ETV Bharat / bharat

CM Baghel: ಅತ್ಯಾಚಾರ ಸೇರಿದಂತೆ ಮಹಿಳೆಯರ ವಿರುದ್ಧದ ಪ್ರಕರಣಗಳ ಆರೋಪಿಗಳಿಗೆ ಸರ್ಕಾರಿ ನೌಕರಿ ಇಲ್ಲ: ಛತ್ತೀಸ್‌ಗಢ ಸಿಎಂ ಬಘೇಲ್​

author img

By

Published : Aug 15, 2023, 4:24 PM IST

Accused in cases of rape, other crimes against women will be barred from govt jobs in Chhattisgarh: CM Baghel
ಛತ್ತೀಸ್​ಗಢದಲ್ಲಿ ಮಹಿಳೆಯರ ವಿರುದ್ಧದ ಅಪರಾಧ ಪ್ರಕರಣಗಳ ಆರೋಪಿಗಳಿಗೆ ಸರ್ಕಾರಿ ನೌಕರಿ ಇಲ್ಲ: ಸಿಎಂ ಭೂಪೇಶ್​ ಬಘೇಲ್​

Chhattisgarh: ಮಹಿಳೆಯರ ವಿರುದ್ಧದ ಅಪರಾಧ ಪ್ರಕರಣಗಳಲ್ಲಿ ಭಾಗಿಯಾದ ಆರೋಪಿಗಳನ್ನು ಸರ್ಕಾರಿ ಉದ್ಯೋಗಗಳಿಂದ ನಿಷೇಧಿಸಲು ನಿರ್ಧರಿಸಿರುವುದಾಗಿ ಛತ್ತೀಸ್​ಗಢ ಮುಖ್ಯಮಂತ್ರಿ ಭೂಪೇಶ್​ ಬಘೇಲ್​ ತಿಳಿಸಿದ್ದಾರೆ.

ರಾಯಪುರ (ಛತ್ತೀಸ್​ಗಢ): ಛತ್ತೀಸ್​ಗಢ ಮುಖ್ಯಮಂತ್ರಿ ಭೂಪೇಶ್​ ಬಘೇಲ್ ಇಂದು 77ನೇ ಸ್ವಾತಂತ್ರ್ಯೋತ್ಸವ ದಿನದಂದು 15 ಹೊಸ ಘೋಷಣೆಗಳನ್ನು ಮಾಡಿದರು. ರಾಜ್ಯದಲ್ಲಿ ಇನ್ಮುಂದೆ ಮಹಿಳೆಯರು ಮತ್ತು ಬಾಲಕಿಯರ ಮೇಲಿನ ಅತ್ಯಾಚಾರ, ಕಿರುಕುಳ ಹಾಗೂ ಇತರ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗುವ ಆರೋಪಿಗಳಿಗೆ ಸರ್ಕಾರಿ ಉದ್ಯೋಗ ಸಿಗುವುದಿಲ್ಲ ಎಂದು ಪ್ರಕಟಿಸಿದರು.

ರಾಜ್ಯ ರಾಜಧಾನಿ ರಾಯಪುರದ ಪೊಲೀಸ್ ಪರೇಡ್ ಮೈದಾನದಲ್ಲಿ ಹಮ್ಮಿಕೊಂಡಿದ್ದ ಸ್ವಾತಂತ್ರ್ಯೋತ್ಸವ ಸಮಾರಂಭವನ್ನು ಉದ್ದೇಶಿಸಿ ಭಾಷಣ ಮಾಡಿದ ಬಘೇಲ್, ''ಮಹಿಳೆಯರ ಸುರಕ್ಷತೆ ಹಾಗೂ ಅವರ ಗೌರವ, ಘನತೆಯನ್ನು ಕಾಪಾಡುವುದು ನಮ್ಮ ಪ್ರಮುಖ ಆದ್ಯತೆ. ಬಾಲಕಿಯರು ಮತ್ತು ಮಹಿಳೆಯರಿಗೆ ಕಿರುಕುಳ, ಅತ್ಯಾಚಾರ ಸೇರಿ ಮಹಿಳೆಯರ ವಿರುದ್ಧದ ಅಪರಾಧ ಪ್ರಕರಣಗಳ ಆರೋಪಿಗಳನ್ನು ಸರ್ಕಾರಿ ಉದ್ಯೋಗಗಳಿಂದ ನಿಷೇಧಿಸಲು ಎಂದು ನಾವು ನಿರ್ಧರಿಸಿದ್ದೇವೆ'' ಎಂದು ತಿಳಿಸಿದರು.

''ಛತ್ತೀಸ್‌ಗಢ ಭಾಷೆ ಮತ್ತು ಬುಡಕಟ್ಟಿನ ಉಪಭಾಷೆಗಳನ್ನು 1ರಿಂದ 5ನೇ ತರಗತಿವರೆಗಿನ ಶಾಲಾ ಪಠ್ಯಕ್ರಮದಲ್ಲಿ ಒಂದು ವಿಷಯವಾಗಿ ಸೇರಿಸಲಾಗುವುದು. ಇದರ ಜೊತೆಗೆ ನವ ಛತ್ತೀಸ್‌ಗಢವನ್ನು ನಿರ್ಮಿಸುವಲ್ಲಿ ಆಧುನಿಕ ತಂತ್ರಜ್ಞಾನದ ಪಾತ್ರವನ್ನು ಗಮನದಲ್ಲಿಟ್ಟುಕೊಂಡು ಮುಂದಿನ ಶೈಕ್ಷಣಿಕ ವರ್ಷದಿಂದ ಶಾಲಾ ಪಠ್ಯಕ್ರಮದಲ್ಲಿ ಕೃತಕ ಬುದ್ಧಿಮತ್ತೆ (AI), ಯಂತ್ರ ಕಲಿಕೆ, ಇಂಟರ್​​ನೆಟ್ ಆಫ್ ಥಿಂಗ್ಸ್‌ನಂತಹ ಹೊಸ ಮಾಹಿತಿ ಅಳವಡಿಸಲಾಗುತ್ತೆ'' ಎಂದು ಸಿಎಂ ವಿವರಿಸಿದರು.

