ಕರ್ನಾಟಕ

karnataka

PSI Recruitment Scam: ಬ್ಯಾಗ್​ನಲ್ಲಿ ಇದ್ದಿದ್ದು ದುಡ್ಡಲ್ಲ, ಹಣ್ಣಂತೆ! ಉಲ್ಟಾ ಹೊಡೆದ ಪರಸಪ್ಪ

By

Published : Sep 14, 2022, 6:50 AM IST

PSI recruitment scam
ಹಣ ಪಡೆದಿದ್ದಾರೆ ಎನ್ನಲಾದ ಚಿತ್ರ

ಪಿಎಸ್​​ಐ ಅಕ್ರಮ ನೇಮಕಾತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪರಸಪ್ಪ ಎಂಬುವವರು ತಮ್ಮ ಮಗನಿಗೆ ಕೆಲಸ ಕೊಡಿಸುವಂತೆ ಬಿಜೆಪಿ ಶಾಸಕ ಬಸವರಾಜ್ ದಡೇಸಗೂರು ಅವರಿಗೆ ಹಣ ನೀಡಿದ್ದಾರೆಂದು ಕಾಂಗ್ರೆಸ್​​ ನಾಯಕರು ಆರೋಪಿಸಿದ್ದರು. ಈ ಆರೋಪಕ್ಕೆ ಸಂಬಂಧಿಸಿದಂತೆ ಸುದ್ದಿಗೋಷ್ಠಿ ನಡೆಸಿರುವ ಉಲ್ಟಾ ಹೊಡೆದ ಪರಸಪ್ಪ, ಕಾಂಗ್ರೆಸ್ ನಾಯಕರು ಮಾಡಿರುವ ಆರೋಪವನ್ನು ಅಲ್ಲಗೆಳೆದಿದ್ದಾರೆ.

ಕೊಪ್ಪಳ/ಬೆಂಗಳೂರು: ಕೊಪ್ಪಳದ ಕನಕಗಿರಿ ಶಾಸಕ ಬಸವರಾಜ್ ದಡೇಸಗೂರು ಪಿಎಸ್​​ಐ ನೇಮಕಾತಿ ಮಾಡಿಸಿಕೊಡುವುದಾಗಿ ಹಣ ಪಡೆದಿದ್ದಾರೆ ಎನ್ನುವ ಕುರಿತಾಗಿ ಎದ್ದಿರುವ ಆರೋಪ-ಪ್ರತ್ಯಾರೋಗಳು ದಿನದಿಂದ ದಿನಕ್ಕೆ ಹೊಸ ತಿರುವು ಪಡೆದುಕೊಳ್ಳುತ್ತಿವೆ. ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿರುವ ಪರಸಪ್ಪ, ನಿನ್ನೆ ಕಾಂಗ್ರೆಸ್​​ನವರು ನಾನು ಕೈ ಚೀಲವೊಂದನ್ನ ಹಿಡಿದುಕೊಂಡಿರುವ ಫೋಟೋ ತೋರಿಸಿ ಹಣ ಕೊಡಲು ಬಂದಿದ್ದ ಎಂದು ಆರೋಪಿಸಿದ್ದಾರೆ. ಆದರೆ, ಅದು ಹಣದ ಚೀಲವಲ್ಲ. ನಾನು ಅವರಿಗೆ ಹಣ್ಣು ಕೊಡಲು ಹೋಗಿದ್ದೆ ಎಂದು ಹೇಳಿದ್ದಾರೆ.

ಈ ಕುರಿತು ಈ ಹಿಂದೆ ಆಡಿಯೋ ಹೊರಬಿದ್ದ ಕೂಡಲೇ ಅದಕ್ಕೆ ಸ್ಪಷ್ಟನೆ ನೀಡಿದ ಶಾಸಕ ದಡೇಸಗೂರು ಆಡಿಯೋದಲ್ಲಿರುವ ಧ್ವನಿ ನನ್ನದೆ. ಆದರೆ, ನಾನು ಯಾವುದೇ ಹಣ ಪಡೆದಿಲ್ಲ ಎಂದಿದ್ದರು. ಅದಾದ ಬಳಿಕ ಮಾಧ್ಯಮಗೋಷ್ಠಿ ನಡೆಸಿದ ಪರಸಪ್ಪ ನಾನು ದಡೇಸಗೂರು ಸಂಬಂಧಿ. ಬೇರೆ ಒಂದು ವ್ಯವಹಾರದಲ್ಲಿ ಹಣ ನೀಡಿದ್ದೆ. ಆ ಕುರಿತು ಬೇರೆಯವರೊಂದಿಗೆ ನನಗೆ ಜಗಳವಾಗಿತ್ತು. ಅದನ್ನು ಬಗೇಹರಿಸಿಕೊಡಲು ಶಾಸಕ ಬಸವರಾಜ್ ದಡೇಸಗೂರು ಅವರೊಂದಿಗೆ ಮಾತನಾಡಿದ್ದೆ ಎಂದು ಹೇಳಿದ್ದಾರೆ.

