ಕರ್ನಾಟಕ

karnataka

ಕೆರೆಯಲ್ಲಿ ಯುವತಿ ಶವ ಪತ್ತೆ: ರಂಗನಾಥ ಸ್ವಾಮಿ ದೇವಾಲಯದ ಮುಂದೆ ಚಿರತೆ ಪ್ರತ್ಯಕ್ಷ

By

Published : Jun 5, 2023, 2:31 PM IST

ವಡ್ಗಲ್ ರಂಗನಾಥ ಸ್ವಾಮಿ ದೇವಾಲಯದ ಮುಂದೆ ಚಿರತೆ ಪ್ರತ್ಯಕ್ಷವಾಗಿದ್ದು, ಸಿಸಿಟಿವಿಯಲ್ಲಿ ದೃಶ್ಯ ಸೆರೆಯಾಗಿದೆ.

ಅನುಮಾನಸ್ಪದ ರೀತಿಯಲ್ಲಿ ಯುವತಿ ಶವ ಪತ್ತೆ
ಅನುಮಾನಸ್ಪದ ರೀತಿಯಲ್ಲಿ ಯುವತಿ ಶವ ಪತ್ತೆ

ದೇವಾಲಯದ ಮುಂದೆ ಚಿರತೆ ಪ್ರತ್ಯಕ್ಷ

ಮಂಡ್ಯ: ನಂಜನಗೂಡು ಮೂಲದ ಯುವತಿಯೊಬ್ಬರು ಕೆರೆಯಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ಮಂಡ್ಯ ತಾಲೂಕಿನ ಬೂದನೂರು ಗ್ರಾಮದಲ್ಲಿ ಜರುಗಿದೆ. ನಂಜನಗೂಡು ತಾಲೂಕಿನ ಕುರಹಟ್ಟಿ ಗ್ರಾಮದ ಚಾಂದಿನಿ (22) ಮೃತ ಮಹಿಳೆ. ಬೂದನೂರು ಗ್ರಾಮದ ಬೆಂ - ಮೈ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿರುವ ಕೆರೆ ಬಳಿಗೆ ನಿನ್ನೆ ಮಧ್ಯಾಹ್ನ ಯುವಕನೊಬ್ಬನೊಂದಿಗೆ ಬೈಕ್'ನಲ್ಲಿ ಬಂದ ಯುವತಿ ಕೆಲಕಾಲ ಕೆರೆಯ ಸ್ನಾನಘಟ್ಟದ ಬಳಿ ಮಾತುಕತೆಯಲ್ಲಿ ತೊಡಗಿದ್ದರು.

ಕೆಲ ಹೊತ್ತಿನ‌ ಬಳಿಕ ಯುವಕ ಅಲ್ಲಿಂದ ತೆರಳಿದ್ದು ಯುವತಿ ತನ್ನ ಬ್ಯಾಗ್​, ಚಪ್ಪಲಿ ಮುಂತಾದ ವಸ್ತುಗಳನ್ನು ಕೆರೆಯ ದಡದ ಮೇಲಿರಿಸಿ‌ ಕೆರೆಗೆ ಹಾರಿದ್ದಾರೆ. ಸಂಜೆ ಕೆರೆ ದಡದಲ್ಲಿದ್ದ ಬ್ಯಾಗ್​​ ಗಮನಿಸಿದ ಗ್ರಾಮಸ್ಥರು ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದಾರೆ. ಶನಿವಾರ ರಾತ್ರಿ ಮೃತದೇಹಕ್ಕಾಗಿ ಕಾರ್ಯಾಚರಣೆ ನಡೆಸಿದ್ದರೂ ಪತ್ತೆಯಾಗಿರಲಿಲ್ಲ. ಬೆಳಗ್ಗೆ ನೀರಿನಲ್ಲಿ ಶವ ತೇಲುತ್ತಿರುವುದನ್ನು ಗಮನಿಸಿ ಪೊಲೀಸರಿಗೆ ಸುದ್ದಿ ಮುಟ್ಟಿಸಲಾಯಿತು. ಸ್ಥಳಕ್ಕೆ ಆಗಮಿಸಿದ ಪೊಲೀಸರು ಯುವತಿಯ ಮೃತದೇಹವನ್ನು ಕೆರೆಯಿಂದ ಮೇಲಕ್ಕೆತ್ತಿ ಮಂಡ್ಯ ಮಿಮ್ಸ್ ಶವಾಗಾರಕ್ಕೆ ರವಾನೆ ಮಾಡಿದ್ದಾರೆ. ಸದ್ಯ ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಚಿರತೆ ಪ್ರತ್ಯಕ್ಷ ಮೈಸೂರು: ಟಿ.ನರಸೀಪುರ ತಾಲೂಕಿನ ಪ್ರಸಿದ್ಧ ವಡ್ಗಲ್ ರಂಗನಾಥ ಸ್ವಾಮಿ ದೇವಾಲಯದ ಆವರಣದಲ್ಲಿ ಚಿರತೆಯೊಂದು ಪ್ರತ್ಯಕ್ಷವಾಗಿದ್ದು ಅದರ ದೃಶ್ಯ ದೇವಾಲಯದಲ್ಲಿನ ಸಿಸಿಟಿವಿಯಲ್ಲಿ ಸೆರೆಯಾಗಿವೆ. ಚಿರತೆ ಪ್ರತ್ಯಕ್ಷ ವಿಷಯದಿಂದ ಗ್ರಾಮಸ್ಥರಲ್ಲಿ ಆತಂಕ ಉಂಟಾಗಿದ್ದು, ಈ ಬಗ್ಗೆ ಅರಣ್ಯ ಇಲಾಖೆಯವರಿಗೆ ಮಾಹಿತಿ ನೀಡಲಾಗಿದೆ.

