ಕರ್ನಾಟಕ

karnataka

ಮೈಸೂರಲ್ಲಿ ವರದಕ್ಷಿಣೆ ಕಿರುಕುಳಕ್ಕೆ ಗೃಹಿಣಿ ಬಲಿ: ಪತಿ ಸೇರಿ ಇಬ್ಬರ ಬಂಧನ

By

Published : Sep 25, 2022, 7:04 AM IST

married-woman-commits-suicide-over-dowry-harassment-in-mysore
ಪ್ರೇಮಚಂದ್ರ ನಾಯಕ ಹಾಗೂ ಮಮತಾ

ಗೃಹಿಣಿಯೊಬ್ಬರು ಅನುಮಾನಾಸ್ಪದವಾಗಿ ಮೃತಪಟ್ಟ ಘಟನೆ ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನ ಹುಲ್ಲಹಳ್ಳಿಯಲ್ಲಿ ಘಟನೆ ನಡೆದಿದೆ. ವರದಕ್ಷಿಣೆ ಕಿರುಕುಳಕ್ಕೆ ಆಕೆ ಬಲಿಯಾಗಿದ್ದಾಳೆ ಎಂದು ಮೃತರ ತಾಯಿ ದೂರು ದಾಖಲಿಸಿದ್ದಾರೆ.

ಮೈಸೂರು: ವರದಕ್ಷಿಣೆ ಕಿರುಕುಳಕ್ಕೆ ಗೃಹಿಣಿ ಬಲಿಯಾಗಿರುವ ಘಟನೆ ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನ ಹುಲ್ಲಹಳ್ಳಿಯಲ್ಲಿ ನಡೆದಿದೆ. ಮಮತಾ(20) ಮೃತಪಟ್ಟವರು. ಘಟನೆ ನಡೆದು 22 ದಿನಗಳ ನಂತರ ಹುಲ್ಲಹಳ್ಳಿ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ.

ಈ ಸಂಬಂಧ ಪತಿ ಸೇರಿದಂತೆ 5 ಮಂದಿ ವಿರುದ್ದ ಎಫ್‌ಐಆರ್‌ ದಾಖಲಾಗಿದೆ. ಸದ್ಯ ಪತಿ ಪ್ರೇಮಚಂದ್ರ ನಾಯಕ ಹಾಗೂ ಮಾವ ಶಂಕರನಾಯಕನನ್ನು ಪೊಲೀಸರು ಬಂಧಿಸಿದ್ದಾರೆ.

ಪ್ರಕರಣದ ವಿವರ:2021ರ ಮಾರ್ಚ್​ನಲ್ಲಿ ಮಮತಾ ಹಾಗೂ ಪ್ರೇಮಚಂದ್ರ ನಾಯಕ ವಿವಾಹವಾಗಿತ್ತು. ಈ ಸಂದರ್ಭದಲ್ಲಿ 30 ಗ್ರಾಂ ಚಿನ್ನ ಹಾಗೂ 80 ಸಾವಿರ ನಗದು ಹಣವನ್ನು ವರದಕ್ಷಿಣೆಯಾಗಿ ನೀಡಿ, ಅದ್ಧೂರಿಯಿಂದ ಮದುವೆ ಮಾಡಿಕೊಡಲಾಗಿತ್ತು. ನಂತರದ ದಿನಗಳಲ್ಲಿ ವರದಕ್ಷಿಣೆ ವಿಚಾರದಲ್ಲಿ ಕ್ಯಾತೆ ತೆಗೆದ ಪತಿ ಪ್ರೇಮಚಂದ್ರ, ಮಮತಾ ಮೇಲೆ ದೈಹಿಕವಾಗಿ ಹಲ್ಲೆ ನಡೆಸುತ್ತಿದ್ದನಂತೆ. ಇದಕ್ಕೆ ಮನೆಯವರ ಕುಮ್ಮಕ್ಕೂ ಇತ್ತು. ಅಲ್ಲದೇ ಗರ್ಭಿಣಿ ಆಗಿದ್ದ ಸಂದರ್ಭದಲ್ಲಿ ಗರ್ಭಪಾತ ಮಾಡಿಸಿ ಅಟ್ಟಹಾಸ ಮೆರೆದಿದ್ದರು‌ ಎನ್ನಲಾಗಿದೆ.

ಕಿರುಕುಳ ನೀಡುತ್ತಿದ್ದ ಕಾರಣ ಮಗಳನ್ನ ಹೆತ್ತವರು ತಮ್ಮ ಮನೆಗೆ ಕರೆಕೊಂಡು ಹೋಗಿದ್ದರು. ಈ ಮಧ್ಯೆ ತನ್ನ ತಪ್ಪಿನ ಅರಿವಾಗಿದೆ ಎಂದು ಕಾರಣ ನೀಡಿದ ಪ್ರೇಮಚಂದ್ರ, ಅತ್ತೆ ಮನೆ ಸೇರಿಕೊಂಡಿದ್ದ. ಕಳೆದ ತಿಂಗಳು ಗೌರಿ-ಗಣೇಶ ಹಬ್ಬದ ದಿನ ಮಮತಾ ನೇಣು ಬಿಗಿದ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದಳು. ಆ ಬಳಿಕ ಪ್ರೇಮಚಂದ್ರ ನಾಯಕ ಪರಾರಿಯಾಗಿದ್ದ.

ತಮ್ಮ ಮಗಳನ್ನು ಅಳಿಯ ಪ್ರೇಮಚಂದ್ರ ನಾಯಕ ಕೊಲೆ ಮಾಡಿದ್ದಾನೆ. ಕೃತ್ಯಕ್ಕೆ ಮನೆಯವರು ಕುಮ್ಮಕ್ಕು ನೀಡಿದ್ದಾರೆ ಎಂದು ಮಮತಾ ತಾಯಿ ಭಾಗ್ಯ ತಡವಾಗಿ ದೂರು ದಾಖಲಿಸಿದ್ದಾರೆ. ಹುಲ್ಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರೇಮಚಂದ್ರ ನಾಯಕ, ಯಶೋಧ, ಚಿನ್ನ, ಶಂಕರ ನಾಯಕ, ಅನುಜ ಎಂಬುವರ ಮೇಲೆ ಕೊಲೆ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:ಅರಳುವ ಮುನ್ನ ಕಮರಿದ ಮೊಗ್ಗು..ತೊಟ್ಟಿಲಿನಿಂದ ಚಹಾದ ಪಾತ್ರೆಗೆ ಬಿದ್ದ ಹಸುಳೆ ಸಾವು

ABOUT THE AUTHOR

...view details