ಕರ್ನಾಟಕ

karnataka

ಸಿಎಂ ಸಿದ್ದರಾಮಯ್ಯ ಪ್ರತಿ ಎರಡು ತಿಂಗಳಿಗೊಮ್ಮೆ ಜಿಲ್ಲಾವಾರು ಸಭೆ ನಡೆಸಬೇಕು: ಬಸವರಾಜ ರಾಯರೆಡ್ಡಿ

By

Published : Aug 3, 2023, 6:28 PM IST

ಮುಖ್ಯಮಂತ್ರಿ ಪ್ರತಿ ಎರಡು ತಿಂಗಳಿಗೊಮ್ಮೆ ಜಿಲ್ಲಾವಾರು ಸಭೆ ನಡೆಯಬೇಕು. ಶಾಸಕರ ಕ್ಷೇತ್ರ ಹಾಗೂ ಜಿಲ್ಲೆಯ ಸಮಸ್ಯೆಗಳ ಕುರಿತು ಚರ್ಚಿಸಲು ತುಂಬಾ ಸಹಕಾರಿಯಾಗುತ್ತದೆ ಎಂದು ಕಾಂಗ್ರೆಸ್ ಹಿರಿಯ ಶಾಸಕ ಬಸವರಾಜ ರಾಯರೆಡ್ಡಿ ತಿಳಿಸಿದರು.

Basavaraj Rayareddy
ಬಸವರಾಜ ರಾಯರೆಡ್ಡಿ

ಕಾಂಗ್ರೆಸ್​ನ ಹಿರಿಯ ಶಾಸಕ ಬಸವರಾಜ ರಾಯರೆಡ್ಡಿ ಮಾತನಾಡಿದರು.

ಕಲಬುರಗಿ:''ಸರ್ಕಾರದಲ್ಲಿ ಸಚಿವರು ಶಾಸಕರ ನಡುವೆ ಸಮನ್ವಯ ಸಮಿತಿ ಇರಬೇಕು, ಅದೇನು ತಪ್ಪಿಲ್ಲ. ಮುಖ್ಯಮಂತ್ರಿಗಳು ನಮ್ಮ ಶಾಸಕಾಂಗ ಪಕ್ಷದ ನಾಯಕರು ಆಗಿದ್ದಾರೆ. ಮುಖ್ಯಮಂತ್ರಿ ಪ್ರತಿ ಎರಡು ತಿಂಗಳಿಗೊಮ್ಮೆ ಜಿಲ್ಲಾವಾರು ಸಭೆ ನಡೆಸಬೇಕು. ಶಾಸಕರ ವಿಧಾನಸಭೆ ಕ್ಷೇತ್ರ, ಜಿಲ್ಲೆಯ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡೋದಕ್ಕೆ ಅನುಕೂಲ ಆಗುತ್ತೆ'' ಎಂದು ಕಾಂಗ್ರೆಸ್ ಹಿರಿಯ ಶಾಸಕ ಬಸವರಾಜ ರಾಯರೆಡ್ಡಿ ಹೇಳಿದರು.

ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ''ಜಿಲ್ಲಾವಾರು ಸಭೆ ನಡೆಸೋದಕ್ಕೆ ಸಿಎಂ ಸಿದ್ದರಾಮಯ್ಯ ಅವರು ಒಪ್ಪಿಕೊಂಡಿದ್ದಾರೆ. ಮಂತ್ರಿಗಳು ಸರಿಯಿಲ್ಲ ಅಂತಿಲ್ಲ, ಕೆಲ ಸಚಿವರು ವಿಶ್ವಾಸಕ್ಕೆ ತೆಗೆದುಕೊಳ್ಳತ್ತಿಲ್ಲ. ಆದ್ರೆ, ಸಚಿವರು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ ಅನ್ನೋ ಭಾವನೆ ಯಾರೋ ಒಬ್ಬರಲ್ಲಿ ಬಂದಿರಬಹುದು. ಸಚಿವರು ಸರಿ ಇಲ್ಲ ಅಂತಾ ನಾವು ಹೇಳಿಲ್ಲ. ಒಬ್ಬರ ಮೇಲೆ ಅಸಮಾಧಾನ ಇಲ್ಲ. ನಮಗೆ ಅವರ ಕಾರ್ಯವೈಖರಿ ಬಗ್ಗೆ ಅಸಮಾಧಾನ ಅಷ್ಟೆ. ಬಿ.ಆರ್. ಪಾಟೀಲ್ ಅವರು ಲೆಟರ್ ರೆಡಿ ಮಾಡಿದ್ರು, ನಾನು ಸಹಿ ಮಾಡಿದ್ದೆ'' ಎಂದು ತಿಳಿಸಿದರು.

