ಕರ್ನಾಟಕ

karnataka

ಮೀಸಲಾತಿಗೆ ಯಡಿಯೂರಪ್ಪ ಅಡ್ಡಿ.. ಸಿಎಂ ಬೊಮ್ಮಾಯಿ ಮನೆ ಮುಂದೆ ಸತ್ಯಾಗ್ರಹಕ್ಕೆ ಕುಳಿತ ಬಸವಜಯ ಮೃತ್ಯುಂಜಯ ಸ್ವಾಮೀಜಿ

By

Published : Sep 20, 2022, 3:59 PM IST

Updated : Sep 20, 2022, 6:36 PM IST

ಬಸವಜಯ ಮೃತ್ಯುಂಜಯ ಸ್ವಾಮೀಜಿ

ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿಗೆ ಒತ್ತಾಯಿಸಿ ಸತ್ಯಾಗ್ರಹ. ಶಿಗ್ಗಾಂವಿಯಲ್ಲಿರುವ ಸಿಎಂ ಬಸವರಾಜ ಬೊಮ್ಮಾಯಿ ನಿವಾಸದ ಎದುರು ಸತ್ಯಾಗ್ರಹಕ್ಕೆ ಬಸವಜಯ ಮೃತ್ಯುಂಜಯ ಸ್ವಾಮೀಜಿ ಚಾಲನೆ.

ಹಾವೇರಿ: ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿಗೆ ಒತ್ತಾಯಿಸಿ ಆಯೋಜಿಸಿರುವ ಸತ್ಯಾಗ್ರಹಕ್ಕೆ ಬಸವಜಯ ಮೃತ್ಯುಂಜಯ ಸ್ವಾಮೀಜಿ ಚಾಲನೆ ನೀಡಿದರು. ಶಿಗ್ಗಾಂವಿ ಪಟ್ಟಣದ ಸವಣೂರು ರಸ್ತೆಯಲ್ಲಿರುವ ಸಿಎಂ ಬಸವರಾಜ ಬೊಮ್ಮಾಯಿ ನಿವಾಸದ ಎದುರು ಆಯೋಜಿಸಿರುವ ಸತ್ಯಾಗ್ರಹಕ್ಕೆ ಶಾಲಾ ವಿದ್ಯಾರ್ಥಿಗಳಿಗೆ ಮಾಲಾರ್ಪಣೆ ಮಾಡುವ ಮೂಲಕ ಸ್ವಾಮೀಜಿ ಚಾಲನೆ ನೀಡಿದರು.

ಸಿಎಂ ಬಸವರಾಜ ಬೊಮ್ಮಾಯಿ ಅವರು ನಾಲ್ಕು ಬಾರಿ ಮಾತು ಕೊಟ್ಟು ತಪ್ಪಿದ್ದಾರೆ. ನಾಲ್ಕನೇ ಬಾರಿ ಮಾತು ತಪ್ಪಿದರೆ ಸಿಎಂ ಮನೆ ಮುಂದೆ ಸತ್ಯಾಗ್ರಹ ಮಾಡ್ತೇವೆ ಅಂತಾ ಹೇಳಿದ್ವಿ. ಈಗ ಮಾತು ತಪ್ಪಿದ್ದರಿಂದ ಸತ್ಯಾಗ್ರಹ ಮಾಡ್ತಿದ್ದೇವೆ. ಮೀಸಲಾತಿ ಹೋರಾಟ ಈಗಾಗಲೆ ಬಹುದೊಡ್ಡ ಯಶಸ್ಸು ಕಂಡಿದೆ. ನಾವು ಬಹಳ ಮುಗ್ದ ಜನರು‌. ನಮ್ಮ ಜನರನ್ನು ತೋರಿಸಿ ಬೆಂಗಳೂರಿನಲ್ಲಿರುವ ಶೇಕಡಾ ಎರಡರಷ್ಟು ಜನರು ಅಧಿಕಾರ ಅನುಭವಿಸಿದರು.

ಯಡಿಯೂರಪ್ಪ ಅವರು ಮೀಸಲಾತಿ ಕೊಡ್ತೀನಿ ವೋಟು ಕೊಡಿ ಅಂದರು. ವೋಟು ಪಡೆದು ಅವರು ಅಧಿಕಾರಕ್ಕೆ ಬಂದರು. ಯಡಿಯೂರಪ್ಪ ಅವರನ್ನು ಲಿಂಗಾಯತ ನಾಯಕರು ಅಂತಾ ನಂಬಿದ್ವಿ. ಅವರು ಮೀಸಲಾತಿ ಕೊಡಬಹುದು ಅನ್ನೋ ಕಾರಣಕ್ಕೆ ದೊಡ್ಡ ಮಟ್ಟದಲ್ಲಿ ಪಾದಯಾತ್ರೆ ಮಾಡಿದ್ವಿ ಆದರೆ ಕೊಡಲಿಲ್ಲ ಎಂದು ಸ್ವಾಮೀಜಿ ಹೇಳಿದರು.

