ETV Bharat / bharat

ಸಂಸದರ ಕಚೇರಿಗೆ 3 ತಿಂಗಳಿಂದ ಪಾಸ್​ಗಾಗಿ ಅಲೆದಿದ್ದ ಆರೋಪಿ: ಪ್ರತಾಪ್ ಸಿಂಹರಿಂದ ಲಿಖಿತ ಉತ್ತರ ಕೇಳಿದ ಸ್ಪೀಕರ್

author img

By PTI

Published : Dec 13, 2023, 11:04 PM IST

Updated : Dec 14, 2023, 10:27 AM IST

Accused was seeking Parliament pass from Simha for over 3 months: Sources
ಸಂಸದರ ಕಚೇರಿಗೆ 3 ತಿಂಗಳಿಂದ ಪಾಸ್​ಗಾಗಿ ಅಲೆದಿದ್ದ ಆರೋಪಿ: ಪ್ರತಾಪ್ ಸಿಂಹರಿಂದ ಲಿಖಿತ ಉತ್ತರ ಕೇಳಿದ ಸ್ಪೀಕರ್

TMC seeks expulsion of BJP MP Pratap Simha: ಸಂಸತ್ತಿನ ಲೋಕಸಭೆಯ ಕಲಾಪಕ್ಕೆ ನುಗ್ಗಿದ ಆರೋಪಿಗಳು ಹೊಸ ಸಂಸತ್ತು ವೀಕ್ಷಿಸುವ ನೆಪದಲ್ಲಿ ಪಾಸ್‌ ಪಡೆದಿದ್ದರು. ಈ ಪಾಸ್​ ಪಡೆಯಲು ಆರೋಪಿಯೊಬ್ಬ ಮೈಸೂರು ಬಿಜೆಪಿ ಸಂಸದ ಪ್ರತಾಪ್ ಸಿಂಹ ಅವರ ಕಚೇರಿಗೆ ಅಲೆಯುತ್ತಿದ್ದ ಎಂದು ವರದಿಯಾಗಿದೆ.

ನವದೆಹಲಿ: ಲೋಕಸಭೆಯ ಕಲಾಪಕ್ಕೆ ಇಬ್ಬರು ನುಗ್ಗಿ ಭದ್ರತಾ ಲೋಪ ಎಸಗಿದ ಪ್ರಕರಣದಲ್ಲಿ ಮತ್ತಷ್ಟು ಹೊಸ ಮಾಹಿತಿಗಳು ಹೊರ ಬೀಳುತ್ತಲೇ ಇವೆ. ಈ ಇಬ್ಬರು ಆರೋಪಿಗಳು ಹೊಸ ಸಂಸತ್ತು ವೀಕ್ಷಿಸುವ ನೆಪದಲ್ಲಿ ಪಾಸ್‌ಗಳನ್ನು ಪಡೆದಿದ್ದರು. ಈ ಪಾಸ್​ ಪಡೆಯಲು ಓರ್ವ ಆರೋಪಿ ಮೈಸೂರು ಬಿಜೆಪಿ ಸಂಸದ ಪ್ರತಾಪ್ ಸಿಂಹ ಅವರ ಕಚೇರಿಗೆ ಅಲೆಯುತ್ತಿದ್ದ ಎಂದು ವರದಿಯಾಗಿದೆ. ಮತ್ತೊಂದೆಡೆ, ಸಾಗರ್ ಶರ್ಮಾಗೆ ತಮ್ಮ ಹೆಸರಿನಲ್ಲಿ ನೀಡಿದ ಪಾಸ್ ಬಗ್ಗೆ ಲಿಖಿತ ಉತ್ತರ ನೀಡುವಂತೆ ಪ್ರತಾಪ್ ಸಿಂಹ ಅವರಿಗೆ ಲೋಕಸಭೆ ಸ್ಪೀಕರ್ ಸೂಚಿಸಿದ್ದಾರೆ.

ಅಧಿಕೃತ ಪಾಸ್ ಪಡೆದ ಆರೋಪಿಗಳಲ್ಲಿ ಒಬ್ಬರಾದ ಮನೋರಂಜನ್.ಡಿ ತನ್ನ ಸಹಚರನಾದ ಸಹ ಆರೋಪಿ ಸಾಗರ್ ಶರ್ಮಾನನ್ನು ಸಂಸದರ ಕಚೇರಿಯಲ್ಲಿ ಸ್ನೇಹಿತ ಎಂದು ಪರಿಚಯಿಸಿದ್ದ. ಅಂತೆಯೇ, ಈ ಸಂದರ್ಭದಲ್ಲಿ ಹೊಸ ಸಂಸತ್ತು ವೀಕ್ಷಿಸುವ ನೆಪದಲ್ಲಿ ಇವರಿಗೆ ಪಾಸ್‌ಗಳನ್ನು ವಿತರಿಸಲಾಗಿತ್ತು ಎಂದು ಮೂಲಗಳು ತಿಳಿಸಿವೆ.

