ಕಲಬುರಗಿ: ಆತ ತನ್ನ ಪತ್ನಿ ಮತ್ತು ಮುದ್ದಾದ ಮಗಳ ಜೊತೆ ಸುಖವಾಗಿ ಸಂಸಾರ ಮಾಡುತ್ತಿದ್ದ. ಆದರೆ, ಆತನ ತಲೆಯಲ್ಲಿ ಅದೆಲ್ಲಿಂದೋ ಬಂತೋ ಅನುಮಾನದ ಭೂತ. ಕಂಠಪೂರ್ತಿ ಕುಡಿದು ಮನೆಗೆ ಬಂದವ, ಮಲಗಿದ್ದ ಪತ್ನಿ ಮತ್ತು ಮಗಳನ್ನ ಬಾರದ ಲೋಕಕ್ಕೆ ಕಳಿಸಿದ್ದಾನೆ.
ಪತ್ನಿ, ಮಗಳನ್ನ ಹೊಡೆದು ಕೊಂದ ಪಾಪಿ ದಿಗಂಬರ್ ಗಾಂಜಲಿ (47), ತನ್ನ ಪತ್ನಿ ಜಗದೀಶ್ವರಿ (35) ಹಾಗೂ 11 ವರ್ಷದ ಮುದ್ದಾದ ಮಗಳು ಪ್ರಿಯಾಂಕಾಳನ್ನು ಕಟ್ಟಿಗೆಯಿಂದ ಹಲ್ಲೆ ಮಾಡಿ ಕೊಲೆ ಮಾಡಿದ್ದಾನೆ. ಸೇಡಂ ಪಟ್ಟಣದ ವಿಶ್ವನಗರ ಬಡಾವಣೆಯಲ್ಲಿ ವಾಸವಾಗಿದ್ದ ಈ ಸುಂದರ ಕುಟುಂಬ ಜೀವನೋಪಾಯಕ್ಕಾಗಿ ಪಾನಿಪುರಿ ವ್ಯಾಪಾರ ಮಾಡುತ್ತಿದ್ದರು. ಹಲವು ವರ್ಷಗಳಿಂದ ಅನೂನ್ಯವಾಗಿದ್ದ ಈ ಕುಟುಂಬದ ಮೇಲೆ ಅದು ಯಾರ ವಕ್ರದೃಷ್ಟಿ ಬೀರಿತ್ತೊ ಗೊತ್ತಿಲ್ಲ. ಪತ್ನಿ ಜಗದೀಶ್ವರಿಯನ್ನ ಪತಿ ದಿಗಂಬರ್ ಅನುಮಾನದ ದೃಷ್ಟಿಯಿಂದ ನೋಡಲಾರಂಭಿಸಿದ್ದ.
ಮುಂದೆ ನಡೆದಿದ್ದೇನು?
ನೀನು ಅಕ್ರಮ ಸಂಬಂಧ ಹೊಂದಿದೆಯಾ ಅಂತಾ ಜಗಳ ಆಡಲು ಶುರು ಮಾಡಿದ್ದ. ಆದರೆ, ಕಳೆದ ತಡರಾತ್ರಿ 2.30 ಗಂಟೆಗೆ ಪತಿ ದಿಗಂಬರ್ ಕಂಠಪೂರ್ತಿ ಕುಡಿದು ಮನೆಗೆ ಬಂದಿದ್ದಾನೆ. ಹೀಗೆ ಮನೆಗೆ ಬಂದ ದಿಗಂಬರ್, ಮೊಣಚಾದ ಕಟ್ಟಿಗೆಯಿಂದ ಮಲಗಿದ್ದ ಪತ್ನಿ ಜಗದೀಶ್ವರಿ ಮತ್ತು ಮಗಳು ಪ್ರಿಯಾಂಕಾಗೆ ಮನಬಂದಂತೆ ಹಲ್ಲೆ ಮಾಡಿದ್ದಾನೆ. ತಲೆಗೆ ಮತ್ತು ದೇಹದ ಹಲವು ಭಾಗಕ್ಕೆ ಬಲವಾಗಿ ಹೊಡೆದಿದ್ದಾನೆ. ತೀವ್ರ ರಕ್ತಸ್ರಾವದಿಂದ ಜಗದೀಶ್ವರಿ ಮತ್ತು ಮಗಳು ಪ್ರಿಯಾಂಕಾ ಮಲಗಿದ್ದಲ್ಲೆ ಉಸಿರು ಚೆಲ್ಲಿದ್ದಾರೆ.
