ಕರ್ನಾಟಕ

karnataka

ಚಾಮರಾಜನಗರ: ಸಿನಿಮಾ, ಧಾರಾವಾಹಿಗಳಲ್ಲಿ ಮಕ್ಕಳು ನಟಿಸಲು ಡಿಸಿ ಅನುಮತಿ ಕಡ್ಡಾಯ

By ETV Bharat Karnataka Team

Published : Feb 19, 2024, 7:29 PM IST

Updated : Feb 20, 2024, 7:35 AM IST

ಸಿನಿಮಾ, ಧಾರಾವಾಹಿಗಳಲ್ಲಿ ಮಕ್ಕಳು ನಟಿಸಲು ಡಿಸಿ ಅನುಮತಿ ಕಡ್ಡಾಯ ಎಂದು ಜಿಲ್ಲಾ ಬಾಲಕಾರ್ಮಿಕ ಯೋಜನಾ ಸೊಸೈಟಿಯ ಸದಸ್ಯ ಕಾರ್ಯದರ್ಶಿ ಎಂ ಸವಿತಾ ಅವರು ಹೇಳಿದ್ದಾರೆ.

ಚಾಮರಾಜನಗರ
ಚಾಮರಾಜನಗರ

ಚಾಮರಾಜನಗರ : ಸಿನಿಮಾ, ಧಾರವಾಹಿಗಳಲ್ಲಿ ಮಕ್ಕಳು ನಟಿಸಲು ಜಿಲ್ಲಾಧಿಕಾರಿ ಅನುಮತಿ ಕಡ್ಡಾಯ ಎಂದು ಜಿಲ್ಲಾ ಬಾಲಕಾರ್ಮಿಕ ಯೋಜನಾ ಸೊಸೈಟಿಯ ಸದಸ್ಯ ಕಾರ್ಯದರ್ಶಿ ಹಾಗೂ ಜಿಲ್ಲಾ ಕಾರ್ಮಿಕ ಅಧಿಕಾರಿ ಎಂ ಸವಿತಾ ಅವರು ತಿಳಿಸಿದ್ದಾರೆ.

ಈ ಸಂಬಂಧ ಅವರು ಪ್ರಕಟಣೆ ಹೊರಡಿಸಿದ್ದು, ಬಾಲ ಹಾಗೂ ಕಿಶೋರ ಕಾರ್ಮಿಕ (ನಿಷೇಧ ಮತ್ತು ನಿಯಂತ್ರಣ) ಕಾಯ್ದೆ 1986ರ ಅನ್ವಯ ಸಿನಿಮಾ ಇಲ್ಲವೇ ಧಾರಾವಾಹಿಗಳಲ್ಲಿ ಮಗು ಬಾಲ ಕಲಾವಿದನಾಗಿ ನಟಿಸಲು (ಕೆಲಸ ಮಾಡಲು) ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಂದ ಅನುಮತಿ ಪಡೆಯುವುದು ಕಡ್ಡಾಯವಾಗಿದೆ ಎಂದು ತಿಳಿಸಿದ್ದಾರೆ.

ಸಿನಿಮಾ, ಧಾರಾವಾಹಿಗಳಲ್ಲಿ ಮಕ್ಕಳನ್ನು ಬಾಲ ನಟರು ಹಾಗೂ ಬಾಲ ನಟಿಯರ ಪಾತ್ರಕ್ಕಾಗಿ ಬಳಸಿಕೊಳ್ಳಲು ಇಚ್ಛಿಸುವ ನಿರ್ದೇಶಕರು, ನಿರ್ಮಾಪಕರು ಅಥವಾ ಆಯೋಜಕರು ಕಡ್ಡಾಯವಾಗಿ ಜಿಲ್ಲಾಧಿಕಾರಿಗಳ ಅನುಮತಿ ಪತ್ರ ಪಡೆಯಬೇಕು.

ಧಾರಾವಾಹಿ ಇಲ್ಲವೇ ಸಿನಿಮಾಗಳಲ್ಲಿ ಯಾವುದೇ ಮಗುವನ್ನು ಒಂದು ದಿನದಲ್ಲಿ ಐದು ಗಂಟೆಗಳಿಗಿಂತ ಹೆಚ್ಚಿನ ಅವಧಿಗೆ ನಟನಾ ಕೆಲಸಕ್ಕೆ ನಿಯೋಜಿಸುವಂತಿಲ್ಲ ಮತ್ತು ವಿಶ್ರಾಂತಿ ಇಲ್ಲದೆ 3 ಗಂಟೆಗಳಿಗಿಂತ ಹೆಚ್ಚು ಕೆಲಸ ಮಾಡಿಸುವಂತಿಲ್ಲ. ಮಗು ಶಾಲೆಯ ಪಾಠ- ಪ್ರವಚನಗಳಿಗೆ ಗೈರಾಗದಂತೆ ಶಿಕ್ಷಣದಲ್ಲಿ ನಿರಂತರವಾಗಿ ಮುಂದುವರಿಯಲು ಅಗತ್ಯವಿರುವ ಎಲ್ಲ ಸೌಲಭ್ಯಗಳನ್ನು ಒದಗಿಸುವುದನ್ನು ಖಾತರಿ ಪಡಿಸಬೇಕು.

