ಕರ್ನಾಟಕ

karnataka

ಬಿಜೆಪಿ-ಜೆಡಿಎಸ್ ಪಕ್ಷಗಳನ್ನು ಜನ ಓಡಿಸಿದ್ದಾರೆ: ಸಚಿವ ಭೈರತಿ ಸುರೇಶ್

By ETV Bharat Karnataka Team

Published : Sep 22, 2023, 2:24 PM IST

ಸಚಿವ ಭೈರತಿ ಸುರೇಶ್
ಸಚಿವ ಭೈರತಿ ಸುರೇಶ್

ನಗರಾಭಿವೃದ್ಧಿ ಇಲಾಖೆಯಲ್ಲಿ ತೆರಿಗೆ ಹೆಚ್ಚಿಸಿದ್ದಾರೆ ಎಂಬ ಬಿಜೆಪಿ ನಾಯಕರ ಆರೋಪಕ್ಕೆ ಸಚಿವ ಭೈರತಿ ಸುರೇಶ್​ ಪ್ರತಿಕ್ರಿಯಿಸಿದರು.

ಮೈಸೂರು: ಬಿಜೆಪಿಯವರು ನಗರಾಭಿವೃದ್ಧಿ ಇಲಾಖೆಯಲ್ಲಿ ತೆರಿಗೆ ಹೆಚ್ಚಳ ಮಾಡಿದ್ದಾರೆ ಎಂದು ಸುಮ್ಮನೆ ಆರೋಪ ಮಾಡುತ್ತಿದ್ದಾರೆ. ತೆರಿಗೆ ಜಾಸ್ತಿ ಮಾಡುವುದು ಹಾಗೂ ಕಡಿಮೆ ಮಾಡುವುದು ಸರ್ಕಾರದ ನಿರ್ಧಾರ. ನಾವು ಜನರಿಗೆ ಹೊರೆಯಾಗದ ರೀತಿಯಲ್ಲಿ ತೆರಿಗೆ ನಿರ್ಧಾರ ಮಾಡುತ್ತೇವೆ. ಬಿಜೆಪಿಯವರು 40% ಕಮಿಷನ್ ಸಿಗುತ್ತಿಲ್ಲ ಎಂದು ಆರೋಪ ಮಾಡುತ್ತಿದ್ದಾರೆ. ಬಿಜೆಪಿ ಮತ್ತು ಜೆಡಿಎಸ್ ಪಕ್ಷವನ್ನು ಜನ ಓಡಿಸಿದ್ದಾರೆ ಎಂದು ಮೈಸೂರಿನಲ್ಲಿ ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ಹೇಳಿಕೆ ನೀಡಿದರು.

ಮೈಸೂರು ವಿಭಾಗದ ನಗರಾಭಿವೃದ್ಧಿ ಇಲಾಖೆಯ ಸಭೆ ನಡೆಸಲು ಇಂದು ಮೈಸೂರಿಗೆ ಆಗಮಿಸಿದ ಸಚಿವ ಭೈರತಿ ಸುರೇಶ್ ಮಾಧ್ಯಮಗಳ ಜೊತೆ ಮಾತನಾಡಿ, ಇಂದು ಮೈಸೂರು ವಿಭಾಗದ ನಗರಾಭಿವೃದ್ಧಿ ಇಲಾಖೆಯ ಸಭೆ ಮಾಡುತ್ತೇವೆ. ಈ ಸಭೆಯಲ್ಲಿ ಪೌರಾಡಳಿತ ಇಲಾಖೆಯ ಅಧಿಕಾರಿಗಳು ಭಾಗವಹಿಸುತ್ತಿದ್ದಾರೆ. ಪ್ರಮುಖವಾಗಿ ಕುಡಿಯುವ ನೀರಿನ ವಿಚಾರದಲ್ಲಿ ಚರ್ಚೆ ನಡೆಸಲಾಗುತ್ತದೆ. ಸದ್ಯಕ್ಕೆ ಕುಡಿಯುವ ನೀರಿನ ಅಭಾವವಿಲ್ಲ. ಈಗಾಗಲೇ ಪ್ರತಿ ಜಿಲ್ಲೆಯ ಜಿಲ್ಲಾಧಿಕಾರಿಗಳಿಗೆ ನಮ್ಮ ಇಲಾಖೆಯಿಂದ 30 ಕೋಟಿ ಹಣ ನೀಡಲಾಗಿದೆ. ಈ ಹಣದಲ್ಲಿ ಬೋರ್​ವೆಲ್ ರಿಪೇರಿ, ಟ್ಯಾಂಕ್ ರಿಪೇರಿ ಹಾಗೂ ಇತರ ಕುಡಿಯುವ ನೀರಿನ ಸೌಲಭ್ಯಕ್ಕಾಗಿ ಉಪಯೋಗಿಸಿಕೊಳ್ಳಲು ತಿಳಿಸಲಾಗಿದೆ ಎಂದು ತಿಳಿಸಿದರು.

ಮುಡಾ ಅಕ್ರಮದ ಬಗ್ಗೆ ತನಿಖೆ:ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಅಕ್ರಮ ನಡೆದಿದೆ ಎಂಬ ಮಾಹಿತಿ ಬಂದಿದ್ದು. ನಿರ್ದಿಷ್ಟವಾಗಿ ಯಾರಾದರೂ ದಾಖಲೆ ಸಮೇತ ದೂರು ನೀಡಿದರೆ ತನಿಖೆ ನಡೆಸಲಾಗುವುದು. ಅಕ್ರಮದಲ್ಲಿ ಯಾರೇ ಭಾಗಿಯಾಗಿದ್ದರು, ಯಾರನ್ನು ರಕ್ಷಿಸುವ ಪ್ರಶ್ನೆಯೇ ಇಲ್ಲ ಎಂದ ಸಚಿವರು, ಮೈಸೂರು ನಗರ ಪಾಲಿಕೆ ಚುನಾವಣೆ ಪ್ರಕ್ರಿಯೆ ಈಗಾಗಲೇ ಆರಂಭವಾಗಿದೆ. ಮೀಸಲಾತಿ ವಿಚಾರದಲ್ಲಿ ಸ್ವಲ್ಪ ಗೊಂದಲವಿತ್ತು. ಅದನ್ನು ಸರಿಪಡಿಸಿ ನಿಗದಿತ ಸಮಯದಲ್ಲಿ ಚುನಾವಣೆ ಮಾಡುತ್ತೇವೆ. ನಾವು ಬಿಜೆಪಿ ರೀತಿಯಲ್ಲಿ ಚುನಾವಣೆಗೆ ಹೆದರಿ ಹಿಂದೆ ಸರಿಯುವುದಿಲ್ಲ ಎಂದು ಭೈರತಿ ಸುರೇಶ್ ಪ್ರತಿಕ್ರಿಯೆ ನೀಡಿದರು.

ಇದನ್ನೂ ಓದಿ:'ನಾನು 1966ರಲ್ಲಿ ಪ್ರಯತ್ನಿಸಿ ವಿಫಲನಾಗಿದ್ದೆ': ಮಹಿಳಾ ಮೀಸಲಾತಿ ಮಸೂದೆ ಅಂಗೀಕಾರಕ್ಕೆ ದೇವೇಗೌಡ ಮೆಚ್ಚುಗೆ

ABOUT THE AUTHOR

...view details