ಇದಾದ ಬಳಿಕ ಕೊಪ್ಪಳ ಕಾಂಗ್ರೆಸ್ ಜಿಲ್ಲಾಧ್ಯಕ್ಷ, ಮಾಜಿ ಸಚಿವ ಶಿವರಾಜ್​ ತಂಗಡಗಿ ಪಿಎಸ್​​ಐ ನೇಮಕಾತಿ ಅಕ್ರಮದಲ್ಲಿ ಕನಕಗಿರಿ ಶಾಸಕ ಬಸವರಾಜ್ ದಡೇಸಗೂರು ಅವರು ಸರ್ಕಾರಕ್ಕೆ ಹಣ ನೀಡಿದ್ದೇನೆ. ಅದು ಮರಳಿ ಬರುವವರೆಗೂ ನೀನು ಕಾಯಬೇಕು ಎಂದು ಪರಸಪ್ಪನಿಗೆ ಹೇಳಿರುವ ಆಡಿಯೋ ಸಾಕ್ಷಿಯಾಗಿಟ್ಟುಕೊಂಡು ಅವರನ್ನ ನ್ಯಾಯಾಂಗ ಬಂಧನಕ್ಕೆ ಒಳಪಡಿಸಬೇಕು ಎಂದು ಒತ್ತಾಯಿಸಿದ್ದರು.

ಬ್ಯಾಗ್​ನಲ್ಲಿ ಇದ್ದಿದ್ದು ದುಡ್ಡಲ್ಲ ಸೀಬೆ ಹಣ್ಣು: ಈ ಪ್ರಕರಣ ಕುರಿತು ಕಾಂಗ್ರೆಸ್​ನ ಪ್ರಿಯಾಂಕ್​ ಖರ್ಗೆ ಮತ್ತು ಶಿವರಾಜ್​ ತಂಗಡಗಿ ಬೆಂಗಳೂರಿನ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಪರಸಪ್ಪ ಎನ್ನುವವರು ಹಣ ನೀಡಿರುವ ಬಗ್ಗೆ ಮಾತನಾಡಿರುವ ವಿಡಿಯೋ ಬಿಡುಗಡೆ ಮಾಡುತ್ತಾರೆ. ಬಳಿಕ ಪರಸಪ್ಪ ಮತ್ತೆ ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ "ಕಾಂಗ್ರೆಸ್​​ನವರು ಬಿಡುಗಡೆ ಮಾಡಿರುವ ವಿಡಿಯೋದಲ್ಲಿರುವುದು ಸುಳ್ಳು. ನಾನು ದಡೇಸಗೂರು ಸಂಬಂಧಿಗಳು. ನಾನು ಅವರ ಮನೆಗೆ ಹಣ ಪಡೆಯಲು ಹೋಗಿರಲಿಲ್ಲ. ಬದಲಾಗಿ ಕೈ ಚೀಲದಲ್ಲಿ ಸೀಬೆ ಹಣ್ಣು ತೆಗೆದುಕೊಂಡು ಹೋಗಿದ್ದೆ" ಎಂದು ಹೇಳಿ ಈ ಪ್ರಕರಣಕ್ಕೆ ಮತ್ತೊಂದು ಹೊಸ ತಿರುವು ನೀಡಲು ಪ್ರಯತ್ನಿಸಿದ್ದಾರೆ.

ಇದನ್ನೂ ಓದಿ:ಪಿಎಸ್​​ಐ ನೇಮಕಾತಿ ಹಗರಣಕ್ಕೆ ಮತ್ತೊಂದು ತಿರುವು: ಶಾಸಕರು ಹಣ ಪಡೆದಿರುವ ಬಗ್ಗೆ ಕಾಂಗ್ರೆಸ್​ನಿಂದ ವಿಡಿಯೋ ಬಿಡುಗಡೆ

ಏನಿದು ಪ್ರಕರಣ?:PSI ಅಕ್ರಮ ನೇಮಕಾತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪರಸಪ್ಪ ಎಂಬುವವರು ತಮ್ಮ ಮಗನಿಗೆ ಕೆಲಸ ಕೊಡಿಸುವಂತೆ ಬಿಜೆಪಿ ಶಾಸಕ ಬಸವರಾಜ ದಡೇಸುಗೂರ್‌ ಅವರಿಗೆ ಹಣ ನೀಡಿದ್ದಾರೆ ಎನ್ನುವ ಆರೋಪವನ್ನು ಕಾಂಗ್ರೆಸ್​ ನಾಯಕರು ಮಾಡಿದ್ರು. ಜೊತೆಗೆ ಇದರ ಆಡಿಯೋ ಕ್ಲೀಪ್ ಸಹ ವೈರಲ್​ ಆಗಿತ್ತು. ಇದರಲ್ಲಿ ಪರಸಪ್ಪ ಎಂಬುವವರು ಶಾಸಕರೊಂದಿಗೆ ಮಾತನಾಡಿದ್ದರು.

ABOUT THE AUTHOR

...view details