5 ಮಕ್ಕಳಿಗೆ ಒಬ್ಬರಂತೆ ಜವಾಬ್ದಾರಿ ವ್ಯಕ್ತಿ ನೇಮಿಸಬೇಕು : ಯಾವುದೇ ಮಗು ನಿರಂತರವಾಗಿ 27 ದಿನಗಳಿಗಿಂತ ಹೆಚ್ಚಿನ ದಿನಗಳು ನಟನಾ ಕೆಲಸದಲ್ಲಿ ತೊಡಗಲು ಅವಕಾಶವಿರುವುದಿಲ್ಲ. ಮಗುವಿನ ರಕ್ಷಣೆ, ಪಾಲನೆ, ಪೋಷಣೆ ಮತ್ತು ಹಿತಾಸಕ್ತಿಗಳನ್ನು ಕಾಪಾಡಲು ನಿರ್ಮಾಣ ಅಥವಾ ಕಾರ್ಯಕ್ರಮದಲ್ಲಿ ತೊಡಗಿರುವ ಪ್ರತಿ 5 ಮಕ್ಕಳಿಗೆ ಒಬ್ಬರಂತೆ ಜವಾಬ್ದಾರಿ ವ್ಯಕ್ತಿಯನ್ನು ನೇಮಿಸಬೇಕು ಎಂದು ಹೇಳಿದ್ದಾರೆ.

ಮಗುವಿನ ಹೆಸರಿನಲ್ಲಿ ನಿಶ್ಚಿತ ಠೇವಣಿ ಖಾತೆ ತೆರೆಯಬೇಕು: ನಿರ್ಮಾಣ ಅಥವಾ ಕಾರ್ಯಕ್ರಮದಿಂದ ಮಗುವಿಗೆ ಬರುವ ಒಟ್ಟು ಆದಾಯದ ಕನಿಷ್ಠ ಶೇ. 20ರಷ್ಟನ್ನು ರಾಷ್ಟ್ರೀಕೃತ ಬ್ಯಾಂಕ್‍ನಲ್ಲಿ ಮಗುವಿನ ಹೆಸರಿನಲ್ಲಿ ನಿಶ್ಚಿತ ಠೇವಣಿ ಖಾತೆ ತೆರೆದು ಇಡಬೇಕು. ಮಕ್ಕಳ ಶೈಕ್ಷಣಿಕ ಹಿತದೃಷ್ಠಿಯಿಂದ ಕಾರ್ಮಿಕ ಇಲಾಖೆಯು ಈ ನಿರ್ಧಾರ ಕೈಗೊಂಡಿದ್ದು, ಮುಂದಿನ ದಿನಗಳಲ್ಲಿ ಮಕ್ಕಳನ್ನು ಚಿತ್ರಕಥೆಗೆ ಅನುಗುಣವಾಗಿ ಜಿಲ್ಲಾಧಿಕಾರಿಗಳಿಂದ ಅನುಮತಿ ಪಡೆಯದೆ ಬಳಸಿಕೊಂಡರೆ ಅದು ಕಾನೂನು ಉಲ್ಲಂಘನೆ ಆಗುತ್ತದೆ. ಕಾನೂನು ಉಲ್ಲಂಘಿಸುವ ಸಿನಿಮಾ ನಿರ್ದೇಶಕರು, ನಿರ್ಮಾಪಕರು, ಆಯೋಜಕರು ಹಾಗೂ ಧಾರಾವಾಹಿ ಜವಾಬ್ದಾರಿ ಹೊತ್ತ ವ್ಯಕ್ತಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಂ. ಸವಿತಾ ಎಚ್ಚರಿಸಿದ್ದಾರೆ.

ಇದನ್ನೂ ಓದಿ:ನಾಯಕಿ ಪಾತ್ರದ ಅವಕಾಶ ಕೊಡಿಸುವುದಾಗಿ ವಂಚನೆ ಆರೋಪ: ಸಹಾಯಕ ನಟನ ವಿರುದ್ಧ ಪ್ರಕರಣ ದಾಖಲು

Last Updated :Feb 20, 2024, 7:35 AM IST

ABOUT THE AUTHOR

...view details