ETV Bharat / assembly-elections

ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಹಿಡಿತಕ್ಕಾಗಿ ಕೈ-ಕಮಲದ ನಡುವೆ ಪೈಪೋಟಿ: ರಾಷ್ಟ್ರಮಟ್ಟದಲ್ಲಿ ಗಮನ ಸೆಳೆದ ಕರಾವಳಿಯ ಇತಿಹಾಸ ಹೀಗಿದೆ

author img

By

Published : Mar 28, 2023, 11:09 PM IST

Belthangady Assembly Constituency Profile
Belthangady Assembly Constituency Profile

ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣಾ ಲೆಕ್ಕಾಚಾರ ಜೋರಾಗಿದೆ. ಕರಾವಳಿಯಲ್ಲಿ ಹಿಡಿತ ಸಾಧಿಸುವ ನಿಟ್ಟಿನಲ್ಲಿ ಎರಡೂ ರಾಷ್ಟ್ರೀಯ ಪಕ್ಷಗಳು ತೀವ್ರ ಪೈಪೋಟಿ ನಡೆಸಿವೆ. ಸದ್ಯದ ರಾಜಕೀಯ ಹೊರತಾಗಿಯೂ ಕ್ಷೇತ್ರ ಹಲವು ಕಾರಣಗಳಿಂದ ಸುದ್ದಿಯಲ್ಲಿದೆ. ತನ್ನದೇಯಾದ ಇತಿಹಾಸ ಹೊಂದಿರುವ ಬೆಳ್ತಂಗಡಿ, ಒಂದು ಕಾಲದಲ್ಲಿ ರಾಷ್ಟ್ರಮಟ್ಟದಲ್ಲಿಯೂ ಗಮನ ಸೆಳೆದಿತ್ತು.

ಮಂಗಳೂರು: ಪುಣ್ಯಕ್ಷೇತ್ರ ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಹೊಂದಿಕೊಂಡಿರುವ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದಲ್ಲಿ ಈ ಬಾರಿ ಚುನಾವಣೆ ಜೋರಾಗಿದೆ. ಪುಣ್ಯಕ್ಷೇತ್ರದ ಹಿಡಿತ ಸಾಧಿಸುವ ನಿಟ್ಟಿನಲ್ಲಿ ಕಾಂಗ್ರೆಸ್​ ಮತ್ತು ಬಿಜೆಪಿ ಪ್ರಬಲ ಪೈಪೋಟಿಗಳಿದಿವೆ. ನೆಲೆ ಇಲ್ಲದಿದ್ದರೂ ಜೆಡಿಎಸ್​ ಕೂಡ ಒಂದು ಕೈ ನೋಡುವ ಯತ್ನ ನಡೆಸಿದೆ.

ಸದ್ಯದ ರಾಜಕೀಯ ಪರಿಸ್ಥಿತಿ ಗಮನಿಸಿದಾಗ ಇಲ್ಲಿ ಕಾಂಗ್ರೆಸ್​ ಮತ್ತು ಬಿಜೆಪಿ ಪಕ್ಷದ ಪ್ರಾಬಲ್ಯವೇ ಹೆಚ್ಚು. ಬಿಜೆಪಿಯ ಹರೀಶ್ ಪೂಂಜಾ ಹಾಲಿ ಶಾಸಕರಾಗಿದ್ದು ಮತ್ತೆ ಟಿಕೆಟ್​ ಸಿಗುವ ನಿರೀಕ್ಷೆಯಲ್ಲಿದ್ದಾರೆ. ಇತ್ತ ಎದುರಾಳಿ ಕಾಂಗ್ರೆಸ್​​ನಲ್ಲಿ ಟಿಕೆಟ್ ಘೋಷಣೆಯಾಗಿದ್ದು ರಕ್ಷಿತ್ ಶಿವರಾಮ್ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದಾರೆ. ಹಾಗಾಗಿ ಎರಡು ಪಕ್ಷದಿಂದಲೂ ಯುವಕರೇ ಸ್ಪರ್ಧೆ ಮಾಡುತ್ತಿರುವುದರಿಂದ ಕ್ಷೇತ್ರ ಕುತೂಹಲಕ್ಕೆ ಕಾರಣವಾಗಿದೆ.