ಬಸವಜಯ ಮೃತ್ಯುಂಜಯ ಸ್ವಾಮೀಜಿ

ಮಾತು ತಪ್ಪಿದ ಬೊಮ್ಮಾಯಿ:ಬೊಮ್ಮಾಯಿಯವರು ಅಧಿಕಾರಕ್ಕೆ ಬಂದಾಗ ನಮಗೆ ಖುಷಿಯಾಯಿತು. ಸೋಮಣ್ಣ ಬೇವಿನಮರದ, ಮಂಜುನಾಥ ಕುನ್ನೂರರು ತ್ಯಾಗ ಮಾಡಿ ಬೊಮ್ಮಾಯಿ ಅವರಿಗೆ ಅಧಿಕಾರ ಕೊಟ್ಟರು. ನಮ್ಮ ಹೋರಾಟಕ್ಕೆ ಅರಮನೆ ಮೈದಾನ ಕೊಡಿಸಿದವರು ಬೊಮ್ಮಾಯಿ ಸಾಹೇಬ್ರು. ಬೊಮ್ಮಾಯಿಯವರು ಸಿಎಂ ಆದ್ಮೇಲೆ ಕರೆದು ಮೀಸಲಾತಿ ಕೊಡೋಕೆ ಮೂರು ತಿಂಗಳು ಸಮಯ ಕೇಳಿದರು.

ನಮ್ಮ ಸಮಾಜದ ನಾಲ್ವರ ಮೇಲೆ ಕೈಯಿಟ್ಟು ಮೀಸಲಾತಿ ಕೊಟ್ಟು ಪುಣ್ಯ ಕಟ್ಟಿಕೊಳ್ತೀನಿ ಅಂತಾ ಬೊಮ್ಮಾಯಿ ಮಾತು ಕೊಟ್ಟರು. ಸಿಎಂ ಬೊಮ್ಮಾಯಿ ಮೀಸಲಾತಿ ಕೊಟ್ಟೇ ಕೊಡ್ತಾರೆ ಅಂತಾ ನಮ್ಮ ಬಸನಗೌಡ ಪಾಟೀಲ ಯತ್ನಾಳರು ಹೇಳಿದ್ದರು. ನಮ್ಮ ಮನೆ ಮುಂದೆ ಕುಳಿತರೆ‌ ಮುಜುಗುರ ಆಗುತ್ತದೆ ಎಂದು ಸಿಎಂ ಬೊಮ್ಮಾಯಿಯವರು ಈ ಹಿಂದೆ ಹೇಳಿದ್ಮೇಲೆ ಸತ್ಯಾಗ್ರಹ ಮುಂದೆ ಹಾಕಿದ್ವಿ. ಆಗ ಮತ್ತೆ ಎರಡು ತಿಂಗಳು ಸಮಯ ಕೇಳಿದರು ಎಂದು ತಿಳಿಸಿದರು.

ಬಸವರಾಜ ಬೊಮ್ಮಾಯಿಯವರು ಕೊಟ್ಟ ಮಾತು ತಪ್ಪಿದ್ದರಿಂದ ಈಗ ಸತ್ಯಾಗ್ರಹ ಮಾಡುತ್ತಿದ್ದೇವೆ. ನಮಗಿರೋದು ಒಂದೇ ನಾಲಿಗೆ. ಪಂಚಮಸಾಲಿಗಳು ಒಮ್ಮೆ ಬೀದಿಗಿಳಿದರೆ ಗುರಿ ಮುಟ್ಟೋವರೆಗೂ ಬಿಡೋದಿಲ್ಲ. ಯತ್ನಾಳರು ಅಧಿವೇಶನದಲ್ಲಿ ಗುಡುಗಿ ಬಂದು ಉತ್ತರ ಕೊಟ್ಟ ಮೇಲೆ ಹೋರಾಟದ ಮುಂದಿನ ನಿರ್ಧಾರ ಮಾಡುತ್ತೇವೆ. ನಾನು ಬೆಂಜ್ ಕಾರು, ಹೆಲಿಕ್ಯಾಪ್ಟರ್ ಸ್ವಾಮಿ ಅಲ್ಲ ಎಂದು ಇದೇ ವೇಳೆ ಸ್ವಾಮೀಜಿ ಗುಡುಗಿದರು.

