ಕರ್ನಾಟಕ

karnataka

ಗೋಹತ್ಯೆ ನಿಷೇಧ ಕಾಯ್ದೆ ವಾಪಸ್​ ವಿಚಾರಕ್ಕೆ ಸೈದ್ಧಾಂತಿಕ ವಿರೋಧ: ಶಿವಕುಮಾರ್ ಉದಾಸಿ

By

Published : Jun 5, 2023, 8:10 PM IST

Updated : Jun 5, 2023, 10:19 PM IST

ಕಾಂಗ್ರೆಸ್​ ಸರ್ಕಾರ ಗೋಹತ್ಯೆ ನಿಷೇಧ ಕಾಯ್ದೆ ವಾಪಸ್​ ಬಗ್ಗೆ ಸರ್ಕ್ಯುಲರ್ ತಂದು ಏನ್ಮಾಡ್ತಾರೆ ನೋಡೋಣ. ನಾವು ಸೈದ್ಧಾಂತಿಕವಾಗಿ ವಿರೋಧ ಮಾಡುತ್ತೇವೆ ಎಂದು ಸಂಸದ ಶಿವಕುಮಾರ್ ಉದಾಸಿ ಹೇಳಿದರು.

Etv Bharatshivakumar-udasi-reaction-on-prohibition-of-cow-slaughter-act-issue
ಗೋಹತ್ಯೆ ನಿಷೇಧ ಕಾಯ್ದೆ ವಾಪನ್​ ವಿಚಾರ.. ಸೈದ್ಧಾಂತಿಕ ವಿರೋಧ ಮಾಡುತ್ತೇವೆ: ಶಿವಕುಮಾರ್ ಉದಾಸಿ

ಹಾವೇರಿ ಸಂಸದ ಶಿವಕುಮಾರ್ ಉದಾಸಿ

ಹಾವೇರಿ: ಮಹಾತ್ಮ ಗಾಂಧಿ ಹೇಳಿದ್ದ ಗೋಹತ್ಯೆ ನಿಷೇಧವನ್ನು 1960ರಿಂದ ಹಲವು ರಾಜ್ಯಗಳಲ್ಲಿ ಜಾರಿ ಮಾಡಲಾಗಿತ್ತು ಎಂದು ಹಾವೇರಿ ಸಂಸದ ಶಿವಕುಮಾರ್ ಉದಾಸಿ ತಿಳಿಸಿದರು. ಹಾವೇರಿಯಲ್ಲಿಂದು ಗೋಹತ್ಯೆ ನಿಷೇಧ ಕಾಯ್ದೆ ವಾಪನ್​ ಕುರಿತ ವಿಷಯವಾಗಿ ಮಾತನಾಡಿ, ನಮ್ಮ ಹಿಂದೂ ಸಮಾಜದಲ್ಲಿ ಗೋವು ದೇವರು ಎಂದು ನಂಬಿಕೆ ಇಟ್ಟುಕೊಂಡಿದ್ದೇವೆ. ಗಾಂಧಿಯವರು ಗೋಹತ್ಯೆ ನಿಷೇಧಿಸಬೇಕು ಎಂದು ಹೇಳಿದ್ದು ನಾವು ಅದಕ್ಕೆ ತಿದ್ದುಪಡಿ ತಂದಿದ್ದೇವೆ ಎಂದರು.

ನೀವು ಯಾವ ಕಾರಣಕ್ಕೆ ಭಾವನಾತ್ಮಕ ವಿಷಯಗಳನ್ನು ಇಟ್ಟುಕೊಂಡು ರಾಜಕೀಯ ಮಾಡುತ್ತೀರಿ. ಈಗಾಗಲೇ ನಿಮಗೆ ಜನಾದೇಶ ಸಿಕ್ಕಿದೆ. ಗ್ಯಾರಂಟಿಗಳನ್ನು ಮಾಡಿಕೊಂಡು ಹೋಗಿ. ಬೇಡವಾಗಿದ್ದನ್ನು ಏಕೆ ಮಾಡುತ್ತೀರಿ ಎಂದು ಅವರು ಕೇಳಿದರು.

ನಾನು ಮೊದಲ ಬಾರಿ ಸಂಸದನಾಗಿ ಆಯ್ಕೆಯಾದಾಗ ದೇವರ ಮೇಲೆ ಪ್ರಮಾಣ ಮಾಡಿದ್ದೆ. ಎರಡು ಮತ್ತು ಮೂರನೇ ಬಾರಿ ಪ್ರಮಾಣ ವಚನ ಸ್ವೀಕರಿಸುವಾಗ ಸತ್ಯನಿಷ್ಠೆ ಮೇಲೆ ಪ್ರಮಾಣ ತಗೆದುಕೊಂಡಿದ್ದೆ. 1997ರ ರವರೆಗೆ ದೇವರನ್ನೇ ನಂಬುತ್ತಿರಲಿಲ್ಲ. 30 ವರ್ಷ ವಯಸ್ಸಾಗಿದ್ದಾಗ ನಾನು ನಾಸ್ತಿಕನಾಗಿದ್ದೆ. ಆಮೇಲೆ 17 ವರ್ಷ ಆಸ್ತಿಕನಾಗಿದ್ದೆ ಎಂದರು. ಈಗ ನಾನು ಆಸ್ತಿಕನೂ ಅಲ್ಲ, ನಾಸ್ತಿಕನೂ ಅಲ್ಲದ ಸ್ಥಿತಿಯಲ್ಲಿದ್ದೇನೆ. ದೇವರು ಇದ್ದಾನೆ ಎಂದು ಹೇಳುವುದಿಲ್ಲ. ದೇವರು ಇಲ್ಲ ಎಂದೂ ಹೇಳಲ್ಲ. ಈಗ ದೇವರಿಲ್ಲ, ದೇವರಿದ್ದಾನೆ ಎನ್ನುವವರಿಗೆ ಟೀಕೆ ಮಾಡಲು ಹೋಗಲ್ಲ ಎಂದು ತಿಳಿಸಿದರು.