Belthangady Assembly Constituency Profile
ಹರೀಶ್ ಪೂಂಜಾ

ಇದರ ಇತಿಹಾಸವೂ ಅಷ್ಟೇ ಕುತೂಹಲಕರವಾಗಿದೆ. ರಾಜಕೀಯವಾಗಿ ಹಲವು ಬಾರಿ ರಾಜ್ಯ ಮತ್ತು ದೇಶದ ಗಮನ ಸೆಳೆದಿದೆ. ಈ ಹಿಂದೆ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರಕ್ಕೆ ಒಳಪಟ್ಟಿದ್ದ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಸ್ಪರ್ಧೆಯಿಂದಾಗಿ ಈ ತಾಲೂಕು ರಾಷ್ಟ್ರಮಟ್ಟದಲ್ಲಿ ಗಮನ ಸೆಳೆದಿತ್ತು. ಈ ಕ್ಷೇತ್ರದಲ್ಲಿ ಈ ಹಿಂದೆ ಮಾಜಿ ಶಾಸಕ ಕೆ. ವಸಂತ ಬಂಗೇರ ಅವರ ಸಹೋದರ ಮಾಜಿ ಶಾಸಕ ಕೆ. ಪ್ರಭಾಕರ ಬಂಗೇರ ಅವರ ಸ್ಪರ್ಧೆಯಿಂದಾಗಿ ಈ ಕ್ಷೇತ್ರ ಸಹೋದರರ ಹೋರಾಟ ಕಣವಾಗಿ ರಾಜ್ಯಮಟ್ಟದಲ್ಲೂ ಗಮನಸೆಳೆದಿತ್ತು. ಅಲ್ಲದೆ ಕೇದೆ ಮನೆತನದ ಒಂದೇ ಕುಟುಂಬದ ಮೂವರು ಶಾಸಕರಾದ ದಾಖಲೆ ಕೂಡಾ ಈ ಕ್ಷೇತ್ರದಲ್ಲಿದೆ.

1952ರಲ್ಲಿ ಬೆಳ್ತಂಗಡಿ ತಾಲೂಕು ಅಸ್ತಿತ್ವಕ್ಕೆ ಬಂದಿತ್ತು. ಅದುವರೆಗೆ ಬೆಳ್ತಂಗಡಿಯ ಗ್ರಾಮಗಳು ಪುತ್ತೂರು ತಾಲೂಕು ವ್ಯಾಪ್ತಿಗೆ ಒಳಪಟ್ಟಿತ್ತು. ಬೆಳ್ತಂಗಡಿ ತಾಲೂಕು ಆಸ್ತಿತ್ವಕ್ಕೆ ಬಂದ ಬಳಿಕ ಬೆಳ್ತಂಗಡಿ ಹಾಗೂ ಕೊಕ್ಕಡ ಹೋಬಳಿಯ ತಲಾ 25 ಗ್ರಾಮಗಳು, ಉಪ್ಪಿನಂಗಡಿ ಹೋಬಳಿಗೆ ಸೇರಿದ್ದ 2 ಗ್ರಾಮ ಹಾಗೂ ಕಾರ್ಕಳ ತಾಲೂಕಿಗೆ ಸೇರಿದ್ದ ವೇಣೂರು ಹೋಬಳಿಯ 29 ಗ್ರಾಮಗಳನ್ನು ಸೇರಿಸಿ ಹೊಸ ಬೆಳ್ತಂಗಡಿ ತಾಲೂಕನ್ನು ರಚಿಸಲಾಯಿತು. ಸದ್ಯ ಬೆಳ್ತಂಗಡಿ ತಾಲೂಕು ಒಟ್ಟು 81 ಗ್ರಾಮಗಳಿರುವ ದೊಡ್ಡ ವಿಧಾನಸಭಾ ಕ್ಷೇತ್ರವಾಗಿದೆ. ಇಲ್ಲಿ ಮೂರು ಹೋಬಳಿಗಳಿದ್ದು, ತಾಲೂಕು ಒಟ್ಟು 137510 ಹೆಕ್ಟೇರ್ ವಿಸ್ತೀರ್ಣವನ್ನು ಹೊಂದಿದೆ.