ಮೀಸಲಾತಿಗೆ ಯಡಿಯೂರಪ್ಪ ಅಡ್ಡಿ:ಸಮಾಜದ ಋಣ ನಿಮ್ಮ ಮೇಲಿದೆ. ಮೀಸಲಾತಿ ಘೋಷಣೆ ಮಾಡಿ. ಆಗಲ್ಲ ಅಂದರೆ ಅದನ್ನಾದರೂ ಅಧಿವೇಶನದಲ್ಲಿ ಘೋಷಣೆ ಮಾಡಿ. ಮೀಸಲಾತಿ ಕೊಟ್ಟ ಮೇಲೆ ಸಿಎಂ ಬೊಮ್ಮಾಯಿ ಅವರಿಗೆ ಡೈಮಂಡ್ ಕವಚ ಹಾಕಿ ತುಲಾಭಾರ ಮಾಡುತ್ತೇವೆ. ಕೂಡಲಸಂಗಮ ಪಂಚಮಸಾಲಿ ಪೀಠದಲ್ಲಿ ನಿಮ್ಮ ಫೋಟೋ ಫಿಕ್ಸ್ ಮಾಡುತ್ತೇವೆ.

ಬೊಮ್ಮಾಯಿ ಅವರು ಮೀಸಲಾತಿ ಕೊಟ್ಟು ಹೊಸ ಇತಿಹಾಸ ನಿರ್ಮಾಣ ಮಾಡಬೇಕು. ಬೊಮ್ಮಾಯಿ ಅವರು ಮೀಸಲಾತಿ ಕೊಟ್ರೆ ಕಾಯಂ ಲಿಂಗಾಯತ ನಾಯಕರಾಗ್ತಾರೆ ಅಂತಾ ಮೀಸಲಾತಿ ಕೊಡದಂತೆ ಯಡಿಯೂರಪ್ಪ ಒತ್ತಡ ಹಾಕುತ್ತಿದ್ದಾರೆ ಎಂದು ಸ್ವಾಮೀಜಿ ದೂರಿದರು.

ಪಂಚಮಸಾಲಿ ಸಮಾಜದ ಹೋರಾಟ ದಿಕ್ಕು ತಪ್ಪಿಸಲು ಇವತ್ತು ಒಬಿಸಿ ಸಭೆ ನಡೆಸ್ತಿದ್ದಾರೆ. ವಿಧಾನಸೌಧದ ಮುಂಭಾಗದಲ್ಲಿ ಮಾಡು ಇಲ್ಲವೆ ಮಡಿ ಹೋರಾಟ ಮಾಡೋಣ. ಮುಂದಿನ ಹೋರಾಟದ ದಿನಾಂಕವನ್ನು ಸಂಜೆ ಬಸವನಗೌಡ ಪಾಟೀಲ ಯತ್ನಾಳ ಘೋಷಣೆ ಮಾಡ್ತಾರೆ. ಸಿಎಂ ಬಸವರಾಜ ಬೊಮ್ಮಾಯಿ ಅವರು ಇವತ್ತು ಕೂಡಲೇ ಮೀಸಲಾತಿ ಘೋಷಣೆ ಮಾಡಬೇಕು. ಪಂಚಮಸಾಲಿ ಸಮಾಜ ಯಾರಿಗೂ ಅನ್ಯಾಯ ಮಾಡಿಲ್ಲ.

ಯಾರೂ ಈ ಸಮಾಜಕ್ಕೆ ಅನ್ಯಾಯ ಮಾಡಬೇಡಿ. ನಮ್ಮ ಸಮಾಜದ ಹೋರಾಟಕ್ಕೆ ವಿನಯ ಕುಲಕರ್ಣಿ, ವಿಜಯಾನಂದ ಕಾಶಪ್ಪನವರ, ಬಸನಗೌಡ ಪಾಟೀಲ ಯತ್ನಾಳರು ಬಹುದೊಡ್ಡ ಶಕ್ತಿ. ಪಂಚಮಸಾಲಿ ಪಂಚ ಜ್ಯೋತಿ ರಥಯಾತ್ರೆ ಮಾಡುತ್ತೇನೆ ಎಂದು ತಿಳಿಸಿದರು.

ಇದನ್ನು ಓದಿ:ಪಂಚಮಸಾಲಿ ಮೀಸಲಾತಿ ಹೋರಾಟಕ್ಕೆ ಸಮುದಾಯದ ನಾಯಕರೊಬ್ಬರಿಂದ ಅಡ್ಡಿ: ಕೂಡಲ ಸಂಗಮ ಶ್ರೀ

Last Updated :Sep 20, 2022, 6:36 PM IST

ABOUT THE AUTHOR

...view details