ಚೆನ್ನೈ(ತಮಿಳುನಾಡು): ಜುಲೈ 4 ರಂದು ವಂಡಲೂರು ಬಳಿ ಸಂಭವಿಸಿದ್ದ ರಸ್ತೆ ಅಪಘಾತದಲ್ಲಿ ಕಾರ್ತಿಕ್ ರಾಜ (19) ಎಂಬ ಯುವಕ ತೀವ್ರವಾಗಿ ಗಾಯಗೊಂಡಿದ್ದರು. ಕೂಡಲೇ ಅವರನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಕ್ರೋಂಪೇಟೆಯ ರೇಲಾ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. ಅಲ್ಲಿ ಅವರ ಮೆದುಳು ನಿಷ್ಕ್ರಿಯಗೊಂಡಿರುವ ಬಗ್ಗೆ ವೈದ್ಯರು ತಿಳಿಸಿದ್ದರು.
ಅವರ ಮೆದುಳು ನಿಷ್ಕ್ರಿಯಗೊಂಡರೂ, ದೇಹದ ಇತರ ಅಂಗಾಂಗಳು ಕೆಲಸ ಮಾಡುತ್ತಿದ್ದವು. ಈ ಬಗ್ಗೆ ಆಸ್ಪತ್ರೆ ಆಡಳಿತ ಮಂಡಳಿಯಿಂದ ಕಾರ್ತಿಕ್ ರಾಜ ಪೋಷಕರಿಗೆ ಮಾಹಿತಿ ನೀಡಲಾಗಿತ್ತು. ಬಳಿಕ ಅವರ ದೇಹದ ಅಂಗಾಂಗಳು ಇತರರ ಜೀವವನ್ನು ಉಳಿಸಬಹುದು ಅಥವಾ ಉಪಯುಕ್ತವಾಗಲಿವೆ ಎಂದು ವೈದ್ಯರು ಪೋಷಕರಿಗೆ ಮನವರಿಕೆ ಮಾಡಿಸಿದ್ದರು. ಹಾಗಾಗಿ ಯುವಕನ ಪೋಷಕರು ದೇಹದ ಭಾಗಗಳನ್ನು ದಾನ ಮಾಡಲು ಒಪ್ಪಿಕೊಂಡಿದ್ದಾರೆ.
ಕಾರ್ಯವಿಧಾನಗಳನ್ನು ಪೂರ್ಣಗೊಳಿಸಿದ ಮತ್ತು ಸರ್ಕಾರದ ಅನುಮೋದನೆಯನ್ನು ಪಡೆದ ನಂತರ ಅವರ ದೇಹದ ಅಂಗಾಂಗಳನ್ನು 5 ಜನರ ಉಳಿಸಲು ಬಳಸಲಾಯಿತು. ಮುಖ್ಯವಾಗಿ ಅವರ ಹೃದಯವನ್ನು ಹೃದ್ರೋಗದಿಂದ ಬಳಲುತ್ತಿರುವ ನರ್ಸಿಂಗ್ ಕಾಲೇಜು ವಿದ್ಯಾರ್ಥಿಗೆ ಹಾಕಲಾಗಿದೆ. ರೇಲಾ ಆಸ್ಪತ್ರೆ ಮತ್ತು ತಮಿಳುನಾಡು ಅಂಗ ಕಸಿ ಆಯೋಗ 'ಟ್ರಾನ್ಸ್ಟನ್' ಜಂಟಿಯಾಗಿ ಕಾರ್ತಿಕ್ ರಾಜ ಅವರ ಕುಟುಂಬವನ್ನು ಗೌರವಿಸಿತು.
ಇದನ್ನೂ ಓದಿ: 10 ದಿನಗಳ ನಂತರ ಪುನಃ ತೆರೆದ ಎಐಎಡಿಎಂಕೆ ಪ್ರಧಾನ ಕಚೇರಿ
ಈ ಬಗ್ಗೆ ಮಾತನಾಡಿದ ಕಾರ್ತಿಕ್ ರಾಜನ ಸಹೋದರಿ ಜ್ಯೋತಿ, ನನ್ನ ಸಹೋದರ ಐದು ಜನರಿಗೆ ಮರುಜೀವ ಕೊಟ್ಟಿದ್ದಾನೆ ಎಂದು ಹೆಮ್ಮೆಪಡುತ್ತೇನೆ ಎಂದರು.