Belthangady Assembly Constituency Profile
ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ವಿವರ

ಮತದಾರರ ಮಾಹಿತಿ: ಈ ವಿಧಾನಸಭಾ ಕ್ಷೇತ್ರದಲ್ಲಿ ಪ್ರಸ್ತುತ 1,09,537 ಪುರುಷ ಮತದಾರರು ಮತ್ತು 1,12,192 ಮಹಿಳಾ ಮತದಾರರು, 6 ಇತರೆ ಸೇರಿದಂತೆ ಒಟ್ಟು 2,21,735 ಮತದಾರರಿದ್ದಾರೆ. ಈ ಕ್ಷೇತ್ರದಲ್ಲಿ 15 ಬಾರಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಶಾಸಕರು 9 ಬಾರಿ ಆಯ್ಕೆಯಾಗಿದ್ದಾರೆ. ಬಿಜೆಪಿ ಶಾಸಕರು 5 ಬಾರಿ, ಜೆಡಿಎಸ್ ಶಾಸಕರು ಒಂದು ಬಾರಿ ಆಯ್ಕೆಯಾಗಿದ್ದಾರೆ.

ಸುಳ್ಯ ತಾಲೂಕಿನ ಬಾಳುಗೋಡು ವೆಂಕಟ್ರಮಣಗೌಡ, ಶ್ರೀ ಕ್ಷೇತ್ರ ಧರ್ಮಸ್ಥಳದ ರತ್ನವರ್ಮ ಹೆಗ್ಗಡೆ, ಸುಳ್ಯದ ಕೆ. ಸುಬ್ರಹ್ಮಣ್ಯಗೌಡ, ಕೇದೆ ಚಿದಾನಂದ ಪೂಜಾರಿ, ತಲಾ ಒಂದು ಅವಧಿಯಲ್ಲಿ ಶಾಸಕರಾಗಿದ್ದರೆ, ವೈಕುಂಠ ಬಾಳಿಗ, ಕೆ. ಗಂಗಾಧರಗೌಡ, ಕೆ. ಪ್ರಭಾಕರ ಬಂಗೇರ ಎರಡು ಅವಧಿಯಲ್ಲಿ ಹಾಗೂ ಮಾಜಿ ಶಾಸಕ ಕೆ. ವಸಂತ ಬಂಗೇರ ಅವರು ದಾಖಲೆಯ 5 ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು. ಪ್ರಸುತ್ತ ಬಿಜೆಪಿ ಶಾಸಕ ಹರೀಶ್ ಪೂಂಜ ಅವರು ಕ್ಷೇತ್ರದ ಶಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಕ್ಷೇತ್ರದಲ್ಲಿ ಶಾಸಕರಾಗಿದ್ದವರಲ್ಲಿ ವೈಕುಂಠ ಬಾಳಿಗ ಅವರು ರಾಜ್ಯ ಸರ್ಕಾರದ ಹಣಕಾಸು ಸಚಿವರಾಗಿ, ವಿಧಾನಸಭೆಯ ಸಭಾಪತಿ (ಸ್ಪೀಕರ್) ಆಗಿ ಕಾರ್ಯನಿರ್ವಹಿಸಿದ್ದರು. ಕೆ. ಗಂಗಾಧರಗೌಡರು ರಾಜ್ಯ ಸರ್ಕಾರದಲ್ಲಿ ಯುವಜನ ಸೇವೆ ಮತ್ತು ಕ್ರೀಡಾಸಚಿವರಾಗಿ ಕಾರ್ಯ ನಿರ್ವಹಿಸಿದ್ದರು. ಕೆ. ವಸಂತ ಬಂಗೇರ ಅವರು ಸರ್ಕಾರದ ಮುಖ್ಯ ಸಚೇತಕರಾಗಿ ಸೇವೆ ಸಲ್ಲಿಸಿದ್ದಾರೆ. ಕ್ಷೇತ್ರದಲ್ಲಿ ಕೆ. ಚಿದಾನಂದ ಪೂಜಾರಿ, ಕೆ. ವಸಂತ ಬಂಗೇರ, ಕೆ. ಪ್ರಭಾಕರ ಬಂಗೇರ ಒಂದೇ ಕುಟುಂಬದಿಂದ ಆಯ್ಕೆಯಾದ ಮೂರು ಮಂದಿ ಶಾಸಕರು. ಅದರಲ್ಲಿಯೂ ಕೆ. ವಸಂತ ಬಂಗೇರ ಅವರು ಬಿಜೆಪಿ, ಜೆಡಿಎಸ್ ಹಾಗೂ ಕಾಂಗ್ರೆಸ್ ಮೂರು ಪಕ್ಷಗಳಿಂದಲೂ ಸ್ಪರ್ಧಿಸಿ ಶಾಸಕರಾದ ಏಕೈಕ ವ್ಯಕ್ತಿಯಾಗಿದ್ದಾರೆ.

