ETV Bharat / bharat

ಒಂದೇ ಕುಟುಂಬದ ಐವರಿಗೆ ವಿಷ ಉಣಿಸಿ ಹತ್ಯೆ ಮಾಡಿದ್ದ ಇಬ್ಬರು ಮಹಿಳೆಯರು ಅರೆಸ್ಟ್​

author img

By ETV Bharat Karnataka Team

Published : Oct 19, 2023, 11:40 AM IST

Two women arrested
ಒಂದೇ ಕುಟುಂಬದ ಐವರಿಗೆ ವಿಷ ಉಣಿಸಿ ಹತ್ಯೆ ಮಾಡಿದ್ದ ಇಬ್ಬರು ಮಹಿಳೆಯರು ಅರೆಸ್ಟ್​

''ಮಹಾರಾಷ್ಟ್ರದ ಗಡ್ಚಿರೋಲಿಯಲ್ಲಿ ಐವರು ಕುಟುಂಬ ಸದಸ್ಯರಿಗೆ ವಿಷ ಹಾಕಿ ಕೊಲೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಮಹಿಳೆಯರನ್ನ ಬಂಧಿಸಲಾಗಿದೆ. ಪೂರ್ವಿಕರ ಆಸ್ತಿ ವಿವಾದ ಮತ್ತು ಇತರ ಕಾರಣಗಳಿಗಾಗಿ ಆರೋಪಿಗಳು ಒಂದೇ ಕುಟುಂಬದ ಐವರಿಗೆ ವಿಷ ಉಣಿಸಿ ಹತ್ಯೆ ಮಾಡಿದ್ದಾರೆ'' ಎಂದು ಗಡ್ಚಿರೋಲಿ ಪೊಲೀಸ್ ವರಿಷ್ಠಾಧಿಕಾರಿ ನೀಲೋತ್ಪಾಲ್ ತಿಳಿಸಿದ್ದಾರೆ.

ಗಡ್ಚಿರೋಲಿ: ಮಹಾರಾಷ್ಟ್ರದ ಗಡ್ಚಿರೋಲಿಯಲ್ಲಿ ಒಂದೇ ಕುಟುಂಬದ ಐವರ ಕೊಲೆ ಪ್ರಕರಣದ ರಹಸ್ಯವನ್ನು ಪೊಲೀಸರು ಭೇದಿಸಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಮಹಿಳೆಯರನ್ನು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳಾದ ಸಂಘಮಿತ್ರ ಕುಂಬಾರೆ ಮತ್ತು ರೋಸಾ ರಾಮ್ಟೆಕೆ ಎಂದು ಗುರುತಿಸಲಾಗಿದೆ. ಪೂರ್ವಿಕರ ಆಸ್ತಿ ವಿವಾದ ಮತ್ತು ಇತರ ಕಾರಣಗಳಿಗಾಗಿ ಇಬ್ಬರು ಮಹಿಳೆಯರು ಒಂದೇ ಕುಟುಂಬದ ಐವರಿಗೆ ವಿಷ ಹಾಕಿ ಕೊಲೆ ಮಾಡಿದ್ದಾರೆ ಎಂದು ಗಡ್ಚಿರೋಲಿ ಪೊಲೀಸ್ ವರಿಷ್ಠಾಧಿಕಾರಿ ನೀಲೋತ್ಪಾಲ್ ತಿಳಿಸಿದ್ದಾರೆ.

ಪೊಲೀಸರು ಹೇಳಿದ್ದೇನು?: "ಗಡ್ಚಿರೋಲಿ ಜಿಲ್ಲೆಯ ತಹಸಿಲ್ ಅಹೇರಿ ಗ್ರಾಮದಲ್ಲಿ ಕಳೆದ ಕೆಲವು ದಿನಗಳಿಂದ ಶಂಕರ ಪಿರು ಕುಂಬಾರೆ ಹಾಗೂ ಅವರ ಕುಟುಂಬದ ನಾಲ್ವರು ಸದಸ್ಯರು ಹಠಾತ್ ಅನಾರೋಗ್ಯಕ್ಕೆ ಒಳಗಾಗಿದ್ದರು. ಈ ಐವರು ಇಪ್ಪತ್ತು ದಿನಗಳ ಅವಧಿಯಲ್ಲಿ ಮೃತಪಟ್ಟಿದ್ದಾರೆ'' ಎಂದು ಪೊಲೀಸರು ತಿಳಿಸಿದ್ದಾರೆ.

