ಮೈಸೂರು: ಶ್ರೀರಂಗಪಟ್ಟಣ ದಸರಾಗೆ 5 ಆನೆಗಳನ್ನು ಕಳುಹಿಸುವಂತೆ ಕೋರಿಕೆ ಬಂದಿದ್ದು, ಎಲ್ಲಾ ರೀತಿಯ ಮುನ್ನೆಚ್ಚರಿಕೆ ತೆಗೆದುಕೊಂಡು 5 ಆನೆಗಳನ್ನು ಕಳುಹಿಸಲಾಗುವುದು ಎಂದು ಡಿಸಿಎಫ್ ಕರಿಕಾಳನ್ ಮಾಹಿತಿ ನೀಡಿದ್ದಾರೆ. ಇಂದು ವಿಶ್ವವಿಖ್ಯಾತ ದಸರಾ ಮಹೋತ್ಸವದಲ್ಲಿ ಭಾಗವಹಿಸಲು ಆಗಮಿಸಿರುವ ಗಜಪಡೆ ಹಾಗೂ ಅಶ್ವಪಡೆಗೆ ಮೂರನೇ ಹಾಗೂ ಅಂತಿಮ ಹಂತದ ಕುಶಾಲತೋಪು ತಾಲೀಮು ವಸ್ತು ಪ್ರದರ್ಶನದ ಆವರಣದಲ್ಲಿ ಆಯೋಜನೆ ಮಾಡಲಾಗಿತ್ತು. ಈ ತಾಲೀಮಿನಲ್ಲಿ ಅಭಿಮನ್ಯು ನೇತೃತ್ವದ ಅರ್ಜುನ, ಭೀಮ, ಮಹೇಂದ್ರ, ಗೋಪಾಲಸ್ವಾಮಿ, ಧನಂಜಯ, ಕಾವೇರಿ, ಚೈತ್ರಾ, ಪಾರ್ಥಸಾರಥಿ, ವಿಜಯ, ಸುಗ್ರೀವ, ಶ್ರೀರಾಮ ಸೇರಿದಂತೆ 12 ಆನೆಗಳು ಮತ್ತು 34 ಅಶ್ವದಳ ತಾಲೀಮಿನಲ್ಲಿ ಭಾಗವಹಿಸಿದ್ದವು.
ನಗರ ಶಸಸ್ತ್ರ ಮಿಸಲು ಪಡೆಯ ಸಿಬ್ಬಂದಿ 7 ಫಿರಂಗಿ ಗಾಡಿಗಳಲ್ಲಿ ಒಟ್ಟು 21 ಸುತ್ತು ಕುಶಾಲತೋಪುಗಳನ್ನು ಸಿಡಿಸಿ ಮೂರನೇ ಹಾಗೂ ಅಂತಿಮ ಹಂತದ ತಾಲೀಮು ಪೂರ್ಣಗೊಳಿಸಿದ್ದು, ಜಂಬೂಸವಾರಿ ದಿನ ಅರಮನೆ ಪಕ್ಕದ ಕೋಟೆ ಮಾರಮ್ಮ ದೇವಾಲಯದ ಆವರಣದಲ್ಲಿ ಜಂಬೂಸವಾರಿ ಹೊರಡುವ ಮುನ್ನ 21 ಸುತ್ತು ಕುಶಾಲತೋಪು ಹಾರಿಸುತ್ತಾರೆ. ಆ ಮೂಲಕ ಜಂಬೂಸವಾರಿಗೆ ಚಾಲನೆ ನೀಡಲಾಗುತ್ತದೆ.
ಶ್ರೀರಂಗಪಟ್ಟಣ ದಸರಾಗೆ 5 ಆನೆಗಳು:ಮೈಸೂರು ಸಂಸ್ಥಾನದ ರಾಜಧಾನಿಯಾಗಿದ್ದ ಶ್ರೀರಂಗಪಟ್ಟಣದಲ್ಲಿ ನಡೆಯುವ ಸಾಂಪ್ರದಾಯಿಕ ದಸರಾಗೆ ಮೈಸೂರು ದಸರಾಗೆ ಆಗಮಿಸಿರುವ 14 ಗಜಪಡೆಗಳಲ್ಲಿ ಮಹೇಂದ್ರ ನೇತೃತ್ವದ 2 ಹೆಣ್ಣಾನೆ ಹಾಗೂ 2 ಗಂಡಾನೆ ಸೇರಿ ಒಟ್ಟು 5 ಆನೆಗಳನ್ನು ಕಳುಹಿಸುವಂತೆ ಕೇಳಲಾಗಿದ್ದು, ನಾವು ಎಲ್ಲಾ ರೀತಿಯ ಮುನ್ನೆಚ್ಚರಿಕೆ ಹಾಗೂ ಶ್ರೀರಂಗಪಟ್ಟಣ ದಸರಾ ಆಯೋಜಕರಿಂದ ಮುಚ್ಚಳಿಕೆ ಪತ್ರ ತೆಗೆದುಕೊಂಡು ನಮ್ಮಲ್ಲಿರುವ ವೈದ್ಯರು ಹಾಗೂ ಅರಣ್ಯಾಧಿಕಾರಿಗಳು ಮತ್ತು ಮಾವುತರನ್ನು ಶ್ರೀರಂಗಪಟ್ಟಣ ದಸರಾಗೆ ಕಳುಹಿಸಲಾಗುವುದು ಎಂದು ಡಿಸಿಎಫ್ ಕರಿಕಾಳನ್ ತಿಳಿಸಿದರು.