ಕರ್ನಾಟಕ

karnataka

ಚಿಕ್ಕಮಗಳೂರು: ಆಕಸ್ಮಿಕ ಬೆಂಕಿ ತಗುಲಿ ನಾಲ್ಕು ಕಾರುಗಳು ಸಂಪೂರ್ಣ ಭಸ್ಮ - cars burnt in Chikkamagaluru

By ETV Bharat Karnataka Team

Published : Mar 25, 2024, 5:54 PM IST

ಆಕಸ್ಮಿಕ ಬೆಂಕಿ ತಗುಲಿ ನಾಲ್ಕು ಕಾರುಗಳು ಸಂಪೂರ್ಣ ಭಸ್ಮ

ಚಿಕ್ಕಮಗಳೂರು: ನಗರದಲ್ಲಿ ಬೇಸಿಗೆಯ ಬೇಗೆ ತೀವ್ರ ಗೊಳ್ಳುತ್ತಿದ್ದಂತೆ ಅಗ್ನಿ ಅವಘಡಗಳು ಕೂಡಾ ಹೆಚ್ಚುತ್ತಿವೆ. ಆಕಸ್ಮಿಕವಾಗಿ ಹುಲ್ಲಿಗೆ ಹತ್ತಿದ ಬೆಂಕಿಯಿಂದಾಗಿ ನಾಲ್ಕು ಕಾರುಗಳು ಸುಟ್ಟು ಭಸ್ಮವಾಗಿರುವ ಘಟನೆ ನಗರದ ಉಪ್ಪಳ್ಳಿಯ ಬದ್ರಿಯಾ ಗ್ಯಾರೇಜ್​ನ ಪಕ್ಕದಲ್ಲಿ ನಡೆದಿದೆ. 

ಮಲೆನಾಡಲ್ಲೂ ರಣ ಬಿಸಿಲು ಭೂಮಿಯನ್ನು ಕಾದ ಕಾವಲಿಯಂತೆ ಮಾಡಿದೆ. ಇದರ ಮಧ್ಯೆ ಬೆಂಕಿ ಅವಘಡ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. ಗ್ಯಾರೇಜ್​ನ ಆವರಣದಲ್ಲಿ ರಿಪೇರಿಗೆಂದು ನಿಲ್ಲಿಸಿದ್ದ ಕಾರುಗಳ ಪಕ್ಕದಲ್ಲಿ ಒಣ ಹುಲ್ಲು, ಕಸ-ಕಡ್ಡಿಗಳು ಇವೆ. ಆಕಸ್ಮಿಕವಾಗಿ ಬೆಂಕಿ ತಗುಲಿದ್ದು, ಗ್ಯಾರೇಜ್​ ಆವರಣದಲ್ಲಿ ಕಾರುಗಳಿಗೆ ಬೆಂಕಿ ತಗುಲಿದೆ.

ಕೂಡಲೇ ಗ್ಯಾರೇಜ್​ ಮಾಲೀಕ ಸೇರಿದಂತೆ ಇತರರು ಅಗ್ನಿಶಾಮಕ ದಳಕ್ಕೆ ಮಾಹಿತಿ ರವಾನಿಸಿದ್ದಾರೆ. ಸುದ್ದಿ ತಿಳಿದಾಕ್ಷಣ ಕೂಡಲೇ ಅಗ್ನಿ ಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ಬೆಂಕಿ ನಂದಿಸಿದ್ದರು. ಅಷ್ಟೊತ್ತಿಗಾಗಲೇ ನಾಲ್ಕು ಕಾರುಗಳು ಬೆಂಕಿಗಾಹುತಿಯಾಗಿದ್ದವು. ಸಮಯಕ್ಕೆ ಸರಿಯಾಗಿ ಅಗ್ನಿ ಶಾಮಕದಳ ಬೆಂಕಿ ನಂದಿಸಿದ್ದರಿಂದ ಬೆಂಕಿಯ ಕೆನ್ನಾಲಿಗೆ ಮತ್ತಷ್ಟು ಆವರಿಸುವ ಮೊದಲೇ ಹೆಚ್ಚಿನ ಅನಾಹುತ ತಪ್ಪಿಸಲಾಗಿದೆ. ಅಷ್ಟೇ ಅಲ್ಲದೇ ಪಕ್ಕದಲ್ಲಿ ನಿಲ್ಲಿಸಿದ್ದ ಮತ್ತೊಂದು ಕಾರಿನ ಟೈರ್​ ಸಹಾ ಬೆಂಕಿ ತಗುಲಿ ಸುಟ್ಟು ಹೋಗಿದೆ.

ಇನ್ನು ಈ ಅವಘಡ ಇದೇ ಜಾಗದಲ್ಲಿ ಎರಡನೇ ಬಾರಿಗೆ ಸಂಭವಿಸಿದೆ. ಬಸವನಹಳ್ಳಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಅಗ್ನಿ ಅವಘಡ ಕುರಿತು ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಓದಿ: ಮಂಡ್ಯದಲ್ಲಿ ಪಟಾಕಿ ಮದ್ದು ತುಂಬುವ ವೇಳೆ ಸ್ಫೋಟ; ತಮಿಳುನಾಡಿನ ವ್ಯಕ್ತಿ ಸಾವು - Explosion while filling firecracker

ABOUT THE AUTHOR

...view details