ಇಲ್ಲಿಯ ಬನ್ನೂರು ಹಾಗೂ ಸೋಸಲೆ ಸುತ್ತಮುತ್ತ ಚಿರತೆ ಹಾವಳಿ ಹೆಚ್ಚಾಗಿದ್ದು, ಇಲ್ಲಿಯವರೆಗೆ ಅರಣ್ಯ ಇಲಾಖೆ ಅಳವಡಿಸಿದ್ದ ಬೋನಿಗೆ 5ಕ್ಕೂ ಹೆಚ್ಚು ಚಿರತೆಗಳು ಬಿದ್ದಿವೆ. ಕಳೆದ ಒಂದು ತಿಂಗಳಿನಿಂದ ಎರಡು ಚಿರತೆಗಳು ಅರಣ್ಯ ಇಲಾಖೆ ಇಟ್ಟಿದ್ದ ಬೋನಿಗೆ ಬಿದ್ದಿವೆ. ಆದರೂ ಚಿರತೆಗಳು ಮತ್ತೆ ಅಲ್ಲಲ್ಲಿ ಕಾಣಿಸಿಕೊಳ್ಳುತ್ತಿವೆ. ಟಿ.ನರಸೀಪುರ ತಾಲೂಕಿನ ಡಿ.ಬೆಟ್ಟಹಳ್ಳಿ ಗ್ರಾಮದಲ್ಲಿ ಇರುವ ವಡ್ಗಲ್ ರಂಗನಾಥ ಸ್ವಾಮಿ ದೇವಾಲಯದ ಆವರಣದಲ್ಲಿ, ಚಿರತೆಯೊಂದು ಆರಾಮಾಗಿ ದೇವಾಲಯದ ಮುಂಭಾಗದಲ್ಲಿ ನಡೆದುಕೊಂಡು ಹೋಗುತ್ತಿರುವ ದೃಶ್ಯ ಸೆರೆಯಾಗಿವೆ.

ಮಹಿಳೆಯ ಮೊಬೈಲ್ ಕಸಿದು ಪರಾರಿಯಾದ ಖದೀಮರು: ಬಸ್ ನಿಲ್ದಾಣಕ್ಕೆ ಹೋಗುತ್ತಿದ್ದ ಮಹಿಳೆಯ ಕೈಲಿದ್ದ ಮೊಬೈಲ್ ಖದೀಮರು ಕಿತ್ತುಕೊಂಡು ಪರಾರಿಯಾಗಿರುವ ಘಟನೆ ನಗರದ ಕಲ್ಯಾಣಗಿರಿಯಲ್ಲಿ ಭಾನುವಾರ ನಡೆದಿದೆ. ಸ್ಕೂಟರ್​ನಲ್ಲಿ ಬಂದ ಖದೀಮರು ಮೊಬೈಲ್​ ಕದ್ದು ಪರಾರಿಯಾಗಿದ್ದಾರೆ. ಸ್ಥಳಕ್ಕೆ ಉದಯಗಿರಿ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

ನಗರದ ಕಲ್ಯಾಣ ಗಿರಿಯ ಕೆಎಚ್​ಬಿ ಕಾಲೋನಿ ಬಳಿ ಇರುವ ಡಾ.ರಾಜ್ ಕುಮಾರ್ ರಸ್ತೆಯಲ್ಲಿ, ಭಾನುವಾರ ಇಬ್ಬರು ಮಹಿಳೆಯರು ಬಸ್ ನಿಲ್ದಾಣಕ್ಕೆ ನಡೆದುಕೊಂಡು ಹೋಗುತ್ತಿದ್ದರು. ಅದರಲ್ಲಿ ಒಬ್ಬ ಮಹಿಳೆ ಮೊಬೈಲ್​​ನಲ್ಲಿ ಮಾತನಾಡಿಕೊಂಡು ಹೋಗುತ್ತಿರುವಾಗ ಇಬ್ಬರು ಖದೀಮರು ಸ್ಕೂಟರ್ ನಲ್ಲಿ ಬಂದು, ಮೊಬೈಲ್ ನಲ್ಲಿ ಮಾತನಾಡುತ್ತಿದ್ದ ಮಹಿಳೆಯಿಂದ ಮೊಬೈಲ್ ಅನ್ನು ಕಸಿದು, ಪರಾರಿಯಾಗಿದ್ದಾರೆ.

ಇದನ್ನೂ ಓದಿ:ಕಲಘಟಗಿ ಮಧುಮಗನ ಕೊಲೆ ಪ್ರಕರಣಕ್ಕೆ ಟ್ವಿಸ್ಟ್: ವಿವಾಹೇತರ ಸಂಬಂಧವೇ ಹತ್ಯೆಗೆ ಕಾರಣ

ABOUT THE AUTHOR

...view details