Belthangady Assembly Constituency Profile
ರಕ್ಷಿತ್ ಶಿವರಾಮ್

1952ರ ಚುನಾವಣೆಯಲ್ಲಿ ಕಾಂಗ್ರೆಸ್‌ನ ಸುಳ್ಯ ತಾಲೂಕಿನ ಬಾಳುಗೋಡು ವೆಂಕಟ್ರಮಣಗೌಡರು ಪ್ರಥಮ ಶಾಸಕರಾಗಿ ಆಯ್ಕೆಯಾಗಿದ್ದರು. 1957ರಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಬೆಂಬಲದಿಂದ ಶ್ರೀ ಕ್ಷೇತ್ರ ಧರ್ಮಸ್ಥಳ ರತ್ನವರ್ಮ ಹೆಗ್ಗಡೆ ಸ್ಪರ್ಧಿಸಿ ಗೆದ್ದು ಶಾಸಕರಾದರು. 1962ರಲ್ಲಿ ಕಾಂಗ್ರೆಸ್​ನಿಂದ ಸ್ಪರ್ಧಿಸಿದ್ದ ವೈಕುಂಠ ಬಾಳಿಗ ಅವರು ಶಾಸಕರಾಗಿ ಚುನಾಯಿತರಾಗಿದ್ದರು. ಈ ಅವಧಿಯಲ್ಲಿ ವೈಕುಂಠ ಬಾಳಿಗರು ರಾಜ್ಯ ಸರ್ಕಾರದಲ್ಲಿ ಹಣಕಾಸು ಸಚಿವರಾಗಿ ಆಯ್ಕೆಯಾಗಿ ಸೇವೆ ಸಲ್ಲಿಸಿದ್ದರು.

1967ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ವೈಕುಂಠ ಬಾಳಿಗರು ಮತ್ತೊಮ್ಮೆ ಕಾಂಗ್ರೆಸ್ ಪಕ್ಷ ಬೆಂಬಲದೊಂದಿಗೆ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಈ ಅವಧಿಯಲ್ಲಿ ವೈಕುಂಠ ಬಾಳಿಗರು ವಿಧಾನಸಭೆಯ ಸ್ಪೀಕರ್ ಆಗಿಕಾರ್ಯನಿರ್ವಹಿಸಿದ್ದರು. ಇವರು ಶಾಸಕತ್ವ ಅವಧಿಯಲ್ಲೇ ನಿಧನರಾಗಿದ್ದರು. ಇದರಿಂದಾಗಿ 1969ರಲ್ಲಿ ಈ ಕ್ಷೇತ್ರಕ್ಕೆ ಉಪಚುನಾವಣೆ ನಡೆದಿದ್ದು, ಈ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿದ್ದ ಕೆ. ಚಿದಾನಂದ ಪೂಜಾರಿ ಅವರು ಗೆಲುವು ಸಾಧಿಸಿದ್ದರು.

1972ರಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿದ್ದ ಕೆ. ಸುಬ್ರಹ್ಮಣ್ಯ ಗೌಡರು ಶಾಸಕರಾದರು. 1978ರಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್​ನಿಂದ ಸ್ಪರ್ಧಿಸಿ ಕೆ. ಗಂಗಾಧರ ಗೌಡ ಕ್ಷೇತ್ರದ ಶಾಸಕರಾದರು. 1983ರಲ್ಲಿ ಬಿಜೆಪಿಯಿಂದ ಕೆ. ವಸಂತ ಬಂಗೇರ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ರಾಜ್ಯ ವಿಧಾನಸಭೆಗೆ ಬಿಜೆಪಿಯಿಂದ ಯಡಿಯೂರಪ್ಪ ಮತ್ತು ವಸಂತ ಬಂಗೇರ ಮಾತ್ರ ಈ ಅವಧಿಯಲ್ಲಿ ಆಯ್ಕೆಯಾಗಿದ್ದರು. 1985ರಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಮತ್ತೆ ಕೆ. ವಸಂತ ಬಂಗೇರ ಶಾಸಕರಾದರು.