"ಸೆಪ್ಟೆಂಬರ್ 20ರಂದು ಶಂಕರ ಕುಂಬಾರೆ ಮತ್ತು ಅವರ ಪತ್ನಿ ವಿಜಯ ಕುಂಬಾರೆ ಅವರ ಆರೋಗ್ಯದಲ್ಲಿ ಹಠಾತ್ ಬದಲಾವಣೆ ಕಂಡು ಬಂದ ಹಿನ್ನೆಲೆ, ಅವರನ್ನು ಅಹೇರಿಯ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ನಂತರ ಅವರನ್ನು ಚಿಕಿತ್ಸೆಗಾಗಿ ನಾಗಪುರದ ಪ್ರತಿಷ್ಠಿತ ಆಸ್ಪತ್ರೆಗೆ ರವಾನಿಸಲಾಯಿತು. ದುರದೃಷ್ಟವಶಾತ್, ಶಂಕರ ಕುಂಬಾರೆ ಸೆಪ್ಟೆಂಬರ್ 26ರಂದು ನಿಧನರಾದರು. ನಂತರ ಅವರ ಪತ್ನಿ ವಿಜಯ ಕುಂಬಾರೆ ಸೆಪ್ಟೆಂಬರ್ 27 ರಂದು ಮೃತಪಟ್ಟಿದ್ದಾರೆ '' ಎಂದು ನೀಲೋತ್ಪಾಲ್ ಹೇಳಿದರು.

''ಈ ಆಘಾತದಿಂದ ಇನ್ನೂ ಚೇತರಿಸಿಕೊಳ್ಳುತ್ತಿರುವಾಗಲೇ ಗಡಹೇರಿಯಲ್ಲಿ ವಾಸವಿದ್ದ ಕುಂಬಾರೆ ಅವರ ಪುತ್ರಿ ಕೋಮಲ್ ದಹಗೋಕರ್ ಮತ್ತು ಅವರ ಪುತ್ರ ರೋಶನ್ ಕುಂಬಾರೆ ಹಾಗೂ ಸಮೀಪದಲ್ಲೇ ವಾಸಿಸುತ್ತಿದ್ದ ವರ್ಷಾ ಊರಡೆ ಅವರ ಪುತ್ರಿ ಆನಂದಾ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ವಿವಿಧ ವೈದ್ಯಕೀಯ ಚಿಕಿತ್ಸೆ ನೀಡಿದರೂ ಯಾವುದೇ ಸುಧಾರಣೆ ಆಗಲಿಲ್ಲ. ಬದಲಿಗೆ ಅವರ ಆರೋಗ್ಯ ಸ್ಥಿತಿ ದಿನದಿಂದ ದಿನಕ್ಕೆ ಹದಗೆಟ್ಟು ಹೋಯಿತು. ನಂತರ, ಅಕ್ಟೋಬರ್ 8 ರಂದು ಕೋಮಲ್, ಅಕ್ಟೋಬರ್ 14 ರಂದು ಆನಂದಾ ಮತ್ತು ಅಕ್ಟೋಬರ್ 15 ರಂದು ರೋಷನ್ ಕುಂಬಾರೆ ಸಾವನ್ನಪ್ಪಿದ್ದಾರೆ.

ನಾಲ್ಕು ತನಿಖಾ ತಂಡಗಳ ರಚನೆ: ''ಇನ್ನು ಶಂಕರ ಕುಂಬಾರೆ ಮತ್ತು ವಿಜಯ ಕುಂಬಾರೆ ಅವರನ್ನು ಚಿಕಿತ್ಸೆಗಾಗಿ ಆಹೇರಿಯಿಂದ ಚಂದ್ರಾಪುರಕ್ಕೆ ಕರೆದೊಯ್ದ ಕಾರು ಚಾಲಕ ರಾಕೇಶ್ ಮಾದವಿ ಆರೋಗ್ಯ ಕೂಡ ಹದಗೆಟ್ಟಿತ್ತು. ಅವರ ಸ್ಥಿತಿ ಈಗ ಸ್ಥಿರವಾಗಿದೆ'' ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆಯನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಿದ್ದು, ತನಿಖೆ ಆರಂಭಿಸಿದ್ದಾರೆ. ಮಹಾರಾಷ್ಟ್ರ ಮತ್ತು ತೆಲಂಗಾಣದ ವಿವಿಧ ಜಿಲ್ಲೆಗಳಲ್ಲಿ ವಿಚಾರಣೆ ನಡೆಸಲು ತಕ್ಷಣವೇ ನಾಲ್ಕು ತನಿಖಾ ತಂಡಗಳನ್ನು ರಚಿಸಲಾಗಿತ್ತು. ಬಂಧಿತ ಇಬ್ಬರು ಮಹಿಳೆಯರ ವಿರುದ್ಧ ಭಾರತೀಯ ದಂಡ ಸಂಹಿತೆಯ (IPC) ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ದೂರು ದಾಖಲಿಸಲಾಗಿದೆ.

ಇದನ್ನೂ ಓದಿ: ವಾಕಿಂಗ್​ಗೆ​ ಹೋದ ಬಾಲಕಿ ಮೇಲೆ ಸ್ನೇಹಿತರಿಂದ ಸಾಮೂಹಿಕ ಅತ್ಯಾಚಾರ: ಹರಿದ ಬಟ್ಟೆಯಲ್ಲೇ ಪೊಲೀಸ್​ ಠಾಣೆಗೆ ಬಂದ ಸಂತ್ರಸ್ತೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.