ಪಿಎಸ್​​ಐ ನೇಮಕಾತಿ ಹಗರಣಕ್ಕೆ ಮತ್ತೊಂದು ತಿರುವು: ಶಾಸಕರು ಹಣ ಪಡೆದಿರುವ ಬಗ್ಗೆ ಕಾಂಗ್ರೆಸ್​ನಿಂದ ವಿಡಿಯೋ ಬಿಡುಗಡೆ

author img

By

Published : Sep 12, 2022, 7:28 PM IST

ಪಿಎಸ್​​ಐ ನೇಮಕಾತಿ ಹಗರಣ

ಪಿಎಸ್ಐ ನೇಮಕಾತಿ ಹಗರಣ. ಶಾಸಕ ದಡೇಸಗೂರ ಕುರಿತ ವಿಡಿಯೋ ವೈರಲ್. ಕಾಂಗ್ರೆಸ್​ನಿಂದ ಮಾಧ್ಯಮಗೋಷ್ಟಿ

ಬೆಂಗಳೂರು/ಕೊಪ್ಪಳ: ಕಳೆದ ಹಲವು ದಿನಗಳಿಂದ ಸದ್ದು ಮಾಡಿದ್ದ ಪಿಎಸ್​​ಐ ನೇಮಕಾತಿ ಹಗರಣದಲ್ಲಿ ಕೊಪ್ಪಳ ಜಿಲ್ಲೆಯ ಕನಕಗಿರಿ ಶಾಸಕ ಬಸವರಾಜ ದಡೇಸಗೂರ ಹಣ ಪಡೆದಿದ್ದಾರೆ ಎನ್ನುವ ಆರೋಪ ಸಂಬಂಧ ಇಂದು ಕಾಂಗ್ರೆಸ್ ವಿಡಿಯೋ ಬಿಡುಗಡೆ ಮಾಡಿದೆ.

ಬೆಂಗಳೂರಿನ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಮಾಜಿ ಸಚಿವ ಶಿವರಾಜ್ ತಂಗಡಗಿ ಜೊತೆಗಿನ ಜಂಟಿ ಮಾಧ್ಯಮಗೋಷ್ಟಿಯಲ್ಲಿ ಪ್ರಿಯಾಂಕ್ ಖರ್ಗೆ ಅವರು ಮಾಧ್ಯಮಗಳಿಗೆ ವಿಡಿಯೋ ನೀಡಿದರು.

ಪಿಎಸ್​ಐ ನೇಮಕಾತಿ ಅಕ್ರಮ ಕುರಿತು ಮೊದಲು ಆಡಿಯೋ ಒಂದು ವೈರಲ್ ಆಗಿತ್ತು. ಶಾಸಕ ಬಸವರಾಜ ದಡೇಸಗೂರ ಆಡಿಯೋದಲ್ಲಿರುವ ಧ್ವನಿ ನನ್ನದೆ, ಆದರೆ ನಾನು ಯಾರಿಂದಲೂ ಹಣ ಪಡೆದಿಲ್ಲ ಎಂದು ಮಾಧ್ಯಮದ ಮುಂದೆ ಸ್ಪಷ್ಟಪಡಿಸಿದ್ದರು. ಕುಷ್ಟಗಿಯ ನಿವೃತ್ತ ಕಾನ್ಸ್​ಟೇಬಲ್ ಪರಸಪ್ಪ ಎಂಬಾತ ಮಗನಿಗೆ ಪಿಎಸ್​​ಐ ಹುದ್ದೆ ಕೊಡಿಸುವುದಾಗಿ ಹೇಳಿ 15 ಲಕ್ಷ ಹಣ ಪಡೆದಿದ್ದಾರೆ ಎಂದು ವಿಡಿಯೋದಲ್ಲಿ ದೂರಿದ್ದಾರೆ.

ಕಾಂಗ್ರೆಸ್​ನಿಂದ ವಿಡಿಯೋ ಬಿಡುಗಡೆ

ಮಗನ ನೌಕರಿ ಸಂಬಂಧ ಒಟ್ಟು 30 ಲಕ್ಷ ರೂಪಾಯಿ ನೀಡಲು ಮಾತುಕತೆಯಾಗಿತ್ತು. ಅದರಲ್ಲಿ ಮೊದಲು 15 ಲಕ್ಷ ರೂಪಾಯಿ ಕೊಡಬೇಕು ಎಂಬ ಮಾತಿನಂತೆ ವಿಧಾನಸೌಧದ ಶಾಸಕರ ಭವನದಲ್ಲಿಯೇ ಹಣ ನೀಡಿದ್ದಾಗಿ ಪರಸಪ್ಪ ಮಾತನಾಡಿರುವ ವಿಡಿಯೋ ವೈರಲ್ ಆಗಿದೆ.

