ಕರ್ನಾಟಕ

karnataka

ಜಾತಿ ಗಣತಿ ವರದಿ ಸ್ವೀಕಾರಕ್ಕೆ ಸರ್ಕಾರ ಬದ್ದ, ಫೆ.29ರೊಳಗೆ ಸರ್ಕಾರದ ಕೈ ಸೇರಲಿದೆ ವರದಿ: ಸಚಿವ ತಂಗಡಗಿ

By ETV Bharat Karnataka Team

Published : Feb 23, 2024, 2:15 PM IST

Updated : Feb 23, 2024, 2:40 PM IST

ಜಾತಿ ಗಣತಿ ವರದಿ ಸ್ವೀಕಾರಕ್ಕೆ ಸರ್ಕಾರ ಬದ್ದವಿದೆ. ಫೆ. 29ರೊಳಗೆ ಈ ವರದಿಯು ಸರ್ಕಾರದ ಕೈ ಸೇರಲಿದೆ'' ಎಂದು ಸಚಿವ ಶಿವರಾಜ್ ತಂಗಡಗಿ ಹೇಳಿದರು.

ಸಚಿವ ಶಿವರಾಜ್ ತಂಗಡಗಿ  Minister Shivaraj Tangadagi  ಜಾತಿ ಗಣತಿ ವರದಿ  caste census report  ಕೋಟ ಶ್ರೀನಿವಾಸ ಪೂಜಾರಿ
ಜಾತಿ ಗಣತಿ ವರದಿ ಸ್ವೀಕಾರಕ್ಕೆ ಸರ್ಕಾರ ಬದ್ದ, ಫೆ.29ರೊಳಗೆ ಸರ್ಕಾರದ ಕೈ ಸೇರಲಿದೆ ವರದಿ: ಶಿವರಾಜ್ ತಂಗಡಗಿ

ಸಚಿವ ಶಿವರಾಜ್ ತಂಗಡಗಿ ಮಾತನಾಡಿದರು.

ಬೆಂಗಳೂರು:''ಹಿಂದುಳಿದ ವರ್ಗಗಳ ಆರ್ಥಿಕ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ವರದಿಯನ್ನು ಸರ್ಕಾರ ಸ್ವೀಕರಿಸಲಿದೆ. ಫೆ.29ರವರೆಗೆ ಸಮಿತಿ ಕಾರ್ಯಾವಧಿ ಇದೆ. ಅಷ್ಟರೊಳಗೆ ಅವರು ವರದಿ ಕೊಡಲಿದ್ದಾರೆ. ಕೊಟ್ಟಕ್ಷಣಕ್ಕೆ ನಾವು ವರದಿ ಸ್ವೀಕಾರ ಮಾಡುತ್ತೇವೆ. ಇದರಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ'' ಎಂದು ಸಚಿವ ಶಿವರಾಜ್ ತಂಗಡಗಿ ಸ್ಪಷ್ಟಪಡಿಸಿದ್ದಾರೆ.

ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿ ಸದಸ್ಯ ಕೆ.ಪಿ. ನಂಜುಂಡಿ ಅವರ ಸಮುದಾಯ ಆಧಾರಿತ ಗಣತಿ ಕೈಗೊಳ್ಳುವ ವಿಚಾರದ ಪ್ರಶ್ನೆಗೆ ಉತ್ತರಿಸಿದ ಸಚಿವರು, ''ಹಿಂದಿನ ಬಿಜೆಪಿ ಸರ್ಕಾರದಲ್ಲಿ ಯಾಕೆ ವರದಿ ಪರಿಗಣಿಸಲಿಲ್ಲ ಎಂದು ಗೊತ್ತಿಲ್ಲ, ಕಾಂತರಾಜ್ ವರದಿ ದತ್ತಾಂಶ ಬಳಸಿಕೊಂಡ ವರದಿ ನೀಡಲು ಜಯಪ್ರಕಾಶ್ ಹೆಗ್ಡೆ ಸಮಿತಿಗೆ ಸೂಚಿಸಲಾಗಿದೆ. 29.2.2024 ರವರೆಗೆ ಸಮಿತಿಗೆ ಕಾಲಾವಕಾಶ ಕೊಡಲಾಗಿದೆ. ಅಷ್ಟರಲ್ಲಿ ಅವರು ವರದಿ ನೀಡಲಿದ್ದಾರೆ. ವರದಿ ಬಂದ ನಂತರ ಸ್ವೀಕಾರ ಮಾಡಿ ಮಾಹಿತಿ ಬಹಿರಂಗಪಡಿಸಲಾಗುತ್ತದೆ'' ಎಂದರು.