1989ರಲ್ಲಿ ಕಾಂಗ್ರೆಸ್ ಬೆಂಬಲದಿಂದ ಮತ್ತೆ ಸ್ಪರ್ಧಿಸಿದ್ದ ಕೆ. ಗಂಗಾಧರಗೌಡ ಎರಡನೇ ಅವಧಿಗೆ ಶಾಸಕರಾದರು. ಈ ಅವಧಿಯಲ್ಲಿ ವಸಂತ ಬಂಗೇರ ಅವರು ಬಿಜೆಪಿಯನ್ನು ತೊರೆದು ಜನತಾದಳಕ್ಕೆ ಸೇರ್ಪಡೆಗೊಂಡು ಜನತಾದಳ ಅಭ್ಯರ್ಥಿಯಾಗಿದ್ದರು. ಬಿಜೆಪಿಯಿಂದ ಅವರ ಸಹೋದರ ಪ್ರಭಾಕರ ಬಂಗೇರ ಸ್ಪರ್ಧಿಸಿದ್ದರು. ಈ ಅವಧಿಯಲ್ಲಿ ಗಂಗಾಧರಗೌಡರು ಸರ್ಕಾರದ ಯುವಜನ ಸೇವಾ ಸಚಿವರಾಗಿ ಆಯ್ಕೆಯಾಗಿದ್ದರು. 1994ರಲ್ಲಿ ಜನತಾದಳದಿಂದ ಸ್ಪರ್ಧಿಸಿದ್ದ ಕೆ. ವಸಂತ ಬಂಗೇರ ಮೂರನೇ ಬಾರಿಗೆ ಶಾಸಕರಾಗಿ ಆಯ್ಕೆಯಾದರು. ಈ ಅವಧಿಯಲ್ಲಿ ಅವರು ವಿಧಾನಸಭೆಯ ಮುಖ್ಯ ಸಚೇತಕರಾಗಿದ್ದರು. 1999ರಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಕೆ. ಪ್ರಭಾಕರ ಬಂಗೇರ ಅವರು ಪ್ರಥಮ ಬಾರಿಗೆ ಶಾಸಕರಾಗಿ ವಿಧಾನಸಭೆಯನ್ನು ಪ್ರವೇಶಿಸಿದ್ದರು. 2004ರಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಪ್ರಭಾಕರ ಬಂಗೇರ ಎರಡನೇ ಅವಧಿಗೆ ಶಾಸಕರಾಗಿ ಆಯ್ಕೆಯಾದರು.

2008ರ ವಿಧಾನಸಭಾ ಚುನಾವಣೆ ವೇಳೆಯಲ್ಲಿ ಮಾಜಿ ಶಾಸಕ ಕೆ. ವಸಂತ ಬಂಗೇರ ಜೆಡಿಎಸ್ ತೊರೆದು, ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು. ಕಾಂಗ್ರೆಸ್​ನಿಂದ ಸ್ಪರ್ಧಿಸಿ ನಾಲ್ಕನೇ ಅವಧಿಗೆ ಶಾಸಕರಾಗಿ ಆಯ್ಕೆಯಾದರು. ಆ ಸಂದರ್ಭದಲ್ಲಿ ಕಾಂಗ್ರೆಸ್ ತೊರೆದು ಜನತಾದಳ ಸೇರ್ಪಡೆಯಾಗಿದ್ದ ಮಾಜಿ ಸಚಿವ ಗಂಗಾಧರ ಗೌಡರು, ನಂತರ ದಿನಗಳಲ್ಲಿ ಜನತಾದಳ ತೊರೆದು ಬಿಜೆಪಿಗೆ ಸೇರ್ಪಡೆಗೊಂಡರು. 2013ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್​ನಿಂದ ಕೆ. ವಸಂತ ಬಂಗೇರ ಐದನೇ ಬಾರಿಗೆ ಶಾಸಕರಾಗಿ ಈ ಕ್ಷೇತ್ರದಲ್ಲಿ ದಾಖಲೆಯನ್ನು ನಿರ್ಮಿಸಿದ್ದಾರೆ. 2018ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಹಾಲಿ ಶಾಸಕ ಹರೀಶ್ ಪೂಂಜ ಅವರು ಮಾಜಿ ಶಾಸಕ ಕೆ. ವಸಂತ ಬಂಗೇರರನ್ನು ಸೋಲಿಸಿ, ಪ್ರಥಮ ಬಾರಿಗೆ ಈ ಕ್ಷೇತ್ರದ ಶಾಸಕರಾದರು. ಬಳಿಕದ ರಾಜಕೀಯ ಬೆಳವಣಿಗೆಯಲ್ಲಿ ಮಾಜಿ ಸಚಿವ ಗಂಗಾಧರಗೌಡ ಹಾಗೂ ರಂಜನ್​ಗೌಡ ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷವನ್ನು ಸೇರ್ಪಡೆಗೊಂಡರು.