ಕಾಂಗ್ರೆಸ್ ಮಾಧ್ಯಮಗೋಷ್ಟಿ: ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಕೊಪ್ಪಳ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಶಿವರಾಜ್ ತಂಗಡಗಿ, ಕಳೆದ ಒಂದು ವಾರದಿಂದ ನಮ್ಮ ಜಿಲ್ಲೆಯ ಶಾಸಕರೊಬ್ಬರ ಆಡಿಯೋ ವಿಚಾರ ಬಹಳ ಸುದ್ದಿ ಮಾಡುತ್ತಿದೆ. ಸೆ.5ರಂದು ಶಾಸಕ ಬಸವರಾಜ ದಡೇಸಗೂರು ಹಾಗೂ ಕುಷ್ಟಗಿಯ ನಿವೃತ್ತ ಕಾನ್ಸಟೇಬಲ್ ಪರಸಪ್ಪ ಅವರ ನಡುವಣ ಸಂಭಾಷಣೆ ವೈರಲ್ ಆಗಿದೆ. ಸೆ.6 ರಂದು ಮತ್ತೊಂದು ಆಡಿಯೋ ಬಿಡುಗಡೆ ಆಗಿದ್ದು, ಪರಸಪ್ಪ ಅವರು ಪಿಎಸ್ಐ ನೇಮಕಾತಿಗೆ 15 ಲಕ್ಷ ರೂಪಾಯಿ ನೀಡಿರುವುದಾಗಿ ಹೇಳಿದರು. ಈ ಆಡಿಯೋದಲ್ಲಿರುವ ಧ್ವನಿ ನನ್ನದೆ ಎಂದು ಶಾಸಕರು ಒಪ್ಪಿಕೊಂಡಿದ್ದಾರೆ. ಈಗ ಒಂದು ವಾರ ಆದರೂ ಯಾವುದೇ ತನಿಖೆ ಇಲ್ಲ ಎಂದು ಕಿಡಿಕಾರಿದರು.

ಪರಸಪ್ಪ ಅವರು ಒಂದು ವಿಡಿಯೋದಲ್ಲಿ ನನ್ನ ಮಗ ಪಿಎಸ್ಐ ಆಗಲು ಬಯಸಿದಾಗ ಶಾಸಕರ ಆಪ್ತರು ಬಂದು ನಾವು ನಿಮ್ಮ ಕೆಲಸ ಮಾಡುತ್ತೇವೆ ಎಂದು ಕಾರಟಗಿಗೆ ಕರೆದುಕೊಂಡು ಹೋಗುತ್ತಾರೆ. ಅಲ್ಲಿ ಒಂದು ಮೊತ್ತಕ್ಕೆ ಡೀಲ್ ಮಾಡಿ, 2020 ಆಗಸ್ಟ್ ನಲ್ಲಿ ಕನಕಗಿರಿ ಶಾಸಕರು ಶಾಸಕರ ಭವನಕ್ಕೆ ಕರೆಸಿಕೊಂಡರು. ಅಲ್ಲಿ ಸಿಬ್ಬಂದಿ ಹೆಚ್ಚಾಗಿರುವ ಕಾರಣ, ಶಾಸಕರ ಕಾರಿನಲ್ಲೇ ಕರೆದುಕೊಂಡು ಹೋಗುತ್ತಾರೆ. ವ್ಯವಹಾರ ಮಾಡಿ 30 ಲಕ್ಷಕ್ಕೆ ಡೀಲ್ ಮಾಡಲು ನಿರ್ಧರಿಸುತ್ತಾರೆ ಎಂದು ಪರಸಪ್ಪ ಅವರೇ ವಿಡಿಯೋದಲ್ಲಿ ಒಪ್ಪಿಕೊಂಡಿದ್ದಾರೆ. ಈ ಡೀಲ್ ನಿಗದಿಯಾದ ನಂತರ ಮುಂಗಡವಾಗಿ 15 ಲಕ್ಷ ನೀಡುತ್ತಾರೆ. ನಾವು ಯಾವಾಗಲೂ ಹೇಳುವಂತೆ ವಿಧಾನಸೌಧ ವ್ಯಾಪಾರಸೌಧವಾಗಿದೆ. ಶಾಸಕರ ಭವನದಲ್ಲಿ ಡೀಲ್ ಮಾಡಿದ್ದಾರೆ ಎಂದರೆ ಇವರಿಗೆ ನಾಚಿಕೆ ಆಗುವುದಿಲ್ಲವೇ? ಕೆಲಸ ಆಗದ ನಂತರ ಹಣ ಕೇಳಿದಾಗ ನಾನು ಹಣವನ್ನು ಸರ್ಕಾರಕ್ಕೆ ಕೊಟ್ಟಿರುವುದಾಗಿ ಹೇಳುತ್ತಾರೆ. ಈ ಸರ್ಕಾರ ಎಂದರೆ ವಿಧಾನಸೌಧ ಅಲ್ಲವೇ? ಎಂದು ಕಾಂಗ್ರೆಸ್ ನಾಯಕ ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದರು.

ಪಿಎಸ್​ಐ ನೇಮಕಾತಿ ಅಕ್ರಮ ಪ್ರಕರಣದಲ್ಲಿ ಈಗಾಗಲೇ ಹಲವು ಪ್ರಮುಖರನ್ನು ಸಿಐಡಿ ಬಂಧಿಸಿ, ವಿಚಾರಣೆ ನಡೆಸುತ್ತಿದೆ. ಜೊತೆಗೆ ಹಗರಣ ಬೆಳಕಿಗೆ ಬಂದ ಬೆನ್ನಲ್ಲೇ ನೇಮಕಾತಿ ಆದೇಶವನ್ನು ರಾಜ್ಯ ಸರ್ಕಾರ ರದ್ದುಮಾಡಿ ಆದೇಶಿಸಿತ್ತು.

(ಇದನ್ನೂ ಓದಿ: ಪಿಎಸ್​ಐ ನೇಮಕಾತಿ ಹಗರಣ.. ಆಡಿಯೋ ಹಿಂದೆ ರಾಜಕೀಯ ಕುತಂತ್ರ: ಶಾಸಕ ದಡೇಸಗೂರು)

ETV Bharat Logo

Copyright © 2024 Ushodaya Enterprises Pvt. Ltd., All Rights Reserved.