ನಾನು ಮೊದಲು ದೇವರನ್ನು ನಂಬದಿರುವಾಗ, ದೇವರನ್ನು ನಂಬುವವರನ್ನು ಬೈಯುತ್ತಿದ್ದೆ. ಆಮೇಲೆ ನನಗೆ ಅರಿವಾಯಿತು ಎಂದರು. ಇನ್ನು ವೈಯಕ್ತಿಕವಾಗಿ ಸಚಿವ ವೆಂಕಟೇಶ್ ಈ ರೀತಿ ಹೇಳಿಕೆ ನೀಡಿದ್ದರೆ ಏನೂ ಆಗುತ್ತಿರಲಿಲ್ಲ. ಆದರೆ ಜವಾಬ್ದಾರಿಯುತ ಸಚಿವರಾಗಿ, ಜವಾಬ್ದಾರಿಯಿಂದ ವರ್ತಿಸಬೇಕು ಎಂದು ಹೇಳಿದರು. ಇನ್ನು, ಕುಸ್ತಿ ಫೆಡರೇಷನ್ ಅಧ್ಯಕ್ಷ ಬ್ರಿಜ್ ಭೂಷಣ್ ವಿರುದ್ಧ ತನಿಖೆ ನಡೆಸುತ್ತಿದೆ. ಈ ಕುರಿತಂತೆ ಕುಸ್ತಿಪಟುಗಳ ಹೋರಾಟದ ಕೂಗಿಗೆ ಜನಸಾಮಾನ್ಯರು ಸ್ಪಂದಿಸುತ್ತಿದ್ದಾರೆ. ತನಿಖೆ ಮುಗಿದ ಮೇಲೆ ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು.

ಎರಡು ಸಾವಿರ ನೋಟ್‌ಗಳ ವಾಪಸಾತಿ ರಿಸರ್ವ್ ಬ್ಯಾಂಕ್ ಮಾನದಂಡಗಳ ಮೇಲೆ ಮಾಡಲಾಗುತ್ತಿದೆ. ಹೆಚ್ಚು ಬಳಕೆಯಿಲ್ಲದ ನೋಟಿನ ಮಾನ್ಯತೆ ರದ್ದು ಮಾಡಲಾಗುತ್ತದೆ ಎಂದರು. ಅಗತ್ಯ ವಸ್ತುಗಳ ಬೆಲೆ ಏರಿಕೆ ಹೆಚ್ಚಾಗಿರುವದು ನಿಜ. ಆದರೆ ಅದಕ್ಕೆ ಹಲವಾರು ಕಾರಣಗಳಿವೆ. ಪೆಟ್ರೋಲ್ ಬೆಲೆ ಏರಿಕೆಯಿಂದ ಉಳಿದ ಪದಾರ್ಥಗಳ ಬೆಲೆ ಏರಿಕೆಯಾಗುತ್ತಿದೆ. ರಷ್ಯಾ- ಉಕ್ರೆನ್​ ಯುದ್ದ ತೈಲ ಬೆಲೆ ಏರಿಕೆಗೆ ಕಾರಣವಾಗಿದೆ ಎಂದರು. ಲೋಕಸಭೆ ಚುನಾವಣೆಯಲ್ಲಿ ಹೆಚ್ಚು ಸಂಖ್ಯೆ ಗೆಲ್ಲುತ್ತೇವೆ ಎಂದು ಕಾಂಗ್ರೆಸ್​ನವರು ಹೇಳುತ್ತಿದ್ದಾರೆ. ಅವರು ಗ್ಯಾರಂಟಿ ಕಾರ್ಡ್ ತೆಗೆದುಕೊಂಡು ಬರಲಿ, ನಾವು ರಿಪೋರ್ಟ್ ಕಾರ್ಡ್ ತೆಗೆದುಕೊಂಡು ಬರುತ್ತೇವೆ, ಜನ ಯಾವ ತೀರ್ಮಾನ ಕೈಗೊಳ್ಳುತ್ತಾರೆ ನೋಡೋಣ ಎಂದು ಹೇಳಿದರು.

ಒಡಿಶಾ ರೈಲು ದುರಂತದ ಬಗ್ಗೆ ತನಿಖೆಯಾಗುತ್ತಿದೆ. ಮಾನವ ತಪ್ಪೇ ಅಥವಾ ವೈಜ್ಞಾನಿಕ ಕಾರಣವೇ ಎಂಬ ಕುರಿತಂತೆ ಸಿಬಿಐ ತನಿಖೆ ನಡೆಯುತ್ತಿದೆ. ತನಿಖೆಯ ನಂತರ ಕಾರಣ ತಿಳಿಯಲಿದೆ ಎಂದರು.

ಇದನ್ನೂ ಓದಿ:ಗೋಹತ್ಯೆ ನಿಷೇಧ ಕಾಯ್ದೆ ವಾಪಸ್ ತೆಗೆದುಕೊಂಡರೆ ರಾಜ್ಯಾದ್ಯಂತ ಹೋರಾಟ: ಕಟೀಲ್​

Last Updated :Jun 5, 2023, 10:19 PM IST

ABOUT THE AUTHOR

...view details