ವರದಿ ಬರುತ್ತಿದ್ದಂತೆ ಬಿಡುಗಡೆ ಮಾಡಲಿದ್ದೇವೆ- ಸಚಿವ ಶಿವರಾಜ್ ತಂಗಡಗಿ:''ಇನ್ನು ಒಂದು ವಾರ ಕಾಯಿರಿ, ಸಿಎಂ ಸಿದ್ದರಾಮಯ್ಯ ಕೂಡ ಈಗಾಗಲೇ ಈ ವಿಷಯ ಸ್ಪಷ್ಟಪಡಿಸಿದ್ದಾರೆ. ವರದಿ ಸ್ವೀಕಾರ ಮಾಡುತ್ತೇವೆ ಎಂದಿದ್ದಾರೆ. ಈಗ ನಾವು ಸಮಿತಿಗೆ ಡೆಡ್ ಲೈನ್ ಕೊಟ್ಟಿದ್ದೇವೆ. ಫೆ. 29 ರ ಒಳಗೆ ವರದಿ ಬರದಲಿದೆ. ನಾವು ಪಲಾಯನವಾದ ಮಾಡಲ್ಲ, ವರದಿ ಬರುತ್ತಿದ್ದಂತೆ ಬಿಡುಗಡೆ ಮಾಡಲಿದ್ದೇವೆ'' ಎಂದು ಸಚಿವ ಶಿವರಾಜ್ ತಂಗಡಗಿ ತಿಳಿಸಿದರು.

ಬಿಜೆಪಿ ವರದಿ ಸ್ವೀಕಾರ ಮಾಡಲಿಲ್ಲ ಎನ್ನುವ ಆರೋಪ ಸಲ್ಲ: ಈ ವೇಳೆ ಮಾತನಾಡಿದ ಪ್ರತಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ, ''ಸಿದ್ದರಾಮಯ್ಯ ಸರ್ಕಾರ ಮೊದಲ ಬಾರಿ ಅಧಿಕಾರಕ್ಕೆ ಬಂದಾಗ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ನಡೆಸಲು ಸಮಿತಿ ರಚಿಸಿದರು. ಆದರೆ, ವರದಿಯನ್ನು ಸ್ವೀಕಾರ ಮಾಡಿ ಬಹಿರಂಗ ಮಾಡಲಿಲ್ಲ. ನಂತರ ಕಾಂಗ್ರೆಸ್ ಜೆಡಿಎಸ್ ಮೈತ್ರಿ ಸರ್ಕಾರ ಬಂದರೂ ಬಹಿರಂಗ ಮಾಡಲಿಲ್ಲ. ಆದರೆ, ನಾವು ಅಧಿಕಾರಕ್ಕೆ ಬಂದ ನಂತರ ವರದಿ ಬಹಿರಂಗಕ್ಕೆ ಮುಂದಾದ ವೇಳೆ ವರದಿಯಲ್ಲಿ ಪದನಿಮಿತ್ತ ಕಾರ್ಯದರ್ಶಿ ಸಹಿ ಇರಲಿಲ್ಲ. ಹಾಗಾಗಿ ಜಯಪ್ರಕಾಶ್ ಹೆಗ್ಡೆ ಸಮಿತಿ ನೇಮಿಸಿ ವರದಿ ಪಡೆಯಲು ಮುಂದಾದೆವು. ಇದರಲ್ಲಿ ಬಿಜೆಪಿ ವರದಿ ಸ್ವೀಕಾರ ಮಾಡಲಿಲ್ಲ ಎನ್ನುವ ಆರೋಪ ಸರಿಯಲ್ಲ'' ಎಂದು ಸ್ಪಷ್ಟೀಕರಣ ನೀಡಿದರು.

ಇದನ್ನೂ ಓದಿ:ರಾಜ್ಯ ಸರ್ಕಾರದ ವಿರುದ್ಧ ವಿಧಾನಸಭೆಯಲ್ಲೇ ನಿರ್ಣಯ ಮಂಡಿಸಿ ಬಿಜೆಪಿ - ಜೆಡಿಎಸ್ ತಿರುಗೇಟು

Last Updated : Feb 23, 2024, 2:40 PM IST

ABOUT THE AUTHOR

...view details