ಇನ್ನೂ ದಿಗಂಬರ್ ಗಾಂಜಲಿ ಈ ಹಿಂದೆ ಹೋಟೆಲ್ನಲ್ಲಿ ಕೆಲಸ ಮಾಡುತ್ತಾ ಪತ್ನಿ ಹಾಗೂ ಮಗಳೊಂದಿಗೆ ಕಲಬುರಗಿ ನಗರದಲ್ಲಿ ವಾಸವಾಗಿದ್ದ ಎನ್ನಲಾಗಿದೆ. ಆದರೆ, ಅದೊಂದು ದಿನ ಪಾನಿಪುರಿ ತಿನ್ನಲು ಅಂತಾ ಕಿಡಿಗೇಡಿಗಳ ತಂಡ ಬಂದಿತ್ತು. ಪಾನಿಪುರಿ ತಿಂದ ನಂತರ ಹಣ ಕೊಡದೇ ಹೋಗುತ್ತಿದ್ದಾಗ ಕಿಡಿಗೇಡಿಗಳನ್ನ ಪ್ರಶ್ನಿಸಿದ್ದಾನೆ. ಇದರಿಂದ ಇಬ್ಬರ ಮಧ್ಯೆ ವಾಗ್ವಾದ ನಡೆದಿದೆ. ಇದರಿಂದ ರೊಚ್ಚಿಗೆದ್ದ ದಿಗಂಬರ್, ಕಿಡಿಗೇಡಿಗಳ ಮೇಲೆ ಹಲ್ಲೆ ಮಾಡಿದ್ದಾನೆ. ಹಲ್ಲೆಯಿಂದ ಸಿಟ್ಟಿಗೆದ್ದ ಆ ಗ್ಯಾಂಗ್, ನಿನ್ನನ್ನ ಮುಗಿಸಿಬಿಡುತ್ತೇವೆ ಅಂತಾ ಧಮ್ಕಿ ಹಾಕಿದ್ದರು.
ಕಿಡಿಗೇಡಿಗಳು ಧಮ್ಕಿಯಿಂದ ಬೆದರಿದ ದಿಗಂಬರ್ ಪತ್ನಿ ಜಗದೀಶ್ವರಿ, ನಾವು ಇಲ್ಲಿ ಇರೋದು ಬೇಡ, ಸೇಡಂನಲ್ಲಿ ತವರು ಮನೆ ಇದೆ, ಅಲ್ಲಿ ಕೆಲ ದಿನಗಳು ಉಳಿದು ಅಲ್ಲೇ ಪಾನಿಪುರಿ ವ್ಯಾಪಾರ ಮಾಡಿದರಾಯಿತು ಅಂತಾ ಎರಡು ತಿಂಗಳ ಹಿಂದೆ ಸೇಡಂ ಪಟ್ಟಣದ ವಿಶ್ವನಗರ ಬಡಾವಣೆಯಲ್ಲಿ ವಾಸವಾಗಿದ್ದರು.
ಹೀಗೆ ಕಲಬುರಗಿ ನಗರದಿಂದ ಸೇಡಂ ಪಟ್ಟಣಕ್ಕೆ ಶಿಫ್ಟ್ ಆದ ನಂತರ ಸ್ವಂತದ್ದು ಪಾನಿಪುರಿ ವ್ಯಾಪಾರ ಮಾಡುತ್ತ ಜೀವನ ಸಾಗಿಸುತ್ತಿದ್ದರು. ಆದರೆ, ಸಮಸ್ಯೆ ಹಾಗೂ ಅದೇನೆ ಅನುಮಾನಗಳಿದ್ದರು ಕೂತು ಮಾತಾಡಿ ಬಗೆಹರಿಸಿಕೊಳ್ಳುವುದನ್ನ ಬಿಟ್ಟು ಕಂಠಪೂರ್ತಿ ಕುಡಿದು ಬಂದು ಪತ್ನಿಯಲ್ಲದೇ ಏನು ಅರಿಯದ ಮುದ್ದಾದ ಮಗಳನ್ನ ಸಹ ತನ್ನ ಸಿಟ್ಟಿಗೆ ಬಲಿಕೊಟ್ಟಿದ್ದಾನೆ. ಇನ್ನೂ ಘಟನೆ ನಂತರ ಸೇಡಂ ಪೊಲೀಸರು ಆರೋಪಿ ದಿಗಂಬರ್ನನ್ನ ವಶಕ್ಕೆ ಪಡೆದಿದ್ದಾರೆ.
ಸಿಟ್ಟಿನ ಕೈಗೆ ಬುದ್ದಿ ಕೊಟ್ಟು ಪತಿ ಕೃಷ್ಣನ ಜನ್ಮಸ್ಥಾನಕ್ಕೆ ಹೋದರೆ, ಅನುಮಾನದ ಪಿಶಾಚಿಗೆ ಬಲಿಯಾಗಿ ಪತ್ನಿ ಮತ್ತು ಮುದ್ದಾದ ಮಗಳು ಬಾರದ ಲೋಕಕ್ಕೆ ತೆರಳಿದ್ದು ಮಾತ್ರ ದುರಂತವೇ ಸರಿ. ಇನ್ನೂ ಪತ್ನಿ ಮತ್ತು ಮಗಳನ್ನ ಹತ್ಯೆ ಮಾಡಿದ ದಿಗಂಬರ್ಗೆ ಕಠಿಣ ಶಿಕ್ಷೆ ನೀಡಬೇಕು ಎಂದು ಕುಟುಂಬಸ್ಥರ ಆಗ್ರಹವಾಗಿದೆ.
ಇದನ್ನೂ ಓದಿ : ಬೆಚ್ಚಿಬಿದ್ದ ಸೇಡಂ... ಕೌಟುಂಬಿಕ ಕಲಹ - ಹೆಂಡತಿ, ಮಗಳನ್ನೇ ಕೊಂದ ಪಾಪಿ