ಈವರೆಗೆ ಗೆದ್ದ ಅಭ್ಯರ್ಥಿಗಳು: ಈ ಕ್ಷೇತ್ರದಲ್ಲಿ ಇಲ್ಲಿಯವರೆಗೆ 15 ಬಾರಿ ವಿಧಾನಸಭಾ ಚುನಾವಣೆ ನಡೆದಿದೆ. ಈ ಅವಧಿಯಲ್ಲಿ ಕಾಂಗ್ರೆಸ್ 9 ಬಾರಿ ಗೆದ್ದಿದ್ದರೆ, ಬಿಜೆಪಿ 5 ಬಾರಿ, ಜೆಡಿಎಸ್ ಒಂದು ಬಾರಿ ಗೆದ್ದಿದೆ. ಕಾಂಗ್ರೆಸ್​ ಮತ್ತು ಬಿಜೆಪಿ ಪಕ್ಷಗಳು ಮಾತ್ರ ಹೆಚ್ಚು ಅಧಿಕಾರ ಅನುಭವಿಸಿದ್ದು ಕ್ಷೇತ್ರದ ವೈಶಿಷ್ಟ್ಯ.

1952 - ಬಾಳುಗೋಡು ವೆಂಕಟ್ರಮಣ ಗೌಡ - ಕಾಂಗ್ರೆಸ್
1957 - ಧರ್ಮಸ್ಥಳ ರತ್ನವರ್ಮ ಹೆಗ್ಗಡೆ - ಕಾಂಗ್ರೆಸ್
1962 - ವೈಕುಂಠ ಬಾಳಿಗ - ಕಾಂಗ್ರೆಸ್
1962 - ವೈಕುಂಠ ಬಾಳಿಗ - ಕಾಂಗ್ರೆಸ್
1969 - ಚಿದಾನಂದ ಪೂಜಾರಿ - ಕಾಂಗ್ರೆಸ್
1972 - ಕೆ. ಸುಬ್ರಹ್ಮಣ್ಯ ಗೌಡ - ಕಾಂಗ್ರೆಸ್
1978 - ಗಂಗಾಧರ ಗೌಡ- ಕಾಂಗ್ರೆಸ್
1983 - ವಸಂತ ಬಂಗೇರ - ಬಿಜೆಪಿ
1985 - ವಸಂತ ಬಂಗೇರ - ಬಿಜೆಪಿ
1989 - ಗಂಗಾಧರ ಗೌಡ - ಕಾಂಗ್ರೆಸ್
1994 - ವಸಂತ ಬಂಗೇರ - ಜನತಾದಳ
1999 - ಪ್ರಭಾಕರ ಬಂಗೇರ - ಬಿಜೆಪಿ
2004 - ಪ್ರಭಾಕರ ಬಂಗೇರ - ಬಿಜೆಪಿ
2008 - ವಸಂತ ಬಂಗೇರ - ಕಾಂಗ್ರೆಸ್
2013 - ವಸಂತ ಬಂಗೇರ - ಕಾಂಗ್ರೆಸ್
2018 - ಹರೀಶ್ ಪೂಂಜಾ - ಬಿಜೆಪಿ

ಇದನ್ನೂ ಓದಿ: ರೇಷ್ಮೆ ನಗರಿ ರಾಮನಗರ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣಾ ಬಿಸಿ: ಪಕ್ಷಗಳಲ್ಲಿ ಬಲಾಬಲ ಹೀಗಿದೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.