ರಾಜಕೀಯದಲ್ಲಿ ಸಿನಿಯರ್ ಜೂನಿಯರ್ ಪ್ರಶ್ನೆ ಬರಲ್ಲ:''ದೆಹಲಿಗೆ ಕರೆದಿರುವ ವಿಚಾರದಲ್ಲಿ ನಮಗೆ ಅಸಮಾಧಾನ ಇಲ್ಲ. ಲೋಕಸಭೆ ಚುನಾವಣೆ ಸಂಬಂಧ ಸಭೆ ಕರೆದಿರೋದು'' ಎಂದರು. ಜೆಡಿಎಸ್​ನಿಂದ ಬಂದು ಎರಡು ಬಾರಿ ಸಿದ್ದರಾಮಯ್ಯ ಸಿಎಂ ಆಗಿರುವ ವಿಚಾರವಾಗಿ ಮಾತನಾಡಿದ‌ ಅವರು,‌ ''ಕೊಪ್ಪಳದ ಕಾರ್ಯಕ್ರಮದಲ್ಲಿ ನಮ್ಮ ಕಾರ್ಯಕರ್ತನೊಬ್ಬ ನೀವು ಹಿರಿಯರಿದ್ದಿರಿ ಸಚಿವರಾಗಿಲ್ಲ ಅಂತಾ ಹೇಳಿದ. ನಮ್ಮ ಕ್ಷೇತ್ರದ ಕಾರ್ಯಕರ್ತನೊಬ್ಬನನ್ನ ಅಧ್ಯಕ್ಷರನ್ನಾಗಿ ಮಾಡಬೇಕು ಅಂತಾ ಇದ್ದೀವಿ. ಆದ್ರೆ ಗ್ರಾಮ ಪಂಚಾಯತಿ ಅಧ್ಯಕ್ಷರನ್ನಾಗಿ ಮಾಡೋದಕ್ಕೆ ಕೆಟಗರಿ ಬರಲಿಲ್ಲ, ಹಾಗಾಗಿ ಹೇಳಿದೆ. ರಾಜಕೀಯದಲ್ಲಿ ಸಿನಿಯರ್, ಜೂನಿಯರ್ ಪ್ರಶ್ನೆ ಬರಲ್ಲ. ಅಡ್ವಾಣಿ ಪಕ್ಷ ಕಟ್ಟಿದ್ರು ಮೋದಿ ಪ್ರಧಾನಿ ಆದ್ರು.

ಬೊಮ್ಮಾಯಿ ಅವರು ಸಿಎಂ ಆದ್ರು, ನಾವು ಅವರ ತಂದೆಯ ಕ್ಯಾಬಿನೆಟ್​ನಲ್ಲಿ ಸಚಿವರಾಗಿದ್ವಿ. ದೇನೇಗೌಡರ ಕ್ಯಾಬಿನೆಟ್​ನಲ್ಲಿ ಸಚಿವನಾಗಿದ್ದೆ, ಅವರ ಮಗ ನಮಗಿಂತ ಮೊದಲು ಸಿಎಂ ಆದ್ರು. ಹಾಗೆ ಸಿದ್ದರಾಮಯ್ಯ ಜೆಡಿಎಸ್​ನಿಂದ ಬಂದು ಸಿದ್ದರಾಮಯ್ಯ ಸಿಎಂ ಆದ್ರು. ಇದನ್ನ ರಾಜಕೀಯದಲ್ಲಿ ಅನುಭವಕ್ಕಿಂತ ಅದೃಷ್ಟ ಮುಖ್ಯ ಅಂತ ಹೇಳಿದ್ದೇನೆ'' ಎಂದು ತಿಳಿಸಿದರು.

ಸಚಿವರ ಕಾರ್ಯದ ಮೌಲ್ಯಮಾಪನ ಆಗಬೇಕು:''ವರ್ಷಕ್ಕೊಂದು ಬಾರಿ ಸಚಿವರ ಮೌಲ್ಯ ಮಾಪನ ಆಗಬೇಕು. ಸರಿಯಾಗಿ ಯಾರು ಕೆಲಸ ಮಾಡ್ತಾರೆ ಅನ್ನೋದನ್ನ ಗಮನಿಸಬೇಕು ಅಲ್ವಾ. ಐಎಎಸ್ ಅಧಿಕಾರಿಗಳ ಬಗ್ಗೆ ವರ್ಕ್ ರಿಪೋರ್ಟ್ ಮಾಡಲ್ವಾ, ಹಾಗೆ ಸಚಿವರದ್ದು ಕೂಡ ಮೌಲ್ಯಮಾಪನ ಆಗಬೇಕು'' ಎಂದು ತಿಳಿಸಿದರು.

ಗೃಹ ಲಕ್ಷ್ಮಿ ಯೋಜನೆಗೆ ಹಣ ಹೊಂದಿಸಲು ಹಣಕಾಸು ಇಲಾಖೆ ಪತ್ರ ವಿಚಾರವಾಗಿ ಮಾತನಾಡಿದ ಅವರು, ''ಹಣಕಾಸು ಇಲಾಖೆ ಬಗ್ಗೆ ನನಗೆ ಎಲ್ಲಾ ಮಾಹಿತಿ ಇದೆ. ಗೃಹ ಲಕ್ಷ್ಮಿ ಯೋಜನೆಗೆ ಪ್ರತಿ ವರ್ಷ 30 ಸಾವಿರ ಕೋಟಿ ಬೇಕು. 30 ಸಾವಿರ ಕೋಟಿ ಹೊಂದಾಣಿಕೆ ಮಾಡುವಷ್ಟು ತೊಂದರೆ ನಮ್ಮ ಸರ್ಕಾರಕ್ಕೇನು ಕಷ್ಟ ಇಲ್ಲ. ಜನರ ಅಭಿವೃದ್ಧಿ ದೃಷ್ಟಿಯಿಂದ ನಾವು ತೆಗೆದುಕೊಂಡ ಕಾರ್ಯಕ್ರಮಕ್ಕೆ ಏನು ತೊಂದರೆ ಇಲ್ಲ'' ಎಂದು ಪ್ರಶ್ನೆಯೊಂಕ್ಕೆ ಉತ್ತರಿಸಿದರು.

ಇದನ್ನೂ ಓದಿ:ಖರ್ಗೆ, ಖಂಡ್ರೆ ಕುರಿತು ಆರಗ ಜ್ಞಾನೇಂದ್ರ ವಿವಾದಾತ್ಮಕ ಹೇಳಿಕೆಗೆ ಆಪ್​ನಿಂದಲೂ ಖಂಡನೆ: ಕೈ ನಾಯಕರ ಕ್ಷಮೆಯಾಚಿಸಿದ ಬಿಜೆಪಿ

ABOUT THE AUTHOR

...view details