ಮೈಸೂರು: ನಗರದಕೋಟೆ ಆಂಜನೇಯ ದೇವಸ್ಥಾನದ ಮುಂಭಾಗ ಸಾಹಸಿಯೊಬ್ಬರು ಪ್ರಾಣಾಯಾಮ ಮಾಡುತ್ತಾ ಉರಿಬಿಸಿಲಿನಲ್ಲೇ ಬರಿಗಣ್ಣಿನಲ್ಲಿ ಸೂರ್ಯನನ್ನು 42 ನಿಮಿಷಗಳ ಕಾಲ ನೋಡಿ ದಾಖಲೆ ಮಾಡಿದರು. ಇವರ ಹೆಸರು ಬದರಿ ನಾರಾಯಣ್. ಇವರಿಗೆ ಅಪಾಯಕಾರಿ ಸಾಹಸ ಮಾಡುವುದು ಎಂದರೆ ಎಲ್ಲಿಲ್ಲದ ಉತ್ಸಾಹ. ಅಂತಹ ಸಾಹಸವನ್ನು ಮಾಡುವ ಮೂಲಕ ಎಲ್ಲರನ್ನ ಅಚ್ಚರಿ ಗೊಳಿಸಿದ್ದಾರೆ. ಈ ಮೂಲಕ ವಿಶ್ವ ದಾಖಲೆ ಮಾಡಲು ಹೊರಟ್ಟಿದ್ದಾರೆ. ಈಗಾಗಲೇ ಯೋಗದ ಮೂಲಕ ಹಲವಾರು ದಾಖಲೆಗಳನ್ನು ಮಾಡಿದ್ದು, ಈಗ ಈ ರೀತಿಯ ಸಾಹಸ ಮಾಡಿ ವಿಶ್ವ ದಾಖಲೆ ಮಾಡಲು ಹೊರಟಿದ್ದಾರೆ.
ಸಾಹಸಕ್ಕೆ ತಾಯಿ ಪ್ರೇರಣೆ:ಬಳಿಕ 'ಈಟಿವಿ ಭಾರತ'ದೊಂದಿಗೆ ಮಾತನಾಡಿದ ಬದರಿ ನಾರಾಯಣ್, "ಈ ಸಾಹಸಕ್ಕೆ ಪ್ರೇರಣೆ ನಮ್ಮ ತಾಯಿ. ರಥ ಸಪ್ತಮಿ ದಿನ ನಮ್ಮ ತಾಯಿಯ ಹುಟ್ಟುಹಬ್ಬ. ಅವರಿಗೆ ಈ ಸಾಹಸವನ್ನ ಅರ್ಪಣೆ ಮಾಡುತ್ತೇನೆ. ಈ ವರ್ಷ ಅವರ ಆರೋಗ್ಯ ಚೆನ್ನಾಗಿರಲಿ ಎಂದು ಬೇಡಿಕೊಳ್ಳುತ್ತೇನೆ. ನನ್ನ ಗುರುಗಳ ಮಾರ್ಗದರ್ಶನದಲ್ಲಿ ಈ ಸಾಹಸವನ್ನ ಮಾಡುತ್ತಿದ್ದೇನೆ" ಎಂದರು.
ಪುರಾತನ ಸ್ಥಳಗಳಲ್ಲಿ ಯೋಗ: ಬದರಿ ನಾರಾಯಣ್ ಇಲ್ಲಿಯವರೆಗೆ ಸುಮಾರು 1,300 ಪುರಾತನ ಸ್ಥಳಗಳಲ್ಲಿ, ಶಿರಶಾಸನ ಯೋಗಗಳನ್ನ ಪ್ರದರ್ಶನ ಮಾಡಿದ್ದಾರೆ. ಇದರ ಜತೆಗೆ ಕಾಂಬೋಡಿಯ, ಮಲೇಷಿಯಾ ಹಾಗೂ ಭಾರತದ ಹಲವಾರು ಪುರಾತನ ಸ್ಥಳಗಳು ಸೇರಿವೆ. ಇವರ ಸಾಹಸಕ್ಕೆ ಹಲವಾರು ಸಂಸ್ಥೆಗಳು ಲಿಂಕ್ ಅವಾರ್ಡ್, ಆಶಿಷ್ಟ್ ವರ್ಲ್ಡ್ ರೆಕಾರ್ಡ್, ಎಲೈಟ್ ವರ್ಲ್ಡ್ ರೆಕಾರ್ಡ್ ಸೇರಿದಂತೆ ಹಲವಾರು ಪ್ರಶಸ್ತಿಗಳನ್ನು ನೀಡಿ ಗೌರವಿಸಿವೆ.