ಒಟ್ಟು ಮೂರು ಪಾಸ್‌ಗಳನ್ನು ನೀಡಲಾಗಿತ್ತು. ಆದಾಗ್ಯೂ, ಒಬ್ಬ ಮಹಿಳೆ ತನ್ನ ಮಗುವಿನೊಂದಿಗೆ ಬಂದಿದ್ದಳು. ಆದರೆ, ತನ್ನ ಪಾಸ್‌ನಲ್ಲಿ ಮಗುವಿನ ಹೆಸರನ್ನು ನಮೂದಿಸದ ಕಾರಣ ಆಕೆ ಹಿಂತಿರುಗಬೇಕಾಯಿತು ಎಂದು ಸಂಸದರ ಆಪ್ತ ಮೂಲಗಳು ತಿಳಿಸಿವೆ. ಆದರೆ, ಈ ಇಬ್ಬರು ಆರೋಪಿಗಳೊಂದಿಗೆ ಮಹಿಳೆಗೆ ಯಾವುದೇ ಸಂಬಂಧವಿರಲಿಲ್ಲ. ಮನೋರಂಜನ್ ಮೂರು ತಿಂಗಳಿನಿಂದ ಪಾಸ್‌ಗಾಗಿ ಪ್ರತಾಪ್ ಸಿಂಹ ಮತ್ತು ಅವರ ಕಚೇರಿಗೆ ಅಲೆದಾಡುತ್ತಿದ್ದ ಎಂದು ಸುದ್ದಿಸಂಸ್ಥೆ ಪಿಟಿಐ ವರದಿ ಮಾಡಿದೆ.

ಇದನ್ನೂ ಓದಿ: ಆರು ಜನರಲ್ಲಿ ಇಬ್ಬರಿಗೆ ಮಾತ್ರ ಸಿಕ್ಕಿತ್ತು 'ಸಂಸತ್​' ಪಾಸ್​; ಸೋಷಿಯಲ್​ ಮೀಡಿಯಾದಲ್ಲೇ ಸಿದ್ಧವಾಗಿತ್ತು ಪ್ಲಾನ್​!

ಸಂಸದ ಸ್ಥಾನದಿಂದ ಉಚ್ಛಾಟನೆಗೆ ಟಿಎಂಸಿ ಆಗ್ರಹ: ಲೋಕಸಭೆಯ ಕಲಾಪಕ್ಕೆ ಹಾರಿದ ಆರೋಪಿಗೆ ಪಾಸ್​ ನೀಡಿದ ಆರೋಪದ ಮೇಲೆ ಬಿಜೆಪಿ ಸಂಸದ ಪ್ರತಾಪ್ ಸಿಂಹ ಅವರನ್ನು ಲೋಕಸಭೆಯಿಂದ ಉಚ್ಛಾಟನೆ ಮಾಡುವಂತೆ ಟಿಎಂಸಿ ಒತ್ತಾಯಿಸಿದೆ. ಅಲ್ಲದೇ, ಹಲವು ಪ್ರಶ್ನೆಗಳನ್ನೂ ಟಿಎಂಸಿ ಎತ್ತಿದೆ.

ತಮ್ಮ ಲಾಗಿನ್ ಸೌಲಭ್ಯಗಳನ್ನು ಹಂಚಿಕೊಳ್ಳುವ ಮೂಲಕ ರಾಷ್ಟ್ರೀಯ ಭದ್ರತೆಯನ್ನು ಉಲ್ಲಂಘಿಸಿದ ಆರೋಪದ ಮೇಲೆ ನಮ್ಮ ಸಂಸದೆ ಮಹುವಾ ಮೊಯಿತ್ರಾ ಅವರನ್ನು ಅನ್ಯಾಯವಾಗಿ ಹೊರಹಾಕಲಾಗಿದೆ. ಇಂದು ಬಿಜೆಪಿ ಕರ್ನಾಟಕದ ಸಂಸದ ಪ್ರತಾಪ್ ಸಿಂಹ ಅವರು ಸಂಸತ್ತಿಗೆ ಒಳನುಗ್ಗುವವರಿಗೆ ವಿಸಿಟರ್ ಪಾಸ್ ನೀಡುವ ಮೂಲಕ ಇಡೀ ಸಂಸತ್ತಿನ ಭದ್ರತೆಯನ್ನು ಅಪಾಯಕ್ಕೆ ಸಿಲುಕಿಸಿದ್ದಾರೆ ಎಂದು ತೃಣಮೂಲ ಕಾಂಗ್ರೆಸ್ ಸಾಮಾಜಿಕ ಜಾಲತಾಣ 'ಎಕ್ಸ್‌'ನಲ್ಲಿ ಪೋಸ್ಟ್‌ ಮಾಡಿದೆ.

ಪ್ರತಾಪ್ ಸಿಂಹ ಅವರನ್ನು ಲೋಕಸಭೆಯಿಂದ ಹೊರಹಾಕುವುದನ್ನು ತಡೆಯುತ್ತಿರುವುದು ಯಾವುದು?, ಸಂಸದೆ ಮಹುವಾ ಮೊಯಿತ್ರಾ ಅದೇ ರೀತಿಯ ಚಿಕಿತ್ಸೆಯನ್ನು ಅವರಿಗೆ ಏಕೆ ನೀಡಬಾರದು?, ಸಹಪಾಠಿ ಸಂಸದರ ಸುರಕ್ಷತೆಯನ್ನು ಅಪಾಯಕ್ಕೆ ಒಳಪಡಿಸಿದ ನಂತರ ಸಂಸದರಾಗಿ ಮುಂದುವರಿಯಲು ಅವರಿಗೆ ಯಾವುದು ಹಕ್ಕನ್ನು ನೀಡುತ್ತದೆ? ಎಂದು ಟಿಎಂಸಿ ಪ್ರಶ್ನೆ ಮಾಡಿದೆ.

ಇದನ್ನೂ ಓದಿ: ಓರ್ವ ಮಹಿಳೆಯನ್ನು ಬೇಟೆಯಾಡಲಾಗಿದೆ: ಉಚ್ಛಾಟನೆ ಬಳಿಕ ಮಹುವಾ ಮೊಯಿತ್ರಾ ಹೇಳಿಕೆ

Last Updated :Dec 14, 2023, 10:27 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.