ಕೊಪ್ಪಳ: ಅಂಜನಾದ್ರಿ ಪರ್ವತವೇ ಹನುಮನ ಜನ್ಮಸ್ಥಳವೆಂದು ನಿರೂಪಿಸಲು ಪುಸ್ತಕವೊಂದು ಬಿಡುಗಡೆಯಾಗಿದೆ. ಕೊಪ್ಪಳದ ಶ್ರೀ ಗವಿಸಿದ್ದೇಶ್ವರ ಮಹಾವಿದ್ಯಾಲಯದ ಉಪನ್ಯಾಸಕ ಹಾಗೂ ಇತಿಹಾಸ ತಜ್ಞ ಡಾ. ಸಿದ್ದಲಿಂಗಪ್ಪ ಕೊಟ್ನೇಕಲ್ ಅವರ ಪುಸ್ತಕದಲ್ಲಿ ಈ ಬಗ್ಗೆ ಉಲ್ಲೇಖಿಸಲಾಗಿದೆ.
'ಆನೆಗೊಂದಿಯ ಅಂಜನಾದ್ರಿಯೇ ಹನುಮನ ಜನ್ಮ ಸ್ಥಳ ಒಂದು ಸಮರ್ಥನೆ' ಎಂಬ ಪುಸ್ತಕದಲ್ಲಿ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಹನುಮನಳ್ಳಿ ಬಳಿ ಇರುವ ಅಂಜನಾದ್ರಿಯೇ ಹನುಮನ ಜನ್ಮ ಸ್ಥಳವೆಂದು ದಾಖಲೆಗಳೊಂದಿಗೆ ಸಮರ್ಥಿಸಿಕೊಳ್ಳಲಾಗಿದೆ.
ಹನುಮನ ಜನ್ಮಸ್ಥಳದ ಬಗ್ಗೆ ಪುಸ್ತಕ ಬರೆದ ಇತಿಹಾರಕಾರ ರಾಮಾಯಣದಲ್ಲಿನ 2 ಕಾಂಡಗಳಲ್ಲಿ ಹನುಮನ ಕುರಿತು ಉಲ್ಲೇಖವಿದೆ. ರಾಮಯಣದಲ್ಲಿ ಉಲ್ಲೇಖಿಸಿರುವ ಮಾಹಿತಿಗಳು ಈಗಿನ ಕಿಷ್ಕಿಂಧಾ ಪ್ರದೇಶದಲ್ಲಿದೆ. ಇಲ್ಲಿರುವ ಐತಿಹಾಸಿಕ ಕುರುಹುಗಳು, ಇಲ್ಲಿಯ ಶಾಸನಗಳು, ಪುರಾಣ ಕಥೆಗಳು ಹನುಮನ ಜನ್ಮಸ್ಥಳ ಇದೇ ಎಂಬುದಕ್ಕೆ ಪುಷ್ಠಿ ನೀಡುತ್ತವೆ ಎಂದು ಪುಸ್ತಕದಲ್ಲಿ ಹೇಳಲಾಗಿದೆ.
ತಿರುಮಲ ದೇವಸ್ಥಾನ ಸಮಿತಿಯವರು ವ್ಯವಹಾರಕ್ಕಾಗಿ ತಿರುಪತಿ ಬಳಿ ಇರುವ ಬೆಟ್ಚ ಅಂಜನಾದ್ರಿ ಎಂದು ಹೇಳಿ ವಿವಾದ ಸೃಷ್ಟಿಸಿದ್ದಾರೆ. ಆದರೆ ಅದು ಸುಳ್ಳು. ಕೊಪ್ಪಳ ಜಿಲ್ಲೆಯಲ್ಲಿರುವ ಅಂಜನಾದ್ರಿಯೇ ಹನುಮನ ಜನ್ಮ ಸ್ಥಳ ಎಂಬ ಕುರಿತ ಮಹತ್ವದ ದಾಖಲೆಗಳೊಂದಿಗೆ ಕಿರು ಹೊತ್ತಿಗೆ ಬಿಡುಗಡೆಯಾಗಿದೆ.