''ಸರ್ಕಾರಿ ಕಾಲೇಜು ವಿದ್ಯಾರ್ಥಿಗಳಿಗೆ ಶಾಲೆಗೆ ಹೋಗಿ ಬರಲು ಉಚಿತ ಬಸ್ ಸೌಲಭ್ಯ ಒದಗಿಸಲಾಗುತ್ತದೆ. ಕುಗ್ರಾಮದ ಪ್ರದೇಶಗಳಲ್ಲಿರುವ ಸರ್ಕಾರಿ ಶಾಲೆಗಳಲ್ಲಿ 11 ಮತ್ತು 12ನೇ ತರಗತಿಯ ವಿದ್ಯಾರ್ಥಿಗಳಿಗೆ ವೈದ್ಯಕೀಯ ಮತ್ತು ಎಂಜಿನಿಯರಿಂಗ್ ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿಗಾಗಿ ದೇಶದ ಹೆಸರಾಂತ ಸಂಸ್ಥೆಗಳಿಂದ ಉಚಿತ ಆನ್‌ಲೈನ್ ಕೋಚಿಂಗ್ ನೀಡಲಾಗುತ್ತದೆ. ಇದಕ್ಕಾಗಿ ರಾಜ್ಯದ ಎಲ್ಲ ಅಭಿವೃದ್ಧಿ ವಲಯಗಳಲ್ಲಿ ಆನ್‌ಲೈನ್ ಕೋಚಿಂಗ್ ಕ್ಲಾಸ್ ಸೌಲಭ್ಯಗಳನ್ನು ಸ್ಥಾಪಿಸಲಾಗುವುದು'' ಎಂದು ಸರ್ಕಾರದ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು.

''ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಕನಿಷ್ಠ ಒಂದು ಕಾಲೇಜಿನಲ್ಲಿ ಸ್ನಾತಕೋತ್ತರ ಕೋರ್ಸ್‌ಗಳನ್ನು ಆರಂಭಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಮೂರು ವಿಭಾಗಗಳಲ್ಲಿ ಸಾಹಿತಿಗಳಿಗೆ 5 ಲಕ್ಷ ರೂ. ನಗದು ಮತ್ತು ಪ್ರಶಸ್ತಿ ಪತ್ರ ಒಳಗೊಂಡ ಛತ್ತೀಸ್‌ಗಢ ಸಾಹಿತ್ಯ ಅಕಾಡೆಮಿ ಸಮ್ಮಾನ್ ನೀಡಿ ಗೌರವಿಸಲಾಗುವುದು'' ಎಂದು ಘೋಷಿಸಿದರು.

ಪ್ರಧಾನಿ ಮೋದಿ ಹೇಳಿಕೆಗೆ ಪ್ರತಿಕ್ರಿಯೆ: ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ಪ್ರಧಾನಿ ಮೋದಿ ಅವರು ಕುಟುಂಬ ರಾಜಕಾರಣದ ಕುರಿತು ಆಡಿದ ಮಾತುಗಳಿಗೆ ಪ್ರತಿಕ್ರಿಯಿಸಿ, ''ಪ್ರಧಾನ ಮಂತ್ರಿಗಳಿಂದ ಇಂತಹ ಹೇಳಿಕೆಗಳನ್ನು ನಾವು ನಿರೀಕ್ಷಿಸಿರಲಿಲ್ಲ. ತಮ್ಮ ಪಕ್ಷದಲ್ಲಿ ಇರುವವರ ಬಗ್ಗೆಯೂ ಅವರು ಮಾತನಾಡಲಿ. ಅದು ಸಿಂಧಿಯಾ, ಜಿತಿನ್​ ಪ್ರಸಾದ್​, ರಾಜನಾಥ್ ಸಿಂಗ್​ ಪುತ್ರ, ಅಮಿತ್​ ಶಾ ಪುತ್ರ ಅಥವಾ ರಮಣ್ ಸಿಂಗ್ ಪುತ್ರ ಯಾರೇ ಆಗಿರಲಿ, ಅವರು ವಹಿಸಿಕೊಂಡಿರುವ ಹುದ್ದೆಗಳಿಂದ ತೆಗೆದು ಹಾಕಲಿ. ಅವರಿಗೆ ಮುಂದೆಯೂ ಯಾವುದೇ ಜವಾಬ್ದಾರಿಯನ್ನೂ ನೀಡದಿರಲಿ. ಸ್ವಾತಂತ್ರ್ಯೋತ್ಸವದ ಭಾಷಣ ರಾಜಕೀಯದಿಂದ ಕೂಡಿರಬಾರದು'' ಎಂದು ಸಲಹೆ ಕೊಟ್ಟರು.

ಇದನ್ನೂ ಓದಿ: ಸ್ವಾತಂತ್ರ್ಯ ಭಾಷಣದಲ್ಲಿ ಮಣಿಪುರ ವಿಚಾರ ಪ್ರಸ್ತಾಪ.. ದೇಶವನ್ನು ವಿಶ್ವದ 3ನೇ ಆರ್ಥಿಕತೆಯಾಗಿಸುವ ವಾಗ್ದಾನ ಮಾಡಿದ ಮೋದಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.