಮತ್ತೊಂದೆಡೆ, ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು, ಮೃತರ ಸಂಬಂಧಿಕರಿಗೆ ತಲಾ ಹತ್ತು ಲಕ್ಷ ರೂಪಾಯಿ, ಗಂಭೀರವಾಗಿ ಗಾಯಗೊಂಡವರಿಗೆ ತಲಾ ಎರಡು ಲಕ್ಷ ಹಾಗೂ ಸಣ್ಣಪುಟ್ಟ ಗಾಯಗೊಂಡವರಿಗೆ ತಲಾ 50 ಸಾವಿರ ರೂಪಾಯಿ ಪರಿಹಾರ ನೀಡಲಾಗುವುದು ಎಂದು ಪ್ರಕಟಿಸಿದ್ದಾರೆ.

ಅಲ್ಲದೇ, ಪಶ್ಚಿಮ ಬಂಗಾಳ, ತಮಿಳುನಾಡು ಮತ್ತು ಆಂಧ್ರ ಪ್ರದೇಶ, ಒಡಿಶಾ ರಾಜ್ಯ ಸರ್ಕಾರಗಳು ಆಯಾ ರಾಜ್ಯಗಳ ಮೃತರ ಕುಟುಂಬಗಳಿಗೆ ತಲಾ ಐದು ಲಕ್ಷಗಳ ರೂಪಾಯಿಗಳ ಪರಿಹಾರವನ್ನು ಘೋಷಿಸಿವೆ. ಜೊತೆಗೆ ಒಡಿಶಾ ಸರ್ಕಾರವು ಗಂಭೀರ ಗಾಯಗೊಂಡವರಿಗೂ ಒಂದು ಲಕ್ಷ ರೂಪಾಯಿ ನೆರವು ನೀಡುವುದಾಗಿ ಹೇಳಿದೆ.

ಇದನ್ನೂ ಓದಿ: ಹಳಿಗಳ ನವೀಕರಣಕ್ಕೆ ಕಡಿಮೆ ಹಣ, ಅಸಮರ್ಪಕ ಸಿಬ್ಬಂದಿ.. ರೈಲ್ವೆಯ ಗಂಭೀರ ಲೋಪಗಳ ಬಯಲು ಮಾಡಿದ್ದ CAG ವರದಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.