ಈ ಕುರಿತು ಮಾತನಾಡಿದ ಇತಿಹಾಸ ತಜ್ಞ ಡಾ. ಶರಣಬಸಪ್ಪ ಕೋಲ್ಕಾರ, ಕಿಷ್ಕಿಂಧಾ ಪ್ರದೇಶವೇ ಹನುಮನ ಜನ್ಮಸ್ಥಳ ಎಂದು ಖಚಿತವಾಗಿ ಹೇಳಲು ಹಲವು ದಾಖಲೆಗಳಿವೆ. ಮೂಲ ರಾಮಾಯಣದಲ್ಲೂ ಕೂಡ ಈ ಪ್ರದೇಶವೇ ಕಿಷ್ಕಿಂಧೆ ಎಂದು ಉಲ್ಲೇಖವಾಗಿದೆ. ಆದರೆ ಇತ್ತೀಚಿಗೆ ತಿರುಪತಿ ತಿರುಮಲ ಟ್ರಸ್ಟ್ ಅವರು ತಿರುಪತಿಯ ಬೆಟ್ಟವೇ ಅಂಜನಾದ್ರಿ ಬೆಟ್ಟ ಎಂದು ಪ್ರತಿಪಾದಿಸಿದ್ದಾರೆ. ಆದರೆ ಅವರ ಹೇಳಿಕೆಗೆ ಯಾವುದೇ ಚಾರಿತ್ರಿಕ ದಾಖಲೆಗಳಿಲ್ಲ. ನಮ್ಮ ಪರಿಸರವೇ ಜನ್ಮಸ್ಥಳ ಎಂಬುದಕ್ಕೆ ಹಲವು ಸಾಕ್ಷಿಗಳಿವೆ ಎಂಬುದನ್ನು ಲೇಖಕರು ಉಲ್ಲೇಖಿಸಿದ್ದಾರೆ ಎಂದರು.
ಬಳಿಕ ಮಾತನಾಡಿದ ಇತಿಹಾಸ ತಜ್ಞ ಡಾ. ಸಿದ್ದಲಿಂಗಪ್ಪ ಕೊಟ್ನೇಕಲ್, ತೀರ ಇತ್ತೀಚಿಗೆ ಟಿಟಿಡಿ ಆಂಜನೇಯ ತಮ್ಮ ಬೆಟ್ಟದಲ್ಲಿ ಜನ್ಮ ತಾಳಿದ್ದ ಎಂಬ ಅನಗತ್ಯ ವಾದ ಮಂಡಿಸಿದ್ದು ನಂಬಲಾರ್ಹವಾದ ವಿಷಯವಾಗಿದೆ. ಆ ನಿಟ್ಟಿನಲ್ಲಿ ಕೊಪ್ಪಳದಲ್ಲಿ ಆಂಜನೇಯ ಜನ್ಮತಾಳಿದ ಎಂಬುದಕ್ಕೆ ವಾಲ್ಮೀಕಿಯ ರಾಮಾಯಣವೇ ಸಾಕ್ಷಿಯಾಗಿದೆ. 2 ಕಾಂಡದಲ್ಲಿ ಆಂಜನೇಯ ಹಾಗೂ ಕಿಷ್ಕಿಂಧೆ ವರ್ಣನೆ ಇದೆ. ಅವರ ತಾಯಿ ಅಂಜನಾದ್ರಿ ಬಗ್ಗೆಯೂ ಅಲ್ಲಿ ಉಲ್ಲೇಖವಿದೆ. ಇದೇ ಪರಿಸರದಲ್ಲಿ ನಮಗೆ ವಾಲಿ ಗುಹೆ, ತಾರಾ ಪರ್ವ ಮತ್ತು ಸೀತೆ ಸೆರಗು ಎಂಬ ಸ್ಥಳ ಇಲ್ಲಿಯೇ ಇದೆ.
ಹೀಗಾಗಿ ಹನುಮ ಇದೇ ಸ್ಥಳದಲ್ಲೇ ಹುಟ್ಟಿದ್ದಾನೆ. ತಿರುಪತಿಯವರ ವಾದದಲ್ಲಿ ಹುರುಳಿಲ್ಲ. ಅದೆಲ್ಲಾ ಸುಳ್ಳು ಎಂದಿದ್ದಾರೆ.
ಓದಿ:ಬೆಳಗಾವಿಯಲ್ಲಿ ಭಾರಿ ಮಳೆಗೆ ಮತ್ತೊಂದು ಮನೆ ಕುಸಿತ; ಕೂದಲೆಳೆ ಅಂತರದಲ್ಲಿ 8 ಜನ ಬಚಾವ್!