ಮಂಡ್ಯ:ಮೈಸೂರಿನ ರಂಗಾಯಣದ ವತಿಯಿಂದ ಜನವರಿ 14-15ರಂದು ನಗರದ ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾಮಂದಿರದಲ್ಲಿ ಟಿಪ್ಪು ನಿಜ ಕನಸುಗಳು ಎಂಬ ನಾಟಕದ 25ನೇ ಪ್ರದರ್ಶನ ಮಾಡುತ್ತಿದ್ದೇವೆ ಎಂದು ರಂಗಾಯಣದ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ಅವರು ತಿಳಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಈಗಾಗಲೇ ವಿವಿಧ ಜಿಲ್ಲೆಗಳಲ್ಲಿ ನಾಟಕ 24 ಬಾರಿ ಯಶಸ್ವಿ ಪ್ರದರ್ಶನ ಕಂಡಿದೆ. ಇದೀಗ ಮಂಡ್ಯದಲ್ಲಿ ನಾಟಕದ 25ನೇ ಪ್ರದರ್ಶನವನ್ನು ಮಾಡುತ್ತಿದ್ದೇವೆ. ಟಿಪ್ಪು ನಿಜ ಕನಸುಗಳು ನಾಟಕ ಮಂಡ್ಯದಲ್ಲಿ ಪ್ರದರ್ಶನವಾಗುತ್ತಿರುವುದಕ್ಕೆ ಮಹತ್ವವಿದೆ ಎಂದರು.
ಈ ಮಣ್ಣಿನ ಮಕ್ಕಳಾದ ಉರಿಗೌಡ ಮತ್ತು ದೊಡ್ಡನಂಜೇಗೌಡ ಇವರು ಕೃಷಿಕರು, ಪಾರ್ಟ್ ಟೈಮ್ ಯೋದರು. ಬಿಡುವಿನ ವೇಳೆಯಲ್ಲಿ ಯುದ್ಧಕ್ಕೆ ಕರೆದರೆ ಹೋಗುವಂತಹ ನಾಯಕರು ಅವರು. ಅವರು ಟಿಪ್ಪುವನ್ನು 1799 ಮೇ 4ರಂದು ಆತನ ಕೋಟೆಗೆ ನುಗ್ಗಿ ಆತನನ್ನು ಅಟ್ಟಾಡಿಸಿ ಕೊಲ್ಲುತ್ತಾರೆ. ಶ್ರೀರಂಗಪಟ್ಟಣದ ವಾಟರ್ಗೇಟ್ ದ್ವಾರದೊಳಗೆ ಈ ಘಟನೆ ನಡೆಯುತ್ತದೆ ಎಂದು ಅವರು ವಿವರಿಸಿದರು.
ಟಿಪ್ಪು ನಾಲ್ಕನೇ ಆಂಗ್ಲೋ ಮೈಸೂರು ಯುದ್ಧದಲ್ಲಿ ಬ್ರಿಟೀಷರಿಂದ ಹತನಾದ ಎಂಬ ಸುಳ್ಳು ಚರಿತ್ರೆ ಪ್ರಚಲಿತವಿದೆ. ಆದರೆ, ಅನೇಕ ದಾಖಲೆಗಳಿಂದ ಈ ಸುದ್ದಿ ಸುಳ್ಳು ಎಂಬುದು ಸಾಬೀತಾಗಿದೆ. ಬ್ರಿಟೀಷರು ಕೋಟೆ ಬಾಗಿಲನ್ನು ಒಡೆದು ಒಳನುಗ್ಗುವ ಮೊದಲೇ ಟಿಪ್ಪು ಹತನಾಗಿದ್ದ ಎಂದರು.
ಟಿಪ್ಪುವಿನಿಂದ ರೈತ ವಿರೋಧಿ ನೀತಿ:ಉರಿಗೌಡ ಮತ್ತು ದೊಡ್ಡನಂಜೇಗೌಡ ಇವರು ಮಳವಳ್ಳಿಯವರಾಗಿದ್ದು, ಇವರು ಕೃಷಿಕರಾಗಿದ್ದರು. ಇವರು ಟಿಪ್ಪು ರೈತರಿಗೆ ತೆರಿಗೆ ವಿಧಿಸಿದ್ದನ್ನು ವಿರೋಧಿಸಿದ್ದರು. ಟಿಪ್ಪು 3ನೇ ಆಂಗ್ಲೋ ಮೈಸೂರು ಯುದ್ದದ ಸಂದರ್ಭದಲ್ಲಿ ಎಲ್ಲವನ್ನೂ ಕಳೆದುಕೊಂಡಿದ್ದ. ಖಜಾನೆ ಖಾಲಿಯಾಗಿತ್ತು. ಹೀಗಾಗಿ ರೈತರಿಗೆ ತೆರಿಗೆ ವಿಧಿಸಿದ್ದ. ಆದರೆ, ಮತಾಂತರಗೊಂಡ ಮುಸ್ಲೀಂರಿಗೆ ತೆರಿಗೆಯಿಂದ ವಿನಾಯಿತಿ ನೀಡಲಾಗಿತ್ತು. ಹೀಗಾಗಿ ಅವರು ಟಿಪ್ಪುವಿನ ವಿರುದ್ಧ ತಿರುಗಿಬಿದ್ದಿದ್ದರು ಎಂದು ಹೇಳಿದರು.
ಟಿಪ್ಪು ನಿಜ ಕನಸುಗಳು ಕೃತಿ ಮಾರಾಟಕ್ಕೆ ತಾತ್ಕಾಲಿಕ ನಿರ್ಬಂಧ( ಬೆಂಗಳೂರು):ಇನ್ನೊಂದೆಡೆ,ಟಿಪ್ಪು ನಿಜ ಕನಸುಗಳು ಕೃತಿ ಮಾರಾಟಕ್ಕೆ ಮಾತ್ರ ನ್ಯಾಯಾಲಯ ತಾತ್ಕಾಲಿಕ ನಿರ್ಬಂಧ ವಿಧಿಸಿದೆ. ಆದರೆ, ನಾಟಕ ಪ್ರದರ್ಶನಕ್ಕೆ ಯಾವುದೇ ನಿರ್ಬಂಧ ವಿಧಿಸಿಲ್ಲ. ಹಾಗಾಗಿ ಪೂರ್ವ ನಿಗದಿತ ದಿನಾಂಕಗಳಂದು ಮೈಸೂರಿನ ರಂಗಾಯಣದಿಂದ ಮೈಸೂರು ರಂಗಮಂದಿರದಲ್ಲಿ ನಾಟಕ ಪ್ರದರ್ಶನ ಆಗಲಿದೆ ಎಂದು ರಂಗಾಯಣದ ನಿರ್ದೇಶಕ, ಲೇಖಕ ಅಡ್ಡಂಡ ಕಾರ್ಯಪ್ಪ ಸ್ಪಷ್ಟಪಡಿಸಿದ್ದರು.